ಮೊದಲಿಗೆ ಬೆಟ್ಟ-ಗುಡ್ಡ, ಕಾಡು, ಗುಹೆಗಳಲ್ಲಿ ವಾಸಿಸುತ್ತಿದ್ದ ಮಾನವ ಬುದ್ಧಿ ವಿಕಸನ ಹೊಂದಿದಂತೆ ಕಾಡನ್ನು ನಾಡನ್ನಾಗಿ ಪರಿವರ್ತಿಸಲಾರಂಭಿಸಿದ. ಹಲವು ಅಭಿವೃದ್ಧಿಗಳನ್ನು ಕಾರ್ಯಗಳನ್ನು ಕೈಗೆತ್ತಿಕೊಂಡ. ಹೀಗೆ ಕ್ರಮೇಣವಾಗಿ ಹೊಸ ಹೊಸ ರಚನೆಗಳನ್ನು ಪ್ರಕೃತಿಯಿಂದ ಸಿಗುವ ಕಚ್ಚಾ ವಸ್ತುಗಳನ್ನು ಬಳಸಿ ನಿರ್ಮಿಸತೊಡಗಿದ.
ಪ್ರಕೃತಿಯೆ ಬೆರಗಾಗುವಂತೆ ಮಾನವ ತನ್ನ ಅಪರಿಮಿತ ಬುದ್ಧಿ ಸಾಮರ್ಥ್ಯಗಳಿಂದ ವಿಸ್ಮಯಕರ ರಚನೆಗಳನ್ನು ಕಟ್ಟಿದ. ಇಂದು ಪ್ರಪಂಚ ಸಾಕಷ್ಟು ಆಧುನೀಕರಣಗೊಂಡಿದ್ದರೂ ಹಿಂದಿನ ಕೆಲವು ಭವ್ಯವಾಗಿ ನಿರ್ಮಿಸಲಾದ ಪುರಾತನ ರಚನೆಗಳನ್ನು ನೋಡಿದಾಗ ಇಂದಿಗೂ ಮೂಕವಿಸ್ಮಿತರನ್ನಾಗುವಂತೆ ಮಾಡುತ್ತವೆ.
ನಿಮಗಿಷ್ಟವಾಗಬಹುದಾದ : ಏಳು ಪ್ರಾಕೃತಿಕ ವಿಸ್ಮಯಗಳು
ಪ್ರಸ್ತುತ ಲೇಖನದಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಕಂಡುಬರುವ ಮಾನವ ನಿರ್ಮಿತ ಐದು ಅದ್ಭುತ ರಚನೆಗಳ ಕುರಿತು ತಿಳಿಯಿರಿ. ಈ ರಚನೆಗಳನ್ನು ನೋಡಿದಾಗ ಅಂದಿನ ರಚನಾಕಾರರ, ಕುಶಲ ಕರ್ಮಿಗಳ ಕಲಾ ನೈಪುಣ್ಯತೆ ಕಣ್ಣಿಗೆ ಕಟ್ಟುತ್ತದೆ, ಹುಬ್ಬೆರಿಸುವಂತೆ ಮಾಡುತ್ತವೆ. ಸ್ವತಃ ದೇವರೆ ಆ ಶಿಲ್ಪಿಗಳ ಜೊತೆ ಸೇರಿ ಕೆಲಸ ಮಾಡಿರಬೇಕೆಂದು ಭಾವನಾತ್ಮಕವಾಗಿ ಅನಿಸಲೂಬಹುದು.
ಚಿತ್ರಕೃಪೆ: Ishan Manjrekar
ಮುರುದ್ ಜಂಜೀರಾ
ಮುರುದ್ ಜಂಜೀರಾ ಎಂಬುದು ಮಹಾರಾಷ್ಟ್ರದ ರಾಯ್ಗಡ್ ಜಿಲ್ಲೆಯಲ್ಲಿರುವ ಮುರುದ್ ಎಂಬ ಕರಾವಳಿ ಹಳ್ಳಿಯಲ್ಲಿರುವ ಒಂದು ಪ್ರಸಿದ್ಧ ಕೋಟೆಯಾಗಿದೆ. ಒಂದಾನೊಂದು ಕಾಲದಲ್ಲಿ ಸಿದ್ಧಿ ಸಾಮ್ರಾಜ್ಯದವರ ಆಳ್ವಿಕೆಗೆ ಒಳಪಟ್ಟಿದ್ದ ಈ ಕೋಟೆಯನ್ನು ಜಲ್ ಜೀರ ಎಂದು ಸಹ ಕರೆಯುತ್ತಾರೆ. ಕಾರಣ ಈ ಸ್ಮಾರಕವು ತನ್ನ ಸುತ್ತಲು ಅರಬ್ಬೀ ಸಮುದ್ರದ ನೀರಿನಿಂದ ಆವೃತವಾಗಿದೆ.
ಅಜಂತಾ ಎಲ್ಲೋರಾ ಗುಹೆಗಳು
ಮಹಾರಾಷ್ಟ್ರ ರಾಜ್ಯ ಪ್ರವಾಸೋದ್ಯಮದಲ್ಲಿ ಭೇಟಿ ನೀಡಲಾಗುವ ತಾಣಗಳಲ್ಲಿ ಅತಿ ಮಂಚೂಣಿ ಸ್ಥಾನದಲ್ಲಿದೆ ಅಜಂತಾ-ಎಲ್ಲೋರಾ ಗುಹೆಗಳು. ಶಿಲೆಗಳನ್ನು ಕತ್ತರಿಸಿ ನಿರ್ಮಿಸಿದ ಭಾರತೀಯ ವಾಸ್ತುಶೈಲಿಯ ರಚನೆಗಳ ಪೈಕಿ ಅದ್ಭುತವಾದ ಉದಾಹರಣೆಯಾಗಿದೆ ಈ ಗುಹೆಗಳು. ಕ್ರಿ.ಪೂ 2 ನೇ ಶತಮಾನದಷ್ಟು ಹಿನ್ನೆಲೆಯುಳ್ಳ , ಅಜಂತಾ ಗುಹೆಗಳು ಹಿಂದು ಧರ್ಮ, ಬೌದ್ಧ ಮತ್ತು ಜೈನ್ ಧರ್ಮಗಳಿಗೆ, ಸಾಕ್ಷಿಯಾಗಿ ನಿಂತಿದೆ.
ಚಿತ್ರಕೃಪೆ: Kumar Appaiah
ಮಹಾರಾಷ್ಟ್ರ ರಾಜ್ಯದ ಪ್ರಮುಖ ನಗರವಾದ ಔರಂಗಾಬಾದಿನ ಹತ್ತಿರವಿರುವ ಐತಿಹಾಸಿಕ ತಾಣವಾದ ಎಲ್ಲೋರ ಗುಹೆಗಳ ಜೊತೆಗೆ ಅಜಂತ ಗುಹೆಗಳೂ ಸಹ ಪ್ರಪಂಚದ ಒಂದು ಪ್ರಸಿದ್ದ ಪಾರಂಪರಿಕ ಕ್ಷೇತ್ರವೆಂದು ಯುನೆಸ್ಕೋ ಸಂಸ್ಥೆಯಿಂದ ಘೋಷಿತವಾಗಿದೆ.
ಚಿತ್ರಕೃಪೆ: Prateek manjrekar
ಗ್ಲೋಬಲ್ ವಿಪಾಸನಾ ಪಗೋಡಾ
ಜಾಗತಿಕ ವಿಪಾಸನಾ ಸ್ತೂಪ ಎಂದು ಭಾಷಾಂತರಿಸಬಹುದಾದ ಈ ಆಕರ್ಷಕ ರಚನೆಯು ಮುಂಬೈನ ವಾಯವ್ಯ ದಿಕ್ಕಿನಲ್ಲಿರುವ ಧಾರಾವಿಯ ಗೊರೈ ಎಂಬ ಗ್ರಾಮದಲ್ಲಿ ನಿರ್ಮಿಸಲಾಗಿದೆ. ಗೊರೈನ ಕಡಿದಾದ ಬೆಟ್ಟ ಹಾಗೂ ಅರಬ್ಬಿ ಸಮುದ್ರದ ಮಧ್ಯದಲ್ಲಿರುವ ಭೂಪ್ರದೇಶದಲ್ಲಿ ಧಾಯ್ನಕ್ಕೆ ಮುಡಿಪಾದ ಈ ಸ್ತೂಪವನ್ನು ನಿರ್ಮಿಸಲಾಗಿದೆ. ಈ ಭವ್ಯ ರಚನೆಯು ದೂರದಿಂದಲೆ ಸಂದರ್ಶಕರನ್ನು ವಿಸ್ಮಯಗೊಳಿಸುತ್ತದೆ.
ಚಿತ್ರಕೃಪೆ: Indianhilbilly
ಬಂದ್ರಾ-ವರ್ಲಿ ಸೀ ಲಿಂಕ್ ಸೇತುವೆ
ಇತ್ತೀಚಿಗಷ್ಟೆ ಉದ್ಘಾಟನೆಗೊಂಡ ಈ ಭವ್ಯ ಸೇತುವೆಯು ಇಂದಿನ ಆಧುನಿಕ ಮುಂಬೈನ ಹೊಸ ಪರಿಚಯವೆಂದೆ ಹೇಳಬಹುದು. ತಂತಿ ಆಧಾರಗಳ ಸೇತುವೆ ಇದಾಗಿದ್ದು ಒಟ್ಟು ಎಂಟು ಪಥಗಳನ್ನು ಹೊಂದಿದೆ. ಮೊದ್ದಲ ನಾಲ್ಕು ಪಥಗಳು ಜೂನ್ 2009 ರಂದೂ ಮಿಕ್ಕ ನಾಲ್ಕು ಪಥಗಳು ಮಾರ್ಚ್ 2010 ರಂದೂ ಉದ್ಘಾಟನೆಗೊಂಡಿವೆ. ನೋಡಲು ಆಕರ್ಷಕವಾಗಿ ಈ ರಚನೆಯು ಕಾಣುತ್ತದೆ.
ಚಿತ್ರಕೃಪೆ: Dbenbenn
ಛತ್ರಪತಿ ಶಿವಾಜಿ ಟರ್ಮಿನಸ್
ವಿಕ್ಟೋರಿಯನ್ ಕಾಲದಲ್ಲೆ ನಿರ್ಮಾಣ ಮಾಡಲಾಗಿರುವ ಈ ಆಕರ್ಷಕ ರಚನೆಯು ಹಿಂದೆ ವಿಕ್ಟೋರಿಯನ್ ಟರ್ಮಿನಸ್ ಎಂದು ಕರೆಯಲ್ಪಡುತ್ತಿತ್ತು. ಮುಂಬೈನ ಪ್ರಮುಖ ಹೆಗ್ಗುರುತುಗಳಲ್ಲಿ ಒಂದಾಗಿರುವ ಈ ಸಾಂಪ್ರದಾಯಿಕ ಕಟ್ಟಡವು ನಗರದ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳಲ್ಲೂ ಸಹ ಒಂದಾಗಿದೆ.