ನಮ್ಮಲ್ಲಿ ವೇದ-ಪುರಾಣಗಳಲ್ಲಿ ವಿವರಿಸಲಾಗಿರುವ ಪುಣ್ಯ ಕಥೆಗಳು ಕೇಳಲು ಬಲು ರೋಚಕವಾಗಿರುತ್ತವೆ. ಅದೆಷ್ಟೊ ಕಥೆಗಳು, ಘಟನೆಗಳು ಜರುಗಿ ಅದಕ್ಕೆ ಪೂರಕವೆಂಬಂತೆ ಆಯಾ ಸ್ಥಳಗಳಲ್ಲಿ ಸಾಕ್ಷಿ ಎಂಬಂತೆ ರಚನೆಗಳು ನಿರ್ಮಿಸಲ್ಪಟಿರುವುದನ್ನು, ರೂಪಗೊಂಡಿರುವುದನ್ನು ಕಾಣಬಹುದು.
ಶಿವನ ಕುರಿತಾಗಲಿ ಅಥವಾ ಮೃತ್ಯು ದೇವತೆ ಯಮನ ಕುರಿತಾಗಲಿ ಸಾಕಷ್ಟು ರೋಚಕ ಕಥೆಗಳನ್ನು ಕೇಳಿರುತ್ತೇವೆ. ಅಂತಹ ಒಂದು ಕಥೆಯ ಭಾಗವಾಗಿ ಪ್ರಸ್ತುತ ಲೇಖನದಲ್ಲಿ ದೇವಾಲಯವೊಂದರ ಕುರಿತು ತಿಳಿಸಲಾಗಿದೆ. ಇದು ಮೂಲತಃ ಶಿವನ ದೇವಾಲಯವಾಗಿದೆ.
ವಿವಿಧ ಅವತಾರಗಳ ಶಿವನನ್ನು ನೋಡಿದ್ದೀರಾ?
ಆದರೆ ಮುಗ್ಧ ಭಕ್ತಿಯ ಅಪಾರ ಶಕ್ತಿಯನ್ನು ಅನಾವರಣಗೊಳಿಸುವ, ಅದ್ಭುತ ಹಿನ್ನೆಲೆಯಿರುವ ವಿಶಿಷ್ಟ ದೇವಾಲಯವಾಗಿದೆ ಇದು. ಅಷ್ಟೆ ಅಲ್ಲ, ನಿಮಗೆ ಮೃತ್ಯು ಭಯವಿದ್ದಲ್ಲಿ ಒಂದೊಮ್ಮೆ ಈ ದೇವಾಲಯಕ್ಕೆ ಭೇಟಿ ನೀಡಲೇಬೇಕು. ಹಾಗಾದರೆ ಯಾವುದು ಈ ದೇವಾಲಯ? ಏನಿದರ ಕಥೆ? ಎಲ್ಲಿದೆ ಹಾಗೂ ಹೇಗೆ ತಲುಪಬಹುದೆಂಬುದರ ಕುರಿತು ಈ ಲೇಖನದಲ್ಲಿ ತಿಳಿಸಲಾಗಿದೆ.
ಪ್ರಸಿದ್ಧ ಸಂತರು
ಏಳನೇಯ ಶತಮಾನದಲ್ಲಿದ್ದ ತಮಿಳಿನ ಪ್ರಸಿದ್ಧ ಶೈವ ಸಂತರಾದ ತಿರುಜ್ಞಾನ ಸಂಬಂಧರ್ ಅವರ ಶ್ಲೋಕಗಳಿಂದ ಈ ದೇವಾಲಯ ಅವತಾರ ತಾಳಿದೆ ಎಂದು ಒಂದು ಮೂಲದ ಪ್ರಕಾರ ಹೇಳಲಾಗುತ್ತದೆ. ಹಾಗಾಗಿ ಇದನ್ನು ಪವಿತ್ರ ಪಾದಾಳ್ ಪೆಟ್ರಂ ಸ್ಥಳಗಳಲ್ಲಿ ಒಂದನ್ನಾಗಿ ಪರಿಗಣಿಸಲಾಗಿದೆ. ಬಾಲ ಸಂತ ತಿರುಜ್ಞಾನ ಸಂಬಂಧರ್.
ಚಿತ್ರಕೃಪೆ: Ssriram mt
ವಿಪರೀತ ಪರಿಸ್ಥಿತಿ
ಅಷ್ಟೆ ಅಲ್ಲ, ಒಂದೊಮ್ಮೆ ಪರಿಸ್ಥಿತಿಯ ಅವಗಢದಿಂದಾಗಿ ವಿಷ್ಣು ಪರಿಶುದ್ಧಳಾದ ಹೆಣ್ಣೊಬ್ಬಳಿಂದ ಶಾಪಕ್ಕೆ ಗುರಿಯಾಗಬೇಕಾದ ಸ್ಥಿತಿ ಬಂದೊದಗುತ್ತದೆ. ಆ ಶಾಪದಿಂದ ಮುಕ್ತಿ ಪಡೆಯಬೇಕಾದರೆ ಶಿವನನ್ನು ಕುರಿತು ತಪಗೈಯ್ಯಬೇಕಾಗಿರುತ್ತದೆ. ಸಾಂದರ್ಭಿಕ.
ಶಿವನ ಕುರಿತು ತಪಸ್ಸು
ಹೀಗೆ ತನ್ನ ಪಾಪವನ್ನು ಕಳೆದುಕೊಳ್ಳಲು ಸ್ವತಃ ವಿಷ್ಣು ಶಿವನ ಕುರಿತು ತಪಸ್ಸನ್ನಾಚರಿಸುತ್ತಾನೆ. ಆ ರೀತಿಯಾಗಿ ಅವನು ತಪಸ್ಸು ಮಾಡಿದ ಸ್ಥಳವೆ ಇಂದಿನ ಈ ದೇವಾಲಯ ತಾಣವಾಗಿದೆ ಎನ್ನಲಾಗಿದೆ. ಹಾಗಾಗಿ ಸಾಕಷ್ಟು ಪಾವಿತ್ರ್ಯತೆಯನ್ನು ಪಡೆದಿರುವ ಕ್ಷೇತ್ರವಾಗಿ ಈ ದೇವಾಲಯವು ಧಾರ್ಮಿಕಾಸಕ್ತರನ್ನು ಆಕರ್ಷಿಸುತ್ತದೆ. ಸಾಂದರ್ಭಿಕ.
ಪಾವಿತ್ರ್ಯತೆಯಿದೆ
ಇನ್ನೂ ಈ ದೇವಾಲಯದ ವಿಷಯಕ್ಕೆ ಬಂದರೆ ಇದು ಯಮನ ನೆಲೆಯಿರುವ ದೇವಾಲಯವಾಗಿಯೂ ಪ್ರಸಿದ್ಧವಾಗಿದೆ. ಈ ದೇವಾಲಯವು ತನ್ನ ನಾಲ್ಕು ದಿಕ್ಕುಗಳಲ್ಲಿ ವಿಶಾಲವಾದ ರಸ್ತೆ-ಬೀದಿಗಳಿಂದ ಸುತ್ತುವರೆದಿದ್ದು ತಲುಪಲು ಅನುಕೂಲಕರವಾದ ಸ್ಥಳದಲ್ಲಿ ಸ್ಥಿತವಿದೆ. ತಿರುಜ್ಞಾನ ಸಂಬಂಧರ್ ಸಂತರ ಶ್ಲೋಕಗಳಿಂದ ದೇವಾಲಯವನ್ನು ಆರಾಧಿಸಲಾಗುತ್ತದೆ. ಸಾಂದರ್ಭಿಕ.
ರೋಚಕವಾಗಿದೆ
ಈ ದೇವಾಲಯಕ್ಕೆ ಸಂಬಂಧಿಸಿದಂತೆ ಪ್ರಮುಖವಾದ ಕಥೆಯೊಂದು ಹೀಗಿದೆ. ಹಿಂದೆ ಒಂದೊಮ್ಮೆ ಈ ಪವಿತ್ರ ಸ್ಥಳದಲ್ಲಿ ಸಂತ ತವನಿತಿ ಎಂಬುವವರೊಬ್ಬರು ಶಿವನನ್ನು ದಿನನಿತ್ಯ ಇಲ್ಲಿ ಪೂಜಿಸುತ್ತಿದ್ದರು. ಹೀಗಿರುವಾಗ ಒಮ್ಮೆ ಬೇಟೆಗಾರನೊಬ್ಬನು ಜಿಂಕೆಯೊಂದನ್ನು ಬೆನ್ನು ಹತ್ತಿ ಈ ಸ್ಥಳಕ್ಕೆ ಬರುತ್ತಾನೆ.
ಚಿತ್ರಕೃಪೆ: பா.ஜம்புலிங்கம்
ಜಿಂಕೆಗೆ ಆಶ್ರಯ
ಪ್ರಾಣ ಭೀತಿ ಎದುರಿಸುತ್ತಿದ್ದ ಆ ಜಿಂಕೆ ತವನಿತಿ ಸಂತರನ್ನು ನೋಡಿದಾಕ್ಷಣ ಅವರ ಬಳಿ ತೆರಳಿ ಅವರ ಆಶ್ರಯವನ್ನು ಪಡೆದುಕೊಳ್ಳುತ್ತದೆ. ಇದನ್ನು ಮನಗಂಡ ಸಂತರು ಜಿಂಕೆಯನ್ನು ರಕ್ಷಿಸುವ ಉದ್ದೇಶದಿಂದ ತಾವೆ ಸ್ವತಃ ಹುಲಿಯ ಅವತಾರ ಪಡೆದು ಬೇಟೆಗಾರನನ್ನು ಓಡಿಸಲು ಪ್ರಯತ್ನಿಸುತ್ತಾರೆ.
ಚಿತ್ರಕೃಪೆ: பா.ஜம்புலிங்கம்
ಹುಲಿ ಕದಲಲಿಲ್ಲ!
ಹುಲಿಯನ್ನು ಕಂಡ ಬೇಟೆಗಾರನು ಪ್ರಾಣಭಯದಿಂದ ಅಲ್ಲಿಯೆ ಇದ್ದ ಬಿಲ್ವ ಪತ್ರೆಯ ಗಿಡವನ್ನು ಏರಿ ಕುಳಿತುಕೊಳ್ಳುತ್ತಾನೆ ಹಾಗೂ ಆ ಹುಲಿಯ ನಿರ್ಗಮಿಸುವಿಕೆಯನ್ನು ಕಾಯಲು ಪ್ರಾರಂಭಿಸುತ್ತಾನೆ. ಆದರೆ ಹುಲಿಯು ಅಲ್ಲಿಂದ ಒಂದಿಂಚೂ ಸಹ ಕದಲುವುದಿಲ್ಲ.
ಚಿತ್ರಕೃಪೆ: பா.ஜம்புலிங்கம்
ಎಲೆ ಕಿತ್ತಿ ಉದುರಿಸುತ್ತಿದ್ದ
ಹೀಗೆ ರಾತ್ರಿಯಾಗುತ್ತದೆ. ನಂತರ ಬೇಟೆಗಾರನು ತಾನು ನಿದ್ದೆಗೆ ಜಾರಬಾರದೆಂದು ಗಿಡದ ಬಿಲ್ವ ಪತ್ರೆಗಳನ್ನು ಕೀಳುತ್ತ ಭೂಮಿಯ ಮೇಲೆ ಉದುರಿಸುತ್ತ ನಿದ್ದೆಯನ್ನು ತಡೆದುಕೊಳ್ಳುತ್ತಾನೆ. ಆದರೆ ಅವನು ಉದುರಿಸುತ್ತಿದ್ದ ಎಲೆಗಳು ಒಂದೊಂದಾಗಿ ಆ ಗಿಡದ ಕೆಳಗಿದ್ದ ಶಿವಲಿಂಗದ ಮೇಲೆ ಬೀಳುತ್ತಿರುತ್ತದೆ. ಕಾಕತಾಳೀಯವೆಂಬಂತೆ ಆ ದಿಅನ ಶಿವರಾತ್ರಿ ಬೇರೆ ಆಗಿರುತ್ತದೆ.
ಚಿತ್ರಕೃಪೆ: பா.ஜம்புலிங்கம்
ಹರಸಿ ಆಶೀರ್ವದಿಸಿದ
ಇದರಿಂದ ಶಿವನು ಪ್ರಸನ್ನನಾಗಿ ಬೇಟೆಗಾರನಿಗೆ ಹರಸಿ ಆಶೀರ್ವದಿಸುತ್ತಾನೆ. ಮರುದಿನ ಬೆಳಿಗ್ಗೆ ಭೂಲೋಕದಲ್ಲಿ ಆ ಬೇಟೆಗಾರನ ಕೊನೆಯ ದಿನವಾಗಿರುತ್ತದೆ, ಹಾಗಾಗಿ ಸ್ವತಃ ಯಮನೆ ಅವನ ಪ್ರಾಣ ಕೀಳಲು ಅಲ್ಲಿಗೆ ಬರುತ್ತಾನೆ. ಆದರೆ ಶಿವನ ಕೃಪಾಕಟಾಕ್ಷವಿರುವುದರಿಂದ ನಂದಿ ಹಾಗೂ ದಕ್ಷಿಣ ಮೂರ್ತಿ ದೇವತೆಗಳು ಯಮನನ್ನೆ ತಡೆಯುತ್ತವೆ.
ಯಮನನ್ನು ನೆಲೆಸಲು ಕೋರಿದರು
ಈ ಪವಾಡವನ್ನು ಅಗ್ನಿ-ಬ್ರಹ್ಮ ದೇವತೆಯರು ನೋಡಿ ಶಿವನನ್ನು ಆರಾಧಿಸಿ ಅಲ್ಲಿಯೆ ಯಮನನ್ನು ಕಲ್ಯಾಣಿಯ ರೂಪದಲ್ಲಿ ಅವತರಿಸುವಂತೆ ಕೇಳಿ ಕೊಳ್ಳಲು, ಯಮನು ಸಂತಸದಿಂದ ಅದಕ್ಕೊಪ್ಪುತ್ತಾನೆ ಹಾಗೂ ತೀರ್ಥ ರೂಪದಲ್ಲಿ ಅಲ್ಲಿಯೆ ನೆಲೆಸುತ್ತಾನೆ.
ಚಿತ್ರಕೃಪೆ: Ssriram mt
ಯಮತೀರ್ಥ
ಹಾಗಾಗಿ ಈ ದೇವಾಲಯದಾವರಣದಲ್ಲಿ ಯಮತೀರ್ಥವನ್ನು ಕಾಣಬಹುದಾಗಿದೆ. ನಂಬಿಕೆಯಂತೆ ಯಾರು ಈ ನೀರನ್ನು ತಮ್ಮ ಮೇಲೆ ಪುಳಕಿಸಿಕೊಳ್ಳುವರೊ ಅವರಿಗೆ ಮೃತ್ಯು ಭಯ ದೂರವಾಗುತ್ತದೆ ಎನ್ನಲಾಗಿದೆ. ಅಲ್ಲದೆ ಸಪ್ತಮಾತೃಕೆಯರು ಈ ತೀರ್ಥದಲ್ಲಿ ಮಿಂದು ತಮ್ಮ ಸಿದ್ಧ ಶಕ್ತಿಯನ್ನು ಪುನಃ ಪಡೆದಿದ್ದರೆನ್ನಲಾಗುತ್ತದೆ. ಯಮತೀರ್ಥ.
ಚಿತ್ರಕೃಪೆ: Ssriram mt
ತಂಜಾವೂರು
ಇದನ್ನು ತಿರುವೈಕಾವೂರು ದೇವಾಲಯ ಎನ್ನುತ್ತಾರೆ ಹಾಗು ಇದು ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುವೈಕಾವೂರು ಎಂಬ ಹಳ್ಳಿಯಲ್ಲಿ. ಕುಂಭಕೋಣಂ-ತಿರುವೈಕಾವೂರು ಮಾರ್ಗದಲ್ಲಿ ಕುಂಭಕೋಣಂನಿಂದ 14 ಕಿ.ಮೀ ಹಾಗೂ ಸ್ವಾಮಿಮಲೈನಿಂದ 8 ಕಿ.ಮೀ ಗಳಷ್ಟು ದೂರದಲ್ಲಿದೆ. ಕುಂಭಕೋಣಂನಿಂದ ಇಲ್ಲಿಗೆ ತೆರಳಲು ಬಸ್ಸುಗಳು ದೊರೆಯುತ್ತವೆ.
ಚಿತ್ರಕೃಪೆ: Ssriram mt