ಇದನ್ನು ತಿರುಮೂರ್ತಿ ಬೆಟ್ಟಗಳೆಂದು ಕರೆಯುತ್ತಾರೆ. ಅದ್ಭುತವಾದ ಪ್ರಕೃತಿ ಸೊಬಗಿನಿಂದ ಕೂಡಿರುವ ಈ ಸ್ಥಳವು ನಿಸರ್ಗಪ್ರಿಯ ಹಾಗೂ ಧಾರ್ಮಿಕತೆಯಲ್ಲಿ ಆಸಕ್ತಿಯುಳ್ಳ ಪ್ರವಾಸಿಗರಿಬ್ಬರಿಗೂ ಸಾಕಷ್ಟು ಇಷ್ಟವಾಗುವ ಸ್ಥಳ. ಹಿನ್ನೀರು ಹಾಗೂ ಅದಕ್ಕೆ ಹೊಂದಿಕೊಂಡಂತೆ ಗಂಭೀರವಾಗಿ ನೆಲೆಸಿರುವ ಈ ಬೆಟ್ಟಗಳು ಅದ್ಭುತವಾದ ದಂತಕಥೆಯನ್ನೆ ಹೊಂದಿವೆ.
ಚುಂಬಕದಂತೆ ಆಕರ್ಷಿಸುವ ಕೊಲ್ಲಿ ಬೆಟ್ಟಗಳು
ಪ್ರತೀತಿಯಂತೆ, ಹಿಂದೆ ಈ ಸ್ಥಳದಲ್ಲಿ ಅತ್ರಿ ಮಹರ್ಷಿಗಳು ಹಾಗೂ ಅವರ ಪತ್ಮಿಯಾದ ಅನುಸೂಯಾ ದೇವಿ ಈ ಪವಿತ್ರ ಕ್ಷೇತ್ರದಲ್ಲಿ ನೆಲೆಸಿದ್ದರು. ಅನುಸೂಯಳು ಪರಮ ಪತಿವೃತೆಯಾಗಿದ್ದಳು. ಆಕೆಯ ಪಾತಿವೃತ್ಯತೆಯ ಕುರಿತು ಇಡೀ ಲೋಕವೆ ಕೊಂಡಾಡುತ್ತಿತ್ತು. ಹೀಗಿರುವಾಗ ತ್ರಿಮೂರ್ತಿಗಳ ಪತ್ನಿಯರಾದ ಸರಸ್ವತಿ, ಲಕ್ಷ್ಮಿ ಹಾಗೂ ಪಾರ್ವತಿಯರಿಗೆ ಆಕೆಯ ಮೇಲೆ ಒಮ್ಮೆ ಅಸೂಯೆ ಹುಟ್ಟಿತು.
ತಿರುಮೂರ್ತಿ ಬೆಟ್ಟ, ಚಿತ್ರಕೃಪೆ: Hayathkhan.h
ಹೇಗಾದರೂ ಮಾಡಿ ಆಕೆಗೆ ಕಳಂಕ ಉಂಟು ಮಾಡಬೇಕೆಂದು ನಿರ್ಧರಿಸಿ ತಮ್ಮ ತಮ್ಮ ಪತಿಯರ ಬಳಿ ತೆರಳಿ ಅವರನ್ನು ಈಕೆಯ ಪಾತಿವೃತೆಯ ಕುರಿತು ಪರೀಕ್ಷಿಸಬೇಕೆಂದು ಆಗ್ರಹಿಸಿದರು. ಸರ್ವಜ್ಞಾನಿಗಳು ಆಗಿದ್ದ ತ್ರಿಮೂರ್ತಿಗಳು ಹಾಗೆ ಸುಮ್ಮನೆ ನಕ್ಕು ಹಾಗೆ ಆಗಲೆಂದು ಅದಕ್ಕೆ ಒಪ್ಪಿದರು ಹಾಗೂ ಮೂವರು ಸಾಮಾನ್ಯ ಪುರುಷರಂತೆ ವೇಷ ತೊಟ್ಟು ಅತ್ರಿ ಮಹರ್ಷಿಗಳು ಇಲ್ಲದ ಸಮಯದಲ್ಲಿ ಅನುಸೂಯಳ ಬಳಿ ತೆರಳಿದರು.
ಅನುಸೂಯಳು ಮನೆಗೆ ಬಂದ ಅತಿಥಿಗಳನ್ನು ಅತ್ಯಂತ ಆದರದಿಂದ ಸ್ವಾಗತಿಸಿ ಆತಿಥ್ಯವಹಿಸಿಕೊಂಡಳು. ಅವರ ಭೀಕ್ಷಾಟನೆ ಮಾಡುತ್ತ ಬಂದಿದ್ದು ಏನನ್ನಾದರೂ ಭೀಕ್ಷೆ ನೀಡಬೇಕೆಂದು ಕೋರಿ ಭವತಿ ಭೀಕ್ಷಾಂದೇಹಿ ಎಂದು ಹೇಳಿದರು. ಅನುಸೂಯಳು ಅವರಿಗೆ ಆಹಾರವನ್ನು ದಾನವಾಗಿ ಕೊಡಬೇಕೆನ್ನುವ ಸಂದರ್ಭದಲ್ಲಿ ಆ ಮೂವರೂ ಪುರುಷರು ಅನುಸೂಯಳ ಕುರಿತು ತಮಗೆ ಊಟವನ್ನು ಮೈಮೇಲೆ ಯಾವ ವಸ್ತ್ರವೂ ಇಲ್ಲದೆ ನೀಡಬೇಕೆಂದು ಶರತ್ತು ವಿಧಿಸಿದರು.
ತಿರುಮೂರ್ತಿ ಜಲಾಶಯ, ಚಿತ್ರಕೃಪೆ: Hayathkhan.h
ಇದರಿಂದ ಅನುಸೂಯಳು ಸಂಕಷ್ಟಕ್ಕಿಡಾದಳು. ಹೀಗೆ ಬೆತ್ತಲೆಯಾಗುವುದರಿಂದ ತನ್ನ ಪಾತಿವೃತ್ಯೆಗೆ ಧಕ್ಕೆಯಾದರೆ ಇನ್ನೂ ಅವರನ್ನು ಹಾಗೆಯೆ ಕಳಿಸುವುದರಿಂದ ಅತಿಥಿಗಳ ಅವಮಾನವಾಗುತ್ತದೆಂದು ಚಿಂತೆ ಮಾಡತೊಡಗಿದಳು. ಈ ಸಂದರ್ಭದಲ್ಲಿ ಗಂಡನನ್ನು ನೆನೆಯುತ್ತ, ನನ್ನಲ್ಲಿ ಯಾವ ಕಾಮನೆಗಳೂ ಇಲ್ಲ, ಅಲ್ಲದೆ ಇವರು ಭವತಿ ಭೀಕ್ಷಾಂದೇಹಿ ಅಂದಿರುವುದರಿಂದ ನನಗೆ ಮಕ್ಕಳ ಹಾಗೆ ಎಂದು ಬಗೆದು ಬೆತ್ತಲೆಯಾಗಿ ಅವರಿಗೆ ಆಹಾರ ನೀಡಲು ಮುಂದಾದಳು. ಈ ಸಂದರ್ಭದಲ್ಲಿ ಅವಳ ಪಾತಿವೃತ್ಯೆಯ ಶಕ್ತಿಯಿಂದ ತ್ರಿಮೂರ್ತಿಗಳು ಪುಟ್ಟ ಕಂದಮ್ಮಗಳಾಗಿ ಪರಿವರ್ತಿತರಾಗಿದ್ದರು.
ಚಿತ್ರಕೃಪೆ: digital_bug
ಹೀಗೆ ಆ ಮಕ್ಕಳನ್ನು ತನ್ನ ಕೈಗಳಲ್ಲಿ ತೆಗೆದುಕೊಂಡ ಅನುಸೂಯ ಅವರಿಗೆ ತನ್ನ ಎದೆ ಹಾಲುಣಿಸಿದಳು. ಈ ಸಮಯಕ್ಕೆ ಮನೆಗ್ ಆಗಮಿಸಿದ ಅತ್ರಿ ಮಹರ್ಷಿಗಳು ನಡೆದ ಸಂಗತಿಯನ್ನು ತಿಳಿದುಕೊಂಡು ಅನುಸೂಯಳನ್ನು ಪ್ರಶಂಸಿಸಿ, ಆ ಮಕ್ಕಳು ಬೇರಾರೂ ಅಲ್ಲ ಸಾಕ್ಷಾತ್ ತ್ರಿಮೂರ್ತಿಗಳೆ ಎಂದು ಕಂಡುಕೊಂಡು ನಮಸ್ಕರಿಸಿದರು. ಈ ಸಮಯದಲ್ಲಿ ಆ ಮಕ್ಕಳು ತಮ್ಮ ನೈಜ ರುಪದಲ್ಲಿ ಅವರಿಬ್ಬರಿಗೂ ದರ್ಶನ ನೀಡಿ, ಅನುಸೂಯಳನ್ನು ಕುರಿತು ವರದಾನ ಕೇಳಿಕೊಳ್ಳಲು ಹೇಳಿದರು. ಅದಕ್ಕೆ ಅನುಸೂಯ ತ್ರಿಮೂರ್ತಿಗಳ ಅವತಾರವೆ ತನಗೆ ಮಗುವಾಗಿ ಕರುಣಿಸಬೇಕೆಂದು ಕೇಳಿಕೊಂಡಳು.
ತಿರುಮೂರ್ತಿ ದೇವಾಲಯ
ಹೀಗೆ ದುರ್ವಾಸ, ದತ್ತಾತ್ರೇಯ ಹಾಗೂ ಚಂದ್ರರು ಅನುಸೂಯಳಿಗೆ ಪುತ್ರರಾಗಿ ಜನಿಸಿದರು. ಈ ಎಲ್ಲ ಪ್ರಸಂಗ ನಡೆದ ಸ್ಥಳ ಇದೆ ಆಗಿರುವುದರಿಂದ ಇದಕ್ಕೆ ತಿರುಮೂರ್ತಿ ಬೆಟ್ಟಗಳು ಎಂಬ ಹೆಸರು ಬಂದಿತು. ಇದಕ್ಕೆ ಹೊಂದಿಕೊಂಡಂತೆ ಇರುವ ತಿರುಮೂರ್ತಿ ಜಲಾಶಯದ ಹಿನ್ನೀರು ಈ ಸ್ಥಳದ ಅಂದ ಚೆಂದವನ್ನು ಮತ್ತಷ್ಟು ಹೆಚ್ಚಿಸಿದೆ. ಇದರ ಸೌಂದರ್ಯ ಹೇಗಿದೆ ಎಂದರೆ ಇಲ್ಲಿ ಸಾಕಷ್ಟು ತಮಿಳು ಹಾಗೂ ಮಲಯಾಳಂ ಭಾಷೆಯ ಚಿತ್ರಗಳು ಚಿತ್ರೀಕರಣಗೊಂಡಿವೆ. ಇಲ್ಲೊಂದು ದೇವಾಲಯವು ಇದ್ದು ಅಮನಲಿಂಗೇಶ್ವರ ದೇವಾಲಯ ಎಂದು ಕರೆಯುತ್ತಾರೆ.
ಕೊಲುಕ್ಕುಮಲೈ : ಅತಿ ಎತ್ತರದ ಚಹಾ ಸವಿಯುವಿರಾ?
ತಿರುಮೂರ್ತಿಯಲ್ಲಿ ನೋಡಲು ಆಕರ್ಷಕವಾದ ಪಂಚಲಿಂಗ ಜಲಪಾತವೂ ಸಹ ಇದೆ. ಬೆಟ್ಟದ ಮೇಲೆ ಸುಮಾರು ಮೂರು ಕಿ.ಮೀ ಗಳಷ್ಟು ಚಾರಣ ಮಾಡಿ ಈ ಜಲಪಾತ ಕೇಂದ್ರವನ್ನು ನೋಡಬಹುದು. ಪಳನಿ-ಕೊಯಮತ್ತೂರು ಹೆದ್ದಾರಿಯ ಮೇಲೆ ಸಿಗುವ ಉಡುಮಲಪೆಟ್ಟೈನಿಂದ ಸುಮಾರು 20 ಕಿ.ಮೀ ಗಳಷ್ಟು ದೂರದಲ್ಲಿ ತಿರುಮೂರ್ತಿ ಬೆಟ್ಟಗಳಿವೆ. ಇಲ್ಲಿಗೆ ತೆರಳಲು ಉಡುಮಲುಪೆಟ್ಟೈನಿಂದ ಸಾಕಷ್ಟು ಬಸ್ಸುಗಳು ದೊರೆಯುತ್ತವೆ. ಅಲ್ಲದೆ ಉಡುಮಲುಪೆಟ್ಟೈ ಸಹ ಒಂದು ಆಕರ್ಷಕ ಪ್ರವಾಸಿ ತಾಣವಾಗಿದೆ.