ಹೌದು, ನೀವು ಕೇಳುತ್ತಿರುವುದು ನಿಜ. ಬಹುಶಃ ಭಾರತದ ಯಾವ ಸ್ಥಳದಲ್ಲಿಯೂ ನೀವು ಈ ರೀತಿಯ ವಿಶೇಷವಾದ ದೇವಾಲಯ ನೋಡಿರಲಿಕ್ಕಿಲ್ಲ. ಐಶ್ವರ್ಯ, ಸಂಪತ್ತುಗಳಿಗೆ ಅಧಿ ದೇವಿಯಾದ ಲಕ್ಷ್ಮಿ ಹಾಗೂ ಅತ್ಯಂತ ಶ್ರೀಮಂತ ದೇವನೆಂಬ ಹೆಗ್ಗಳಿಕೆ ಹೊತ್ತ ಕುಬೇರನಿಗೆ ಮುಡಿಪಾದ ದೇವಾಲಯ ಇದಾಗಿದೆ.
ಜಗತ್ತಿನ ಏಕೈಕ ಗರುಡಸ್ವಾಮಿಯ ದೇವಾಲಯ
ಈ ದೇವಾಲಯಕ್ಕೆ ಭೇಟಿ ನೀಡಿ ಲಕ್ಷ್ಮಿ ಹಾಗೂ ಕುಬೇರರನ್ನು ಭಕ್ತಿಯಿಂದ ಪೂಜಿಸಿದರೆ ಕಳೆದುಕೊಂಡಿರುವ ಅಥವಾ ಕೈಬಿಟ್ಟಿರುವ ಸಂಪತ್ತು ಮತ್ತೆ ಮರಳಿ ಲಭಿಸುತ್ತದೆಂದು ನಂಬಲಾಗಿದೆ. ಅಲ್ಲದೆ ತಿರುಪತಿ-ತಿರುಮಲ ಯಾತ್ರೆಗೆ ತೆರಳುವ ಸಂದರ್ಭದಲ್ಲಿ ಮೊದಲು ಈ ದೇವಾಲಯಕ್ಕೆ ಭೇಟಿ ನೀಡಿ ನಂತರ ತೆರಳಿದರೆ ನಿಮಗಾಗುವ ಲಾಭ ದುಪ್ಪಟ್ಟು ಎಂದು ಹೇಳಲಾಗಿದೆ.
ಕುಬೇರ, ಚಿತ್ರಕೃಪೆ: wikimedia
ಮೊದ ಮೊದಲು ವೇದಗಳ ಕಾಲದಲ್ಲಿ ಕುಬೇರನನ್ನು ದುಷ್ಟ ಶಕ್ತಿಗಳ ರಾಜನೆಂದು, ಮೂರು ಕಾಲುಗಳುಳ್ಳ, ದಪ್ಪ ಹೊಟ್ಟೆಯ ಕುಬ್ಜನೆಂದು ವಿವರಿಸಲಾಗಿದ್ದರೂ ನಂತರ ಪುರಾಣಗಳ ಕಾಲದಲ್ಲಿ ದೇವತೆಗಳ ಸ್ಥಾನಮಾನ ಕುಬೇರನಿಗೆ ಲಭಿಸಿತು ಎಂದು ತಿಳಿದು ಬರುತ್ತದೆ. ಸಾಕಷ್ಟು ವಜ್ರ-ವೈಢೂರ್ಯಗಳಿರುವ, ಆಭರಣಗಳಿಂದ ಭೂಷಿತನಾದ ಹಣದ ಗಂಟು ಹಿಡಿದಿರುವ, ಮನುಷ್ಯನನ್ನೆ ವಾಹನವನ್ನಾಗಿ ಮಾಡಿಕೊಂಡು ವಿಹರಿಸುವ ಶ್ರೀಮಂತ ದೇವತೆ ಎಂದು ಬಣ್ಣಿಸಲಾಗಿದೆ.
ಲಕ್ಷ್ಮಿ-ಕುಬೇರ ದೇವಾಲಯ, ಚಿತ್ರಕೃಪೆ: Braveman2
ಹಿಂದೆ ಸಾಕಷ್ಟು ವೈಭವಯುತವಾಗಿದ್ದ, ಸ್ವರ್ಣದಿಂದ ಶೋಭಿತವಾಗಿದ್ದ, ಅತ್ಯದ್ಭುತ ರಾಜ್ಯವಾಗಿದ್ದ ಲಂಕೆಗೆ ರಾಜನಾಗಿದ್ದ ಕುಬೇರ. ಆದರೆ ಆತನ ಮಲಸಹೋದರನಾದ ರಾವಣನಿಂದ ಕುಬೇರ ಲಂಕಾದಿಂದ ಹೊರದಬ್ಬಲ್ಪಟ್ಟ. ಮುಂದೆ ಆತ ಶಿವನನ್ನು ಕುರಿತು ತಪಸ್ಸು ಮಾಡಿ ಶಿವ-ಪಾರ್ವತಿಯರ ಸಾಕ್ಷಾತ್ಕಾರ ಪಡೆದ.
ಹೀಗೆ ಅವನು ಲೋಕದ ಜೀವಿಗಳ ಪರಿಪಾಲಕನಾಗಿ ನೇಮಿಸಲ್ಪಟ್ಟ. ಬಹುತೇಕರಿಗೆ ತಿಳಿದಿರುವಂತೆ ಕುಬೇರನು ಶ್ರೀಮಂತನೇನೊ ನಿಜ. ಆದರೆ ಸಕಲ ಸಂಪತ್ತುಗಳಿಗೆ ಆತ ಅಧಿ ದೇವನಲ್ಲ. ಬದಲು ಕೇವಲ ಸಕಲ ಸಂಪತ್ತುಗಳ ಮೇಲ್ವಿಚಾರಕ. ಮೂಲತಃ ಸಕಲ ಸಂಪತ್ತುಗಳ ಅಧಿ ದೇವಿ ಮಹಾಲಕ್ಷ್ಮಿ. ಒಂದು ರೀತಿಯಲ್ಲಿ ಕುಬೇರನು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕನಿದ್ದಂತೆ. ಈ ಒಂದು ರೀತಿಯಲ್ಲೆ ಈ ದೇವಾಲಯ ಕಂಡುಬರುತ್ತದೆ.
ಗಜಲಕ್ಷ್ಮಿ, ಚಿತ್ರಕೃಪೆ: Sujit kumar
ದೇವಾಲಯದ ವಿಶೇಷತೆ ಎಂದರೆ ಲಕ್ಷ್ಮಿ ದೇವಿಯ ಜೊತೆಗೆ ಕುಬೇರನು ಸಹ ಕಳಶ ಹಿಡಿದು ಮುಖ್ಯ ದೇವನಾಗಿ ಪೂಜಿಸಲ್ಪಡುತ್ತಾನೆ. ಅಲ್ಲದೆ, ಈ ದೇವಾಲಯದಲ್ಲಿ ಶಿವ, ಸುಬ್ರಹ್ಮಣ್ಯ, ಗಣೇಶ ಹಾಗೂ ಆಂಜನೇಯ ಮುಂತಾದವರಿಗೆ ಮುಡಿಪಾದ ಸನ್ನಿಧಿಗಳನ್ನೂ ಸಹ ಕಾಣಬಹುದು.
ಬೇಡಿದ್ದನ್ನು ಕೊಡುವ ಕಲ್ಲೂರು ಮಹಾಲಕ್ಷ್ಮಿ
ಇಲ್ಲಿ ವಿಶೇಷವಾಗಿ ಕುಬೇರನಿಗೆ ಧನ್ಯವಾದ ಹೇಳುವ ತಿರುಮಂಜನಂ ಆಚರಣೆಯನ್ನು ಭಕ್ತಾದಿಗಳು ಮಾಡುತ್ತಾರೆ ಹಾಗೂ ಕುಬೇರನಿದೆ ವಸ್ತ್ರಗಳನ್ನು ಅರ್ಪಿಸುತ್ತಾರೆ. ಚೆನ್ನೈನ ರತ್ನಮಂಗಲಂನ ವಂಡಲೂರಿನಲ್ಲಿರುವ ಈ ದೇವಾಲಯ ಬೆಳಿಗ್ಗೆ 5.30 ರಿಂದ ಮಧ್ಯಾಹ್ನ 12 ಘಂಟೆಯವರೆಗೆ ಹಾಗೂ ಸಂಜೆ 4 ಘಂಟೆಯಿಂದ ರಾತ್ರಿ 8 ಘಂಟೆಯವರೆಗೆ ವಾರದ ಎಲ್ಲ ದಿನಗಳಲ್ಲೂ ತೆರೆದಿರುತ್ತದೆ.