ಭಾರತದಲ್ಲಿ ಬ್ರಹ್ಮನಿಗೆ ಮುಡಿಪಾದ ದೇವಾಲಯಗಳಿವೆಯಾದರೂ ಬಲು ಕಡಿಮೆ ಸಂಖ್ಯೆಯಲ್ಲಿ. ವಿಷ್ಣು ಹಾಗೂ ಶಿವನಿಗೆ ಮುಡಿಪಾದ ದೇವಾಲಯ ಸಂಖ್ಯೆಗಳಿಗೇನೂ ಕಡಿಮೆಯಿಲ್ಲ. ದೇಶದ ಪ್ರತಿ ರಾಜ್ಯದ ಪ್ರತಿ ಪ್ರಮುಖ ನಗರಗಳಲ್ಲಿ ಶಿವನ ಹಾಗೂ ವಿಷ್ಣುವಿನ ದೇವಾಲಯಗಳನ್ನು ಕಾಣಬಹುದು. ಆದರೆ ಈ ಮೂರೂ ಪ್ರಮುಖ ದೇವತೆಗಳು ಒಟ್ಟಾಗಿ ನೆಲೆಸಿದ್ದರೆ?
ಹೌದು ಅಂತಹ ದೇವಾಲಯ ವಿಶೇಷ. ಸೃಷ್ಟಿಕರ್ತ ಬ್ರಹ್ಮ, ಪಾಲನಕರ್ತ ವಿಷ್ಣು ಹಾಗೂ ಲಯಕರ್ತ ಶಿವ, ಈ ಮೂವರೂ ತ್ರಿಮೂರ್ತಿಗಳು ಒಟ್ಟಾಗಿ ಒಂದೆಡೆ ನೆಲೆಸಿರುವುದು ಬಹು ಅಪರೂಪ. ಆದರೆ ದಕ್ಷಿಣ ದೇವಾಲಯಗಳ ರಾಜ್ಯವೆಂದೆ ಹೇಳಬಹುದಾದ ತಮಿಳುನಾಡು ಇಂತಹ ಒಂದು ವಿಶಿಷ್ಟ ದೇವಾಲಯಕ್ಕೆ ನೆಲೆಯಾಗಿದೆ.
ಪ್ರಸ್ತುತ ಲೇಖನದ ಮೂಲಕ ಆ ಪ್ರಸಿದ್ಧ ದೇವಾಲಯದ ಕುರಿತು ತಿಳಿಯಿರಿ ಹಾಗೂ ನಿಮಗೆ ಅವಕಾಶ ದೊರೆತರೆ ಖಂಡಿತವಾಗಿಯೂ ಆ ದೇವಾಲಯಕ್ಕೆ ಭೇಟಿ ನೀಡಿ.
ತ್ರಿಮೂರ್ತಿಗಳ ದಿವ್ಯ ನೆಲೆ:
ತನುಮಲಯನ್ ಎಂತಲೂ ಕರೆಯಲ್ಪಡುವ ಈ ದೇವಾಲಯವಿರುವುದು ತಮಿಳುನಾಡು ರಾಜ್ಯದ ಕನ್ಯಾಕುಮಾರಿ ಜಿಲ್ಲೆಯ ಸುಚೀಂದ್ರಂ ಪಟ್ಟಣದಲ್ಲಿ.
ಚಿತ್ರಕೃಪೆ: Harikrishnan Tulsidas
ತ್ರಿಮೂರ್ತಿಗಳ ದಿವ್ಯ ನೆಲೆ:
ಸುಚೀಂದ್ರಂ ಒಂದು ದೇವಾಲಯಗಳ ಪಟ್ಟಣವಾಗಿದ್ದು ಇದು ಕನ್ಯಾಕುಮಾರಿ ನಗರದಿಂದ 11 ಕಿ.ಮೀ, ನಾಗರಕೋಯಿಲ್ ನಿಂದ 7 ಕಿ.ಮೀ, ತಿರುನೆಲ್ವೇಲಿಯಿಂದ 70 ಕಿ.ಮೀ ಹಾಗೂ ಕೇರಳದ ತಿರುವನಂತಪುರಂನಿಂದ 85 ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ಬಸ್ಸುಗಳು ದೊರೆಯುತ್ತವೆ.
ಚಿತ್ರಕೃಪೆ: Vinayaraj
ತ್ರಿಮೂರ್ತಿಗಳ ದಿವ್ಯ ನೆಲೆ:
ಸ್ತನುಮಲಯನ್ ದೇವಾಲಯವು ಶೈವ ಹಾಗೂ ವೈಷ್ಣವರಿಬ್ಬರಿಗೂ ಪವಿತ್ರವಾದ ಸ್ಥಳವಾಗಿದೆ. ಸ್ತನು ಎಂದರೆ ಶಿವನು, ಮಲ್ ಎಂದರೆ ವಿಷ್ಣುವೂ ಹಾಗೂ ಅಯ್ಯ ಎಂದರೆ ಬ್ರಹ್ಮನೂ ಎಂಬರ್ಥವಿರುವುದರಿಂದ ಇದಕ್ಕೆ "ಸ್ತನುಮಲಯನ್" ಎಂಬ ಹೆಸರು ಬಂದಿದೆ.
ಚಿತ್ರಕೃಪೆ: Sbgoplek
ತ್ರಿಮೂರ್ತಿಗಳ ದಿವ್ಯ ನೆಲೆ:
17 ನೇಯ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಈ ದೇವಾಲಯವು ಅದ್ಭುತ ಶಿಲ್ಪಕಲೆಯ ಕಲಾಕೃತಿಗಳಿಂದ ಶ್ರೀಮಂತವಾಗಿದ್ದು ಮೂಲ ದೇವತೆಯು ಶಿವಲಿಂಗದ ರೂಪದಲ್ಲಿದ್ದುಅದರಲ್ಲಿ ಶಿವ, ವಿಷ್ಣು ಹಾಗೂ ಬ್ರಹ್ಮ ದೇವರುಗಳ ಸಂಯೋಜನೆಯಿದೆ ಎನ್ನಲಾಗುತ್ತದೆ.
ಚಿತ್ರಕೃಪೆ: Harikrishnan Tulsidas
ತ್ರಿಮೂರ್ತಿಗಳ ದಿವ್ಯ ನೆಲೆ:
ಇಲ್ಲಿರುವ ಶಿವಲಿಂಗದ ಮುಂದೆ ನಿಂತಾಗ ದೇವತೆಗಳ ರಾಜನಾದ ಇಂದ್ರನು ಶಾಪದಿಂದ ಮುಕ್ತಿ ಹೊಂದಿದನು. ಅರ್ಥಾತ್ ಸಂಸ್ಕೃತದಲ್ಲಿ ಪದ ಬಳಸುವಂತೆ ಶುಚಿಯಾದನು. ಹೀಗೆ ಈ ಶುಚಿ ಶಬ್ದದಿಂದಲೆ ಈ ಸ್ಥಳಕ್ಕೆ ಸುಚೀಂದ್ರಂ ಎಂಬ ಹೆಸರು ಬಂದಿತೆನ್ನಲಾಗಿದೆ. ಅಲ್ಲದೆ ಪ್ರತಿ ದಿನ ಇಂದ್ರನು ಇಲ್ಲಿ ಮಧ್ಯರಾತ್ರಿಯ "ಅರ್ಧಜಾಮ" ಪೂಜೆ ನೆರವೇರಿಸಲು ಬರುತ್ತಾನೆನ್ನಲಾಗಿದೆ.
ಚಿತ್ರಕೃಪೆ: Senthil.elt
ತ್ರಿಮೂರ್ತಿಗಳ ದಿವ್ಯ ನೆಲೆ:
ಈ ಅದ್ಭುತ ದೇವಾಲಯವು ತನ್ನ ಶಿಲ್ಪಕಲಾಕೃತಿಗಾಗಿ ಎದ್ದು ನಿಲ್ಲುತ್ತದೆ. ಶ್ರೇಷ್ಠ ಕೆತ್ತನೆಯ ಕೆಲಸಗಳಿಂದಾಗಿ ಗಮನಸೆಳೆಯುತ್ತದೆ. ಹದಿನೆಂಟಿ ಅಡಿಗಳಷ್ಟು ಎತ್ತರದ ನಾಲ್ಕು ಸಂಗೀತ ಹೊರಡಿಸುವ ಅದ್ಭುತ ಖಂಬಗಳನ್ನು ಇಲ್ಲಿ ಕೆತ್ತಲಾಗಿರುವುದನ್ನು ಕಾಣಬಹುದು.
ಚಿತ್ರಕೃಪೆ: Vinayaraj
ತ್ರಿಮೂರ್ತಿಗಳ ದಿವ್ಯ ನೆಲೆ:
ದೇವಾಲಯದಲ್ಲಿರುವ ಅಲಂಕಾರ ಮಂಟಪದಲ್ಲಿ ಆ ನಾಲ್ಕು ಸಂಗೀತ ಖಂಬಗಳನ್ನು ಕಾಣಬಹುದಾಗಿದ್ದು ಅದರಿಂದ ವಿವಿಧ ಸಂಗೀತಮಯ ಕಮ್ಪನಗಳು ಬರುವುದನ್ನು ಆಸ್ವಾದಿಸಬಹುದು. ಇದಲ್ಲದೆ ನೃತ್ಯ ಮಂಟಪವಿದ್ದು ಅಲ್ಲಿ ಸಾವಿರಕ್ಕೂ ಅಧಿಕ ಕೆತ್ತನೆಯ ಖಂಬಗಳನ್ನು ಕಾಣಬಹುದು.
ಚಿತ್ರಕೃಪೆ: Vinayaraj
ತ್ರಿಮೂರ್ತಿಗಳ ದಿವ್ಯ ನೆಲೆ:
ಈ ದೇವಾಲಯವು ವಿಶಿಷ್ಟವಾದ ಆಂಜನೇಯನ ಪ್ರತಿಮೆಯೊಂದಕ್ಕೂ ನೆಲೆಯಾಗಿದೆ. ಒಂದೆ ಗ್ರಾನೈಟ್ ಕಲ್ಲಿನಲ್ಲಿ ಅದ್ಭುತವಾಗಿ ಕೆತ್ತಲಾದ ಈ ಆಂಜನೇಯನ ಮೂರ್ತಿಯು 22 ಅಡಿಗಳಷ್ಟು ಎತ್ತರವಿದೆ.
ಚಿತ್ರಕೃಪೆ: Senthil.elt
ತ್ರಿಮೂರ್ತಿಗಳ ದಿವ್ಯ ನೆಲೆ:
ಇಲ್ಲಿರುವ ಆಂಜನೇಯನ ವಿಗ್ರಹಕ್ಕೆ ಸಂಬಂಧಿಸಿದಂತೆ ಒಂದು ಆಸಕ್ತಿಕರ ವಿಷಯವಿದೆ. ಅದೇನೆಂದರೆ, 1740 ರ ಸಂದರ್ಭದಲ್ಲಿ ಟಿಪ್ಪುವಿನ ಪ್ರಭಾವವಿದ್ದಾಗ ಎಲ್ಲಿ ಈ ಪ್ರತಿಮೆಗೆ ಹಾನಿಯಾಗುತ್ತದೊ ಎಂಬ ದೃಷ್ಟಿಯಿಂದ ಇದನ್ನು ದೇವಾಲಯದ ಆವರಣದೊಳಗಿನ ಭೂಮಿಯಲ್ಲಿ ಮುಚ್ಚಲಾಗಿತ್ತು. ನಂತರ ಅದನ್ನು ಹೊರತೆಗೆಯುವುದೆ ಮರೆತುಹೋಯಿತು.
ಚಿತ್ರಕೃಪೆ: Infocaster
ತ್ರಿಮೂರ್ತಿಗಳ ದಿವ್ಯ ನೆಲೆ:
ನಂತರ 1930 ರಲ್ಲಿ ಈ ರೀತಿಯಾಗಿ ಹೂತು ಹೋಗಿದ್ದ ಆಂಜನೇಯನ ಪ್ರತಿಮೆಯನ್ನು ಮತ್ತೆ ಮರು ಶೋಧಿಸಲಾಯಿತು ಹಾಗೂ ಅದನ್ನು ಭಕ್ತರ ಹಿತದೃಷ್ಟಿಯಿಂದ ಮತ್ತೆ ಪ್ರತಿಷ್ಠಾಪಿಸಲಾಯಿತು.
ಚಿತ್ರಕೃಪೆ: Karthikeyan.pandian
ತ್ರಿಮೂರ್ತಿಗಳ ದಿವ್ಯ ನೆಲೆ:
ಈ ದೇವಾಲಯಕ್ಕೆ ಶೈವರು ಹಾಗೂ ವೈಷ್ಣವರಿಬರೂ ನಡೆದುಕೊಳ್ಳುತ್ತಾರೆ. ದೇವಾಲಯದಲ್ಲಿ ತ್ರಿಮೂರ್ತಿಗಳು ಶಿವಲಿಂಗ ರೂಪದಲ್ಲಿದ್ದರೆ ಸುತ್ತಮುತ್ತಲು ರಾಮನಿಂದ ಹಿಡಿದು ಕೃಷ್ಣನವರೆಗೆ ಹಲವು ದೇವ ದೇವತೆಯರ ವಿಗ್ರಹಗಳನ್ನು ಕಾಣಬಹುದು. ಅಲ್ಲದೆ ಸ್ಥಳೀಯ ಅಮ್ಮ, ಕಂದನ್ ಮುಂತಾದ ದೇವರುಗಳನ್ನೂ ಇಲ್ಲಿ ಕಾಣಬಹುದು.
ತ್ರಿಮೂರ್ತಿಗಳ ದಿವ್ಯ ನೆಲೆ:
ಪ್ರತಿ ವರ್ಷ ಡಿಸೆಂಬರ್ ಹಾಗೂ ಜನವರಿ ಮಧ್ಯದ ಸಮಯದಲ್ಲಿ ಹತ್ತು ದಿನಗಳ ಕಾಲ ಇಲ್ಲಿ ರಥೋತ್ಸವವನ್ನು ಬಲು ಅದ್ದೂರಿಯಾಗಿ ಆಚರಿಸಲಾಗುತ್ತದೆ.
ಚಿತ್ರಕೃಪೆ: Ganesan