ನವಗೃಹ, ನವತಿರುಪತಿ, ಅಷ್ಟವಿನಾಯಕ ಕ್ಷೇತ್ರಗಳು ಹೇಗಿವೆಯೊ ಅದೆ ರೀತಿಯಾಗಿ ನವಕೈಲಾಸ ಕ್ಷೇತ್ರಗಳು ಇದ್ದು ಇಲ್ಲಿ ಶಿವನು ಕೈಲಾಸನಾಥನಾಗಿ ನೆಲೆಸಿದ್ದಾನೆ. ಪ್ರಮುಖವಾಗಿ ಈ ನವ ಕೈಲಾಸ ಕ್ಷೇತ್ರಗಳ ದರ್ಶನ ಪಡೆದವನು ಆ ಪರಮ ಶಿವನಲ್ಲಿ ಐಕ್ಯನಾಗುತ್ತಾನೆ ಎಂಬ ಬಲವಾದ ನಂಬಿಕೆಯಿದೆ.
ಇದಕ್ಕೆ ಸಂಬಂಧಿಸಿದಂತೆ ಕಥೆಯೊಂದರ ಪ್ರಕಾರ, ಬಹು ಹಿಂದೆ ಅಗಸ್ತ್ಯ ಮುನಿಗಳು ತಮ್ಮೊಬ್ಬ ನೆಚ್ಚಿನ ಶಿಷ್ಯನೊಂದಿಗೆ ಧ್ಯಾನದಲ್ಲಿ ಮುಳುಗಿದ್ದರು. ಆ ಶಿಷ್ಯನಿಗೆ ಮೋಕ್ಷ ಹೊಂದಬೇಕೆಂಬ ತೀವ್ರವಾದ ಬಯಕೆಯಿತ್ತು. ಅದರಂತೆ ಅಗಸ್ತ್ಯರಿಗೂ ಸಹ ತಮ್ಮ ಶಿಷ್ಯನ ಆಸೆಯನ್ನು ಪೂರೈಸುವ ಬಯಕೆಯಿತ್ತು.
ನವಗೃಹಗಳ ಕ್ರಮಬದ್ಧವಾದ ಯಾತ್ರೆ!
ಹೀಗಿರುವಾಗ, ಅಗಸ್ತ್ಯರಿಗೆ ಧ್ಯಾನದಲ್ಲಿ ಏನೊ ಪ್ರೇರಣೆಯಾದಂತಾಗಿ ಥಟ್ಟನೆ ಕಣ್ಣುಗಳನ್ನು ತೆಗೆದು, ಒಂಭತ್ತು ಹೂವುಗಳನ್ನು ತೆಗೆದುಕೊಂಡು ಶಿಷ್ಯನನ್ನು ಕುರಿತು ಆ ಒಂಭತ್ತು ಹೂವುಗಳನ್ನು ನದಿಯ ನೀರಿನಲ್ಲಿ ಬಿಟ್ಟು ಅವುಗಳನ್ನು ಹಿಂಬಾಲಿಸುತ್ತ ಒಂದೊಂದು ಹೂವುಗಳು ಮುಟ್ಟುವ ಆಯಾ ತಟಗಳಲ್ಲಿ ಶಿವಲಿಂಗಗಳನ್ನು ಪ್ರತಿಷ್ಠಾಪಿಸಿ ಕೊನೆಗೆ ನದಿಯು ಸಮುದ್ರ ಸೇರುವ ಸ್ಥಳದಲ್ಲಿ ಪವಿತ್ರ ಸ್ನಾನ ಮಾಡಲು ಸೂಚಿಸಿದರು.
ಈ ರೀತಿ ಮಾಡುವುದರಿಂದ ಶಿಷ್ಯನಿಗೆ ಮೋಕ್ಷ ದೊರಕುವ ಸೂಚನೆ ಅಗಸ್ತ್ಯರಿಗೆ ಸಿಕ್ಕಿತ್ತು. ಶಿಷ್ಯನು ಇದೆ ರೀತಿಯಾಗಿ ಅನುಸರಿಸಿ ಒಂಭತ್ತು ಶಿವಲಿಂಗಗಳನ್ನು ಪ್ರತಿಷ್ಠಾಪಿಸಿದ. ಅದರಂತೆ ಆ ಶಿವಲಿಂಗ ಕ್ಷೇತ್ರಗಳೆ ಇಂದು ನವಕೈಲಾಸ ಕ್ಷೇತ್ರಗಳೆಂದು ಪ್ರಸಿದ್ಧಿ ಪಡೆದಿವೆ ಹಾಗೂ ಈ ಕ್ಷೇತ್ರಗಳ ದರ್ಶನದಿಂದ ಮುಕ್ತಿ ಲಭಿಸುತ್ತದೆ ಎಂಬ ಪ್ರಬಲವಾದ ನಂಬಿಕೆಯಿದೆ.
ಹಾಗಾದರೆ ಶಿವನ ಆ ಒಂಭತ್ತು ಪರಮ ಪಾವನ ಕ್ಷೇತ್ರಗಳು ಯಾವುವು? ಅವು ನೆಲೆಸಿರುವುದಾದರೂ ಎಲ್ಲಿ? ಎಂಬುದರ ಕುರಿತು ಮಾಹಿತಿಯನ್ನು ಈ ಲೇಖನದ ಮೂಲಕ ಪಡೆಯಿರಿ.
ಪಾಪನಾಸಂ
ಈ ದೇವಾಲಯವು ತಮಿಳು ನಾಡಿನ ಪ್ರಖ್ಯಾತ ಧಾರ್ಮಿಕ ಹಾಗೂ ಕೌಟುಂಬಿಕ ಪ್ರವಾಸಿ ತಾಣವಾಗಿ ಪ್ರಸಿದ್ಧಿ ಪಡೆದಿದೆ. ಇದನ್ನು ತಮಿಳಿನಲ್ಲಿ ಪಾಪನಾಸಂ ಎಂಬ ಹೆಸರಿನಿಂದಲೆ ಕರೆಯುತ್ತಾರೆ ಹಾಗೂ ಇಲ್ಲಿ ನೆಲೆಸಿರುವ ಶಿವನು ಪಾಪನಾಸನಾಥರ್ ನಾಗಿ ಜನರನ್ನು ಹರಸುತ್ತಿದ್ದಾನೆ.
ಚಿತ್ರಕೃಪೆ: Prakash
ತಿರುನೆಲ್ವೇಲಿ
ಪಾಪನಾಶಂ ಒಂದು ಧಾರ್ಮಿಕ ಹಾಗೂ ಕೌಟುಂಬಿಕ ಯಾತ್ರಾ ಕೇಂದ್ರವಾಗಿದ್ದು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಅಂಬಸಮುದ್ರಂ ತಾಲೂಕಿನಲ್ಲಿದೆ. ತಾಮ್ರದ ಅಂಶ ಅಧಿಕವಾಗಿರುವ ತಾಮಿರಭರಣಿ ನದಿಯ ತಟದ ಮೇಲೆ ನೆಲೆಸಿರುವ ಪಾಪನಾಶಂ ಶಿವನ ದೇವಾಲಯಕ್ಕೆ ಪ್ರಸಿದ್ಧಿ ಪಡೆದಿದೆ.
ಚಿತ್ರಕೃಪೆ: MaRISELVAM
ಲೋಕನಾಯಕಿ
ಹಾಗಾಗಿ ಇಲ್ಲಿ ನೆಲೆಸಿರುವ ಶಿವನನ್ನು ಪಾಪನಾಶನಾಥರ್ ಅಂದರೆ ಪಾಪಗಳನ್ನು ನಾಶ ಮಾಡುವ ದೇವರನ್ನಾಗಿ ಆರಾಧಿಸಲಾಗುತ್ತದೆ ಹಾಗೂ ದೇವತೆಯಾಗಿ ಲೋಕನಾಯಕಿ (ಉಳಗಂಬಿಗೈ) ಯನ್ನು ಆರಾಧಿಸಲಾಗುತ್ತದೆ. ಈ ಒಂದು ಸ್ಥಳದಲ್ಲಿ ಅಗಸ್ತ್ಯ ಮುನಿಗೆ ವೃಷಭ ವಾಹನ ಮೇಲೆ ಲೋಕನಾಯಕಿಯೊಡನೆ ದಂಪತಿ ಸಮೇತರಾಗಿ ಕುಳಿತ ಶಿವನ ಕಲ್ಯಾಣ ದರ್ಶನವಾಗಿತ್ತೆನ್ನಲಾಗಿದೆ.
ಚಿತ್ರಕೃಪೆ: Muthuraman99
ತಾಮ್ರದ ಅಂಶ
ಅಲ್ಲದೆ ಇಲ್ಲಿನ ನೀರಿನಲ್ಲಿ ತಾಮ್ರದ ಗುಣ ಇರುವುದರಿಂದ ಸಾಕಷ್ಟು ರೋಗಗಳು ಭಕ್ತಿ ಇಟ್ಟು ಬೇಡಿ ಕೊಳ್ಳುವವರಿಗೆ ಕಡಿಮೆಯಾಗುತ್ತದೆ ಎನ್ನಲಾಗಿದೆ. ಪಾಪನಾಶಂ ಸುತ್ತಮುತ್ತ ಸಾಕಷ್ಟು ಆನಂದ ಕರುಣಿಸುವ ಆಕರ್ಷಣೆಗಳಿವೆ. ಅದರಲ್ಲೊಂದಾಗಿದೆ ಅಗಸ್ತಿಯಾರ್/ಅಗಸ್ತ್ಯಾರ್ ಜಲಪಾತ ತಾಣ. ಈ ಜಲಪಾತ ಕೇಂದ್ರವು ನೋಡಲು ನಯನಮನೋಹರವಾಗಿದ್ದು ಉತ್ಸಾಹ ಹೊಂದುವಂತೆ ಮಾಡುತ್ತದೆ.
ಚಿತ್ರಕೃಪೆ: Prakash
ಚರಣ್ಮಾದೇವಿ
ತಿರುನೆಲ್ವೇಲಿ ಪಟ್ಟಣದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಚರಣ್ಮಹಾದೇವಿ ಕೈಲಾಸನಾಥರ್ ದೇವಾಲಯವು ನವಕೈಲಾಸಗಳಲ್ಲೊಂದಾಗಿದೆ. ತಾಮಿರಭರಣಿ ನದಿ ತಟದಲ್ಲಿ ನೆಲೆಸಿರುವ ಈ ದೇವಾಲಯವು ಸಾಕಷ್ಟು ವಿಶೇಷವಾಗಿದ್ದು ಪ್ರತಿನಿತ್ಯ ಭಕ್ತರಿಂದ ತುಂಬಿರುತ್ತದೆ.
ಚಿತ್ರಕೃಪೆ: Booradleyp1
ಶಿವರಾತ್ರಿ
ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಜನಸಾಗರವೆ ಈ ಶಿವಾಲಯಕ್ಕೆ ಹರಿದು ಬರುತ್ತದೆ. ಇಲ್ಲಿರುವ ಸ್ವಯಂಭು ಲಿಂಗವನ್ನು ಅಮ್ಮೈನಾಥರ್ ಅಥವಾ ಕೈಲಾಸನಾಥರ್ ಎಂದು ಪೂಜಿಸುತ್ತಾರೆ. ಜೊತೆಗೆ ಶಿವನ ಮಡದಿಯಾದ ಜಗನ್ಮಾತೆ ಪಾರ್ವತಿದೇವಿಯು ಅವುದೈ ನಾಯಕಿಯಾಗಿ ನೆಲೆಸಿದ್ದಾಳೆ.
ಚಿತ್ರಕೃಪೆ: Booradleyp1
ಕೊಡಗನಲ್ಲೂರು
ತಿರುನೆಲ್ವೇಲಿಯಿಂದ 15 ಕಿ.ಮೀ ಗಳಷ್ಟು ದೂರದಲ್ಲಿ ತಿರುನೆಲ್ವೇಲಿ-ಚರಣ್ಮಾದೇವಿ ರಾಜ್ಯ ಹೆದ್ದಾರಿಯ ಮೇಲೆ ಸಿಗುವ ಕೊಡಗನಲ್ಲೂರು ಕ್ಷೇತ್ರವು ಶಿವಕಾಮಿಯಮ್ಮ ಸಮೇತನಾಗಿ ನೆಲೆಸಿರುವ ಕೈಲಾಸನಾಥರ್ ಶಿವ ದೇವಾಲಯಕ್ಕೆ ಹೆಸರುವಾಸಿಯಾಗಿದೆ.
ಚಿತ್ರಕೃಪೆ: Booradleyp1
ನವಗೃಹಯಾತ್ರೆ
ಇನ್ನೊಂದು ವಿಶೇಷವೆಂದರೆ ನವಕೈಲಾಸ ದೇವಾಲಯಗಳು ನವಗೃಹಗಳಲ್ಲಿ ಒಂದೊಂದು ಗೃಹವನ್ನು ಪ್ರತಿನಿಧಿಸುತ್ತವೆ. ಹಾಗಾಗಿ ನವಕೈಲಾಸ ತೀರ್ಥಯಾತ್ರೆಯು ನವಗೃಹ ಯಾತ್ರೆಯಾಗಿಯೂ ಆಗಿರುತ್ತದೆ ಹಾಗೂ ಅದರದ್ದೆ ಆದ ವಿಶೇಷ ಪುಣ್ಯವು ನಿಮಗೆ ದೊರಕುತ್ತದೆ. ಕೊಡಗನಲ್ಲೂರು ಕೈಲಾಸನಾಥರ್ ದೇವಾಲಯವು ಮಂಗಳ ಗೃಹವನ್ನು ಪ್ರತಿನಿಧಿಸುತ್ತದೆ.
ಚಿತ್ರಕೃಪೆ: Booradleyp1
ಎರಡೆ ಕಿ.ಮೀ
ತಿರುನೆಲ್ವೇಲಿ ರೈಲು ನಿಲ್ದಾಣದಿಂದ ಕೇವಲ ಎರಡು ಕಿ.ಮೀ ಗಳಷ್ಟು ದೂರದಲ್ಲಿರುವ ಕುನ್ನತೂರಿನ ಕೈಲಾಸನಾಥರ್ ದೇವಾಲಯವು ನವಕೈಲಾಸಗಳಲ್ಲಿ ಒಂದಾಗಿದೆ. ಈ ದೇವಾಲಯವು ಮಿಕ್ಕೆಲ್ಲ ದೇವಲಾಯಗಳಿಗಿಂತ ಚಿಕ್ಕದಾಗಿದೆ.
ಚಿತ್ರಕೃಪೆ: Booradleyp1
ರಾಹು
ಇಲ್ಲಿ ಶಿವನನ್ನು ಕೋಧ ಪರಮೇಶ್ವರನನ್ನಾಗಿ ಪೂಜಿಸಲಾಗುತ್ತದೆ. ನವಗೃಹಗಳಲ್ಲಿ ಇದು ರಾಹುವನ್ನು ಪ್ರತಿನಿಧಿಸುವ ದೇವಾಲಯವಾಗಿದೆ. ಇಲ್ಲಿ ಶಿವಲಿಂಗವು ಸರ್ಪದ ಹಿನ್ನೆಲೆ ಹೊಂದಿದೆ.
ಚಿತ್ರಕೃಪೆ: Booradleyp1
ಕೈಲಾಸನಾಥರ್
ತಿರುನೆಲ್ವೇಲಿಯಿಂದ 17 ಕಿ.ಮೀ ದೂರದಲ್ಲಿರುವ ಮುರಪ್ಪನಾಡು ಎಂಬಲ್ಲಿ ಕೈಲಾಸನಾಥರ ಈ ದೇವಾಲಯವಿದೆ. ಗುರುವನ್ನು ಪ್ರತಿನಿಧಿಸುವ ನವಕೈಲಾಸಗಳಲ್ಲಿ ಒಂದಾಗಿದೆ ಈ ದೇವಾಲಯ. ತಾಮಿರಭರಣಿ ನದಿಯ ತಟದ ಮೇಲೆ ನೆಲೆಸಿದೆ.
ಚಿತ್ರಕೃಪೆ: commons.wikimedia
ತೂತುಕುಡಿ
ತೂತುಕುಡಿಯಿಂದ 20 ಕಿ.ಮೀ ದೂರವಿರುವ ಕೀಲಾತೂರು ಎಂಬಲ್ಲಿ ಸೇರಿಂದಪೂಮಂಗಲಂ ಎಂಬ ಗ್ರಾಮವಿದ್ದು ಅಲ್ಲಿ ಕೈಲಾಸನಾಥರ ಈ ದೇವಾಲಯವಿದೆ. ನವಕೈಲಾಸಗಳಲ್ಲಿ ಇದು ಕೊನೆಯ ಸ್ಥಳ ಎಂದು ಹೇಳಲಾಗುತ್ತದೆ. ಇದು ಶುಕ್ರನನ್ನು ಪ್ರತಿನಿಧಿಸುತ್ತದೆ.
ಚಿತ್ರಕೃಪೆ: commons.wikimedia
ತೂತುಕುಡಿ
ತಿರುನೆಲ್ವೇಲಿಯಿಂದ ಸುಮಾರು 38 ಕಿ.ಮೀ ಗಳಷ್ಟು ದೂರದಲ್ಲಿರುವ ರಾಜಾಪತಿ ಎಂಬಲ್ಲಿರುವ ಕೈಲಾಸನಾಥರ್ ದೇವಾಲಯ ಇದಾಗಿದೆ. ಕೇತುವನ್ನು ಪ್ರತಿನಿಧಿಸುತ್ತದೆ.
ಚಿತ್ರಕೃಪೆ: Booradleyp1
ಬುಧ
ತಿರುನೆಲ್ವೇಲಿಯಿಂದ ತಿರುಚೆಂಡೂರಿಗೆ ಹೋಗುವ ಮಾರ್ಗದಲ್ಲಿ ತಿರುನೆಲ್ವೇಲಿಯಿಂದ ಸುಮಾರು 38 ಕಿ.ಮೀ ದೂರದಲ್ಲಿರುವ ತೆಂತಿರುಪ್ಪೆರೈ ಎಂಬಲ್ಲಿರುವ ಕೈಲಾಸನಾಥರ್ ದೇವಾಲಯ ಇದಾಗಿದೆ. ಬುಧನನ್ನು ಪ್ರತಿನಿಧಿಸುತ್ತದೆ ಈ ಶಿವಲಿಂಗ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Yosarian
ಶನಿ
ತಿರುನೆಲ್ವೇಲಿಯಿಂದ 30 ಕಿ.ಮೀ ಹಾಗೂ ತೂತುಕುಡಿಯಿಂದ 40 ಕಿ.ಮೀ ಗಳಷ್ಟು ದೂರದಲ್ಲಿರುವ ತಿರುವೈಕುಂಠಂ ಕ್ಷೇತ್ರದಲ್ಲಿರುವ ಕೈಲಾಸನಾಥರ್ ದೇವಾಲಯ ಇದಾಗಿದೆ. ಈ ಒಂದು ಸ್ಥಳದಲ್ಲಿಯೆ ನವತಿರುಪತಿ ಕ್ಷೇತ್ರಗಳ ಮೊದಲನೇಯ ತಿರುಪತಿ ಸ್ಥಿತವಿದೆ. ಇದು ಶನಿಗೃಹವನ್ನು ಪ್ರತಿನಿಧಿಸುತ್ತದೆ.
ಚಿತ್ರಕೃಪೆ: Ssriram mt