ಪೆರ್ಣಂಕಿಲವನ್ನು ದೇವರು ಹರಸಿ, ನೆಲೆಸಿರುವ ದೈವ ಭೂಮಿ ಎಂದು ಪರಿಗಣಿಸಲಾಗುತ್ತದೆ. ಅಷ್ಟೊಂದು ಪಾವಿತ್ರ್ಯತೆ ಈ ಸ್ಥಳದಲ್ಲಿ ನೆಲೆಸಿದೆ ಎಂದು ನಂಬಲಾಗಿದೆ. ಮೂಲತಃ ಪೆರ್ಣಂಕಿಲ ಎಂಬ ಹೆಸರಿನ ಈ ಗ್ರಾಮವು ಇರುವುದು ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿ. ಈ ಗ್ರಾಮದಲ್ಲಿರುವ ಪೆರ್ಣಂಕಿಲ ಗಣಪತಿ ದೇವಸ್ಥಾನ ಬಹು ಜನಪ್ರೀಯ.
ವಿಶೇಷ ಲೇಖನ : ಉಡುಪಿ ಜಿಲ್ಲೆಯ ಸುಂದರ ಆಕರ್ಷಣೆಗಳು
ಚಿತ್ರಕೃಪೆ: Rajaramraok
ಈ ದೇವಸ್ಥಾನವು ಮಹಾಲಿಂಗೇಶ್ವರ ಹಾಗೂ ಶ್ರೀಮಹಾಗಣಪತಿಯು ನೆಲೆಸಿರುವ ಪವಿತ್ರ ಸನ್ನಿಧಿಯಾಗಿದೆ. ಉಡುಪಿ ನಗರದ ನೈರುತ್ಯಕ್ಕೆ ಸುಮಾರು 20 ಕಿ.ಮೀ ದೂರದಲ್ಲಿ ಈ ಗ್ರಾಮವು ಸ್ಥಿತವಿದೆ. ಇಲ್ಲಿರುವ ಗಣಪತಿ ದರುಶನ ಮಾತ್ರವೆ ಜೀವನದ ಎಲ್ಲ ಸಂಕಷ್ಟಗಳನ್ನು ಹೋಗಲಾಡಿಸುತ್ತದೆ ಎನ್ನಲಾಗಿದೆ. ಈ ಗಣಪತಿಯ ವಿಗ್ರಹವು ಭೂಮಿಯಿಂದ ತನ್ನಿಂತಾನೆ ದೊರೆತಿದ್ದು ಇದನ್ನು ಉದ್ಭವಮೂರ್ತಿ ಎನ್ನಲಾಗಿದೆ.
ವಿಶೇಷ ಲೇಖನ : ಗಣೇಶನ ವಿಶೇಷ ದೇವಸ್ಥಾನಗಳು
ಚಿತ್ರಕೃಪೆ: Punith331994
ದೇವಸ್ಥಾನದ ವಾರ್ಷಿಕ ಉತ್ಸವವನ್ನು ಇಲ್ಲಿನ ಜನರು ಅತಿ ಭಕ್ತಿ ಶೃದ್ಧೆಯಿಂದ ಆಚರಿಸುತ್ತಾರೆ. ಗಣೇಶ ಚತುರ್ಥಿಯು ಇಲ್ಲಿ ಬಹಳ ಪವಿತ್ರವದ ದಿನ. ಸುತ್ತಮುತ್ತಲಿನ ಗ್ರಾಮಗಳಿಂದ ಸಾಕಷ್ಟು ಜನರು ಅಂದು ಗಣಪತಿಯ ದರುಶನ ಕೋರಿ ಇಲ್ಲಿಗೆ ಬರುತ್ತಾರೆ. ಇಲ್ಲಿನ ಗಣಪತಿಯನ್ನು ಭಕ್ತಿಯಿಂದ ಪ್ರಾರ್ಥಿಸಿದಾಗ ಎಲ್ಲ ಆಸೆಗಳು ಈಡೇರುತ್ತವೆ ಎನ್ನಲಾಗಿದೆ.
ಚಿತ್ರಕೃಪೆ: Punith331994
ಮುಖ್ಯವಾಗಿ ಇಲ್ಲಿರುವ ಗಣಪತಿಯ ವಿಗ್ರಹದ ಹಿಂದೆ ಒಂದು ರೋಚಕಮಯವಾದ ಹಿನ್ನಿಲೆಯಿದೆ. ಅದರ ಪ್ರಕಾರ, ಒಂದೊಮ್ಮೆ ದಲಿತ ಸಮುದಾಯಕ್ಕೆ ಸೇರಿದ ರೈತನೊಬ್ಬ ಭೂಮಿಯನ್ನು ನೇಗಿಲು (ಅಂಕಿಲ) ಹೊತ್ತು ಉಳುಮೆ ಮಾಡುತ್ತಿರುವಾಗ ನೇಗಿಲ ತುದಿಗೆ ಏನೊ ಸಿಕ್ಕಿದ ಅನುಭವವಾಯಿತು. ಅದೇನೆಂದು ನೋಡಿದಾಗ ಗಣಪತಿಯ ವಿಗ್ರಹ ಅದರ ತುದಿಗೆ ಸಿಕ್ಕಿದ್ದು ಕಂಡುಬಂದಿತು.
ಚಿತ್ರಕೃಪೆ: Rajaramraok
ಆದರೆ ಉಳುತ್ತಿದ್ದ ರಭಸಕ್ಕೆ ವಿಗ್ರಹದ ಮೇಲ್ಭಾಗವು ತುಂಡಾಗಿತ್ತು. ಆಶ್ಚರ್ಯವೆಂದರೆ ತುಂಡಾದ ಭಾಗದಿಂದ ರಕ್ತವು ಜಿನುಗುತ್ತಿತ್ತು. ಈ ಒಂದು ಅಸಾಮಾನ್ಯ ದೃಶ್ಯವನ್ನು ಕಂಡು ರೈತನು ಅವಕ್ಕಾದನು ಹಾಗೂ ಏನು ಮಾಡಬೇಕೆಂದು ತಿಳಿಯದೆ ಮಂಕಾಗಿ ಮನೆಗೆ ಸೇರಿದನು.
ಅಂದು ರಾತ್ರಿ ರೈತನು ನಿದ್ದೆ ಮಾಅಡುವಾಗ ಕನಸಿನಲ್ಲಿ ದೈವವೊಂದು ಬಂದು ಆತನನ್ನು ಕುರಿತು; ಎರಡು ಕೊಪ್ಪರಿಗೆಗಳನ್ನು ತೆಗೆದುಕೊಂಡು ಒಂದು ವಿಗ್ರಹ ದೊರೆತ ಸ್ಥಳದಲ್ಲಿಯೂ, ಮತ್ತೊಂದನ್ನು ಶೈವಾಲಯದಲ್ಲಿಯೂ ಕೇಳಮುಖವಾಗಿ ಇಡಬೇಕೆಂದು, ಮರುದಿನ ಆ ಸ್ಥಳಗಳಿಗೆ ಹೋಗಿ ನೋಡಬೇಕೆಂದು ಆದೇಶಿಸಿತು.
ಚಿತ್ರಕೃಪೆ: Punith331994
ನಂತರ ರೈತನು ದೈವದ ಆದೇಶ ಹಾಗೆ ಚಾಚು ತಪ್ಪದೆ ಮಾಡಿದನು. ಮರುದಿನ ವಿಗ್ರಹವಿದ್ದ ಸ್ಥಳಕ್ಕೆ ಹೋದಾಗ ಆತನಿಗೆ ಅಚ್ಚರಿ ಕಾದಿತ್ತು. ಅಲ್ಲಿ ಯಾವ ವಿಗ್ರಹವೂ ದೊರಕಲಿಲ್ಲ. ಬದಲಿಗೆ ಅದು ಶೈವಾಲಯ (ಶಿವ ದೇವಸ್ಥಾನ) ದ ಕೊಳವೊಂದರಲ್ಲಿ ದೊರಕಿತು. ಆ ರೈತನ ಹೆಸರು ಪೆರ್ಣ. ಆ ಘಟನೆಯ ನಂತರ ಅವನ ಹೆಸರು ಅಮರತ್ವ ಹೊಂದುವ ಉದ್ದೇಶದಿಂದ ಆ ಸ್ಥಳಕ್ಕೆ ಪೆರ್ಣ + ಅಂಕಿಲ (ನೇಗಿಲು) ಜೊತೆಗೂಡಿ ಪೆರ್ಣಂಕಿಲ ಎಂಬ ಹೆಸರು ಬಂದಿತು.
ಚಿತ್ರಕೃಪೆ: Punith331994
ಪೆರ್ಣಂಕಿಲಕ್ಕೆ ತೆರಳಲು ಸಾಕಷ್ಟು ಖಾಸಗಿ ಬಸ್ಸುಗಳು ಉಡುಪಿ ನಗರದಿಂದ ಪ್ರತಿ ಅರ್ಧ ಘಂಟೆಗೊಂದರಂತೆ ದೊರೆಯುತ್ತವೆ. ಬಸ್ಸುಗಳ ಸೇವೆಯನ್ನು ಬೆಳಿಗ್ಗೆಯಿಂದ ರಾತ್ರಿ 8 ಘಂಟೆಯವರೆಗೂ ಮಾತ್ರವೆ ಪಡೆಯಬಹುದಾಗಿದೆ.