ಆಧ್ಯಾತ್ಮಿಕವಾಗಿ ಮುಕ್ತಿ ಅಥವಾ ಮೋಕ್ಷ ಹೊಂದುವುದು ಮನುಷ್ಯ ಜೀವನದ ಪರಮೋಚ್ಛ ಗುರಿ ಹಾಗೂ ಸಾಧನೆಯಾಗಿದೆ. ಶಂಕರಾಚಾರ್ಯರು ತಮ್ಮ ಭಜಗೋವಿಂದಂನಲ್ಲಿ ಹೇಳುವಂತೆ "ಪುನರಪಿ ಜನನಂ, ಪುನರಪಿ ಮರಣಂ" ಅಂದರೆ ಜೀವನ ಎಂಬುದು ಹುಟ್ಟು ಸಾವುಗಳ ಮಧ್ಯೆ ಯಾವಾಗಲೂ ಗಿರಕಿ ಹೊಡೆಯುತ್ತಿರುತ್ತದೆ. ಇಂದು ಮನುಷ್ಯನಾಗಿ ಹುಟ್ಟಿದ್ದು ನಮ್ಮ ಕರ್ಮಗಳಿಗನುಸಾರವಾಗಿ ಮುಂದಿನ ಜನ್ಮದಲ್ಲಿ ಮತ್ತಿನ್ನೆನೋ ಆಗಿ ಹುಟ್ಟುತ್ತೇವೆ, ಮರಣಿಸುತ್ತೇವೆ. ಈ ಪ್ರಕ್ರಿಯೆ ನಿರಂತರ. ಈ ಚಕ್ರದಿಂದ ಹೊರಬರುವುದೆ ಮೋಕ್ಷ ಪ್ರಾಪ್ತಿಯಾದಂತೆ.
ವಾರಾಂತ್ಯದ ಕೊಡುಗೆ : ದೇಶೀಯ ವಿಮಾನ ಹಾರಾಟಗಳ ಮೇಲೆ 200 ರೂಪಾಯಿಗಳಷ್ಟು ಕಡಿತ ಗೊಐಬಿಬೊದಿಂದ
ಹಿಂದೂ ಧರ್ಮದ ಪ್ರತಿಯೊಬ್ಬನು ಕೊನೆಗೆ ತಾನು ನಶಿಸಿದ ಮೇಲೆ ದೇವರಲ್ಲಿ ಮೋಕ್ಷ ಹೊಂದಬೇಕೆಂದು ಖಂಡಿತ ಬಯಸುತ್ತಾನೆ. ಅದಕ್ಕೆಂತಲೆ ನಾನಾ ವಿಧದ ಪುಣ್ಯ ಕರ್ಮಗಳನ್ನು ಮಾಡುತ್ತಾನೆ. ದಾನ ಧರ್ಮಗಳನ್ನು ಮಾಡುತ್ತಾನೆ. ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುತ್ತಾನೆ. ಇವೆಲ್ಲವೂ ಅವರವರ ನಂಬಿಕೆಗಳಿಗೆ ಬಿಟ್ಟ ವಿಚಾರ. ಆದರೆ ಕೆಲ ಪವಿತ್ರ ಸ್ಥಳಗಳು ತಮ್ಮಲ್ಲಿರುವ ವಿಶಿಷ್ಟ ಹಿನ್ನಿಲೆಯಿಂದಾಗಿ ಮುಕ್ತಿ ದೊರಕಿಸಿ ಕೊಡುವಲ್ಲಿ ಸಹಾಯಕವಾಗಿವೆ ಎಂಬುದು ಕೆಲ ಪುರಾಣಗಳ ಸಾರ. ಆ ಸ್ಥಳಗಳನ್ನೆ ಮುಕ್ತಿ ಸ್ಥಳಗಳು ಎಂದು ಕರೆಯಲಾಗುತ್ತದೆ.
ವಿಶೇಷ ಲೇಖನ : ಉಡುಪಿ ಜಿಲ್ಲೆಯ ಆಕರ್ಷಣೆಗಳು
ಕರ್ನಾಟಕದಲ್ಲಿ ಏಳು ಮುಕ್ತಿ ಸ್ಥಳಗಳನ್ನು ಕಾಣಬಹುದಾಗಿದೆ. ಈ ಏಳೂ ಕ್ಷೇತ್ರಗಳನ್ನು ಒಟ್ಟಾರೆಯಾಗಿ ಪರಶುರಾಮ ಕ್ಷೇತ್ರಗಳೆಂದೂ ಸಹ ಕರೆಯಲಾಗುತ್ತದೆ. ಹಾಗಾದರೆ ಬನ್ನಿ ಈ ಲೇಖನದ ಮೂಲಕ ಕರ್ನಾಟಕದ ಆ ಪವಿತ್ರ ಏಳು ಮುಕ್ತಿ ಸ್ಥಳಗಳು ಯಾವುವೆಂಬುದರ ಕುರಿತು ತಿಳಿಯೋಣ.
ಚಿತ್ರಕೃಪೆ: Ashok Prabhakaran
ಕೊಲ್ಲೂರು: ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯಲ್ಲಿರುವ ಪುಟ್ಟ ಊರು ಕೊಲ್ಲೂರು. ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನದಿಂದಾಗಿ ಇದು ಪ್ರಸಿದ್ಧಿ ಪಡೆದಿದೆ. ಕುಂದಾಪುರದಿಂದ ಮತ್ತು ಬೈಂದೂರುನಿಂದ 27 ಕಿ.ಮೀ ಹಾಗೂಮಂಗಳೂರು ನಗರದಿಂದ ಸುಮಾರು 140 ಕಿ.ಮೀ ಗಳಷ್ಟು ದೂರದಲ್ಲಿರುವ ಕೊಲ್ಲೂರು ಶ್ರೀಕ್ಷೇತ್ರವು ಏಳು ಪರಶುರಾಮ ಸ್ಥಳಗಳ ಪೈಕಿ ಪ್ರಮುಖವಾಗಿದೆ. ಕೊಲ್ಲಾಪುರ ಎಂದೂ ಕರೆಯಲಾಗುವ ಈ ದೇವಸ್ಥಾನ ಕ್ಷೇತ್ರದಲ್ಲಿ ದೇವಿಯು ವಿಗ್ರಹವನ್ನು ಸ್ವತಃ ಆದಿ ಶಂಕರರೆ ಪ್ರತಿಷ್ಠಾಪಿಸಿದ್ದಾರೆನ್ನಲಾಗಿದೆ. ದೇವಿಯು ಇಲ್ಲಿದ್ದ ಮೂಕಾಸುರನೆಂಬ ರಾಕ್ಷಸನನ್ನು ಸಂಹರಿಸಿ ಮೂಕಾಂಬಿಕೆಯಾಗಿ ನೆಲೆಸಿದ ಸ್ಥಳವೆಂದು ಹೇಳಲಾಗುತ್ತದೆ.
ಚಿತ್ರಕೃಪೆ: Raghavendra Nayak Muddur
ಕುಂಬಸಿ/ಆನೆಗುಡ್ಡೆ: ಉಡುಪಿ ಜಿಲ್ಲೆಯಲ್ಲಿರುವ ಆನೆಗುಡ್ಡೆ ಅಥವಾ ಕುಂಬಸಿಯು ಏಳು ಪವಿತ್ರ ಪರಶುರಾಮ ಸ್ಥಳಗಳ ಪೈಕಿ ಒಂದಾಗಿದೆ. ಉಡುಪಿಯಿಂದ 30 ಕಿ.ಮೀ ದೂರದಲ್ಲಿರುವ ಆನೆಗುಡ್ಡೆ ತನ್ನಲ್ಲಿರುವ ಗಣೇಶನ ದೇವಸ್ಥಾನದಿಂದಾಗಿ ಹೆಸರುವಾಸಿಯಾಗಿದೆ.
ಚಿತ್ರಕೃಪೆ: Ashok Prabhakaran
ಉಡುಪಿ: ಪ್ರವಾಸಿ ತಾಣವಾಗಿಯೂ, ಧಾರ್ಮಿಕ ತಾಣವಾಗಿಯೂ ಹಾಗೂ ಗುಣಮಟ್ಟದ ಶೈಕ್ಷಣಿಕ ತಾಣವಾಗಿಯೂ ಕರ್ನಾಟಕದ ಉಡುಪಿ ಜಿಲ್ಲೆ ರಾಜ್ಯಾದ್ಯಂತ ಹೆಸರುವಾಸಿಯಾಗಿದೆ. ಉಡುಪಿ ಕೃಷ್ಣ ಮಠ ಪ್ರಾಯಶಃ ಉಡುಪಿಯ ಪ್ರಪ್ರಥಮ ಧಾರ್ಮಿಕ ಆಕರ್ಷಣೆಯಾಗಿ ಈ ಮಠವು ಜನರನ್ನು ಎಲ್ಲೆಡೆಯಿಂದ ಸೆಳೆಯುತ್ತದೆ. ಈ ಮಠದ ಸುತ್ತ ಮುತ್ತಲು ಇತರೆ ದೇವಾಲಯಗಳಿವೆ. ಈ ಮಠವನ್ನು ವೈಷ್ಣವ ಪಂಥದ ಶ್ರೀ ಮಾಧ್ವಾಚಾರ್ಯರು ಸ್ಥಾಪಿಸಿದರು ಎಂಬ ಪ್ರತೀತಿಯಿದೆ. ಬಾಲ ಕೃಷ್ಣನ ವಿಗ್ರಹವು ಮನಮೋಹಕವಾಗಿದ್ದು, ಏಳು ಮುಕ್ತಿ ಸ್ಥಳಗಳ ಪೈಕಿ ಉಡುಪಿಯೂ ಸಹ ಒಂದು.
ಚಿತ್ರಕೃಪೆ: Miran Rijavec
ಗೋಕರ್ಣ: ಮೇಲಿನ ಚಿತ್ರದಲ್ಲಿರುವುದು ಗೋಕರ್ಣದ ಕೋಟಿತೀರ್ಥ. ಏಳು ಪರಶುರಾಮರ ಸ್ಥಳಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಗೋಕರ್ಣ ಶ್ರೀಕ್ಷೇತ್ರವೂ ಸಹ ಒಂದು. ಇಲ್ಲಿರುವ ಶಿವನ ದೇವಸ್ಥಾನವು ದಕ್ಷಿಣ ಭಾರತದಲ್ಲೆ ಹೆಸರುವಾಸಿಯಾಗಿದ್ದು ಶಿವನ ಆತ್ಮಲಿಂಗವಿರುವ ದೇವಸ್ಥಾನವಾಗಿದೆ. ಪ್ರಮುಖವಾಗಿ ಈ ಆತ್ಮಲಿಂಗವನ್ನು ತಮಿಳಿನ ನಾಯನ್ಮಾರ ಸಂತರು ತಮ್ಮ ಶ್ಲೋಕಗಳಲ್ಲಿ ಪರಮ್ ಪೂಜ್ಯವಾಗಿ ಆರಾಧಿಸಿದ್ದಾರೆ.
ಕೋಟೇಶ್ವರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಕೋಟೇಶ್ವರ ಏಳು ಪರಶುರಾಮ ಕ್ಷೇತ್ರಗಳ ಪೈಕಿ ಒಂದಾಗಿದೆ. ಪ್ರತಿ ವರ್ಷ ವೃಶ್ಚಿಕ ಮಾಸದ ಪೌರ್ಣಿಮೆಯ ದಿನದಂದು ಇಲ್ಲಿ ಅತಿ ಅದ್ದೂರಿಯಿ ರಥೋತ್ಸವವನ್ನು ಆಚರಿಸಲಾಗುತ್ತದೆ. ಪಾಲಿಸಿಕೊಂಡು ಬಂದಿರುವ ಸಂಪ್ರದಾಯದಂತೆ ಈ ಉತ್ಸವಕ್ಕೆ ನವದಂಪತಿಗಳು ಮೂಲೆ ಮೂಲೆಗಳಿಂದ ಬಂದು ಕಬ್ಬನ್ನು ತೆಗೆದುಕೊಂಡು ಹೋಗುತ್ತಾರೆ. ಇಲ್ಲಿನ ಕೋಟಿಲಿಂಗೇಶ್ವರ ಶಿವಲಿಂಗವನ್ನು ಸ್ವತಃ ಬ್ರಹ್ಮನೆ ಪೂಜಿಸುತ್ತಾನೆ ಎನ್ನಲಾಗಿದೆ.
ಚಿತ್ರಕೃಪೆ: Soorajna
ಸುಬ್ರಹ್ಮಣ್ಯ: ಮಂಗಳೂರಿನಿಂದ 103 ಹಾಗೂ ಹಾಸನದಿಂದ 97 ಕಿ.ಮೀ ಗಳಷ್ಟು ದೂರವಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯವು ಏಳು ಪವಿತ್ರ ಮುಕ್ತಿ ಸ್ಥಳಗಳ ಪೈಕಿ ಒಂದಾಗಿದೆ. ಕುಕ್ಕೆ ಕುರಿತು ಹೆಚ್ಚಿಗೆ ತಿಳಿಯಿರಿ.
ಶಂಕರನಾರಾಯಣ: ಶಂಕರನಾರಾಯಣ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಒಂದು ಪುಟ್ಟ ಹಳ್ಳಿಯಾಗಿದೆ. ಪರಶುರಾಮ ಕ್ಷೇತ್ರಗಳ ಪೈಕಿ ಇದೂ ಸಹ ಒಂದಾಗಿದೆ. ಅಂದರೆ ಇದೂ ಕೂಡ ಒಂದು ಮುಕ್ತಿ ಸ್ಥಳ. ಇಲ್ಲಿನ ದೇವಸ್ಥಾನದ ಗರ್ಭಗುಡಿಯಲ್ಲಿ ಎರಡು ಶಿವಲಿಂಗಗಳು ಪ್ರತಿಷ್ಠಾಪನೆಗೊಂಡಿವೆ. ಅಲ್ಲದೆ ಪಂಚಮುಖಿ ಆಂಜನೇಯ, ವೇಣುಗೋಪಾಲ ಹಾಗೂ ಸುಬ್ರಹ್ಮಣ್ಯರ ಸನ್ನಿಧಿಗಳನ್ನು ಕಾಣಬಹುದು.
ವಿಶೇಷ ಲೇಖನ : ರಾಯರ ನೆಚ್ಚಿನ ಪಂಚಮುಖಿ ಕ್ಷೇತ್ರ