ಹಿಂದು ಸಂಸ್ಕೃತಿಯಲ್ಲಿ ಮನುಷ್ಯ ತೀರಿ ಹೋದ ನಂತರ ಅವನ ಶರೀರಕ್ಕೆ ವಿಧಿ ವತ್ತಾಗಿ ಕ್ರಿಯೆಗಳನ್ನು ನಡೆಸಿ ಕೊನೆಯದಾಗಿ ಅಂತಿಮ ಕ್ರಿಯೆ ಅಥವಾ ದಹನ ಕಾರ್ಯ ಕೈಗೊಳ್ಳಲಾಗುತ್ತದೆ. ಇದಕ್ಕೆ ಇದರದೆ ಆದ ವಿಶೇಷತೆ, ನಂಬಿಕೆ ಹಾಗೂ ವಿಶ್ವಾಸಗಳಿವೆ. ಇದರ ಕುರಿತು ಅನೇಕ ಹಿಂದು ಪುರಾಣ-ಗ್ರಂಥಗಳಲ್ಲಿಯೂ ಸಹ ಉಲ್ಲೇಖವಿದೆ.
ಈ ನಿಟ್ಟಿನಲ್ಲಿ ಹಿಂದುಗಳು ಪುರಾಣಗಳಲ್ಲಿ ಉಲ್ಲೇಖಿಸಿರುವಂತೆ ಕೆಲ ಸ್ಥಳಗಳು ಅತಿ ಪವಿತ್ರ ಸ್ಥಳಗಳಾಗಿದ್ದು ಅಂತಹ ಸ್ಥಳಗಳಲ್ಲಿ ಮನುಷ್ಯನ ಅಂತ್ಯಕ್ರಿಯೆ ನಡೆಸಿದಾಗ ಆ ಮನುಷ್ಯನು ನೇರವಾಗಿ ಮೋಕ್ಷ ಹೊಂದುತ್ತಾನೆ ಎಂಬ ಪ್ರಬಲವಾದ ವಿಶ್ವಾಸ ಹೊಂದಿದ್ದಾರೆ. ಅಂತಹ ಒಂದು ಸ್ಥಳವಾಗಿದೆ ಮಣಿಕರ್ಣಿಕಾ ಘಾಟ್.

ಚಿತ್ರಕೃಪೆ: Dennis Jarvis
ಕಾಶಿ ಎಂತಲೂ ಜನಪ್ರೀಯವಾಗಿ ಕರೆಯಲ್ಪಡುವ ವಾರಣಾಸಿಯಲ್ಲಿರುವ ಅಂತಿಮಕ್ರಿಯೆ ನಡೆಸಲಾಗುವ ಸ್ಥಳಗಳಲ್ಲಿ ಪ್ರಧಾನವಾಗಿದೆ ಮಣಿಕರ್ಣಿಕಾ ಘಾಟ್. ನೀವು ಸಾಮಾನ್ಯವಾಗಿ ಟಿಕೆಟ್ ಪಡೆಯಲು, ಅಥವಾ ಬ್ಯಾಂಕುಗಳಲ್ಲಿ ತಮ್ಮ ಸರತಿಗಾಗಿ ಜನರು ಸಾಲು ಸಾಲಾಗಿ ನಿಂತಿರುವುದನ್ನು ಗಮನಿಸಿರಬಹುದು.
ಆದರೆ, ಮಣಿಕರ್ಣಿಕಾ ಘಾಟ್ ನಲ್ಲಿ ಶವಗಳೂ ಸಹ ತಮ್ಮ ಪಾಳಿ ಬರುವ ತನಕ ಸರತಿ ಸಾಲಿನಲ್ಲಿ ಕಾದಿರುತ್ತವೆ. ಇದರಿಂದಲೆ ತಿಳಿಯಬಹುದು ಇದರ ಪ್ರಭಾವವನ್ನು. ಈ ಘಾಟ್ ನಲ್ಲಿ ಅಂತ್ಯಕ್ರಿಯೆ ನಡೆದರೆ ಆ ತೀರಿ ಹೋದ ಮನುಷ್ಯನ ಆತ್ಮ ನೇರವಾಗಿ ಶಿವನ ಕೃಪೆ ಪಡೆದು ಮೋಕ್ಷ ಪಡೆಯುತ್ತಾನೆ ಎಂಬ ನಂಬಿಕೆಯಿದೆ.

ಚಿತ್ರಕೃಪೆ: Mandy
ಇಲ್ಲಿನ ಚಿತ್ರಣ ಒಂದು ವಿಚಿತ್ರ, ಭಯ ಮಿಶ್ರಿತ ಭಾವನೆಯನ್ನು ಮನದಲ್ಲಿ ಮೂಡಿಸುತ್ತದೆ. ಆದರೂ ಸಹ ಒಂದು ರೀತಿಯ ಕುತೂಹಲ ಕೆರಳಿಸುವ ತಾಣವಾಗಿ ಮಣಿಕರ್ಣಿಕಾ ಘಾಟ್ ಪ್ರವಾಸಿಗರ ಗಮನಸೆಳೆಯುತ್ತದೆ. ಅದರಲ್ಲೂ ವಿಶೇಶವಾಗಿ ವಿದೇಶಿಗರರನ್ನು ಅತಿ ಹೆಚ್ಚಾಗಿ ಆಕರ್ಷಿಸುತ್ತದೆ ಮಣಿಕರ್ಣಿಕಾ ಘಾಟ್.
ಅದೆಷ್ಟೊ ವಿದೇಶಿಗರು ಈ ಘಾಟ್ ಕುರಿತು ಕಿರು ಚಿತ್ರಗಳನ್ನು ನಿರ್ಮಿಸಿದ್ದಾರೆ. ಹಾಗಾಗಿ ಇದೊಂದು ಕುತೂಹಲಕರ ಹಾಗೂ ಧಾರ್ಮಿಕ ಕೇಂದ್ರವಾಗಿ ಜನರ ಗಮನಸೆಳೆಯುತ್ತದೆ. ಮಣಿಕರ್ಣಿಕಾ ಘಾಟ್ ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದ ಬಳಿ ಸ್ಥಿತವಿದ್ದು ಅನೇಕ ಜನರಿಂದ ಭೇಟಿ ನೀಡಲ್ಪಡುತ್ತದೆ.

ಚಿತ್ರಕೃಪೆ: Jorge Royan
ಧಾರ್ಮಿಕವಾಗಿ ಇದನ್ನು ಒಂದು ಶಕ್ತಿಪೀಠವಾಗಿ ಆರಾಧಿಸಲಾಗುತ್ತದೆ. ಸತಿ ದೇವಿಯ ಮೃತ ಶರೀರವು ಸುದರ್ಶನ ಚಕ್ರದಿಂದ ತುಂಡುಗಳಾಗಿ ಭೂಮಿಯ ವಿವಿಧೆಡೆ ಬೀಳುವಾಗ ಅವಳ ಕಿವಿಯ ಓಲೆಗಳು ಈ ಸ್ಥಳದಲ್ಲಿ ಬಿದ್ದಿತ್ತೆನ್ನಲಾಗಿದೆ. ಸಂಸ್ಕೃತ ಭಾಷೆಯಲ್ಲಿ ಮಣಿಕರ್ಣಿಕಾ ಎಂದರೆ ಕಿವಿಯ ಓಲೆಗಳು ಎಂದಾಗುತ್ತದೆ.
ಇನ್ನೊಂದು ದಂತಕಥೆಯ ಪ್ರಕಾರ, ಶಿವನು ತನ್ನ ರುದ್ರನರ್ತನದಿಂದ ಲೋಕವನ್ನೆ ನಾಶಮಾಡುವಂತಹ ಸಂದರ್ಭ ಬಂದಾಗ ವಿಷ್ಣು ಶಿವನನ್ನು ಕುರಿತು ಹಾಗೆ ಮಾಡದಿರಲು ಪ್ರಾರ್ಥಿಸಿ ಇಲ್ಲಿ ಕುಂಡವನ್ನೊಂದನ್ನು ನಿರ್ಮಿಸಿದನು. ಅದರಲ್ಲಿ ಸ್ನಾನ ಮಾಡುವಾಗ ಶಿವನ ಕಿವಿಯ ಓಲೆಗಳು ಇಲ್ಲಿ ಬಿದ್ದು ಇದು ಮಣಿಕರ್ಣಿಕಾ ಘಾಟ್ ಆಯಿತೆಂದೂ ಸಹ ಹೇಳಲಾಗುತ್ತದೆ.
ಸಕಲ ಪಾಪಗಳನ್ನು ನಾಶಗೊಳಿಸುವ ಕಾಶಿ!
ಅಪಾರ ವಿಶೇಷತೆಯುಳ್ಳ ಮಣಿಕರ್ಣಿಕಾ ಘಾಟ್ ಇಂದಿಗೂ ವಾರಣಾಸಿಯಲ್ಲಿರುವ ಒಂದು ವಿಚಿತ್ರ ಅನುಭೂತಿ ನೀಡುವ ತಾಣವಾಗಿದೆ. ಉತ್ತರ ಪ್ರದೇಶದಲ್ಲಿರುವ ವಾರಣಾಸಿಯು ಉತ್ತಮ ರೈಲು ಹಾಗೂ ರಸ್ತೆ ಸಂಪರ್ಕ ಹೊಂದಿದ್ದು ಸುಲಭವಾಗಿ ತೆರಳಬಹುದಾಗಿದೆ.


Click it and Unblock the Notifications
















