ಇದು ಶ್ರೀವಿಷ್ಣುವಿಗೆ ಮುಡಿಪಾದ ಪ್ರಾಚೀನ ದೇವಾಲಯ. ತಮಿಳು ಕವಿಸಂತರಾದ ಅಳವರರು ಪಟ್ಟಿ ಮಾಡಿರುವ 108 ವಿಷ್ಣುವಿನ ದಿವ್ಯ ದೇಸಂ ಕ್ಷೇತ್ರಗಳ ಪೈಕಿ ಇದೂ ಸಹ ಒಂದು. ಅಷ್ಟೆ ಅಲ್ಲ, ಆ ನೂರಾ ಎಂಟು ದೇವಾಲಯಗಳಲ್ಲಿ ಕೇವಲ ಎರಡೇ ಎರಡು ದೇವಾಲಯಗಳಲ್ಲಿ ಶ್ರೀ ವಿಷ್ಣು ದಕ್ಷಿಣಾಭಿಮುಖವಾಗಿ ಶಯನಾವಸ್ಥೆಯಲ್ಲಿ ಕಂಡುಬರುತ್ತಾನೆ.
ಅಂತಹ ಒಂದು ದೇವಾಲಯ ಪ್ರಸಿದ್ಧ ಶ್ರೀರಂಗಂನ ರಂಗನಾಥಸ್ವಾಮಿಯ ದೇವಾಲಯವಾದರೆ ಎರಡನೇಯ ದೇವಾಲಯವೆ ಈ ಲೇಖನದಲ್ಲಿ ತಿಳಿಸಲಾಗಿರುವ ದೇವಾಲಯ. ಇದು ತಿರುವರೂರು ಜಿಲ್ಲೆಯಲ್ಲಿರುವ ತಿರುಸಿರುಪುಲಿಯೂರು ಪೆರುಮಾಳನ ದೇವಾಲಯ. ಅದ್ಭುತವಾದ ಹಿನ್ನೆಲೆ ಹೊಂದಿರುವ ಈ ದೇವಾಲಯ ವಿಷ್ಣುವಿನ ನೆಲೆ ಇರುವ ಪುಣ್ಯ ತಾಣ.
ಚಿತ್ರಕೃಪೆ: Javahar r
ಗೌತಮ ಮಹರ್ಷಿಗಳು ಶಿವನ ಪರಮ ಭಕ್ತರು. ಪ್ರತಿ ದಿನ ಶಿವನನ್ನು ಆರಾಧಿಸಲೆಂದು ಕಾಡಿಗೆ ತೆರಳಿ ಗಿಡಗಳನ್ನು ಏರಿ ವಿವಿಧ ಹಣ್ಣು ಹೂವುಗಳನ್ನು ಕಿತ್ತು ತಂದು ಶಿವನಿಗೆ ನೈವೇದ್ಯವಾಗಿ ಅರ್ಪಿಸುತ್ತಿದ್ದರು. ಹೀಗೆ ಕ್ರಮೇಣವಾಗಿ ಅವರ ದೃಷ್ಟಿ ಶಕ್ತಿ ತಗ್ಗಿತಲ್ಲದೆ ಮರ ಏರಲು ಕೈಕಾಲುಗಳು ಬಲಹೀನವಾಗತೊಡಗಿದವು. ಇದೆ ಸಮಯದಲ್ಲಿ ಶಿವನನ್ನು ಕುರಿತು ಶಕ್ತಿಯುತ ಸೂಕ್ಷ್ಮ ದೃಷ್ಟಿ ಹಾಗೂ ಹುಲಿಗಳಂತಹ ಬಲಿಷ್ಠ ಪಾದಗಳನ್ನು ಬೇಡಿದರು.
ಶಿವನು ಅದೆ ರೀತಿಯಾಗಿ ಅನುಗ್ರಹಿಸಿದನು. ತದನಂತರ ಅವರು ವ್ಯಾಘ್ರಪಾದ ಮುನಿಗಳೆಂದೆ ಪ್ರಸಿದ್ಧಿ ಪಡೆದರು. ಹೀಗೆ ಸಮಯ ಕಳೆದಂತೆ ಅವರು ಮೋಕ್ಷ ಹೊಂದಲು ಬಯಸಿದರು. ಅದಕ್ಕಾಗಿ ಶಿವನನ್ನು ಪ್ರಾರ್ಥಿಸಿದರು. ಶಿವನು ಪ್ರತ್ಯಕ್ಷನಾಗಿ ವಿಷ್ಣುವನ್ನು ಕುರಿತು ಶ್ರೀರಂಗಂಗೆ ಹೋಗಿ ಧ್ಯಾನಿಸು. ಶ್ರೀವೈಕುಂಠ ದೊರೆಯುತ್ತದೆಂದು ಆಜ್ಞಾಪಿಸಿದನು. ಅದರಂತೆ ಅವರು ಶ್ರೀರಂಗಂಗೆಂದು ತೆರಳಿದರು.
ಚಿತ್ರಕೃಪೆ: Ssriram mt
ಆದರೆ ದೃಷ್ಟಿಯು ಬಲು ಸೂಕ್ಷ್ಮವಾಗಿದ್ದುದರಿಂದ ಅವರು ದಾರಿ ತಪ್ಪಿ ಕೃಪಾ ಸಮುದ್ರಕ್ಕೆ ಬಂದು ಅಶಕ್ತರಾಗಿ ಅಲ್ಲಿಯೆ ಕುಳಿತು ವಿಷ್ಣುವಿನನ್ನು ಧ್ಯಾನಿಸಲು ಪ್ರಾರಂಭಿಸಿದರು. ಆ ಕೃಪಾಸಮುದ್ರವೆ ಪ್ರಸ್ತುತ ತಿರುಸಿರುಪೂಲಿಯೂರು. ಕೊಲ್ಲುಮಂಗುಡಿಯಿಂದ 2 ಕಿ.ಮೀ, ಕುಂಭಕೋಣಂನಿಂದ 40 ಕಿ.ಮೀ ಹಾಗೂ ಮೈಲಾಡುತುರೈ-ತಿರುವರೂರು ಮಾರ್ಗದಲ್ಲಿ ಮೈಲಾಡುತುರೈನಿಂದ 15 ಕಿ.ಮೀ ಗಳಷ್ಟು ದೂರದಲ್ಲಿದೆ.
ವಿಷ್ಣು ಧ್ಯಾನಿಸುತ್ತಿದ್ದ ವ್ಯಾಘ್ರಪಾದರಿಗೆ ತನ್ನ ಅಗಾಧವಾದ ಶಯನಾವಸ್ಥೆಯಲ್ಲಿ ದರ್ಶನ ನೀಡಿದ. ಆದರೆ ಆ ದೊಡ್ಡ ಆಕಾರದ ದರ್ಶನ ಪಡೆಯಲು ಮುನಿಗಳಿಗೆ ಸಾಧ್ಯವಾಗಲಿಲ್ಲ. ಇದನ್ನರಿತ ಶ್ರೀವಿಷ್ಣು ಮತೀ ಚಿಕ್ಕ ಬಾಲ ರೂಪದ ಮಲಗಿಕೊಂಡಿರುವ ಅವತಾರದಲ್ಲಿ ಅವರಿಗೆ ದರ್ಶನಿವಿತ್ತು ವೈಕುಂಠದಲ್ಲಿ ಶಾಶ್ವತ ಸ್ಥಾನಕೊಟ್ಟ ಎಂಬ ಪ್ರತೀತಿಯಿದೆ.
ಚಿತ್ರಕೃಪೆ: Ssriram mt
ಇಲ್ಲಿ ವಿಷ್ಣು ನೆಲೆಸಿದ್ದಾಗ ಒಂದೊಮ್ಮೆ ಗರುಡ ಹಾಗೂ ಆದಿಶೇಷನ ಮಧ್ಯೆ ಯಾರು ಉತ್ತಮರು ಎಂಬ ವಾಗ್ವಾದ ಉಂಟಾಯಿತು. ಕೊನೆಗೆ ಅದು ವಿಷ್ಣುವಿಗೆ ತಲುಪಿದಾಗ ವಿಷ್ಣು ಗರುಡನಲ್ಲಿ ಅಹಂಕಾರವಿರುವುದನ್ನು ಗಮನಿಸಿ ಆದಿಶೇಷನ ಪರ ಮಾತಾಡಿದನು. ಇದರಿಂದ ಗರುಡ ಕೋಪಗೊಂಡು ಹೋಯಿತು. ಆದರೆ ಗರುಡ ಶಕ್ತಿಶಾಲಿಯಾಗಿದ್ದರಿಂದ ಆದಿಶೇಷನು ವಿಷ್ಣುವಿನಲ್ಲಿ ಗರುಡನಿಂದ ಅಪಾಯ ಉಂಟಾಗದಂತೆ ಬೇಡಿತು.
ಗರುಡನಿಗೆ ಮುಡಿಪಾದ ಏಕೈಕ ದೇವಾಲಯವಿದು!
ಅದಕ್ಕೆ ವಿಷ್ಣು ಆದಿಶೇಷನನ್ನು ಕುರಿತು ತನ್ನ ಬಳಿಯೆ ನೆಲೆಸು ಎಂದೂ, ಇಲ್ಲಿ ಎಂದಿಗೂ ನಿನಗೆ ಗರುಡ ಅಪಾಯ ಉಂಟುಮಾಡುವುದಿಲ್ಲವೆಂದೂ ಹರಸಿದನು. ಹಾಗಾಗಿ ಇಂದಿಗೂ ಈ ದೇವಾಲಯದ ಮೇಲೆ ಎಂದಿಗೂ ಗರುಡ ಪಕ್ಷಿಗಳು ಹಾರಾಡುವುದಿಲ್ಲವಂತೆ! ಅಲ್ಲದೆ ಈ ದೇವಾಲಯದಲ್ಲಿ ಆದಿಶೇಷನಿಗೂ ಮುಡಿಪಾದ ಸನ್ನಿಧಿಯಿದೆ. ಗರುಡನ ಸನ್ನಿಧಿಯಿದ್ದರೂ ಅದು ಕೆಳಹಂತದಲ್ಲಿದೆ.