ತಿರುವರೂರು ತಮಿಳುನಾಡಿನ ತಿರುವರೂರು ಜಿಲ್ಲೆಯ ಮುಖ್ಯಕೇಂದ್ರ. ಮೊದಲಿಗೆ ಇದು ನಾಗಪಟ್ಟಣಂ ಜಿಲ್ಲೆಯ ಭಾಗವಾಗಿತ್ತು. ಇದು ಬಂಗಾಳ ಕೊಲ್ಲಿಯ ಪಕ್ಕದಲ್ಲಿದೆ. ಇಲ್ಲಿ ಸಮೃದ್ಧವಾದ ಕಡಲ ಕೊಳಗಳು ಮತ್ತು ಕಾವೇರಿಯ ಉಪನದಿಗಳಿಂದ ನಿರ್ಮಾಣವಾಗಿರುವ ದ್ವೀಪಗಳಿವೆ. ತಿರುವರೂರು ಚೋಳರ ಸಾಮ್ರಾಜ್ಯ ಕಾಲದ ಜನಪ್ರಿಯ ರಾಜಧಾನಿಗಳಲ್ಲೊಂದು. ಕುಲೋತ್ತುಂಗ ಚೋಳನು ಈ ನಗರವನ್ನು ಆಳಿದ್ದ. ಹೆಸರಾಂತ ಕರ್ನಾಟಕ ಸಂಗೀತಗಾರರಾದ ತ್ಯಾಗರಾಜ, ಶ್ಯಾಮ ಶಾಸ್ತ್ರಿ ಮತ್ತು ಮುತ್ತುಸ್ವಾಮಿ ದೀಕ್ಷಿತರು ಇದೇ ನಗರದಲ್ಲಿ ಜನಿಸಿದವರು.
ತಿರುವರೂರಿನ ಸುತ್ತಮುತ್ತಲ ಪ್ರವಾಸಿ ತಾಣಗಳು
ತ್ಯಾಗರಾಜ ಸ್ವಾಮಿ ದೇವಾಲಯ, ಕೊತ್ತನೂರಿನ ಸರಸ್ವತಿ ದೇವಾಲಯ, ತಿರುಕಣ್ಣಪುರಂನ ನೀಲಮೇಘಪೆರುಮಾಳ್ ದೇವಾಲಯ, ಮುಡಿಕೊಂಡನ್ನಲ್ಲಿನ ಕೋದಂಡ ರಾಮರ್ ದೇವಾಲಯ, ಮಾನ್ನರ್ಗುಡಿಯಲ್ಲಿನ ರಾಜಗೋಪಾಲಸ್ವಾಮಿ ದೇವಾಲಯ- ಇವು ಇಲ್ಲಿನ ಕೆಲವು ಪ್ರಸಿದ್ಧ ದೇವಾಲಯಗಳು. ನಗರದ ಉದ್ಯಾನವನ ಮತ್ತು ಮುತ್ತುಪೆಟ್ಟಿ ಎಂಬ ಹಳ್ಳಿ ಕೂಡ ಪ್ರವಾಸಿಗರನ್ನು ಸೆಳೆಯುತ್ತದೆ.
ಹೋಗುವುದು ಹೇಗೆ?
ತಿರುವರೂರನ್ನು ರಸ್ತೆ ಮತ್ತು ರೈಲಿನ ಮೂಲಕ ದೇಶದ ಎಲ್ಲ ಭಾಗಗಳಿಂದಲೂ ಸುಲಭವಾಗಿ ತಲುಪಬಹುದು. ಇಲ್ಲಿಗೆ ಹತ್ತಿರದ ನಗರ ತಿರುಚಿರಾಪಳ್ಳಿ 110 ಕಿಮೀ ದೂರದಲ್ಲಿದೆ. ಚೆನೈ 290 ಕಿಮೀ ದೂರದಲ್ಲಿದೆ. ತಿರುವರೂರಿನಲ್ಲಿ ರೈಲ್ವೇ ನಿಲ್ದಾಣವಿದ್ದು ರೈಲಿನ ಮೂಲಕ ಸುಲಭವಾಗಿ ಇಲ್ಲಿಗೆ ಬರಬಹುದು.
ತಿರುವರೂರಿನ ಹವಾಮಾನ
ತಿರುವರೂರಿನಲ್ಲಿ ಧಗೆ ಮತ್ತು ಉಷ್ಣತೆ ಹೆಚ್ಚಿರುತ್ತದೆ. ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಮಳೆಗಾಲದ ಜೂನ್-ಸೆಪ್ಟಂಬರ್ ತಿಂಗಳುಗಳು ಮತ್ತು ಚಳಿಗಾಲದ ಡಿಸಂಬರ್-ಫೆಬ್ರವರಿವರೆಗಿನ ತಿಂಗಳುಗಳು. ಬೇಸಿಗೆಯಲ್ಲಿ ಇಲ್ಲಿನ ತಾಪಮಾನ 40 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿರುತ್ತದೆ.