ತಿರುವೆಂಕಾಡು ನಾಗಪಟ್ಟಿಣಂ ಜಿಲ್ಲೆಯಲ್ಲಿದೆ. ಇದು ಸಿರಕಾಲಿ, ಪೂಂಪುಗಾರ್ ರಸ್ತೆಯಿಂದ 10 ಕಿ.ಮೀ ದೂರದಲ್ಲಿದೆ. ಈ ಸ್ಥಳದಲ್ಲಿ ತಪಸ್ಸು ಮಾಡಿದ ಇಂದ್ರನ ಆನೆ ಐರಾವತದಿಂದ ಈ ಸ್ಥಳಕ್ಕೆ ಈ ಹೆಸರು ಬಂದಿದೆ ಹೇಳಲಾಗುತ್ತದೆ. ಇದು ಭಾರತದಲ್ಲಿನ ನವಗ್ರಹ ದೇವಸ್ಥಾನಗಳಲ್ಲೊಂದು.
ತಿರುವೆಂಕಾಡುವನ್ನು ಕಾಶಿಯಷ್ಟೇ ಪವಿತ್ರವಾದ ಆರು ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಬರೋಬ್ಬರಿ ಮೂರು ತೀರ್ಥಕೊಳ, ವಿಗ್ರಹ, ಪವಿತ್ರವೃಕ್ಷಗಳಿವೆ. ತಿರುವೆಂಕಾಡು ನವಗ್ರಹಗಳಲ್ಲಿ ಒಬ್ಬನಾದ ಬುಧನಿಗೆ ಸೇರಿದ್ದು. ಇದು 50 ಶಕ್ತಿ ಪೀಠಗಳಲ್ಲಿ ಒಂದು. 64 ಶಿವನ ಮೂರ್ತಿಗಳಿದ್ದು, ಇಲ್ಲಿ ಶಿವನ ಅಘೋರ ಮೂರ್ತಿಯನ್ನು ಕಾಣಬಹುದು. ಇಲ್ಲಿ ಶಿವನು 6 ವಿಭಿನ್ನ ತಾಂಡವ ನೃತ್ಯಗಳನ್ನು ಮಾಡಿದನಂತೆ. ಇದು ಆದಿ ಚಿದಂಬರಂ ಎಂದು ಕೂಡ ಪ್ರಸಿದ್ಧಿ ಪಡೆದಿದೆ.
ತಿರುವೆಂಕಾಡಿನ ಇತಿಹಾಸ
ಮುರುತುವನ್ ಎಂಬ ರಾಕ್ಷಸನು ಬ್ರಹ್ಮನಿಂದ ವರಗಳನ್ನು ಪಡೆದು ದೇವತೆಗಳನ್ನು ಪೀಡಿಸಲಾರಂಭಿಸಿದನು. ದೇವತೆಗಳು ರಾಕ್ಷಸನಿಂದ ರಕ್ಷಿಸಬೇಕೆಂದು ಶಿವನನ್ನು ಬೇಡಿಕೊಂಡರು. ಆಗ ಶಿವನು ದೇವತೆಗಳಿಗೆ ತಿರುವೆಂಕಾಡಿಗೆ ಹೋಗಿ ವೇಷಮರೆಸಿಕೊಂಡಿರಲು ಹೇಳಿದನು. ತನ್ನ ವಾಹನವಾದ ನಂದಿಯನ್ನು ರಾಕ್ಷಸನೊಡನೆ ಕಾದಾಡಲು ಕಳಿಸಿದನು. ನಂದಿ ರಾಕ್ಷಸನನ್ನು ಸೋಲಿಸಿ ಸಮುದ್ರದೊಳಗೆ ಎಸೆದನು. ರಾಕ್ಷಸನು ಕಠಿಣ ತಪಸ್ಸನ್ನಾಚರಿಸಿ ಶಿವನಿಂದ ತ್ರಿಶೂಲವನ್ನು ಪಡೆದು ಮತ್ತೆ ಮುಗ್ಧರನ್ನು ಪೀಡಿಸ ತೊಡಗಿದನು. ದೇವತೆಗಳು ಮತ್ತೆ ಶಿವನನ್ನು ಪ್ರಾರ್ಥಿಸಿದಾಗ ಶಿವನು ಮತ್ತೊಮ್ಮೆ ನಂದಿಯನ್ನು ಕಳುಹಿಸಿದನು.
ಆದರೆ ಈ ಬಾರಿ ರಾಕ್ಷಸನ ಬಳಿ ಶಿವನೇ ಕೊಟ್ಟ ತ್ರಿಶೂಲವಿದ್ದುದರಿಂದ ನಂದಿಗೆ ಅವನನ್ನು ಸೋಲಿಸಲಾಗಲಿಲ್ಲ. ನಂದಿಯನ್ನು ರಾಕ್ಷಸನು ಗಾಯಗೊಳಿಸಿದನು. ನಂದಿಯ ಬೆನ್ನಮೇಲಾದ ಗಾಯಗಳನ್ನು ಇಲ್ಲಿನ ನಂದಿ ವಿಗ್ರಹದಲ್ಲಿ ಕಾಣಬಹುದು. ನಂದಿಯ ಗಾಯಗೊಂಡಿದ್ದನ್ನು ನೋಡಿ ಕೆರಳಿದ ಶಿವನು ತನ್ನ ಮೂರನೇ ಕಣ್ಣನ್ನು ತೆರೆದು ರಾಕ್ಷಸನನ್ನು ಸಂಹರಿಸಿದನು. ಅಘೋರಮೂರ್ತಿಯ ಶಿವ ವಿಗ್ರಹದಲ್ಲಿ ಅವನ ಕೋಪವನ್ನು ಕಾಣಬಹುದಾಗಿದೆ. ಅಘೋರಮೂರ್ತಿಯನ್ನು ಪೂಜಿಸಿದರೆ ವೈರಿಗಳ ಭಯವಿರುವುದಿಲ್ಲ ಎಂದು ಹೇಳಲಾಗುತ್ತದೆ.
ತಿರುವೆಂಕಾಡಿನ ಸುತ್ತಮುತ್ತಲ ಪ್ರವಾಸಿ ತಾಣಗಳು
ಎಲ್ಲ 8 ನವಗ್ರಹ ಸ್ಥಳಗಳು ತಿರುನಾಗೇಶ್ವರಂ ಹತ್ತಿರದಲ್ಲಿವೆ. ತಿರುನಲ್ಲೂರು (ಶನಿ), ಕಂಜನೂರು (ಶುಕ್ರ), ಸೂರ್ಯನಾರ್ ಕೊಯಿಲ್ (ಸೂರ್ಯ), ತಿರುನಾಗೇಶ್ವರಂ (ರಾಹು), ತಿಂಗಳೂರ್ (ಚಂದ್ರ), ಕೀಳ್ಪೆರುಂಪಳ್ಳಂ (ಕೇತು).
ತಿರುವೆಂಕಾಡು ಹವಾಮಾನ
ಇಲ್ಲಿ ಹವಾಮಾನವು ಉಷ್ಣತೆಯಿಂದ ಕೂಡಿರುತ್ತದೆ. ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಅಕ್ಟೋಬರ್-ಮಾರ್ಚ್ವರಗೆ.
ತಿರುವೆಂಕಾಡಿಗೆ ಹೋಗುವುದು ಹೇಗೆ?
ತಂಜಾವೂರು, ತಿರುಚ್ಚಿ, ಮದುರೈ, ಚೆನ್ನೈ, ಕನ್ಯಾಕುಮಾರಿ, ತಿರುವನಂತಪುರಂ ಇತ್ಯಾದಿ ಊರುಗಳಿಂದ ತಿರುವೆಂಕಾಡನ್ನು ರಸ್ತೆ, ರೈಲು, ವಾಯು ಮಾರ್ಗವಾಗಿ ಸುಲಭವಾಗಿ ತಲುಪಬಹುದು.