ಮೈಲಾಡುತುರೈ ಎಂದರೆ “ನವಿಲು ಪಟ್ಟಣ” ಎಂದರ್ಥ. ಇದು ಮೂರು ಶಬ್ದಗಳು ಸೇರಿ ಆಗಿರುವ ಶಬ್ದ. ಮೈಯಿಲ್ ಎಂದರೆ ನವಿಲು, ಆಡುಂ ಎಂದರೆ ನರ್ತಿಸು, ತುರೈ ಎಂದರೆ ಸ್ಥಳ. ಇಲ್ಲಿನ ಸ್ಥಳ ಪುರಾಣದ ಪ್ರಕಾರ ಪಾರ್ವತಿ ದೇವಿಯು ಶಾಪಗ್ರಸ್ತಳಾಗಿ ಹೆಣ್ಣು ನವಿಲಾಗಿ ಜನ್ಮತಳೆದಳು. ಆಗ ಅವಳು ಶಿವನನ್ನು ಪೂಜಿಸಿದ ಸ್ಥಳವೇ ಇಂದಿನ ಮೈಲಾಡುತುರೈ.
ಮೊದಲು ಇದನ್ನು ಸಂಸ್ಕೃತದ ಹೆಸರಾದ ‘ಮಯೂರ’ ಎಂದು ಕರೆಯುತ್ತಿದ್ದರು. ಇತ್ತೀಚೆಗೆ ಇದಕ್ಕೆ ‘ಮೈಲಾಡುತುರೈ’ ಎಂದು ಮರುನಾಮಕರಣ ಮಾಡಲಾಯಿತು. ಇದೊಂದು ಆಧುನಿಕ ನಗರವಾಗಿದ್ದರೂ ಇದರ ಬೇರುಗಳು ಇತಿಹಾಸದಲ್ಲಿ ಭದ್ರವಾಗಿ ನೆಲೆನಿಂತಿವೆ.
ಇಲ್ಲಿನ ಮಯೂರನಾಥಸ್ವಾಮಿ ದೇವಸ್ಥಾನವು ಸ್ಥಳ ಪುರಾಣಕ್ಕೆ ಪುಷ್ಟಿಯನ್ನು ಒದಗಿಸುತ್ತದೆ. ಶಿವನ ಈ ದೇವಸ್ಥಾನವು ಪಟ್ಟಣದ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ. ಪಾರ್ವತಿಯು ಇಲ್ಲಿ ಶಿವನನ್ನು ನವಿಲಿನ ರೂಪದಲ್ಲಿ ಪೂಜಿಸಿದ್ದರಿಂದ ಶಿವನನ್ನು ಇಲ್ಲಿ ಮಯೂರನಾಥರ್ ಎಂದು ಪೂಜಿಸಲಾಗುತ್ತದೆ. ಪುರಾಣದ ಸತ್ಯಸತ್ಯಾಗಳನ್ನು ಮೀರಿ ಈ ಹೆಸರು ಇಲ್ಲಿ ನೆಲೆನಿಂತಿದೆ.
ದೇವಾಲಯಗಳ ತಾಣ- ಮೈಲಾಡುತುರೈನ ಸುತ್ತಮುತ್ತಲ ಪ್ರವಾಸಿ ತಾಣಗಳು
ಕಾವೇರಿಯ ದಡದಲ್ಲಿರುವ ಈ ಪಟ್ಟಣದಲ್ಲಿ ಹಲವು ಹಿಂದೂ ದೇವಾಲಯಗಳಿದ್ದು ಇದೊಂದು ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ವದನ್ಯೇಶ್ವರ ದೇವಾಲಯ, ಪುನುಗೀಶ್ವರ ದೇವಾಲಯ, ಗಂಗೈಕೊಂಡ ಚೋಳಪುರಂ, ಶ್ರೀ ಪರಿಮಳ ರಂಗನಾಥಸ್ವಾಮಿ ದೇವಾಲಯ, ಶ್ರೀ ಕಾಶಿ ವಿಶ್ವನಾಥಸ್ವಾಮಿ ದೇವಾಲಯ, ಕುರುಕೈ ಶಿವನ್ ದೇವಾಲಯ ಮತ್ತು ದಕ್ಷಿಣಾಮೂರ್ತಿ ದೇವಾಲಯಗಳು ಯಾತ್ರಾರ್ಥಿಗಳನ್ನು ಆಕರ್ಷಿಸುತ್ತವೆ. ನವಗ್ರಹಗಳ ದೇವಸ್ಥಾನ ಕೂಡ ಇದರಲ್ಲಿ ಮುಖ್ಯವಾದದ್ದು.
ಸೂರ್ಯನಾರ್ ಕೊಯಿಲ್, ತಿಂಗಳೂರು, ವೈದೇಶ್ವರನ್ ಕೊಯಿಲ್, ತಿರುವೆಂಕಾಡು, ಆಲಂಗುಡಿ, ಕಂಜನೂರ್, ತಿರುನಲ್ಲೂರು, ತಿರುಂಗೇಶ್ವರಂ ಮತ್ತು ಕೇಜಪೆರುಂಪಾಳಂ ಇವೆಲ್ಲವೂ ಮೈಲಾಡುತುರೈನ ಸುತ್ತಮುತ್ತಲಲ್ಲಿದೆ. ಸೂರ್ಯನಾರ್ ಕೊಯಿಲ್ ಮೈಲಾಡುತುರೈನಿಂದ ಪಶ್ಚಿಮಕ್ಕೆ 20 ಕಿಮೀ ದೂರದಲ್ಲಿದ್ದು ಇದು ನವಗ್ರಹ ದೇವಾಲಯಗಳ ಮಧ್ಯದಲ್ಲಿನ ದೇವಾಲಯ.
ಈ ದೇವಾಲಯವು ಸೂರ್ಯ ಮತ್ತು ಅವನ ಹೆಂಡತಿಯರಾದ ಛಾಯ ಮತ್ತು ಸುವರ್ಚಾರಿಗೆ ಸೇರಿದ್ದು. ತಿಂಗಳೂರು ಮೈಲಾಡುತುರೈನಿಂದ ಪಶ್ಚಿಮಕ್ಕೆ 40ಕಿಮೀ ದೂರದಲ್ಲಿದ್ದು ಇಲ್ಲಿ ಚಂದ್ರನ ದೇಗುಲವಿದೆ. ವೈದೀಶ್ವರನ್ ಕೊಯಿಲ್ ಮೈಲಾಡುತುರೈನಿಂದ ಪೂರ್ವಕ್ಕೆ 12ಕಿಮೀ ದೂರದಲ್ಲಿದೆ. ಇಲ್ಲಿ ಜಟಾಯುವು ರಾವಣನಿಂದ ಮಾರಣಾಂತಿಕವಾಗಿ ಗಾಯಗೊಂಡು ಮೋಕ್ಷ ಹೊಂದಿತು ಎಂದು ಹೇಳಲಾಗುತ್ತದೆ. ಅಲ್ಲಿಯೇ ಅವನ ಸಂಸ್ಕಾರ ಮಾಡಲಾಯಿತಂತೆ. ಆ ಸ್ಥಳವನ್ನು “ಜಟಾಯು ಕುಂಡಂ” ಎಂದು ಕರೆಯುತ್ತಾರೆ. ಶಿವನ ಈ ದೇಗುಲಕ್ಕೆ ಬಂದು ಪೂಜೆ ಸಲ್ಲಿಸುವುದರಿಂದ ಭಕ್ತಾದಿಗಳ ರೋಗರುಜಿನಗಳು ಪರಿಹಾರವಾಗುತ್ತದೆ ಎಂದು ನಂಬಲಾಗಿದೆ.
ಇದು ನಾಡಿ ಜೋತಿಷ್ಯವನ್ನು ಹೇಳುವ ಜ್ಯೋತಿಷಿಗಳಿಂದ ಪ್ರಸಿದ್ಧಿ ಪಡೆದಿದೆ. ತಿರುವೆಂಕಾಡು ಮೈಲಾಡುತುರೈನಿಂದ ಪೂರ್ವಕ್ಕೆ 24ಕಿಮೀ ದೂರದಲ್ಲಿದೆ. ಇದನ್ನು “ಶೈವ ತಿರುಮುರೈಸ್” ಎಂದು ಕೂಡ ಕರೆಯುತ್ತಾರೆ. ಕಾಶಿಯಲ್ಲಿದ್ದಂತೆ ತಿರುವೆಂಕಾಡಿನಲ್ಲಿ ಕೂಡ ಹಲವಾರು ಸ್ನಾನ ಘಟ್ಟಗಳಿವೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಕೋರಿ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಅಲಂಗುಡಿ ಮೈಲಾಡುತುರೈನಿಂದ 40 ಕಿಮೀ ದೂರದಲ್ಲಿದೆ. ಇದೊಂದು ಅಪರೂಪದ ದೇವಸ್ಥಾನ. ಇದು ಗುರುಗ್ರಹಕ್ಕೆ ಮೀಸಲಾದ ದೇಗುಲವಾಗಿದ್ದು ಇಲ್ಲಿ ವಿಗ್ರಹಕ್ಕೆ ಬದಲಾಗಿ ಗೋಡೆಯ ಮೇಲೆ ದೇವರ ಚಿತ್ರವನ್ನು ಕೆತ್ತಿರುವುದನ್ನು ಕಾಣಬಹುದಾಗಿದೆ. ಕಂಜನೂರು ಮೈಲಾಡುತುರೈನಿಂದ 20 ಕಿಮೀ ದೂರದಲ್ಲಿದ್ದು ಇಲ್ಲಿ ಶುಕ್ರನ ದೇವಸ್ಥಾನವಿದೆ. ಭಕ್ತಾದಿಗಳ ನಂಬಿಕೆಯ ಪ್ರಕಾರ ಶುಕ್ರನು ಸಂಪತ್ತು ಮತ್ತು ಸಮೃದ್ಧಿಗಳನ್ನು ಕರುಣಿಸುತ್ತಾನೆ.
ತಿರುನಲ್ಲೂರು ಮೈಲಾಡುತುರೈನಿಂದ ಪೂರ್ವಕ್ಕೆ 30 ಕಿಮೀ ದೂರದಲ್ಲಿದ್ದು ಇಲ್ಲಿ ಶನಿಯ ದೇವಾಲಯವಿದೆ. ರಾಜನಾದ ನಳನು ಶನಿ ಪ್ರಭಾವದಿಂದ ಒದಗಿದ ದೆಸೆಯನ್ನು ಇಲ್ಲಿ ಕಳೆದುಕೊಂಡಿದ್ದಾಗಿ ಹೇಳುತ್ತಾರೆ. ಆದ್ದರಿಂದಲೇ ಈ ಸ್ಥಳಕ್ಕೆ ಈ ಹೆಸರು ಬಂದಿದೆ. ನಳ+ಅರು ಎಂದರೆ ನಳನು ಇಲ್ಲಿ ತನ್ನ ದೆಸೆಯಿಂದ ಮುಕ್ತಗೊಂಡ ಎಂದರ್ಥ. ಇಲ್ಲಿರುವ ನಳ ತೀರ್ಥದಲ್ಲಿ ಸ್ನಾನ ಮಾಡಿದರೆ ಎಲ್ಲ ಕೆಟ್ಟ ಕರ್ಮಗಳಿಂದ ಮತ್ತು ಶನಿ ಪ್ರಭಾವದಿಂದ ಮುಕ್ತರಾಗಬಹುದು ಎಂಬ ನಂಬಿಕೆಯಿದೆ.
ಕುಂಬಕೋಣಂನ ಹತ್ತಿರವಿರುವ ತಿರುಂಗೇಶ್ವರಂ ಶಿವನಿಗೆ ಮೀಸಲಾದದ್ದು. ಇಲ್ಲಿ ರಾಹುವಿನ ದೇವಸ್ಥಾನವಿದ್ದು ದಿನವೂ ರಾಹುಕಾಲದಲ್ಲಿ ನಡೆಯುವ ಹಾಲಿನ ಅಭಿಷೇಕದ ಸಮಯದಲ್ಲಿ ಒಂದು ಪವಾಡ ನಡೆಯುತ್ತದಂತೆ. ಹಾಲನ್ನು ವಿಗ್ರಹದ ನೆತ್ತಿಯ ಮೇಲಿನಿಂದ ಹಾಕುವಾಗ ಬಿಳಿ ಬಣ್ಣದಲ್ಲೇ ಇದ್ದು ವಿಗ್ರಹದ ಮೇಲೆ ಬರುವಾಗ ನೀಲಿ ಬಣ್ಣಕ್ಕೆ ತಿರುಗಿ ಮತ್ತೆ ಹಾಲು ನೆಲವನ್ನು ಮುಟ್ಟುತ್ತಿದ್ದಂತೆಯೇ ಬಿಳಿ ಬಣ್ಣದ್ದಾಗುತ್ತದೆಯಂತೆ.
ರಾಹು ತನ್ನ ಪತ್ನಿ ಸಮೇತನಾಗಿರುವ ಆಲಯಗಳಲ್ಲಿ ಇದು ಕೂಡ ಒಂದು. ಕೇಜಪೆರುಂಪಾಳಂವಿನಲ್ಲಿ ಕೇತುವಿನ ದೇವಸ್ಥಾನವಿದೆ. ಇದು ತಿರುವೆಂಕಾಡಿನ ಹತ್ತಿರವಿದೆ. ಇದು ವನಗಾರೈ ಎಂದು ಪ್ರಸಿದ್ಧಿ ಪಡೆದಿದೆ. ಇಲ್ಲಿ ಕೇತುವು ಹಾವಿನ ತಲೆ ಮತ್ತು ಅಸುರನ ದೇಹವನ್ನು ಹೊಂದಿರುವಂತೆ ಚಿತ್ರಿಸಲಾಗಿದೆ. ಇಲ್ಲಿ ಕೇತುವು ತನ್ನ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಶಿವನನ್ನು ಪೂಜಿಸಿದನಂತೆ. ಆದ್ದರಿಂದ ಇಲ್ಲಿನ ವಿಗ್ರಹವು ಜೋಡಿಸಿದ ಕೈಗಳ ಭಂಗಿಯಲ್ಲಿ ನಾಗನಾಥರ್ನನ್ನು ಪ್ರಾರ್ಥಿಸುತ್ತಿರುವಂತಿದೆ. ಭಕ್ತಾದಿಗಳು ನವಗ್ರಹಗಳನ್ನು ಪೂಜಿಸಿ ತಮ್ಮ ಜಾತಕಗಳಲ್ಲಿನ ದೋಷವನ್ನು ಪರಿಹರಿಸಿಕೊಳ್ಳಲು ಮತ್ತು ಬದುಕಿನಲ್ಲಿ ಸುಖ, ಸಂತೋಷಗಳನ್ನು ಪಡೆಯಲು ಇಲ್ಲಿಗೆ ಬರುತ್ತಿರುತ್ತಾರೆ.
ಮೈಲಾಡುತುರೈ- ನವೀನ ಶಿಲಾಯುಗ ಮತ್ತು ಹರಪ್ಪ ನಾಗರೀಕತೆಯ ನಡುವಿನ ಕೊಂಡಿ
ವಿ.ಷಣ್ಮುಗನಾಥಂ ಎಂಬ ಶಾಲೆಯ ಮಾಸ್ತರರೊಬ್ಬರು ಫೆಬ್ರವರಿ 2006ರಲ್ಲಿ ತಮ್ಮ ಮನೆಯ ಹಿತ್ತಿಲನ್ನು ಅಗೆಯುವಾಗ ತಮಗೆ ಮಣ್ಣಿನ ಹೊರತಾಗಿ ಇತಿಹಾಸಕ್ಕೆ ಹೊಸ ಕೊಂಡಿಯಾಗಬಹುದಾದ್ದು ಏನಾದರೂ ಸಿಗಬಹುದೆಂಬ ಊಹೆ ಕೂಡ ಮಾಡಿರಲಿಲ್ಲ. ಅವರಿಗಿದ್ದ ಪುರಾತತ್ವ ಶಾಸ್ತ್ರದ ಜ್ಞಾನದಿಂದಾಗಿ ತಮಗೆ ದೊರೆತ ಎರಡು ಕಲ್ಲಿನ ಆಯುಧಗಳನ್ನು ಅವು ಬೇರೆ ಬೇರೆ ಯುಗಕ್ಕೆ ಸೇರಿದವೆಂದು ಅರಿತರು. ನವಶಿಲಾಯುಗಕ್ಕೆ ಸೇರಿದ ಹಿಡಿಯಿದ್ದ ಕೊಡಲಿಯ ಮೇಲೆ ಸಿಂಧು ನಾಗರೀಕತೆಯ ಲಿಪಿಯಿದ್ದದ್ದು ತಮಿಳು ನಾಡು ಇಂಡಸ್ ಭಾಷೆ ಮತ್ತು ಹರಪ್ಪ ನಾಗರೀಕತೆಯೊಂದಿಗೆ ಸಂಬಂಧ ಹೊಂದಿತ್ತು ಎಂಬುದನ್ನು ತೋರಿಸುತ್ತದೆ. ಈ ಬಗೆಯ ಪುರಾತತ್ವ ಅನ್ವೇಷಣೆಗಳು ಅಪರೂಪ ಮತ್ತು ಮೌಲ್ಯಯುತವಾದದ್ದು. ಮೈಲಾಡುತುರೈ ಇತಿಹಾಸ ವಿದ್ಯಾರ್ಥಿಗಳಿಗೆ ಚಿನ್ನದ ಗಣಿಯಿದ್ದಂತೆ. ಈ ಕುರಿತಂತೆ “ಆಯಿರಂ ಅನ್ನಾಲುಂ ಮಯೂರಂ ಆಗಾದು” ಎಂಬ ಮಾತಿದೆ. ಅಂದರೆ “ ಸಾವಿರ ವಿಶೇಷತೆಗಳಿರುವ ಸಾವಿರ ವಿವಿಧ ಸ್ಥಳಗಳು ಮಯೂರಂಗೆ ಸಾಟಿಯಾದುದ್ದಲ್ಲ.”. ಇದು ಐತಿಹಾಸಿಕವಾಗಿ ಮತ್ತು ಸಮಕಾಲೀನವಾಗಿ ಕೂಡ ಸತ್ಯವಾದ ಮಾತು.
ಮೈಲಾಡುತುರೈಗೆ ಹೋಗುವುದು ಹೇಗೆ?
ಮೈಲಾಡುತುರೈಗೆ ಸುಲಭ ರಸ್ತೆ ಮತ್ತು ರೈಲು ಮಾರ್ಗಗಳಿವೆ
ಮೈಲಾಡುತುರೈಗೆ ಹೋಗಲು ಸೂಕ್ತ ಸಮಯ
ಚಳಿಗಾಲ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ.