ತಿರುವನೈಕೋಯಿಲ್ ಎಂದೂ ಕರೆಯಲ್ಪಡುವ ತಿರುವನೈಕಾವಲ್ ತಮಿಳುನಾಡಿನ ಶ್ರೀರಂಗಂ ಹತ್ತಿರವಿರುವ ಕಾವೇರಿನದಿಯ ಉತ್ತರ ದಡದಲ್ಲಿರುವ ಪುಟ್ಟ, ಸುಂದರ, ಶಾಂತಿಯುತ ಹಾಗೂ ಪ್ರಾಕೃತಿಕ ಸೌಂದರ್ಯ ಹೊಂದಿರುವ ಪಟ್ಟಣ. ಶ್ರೀರಂಗಂ ಬಳಿ ಕಾವೇರಿ ನದಿ ಎರಡಾಗಿ ಕವಲೊಡೆದು ಮತ್ತೆ ಸೇರಿದಾಗ ಉಂಟಾದ ದ್ವೀಪಕ್ಕೆ ಶ್ರೀರಂಗಂ ದ್ವೀಪವೆಂದೇ ಹೆಸರು. ಈ ದ್ವೀಪದಲ್ಲಿರುವ ಹಲವಾರು ಪಟ್ಟಣಗಳಲ್ಲಿ ಶ್ರೀರಂಗಂ ಹಿಂದೂಗಳಿಗೆ ಪವಿತ್ರವಾದ ಯಾತ್ರಾಸ್ಥಳವಾಗಿದೆ.
ಸ್ಥಳದ ಮಹಾತ್ಮೆ:
ಶಿವಭಕ್ತರಿಗೆ ತಿರುವನೈಕಾವಲ್ ಮುಖ್ಯವಾದ ಹಾಗೂ ಪವಿತ್ರವಾದ ಸ್ಥಳ. ಏಕೆಂದರೆ ಇಲ್ಲಿನ ಪ್ರಮುಖ ದೇವಾಲಯವಾದ ಜಂಬುಕೇಶ್ವರರ್ ದೇವಾಲಯದಲ್ಲಿ ಜಂಬುಕೇಶ್ವರರ್ ನ ರೂಪದಲ್ಲಿ ಶಿವನನ್ನು ಹಾಗೂ ಪಾರ್ವತಿಯನ್ನು ಶ್ರಿ ಅಖಿಲಂದೇಶ್ವರಿಯ ರೂಪದಲ್ಲಿ ಆರಾಧಿಸಲಾಗುತ್ತದೆ. ಶಿವನ ಹಲವಾರು ಅವತಾರಗಳಲ್ಲಿ ಜಂಬುಕೇಶ್ವರರ್ ಅವತಾರವೂ ಒಂದು. ದೇವಾಲಯದ ಆವರಣದಲ್ಲಿಯೇ ಪವಿತ್ರ ಜಲವಾದ ಪಂಚಭೂತಸ್ಥಳಂ ಸಹಾ ಇದೆ. ಈ ಜಲದಲ್ಲಿ ಮುಳುಗು ಹಾಕುವುದರಿಂದ ದೈಹಿಕ ಪಾಪಗಳೂ ಪಾರಮಾರ್ಥಿಕ ಪಾಪಗಳೂ ಪರಿಹಾರವಾಗುವುವು ನಂತರ ಮೋಕ್ಷ ಪ್ರಾಪ್ತವಾಗುವುದು ಎಂಬ ನಂಬಿಕೆ ಜನಜನಿತವಾಗಿದೆ. ಅಲ್ಲದೇ ಗರ್ಭಗುಡಿಯಲ್ಲಿರುವ ಶಿವಲಿಂಗದ ಬುಡದಿಂದಲೇ ಸ್ಪಟಿಕಶುಭ್ರ ಜಲದ ಒರತೆಯಿಂದ ನೀರು ಉಕ್ಕುತ್ತದೆ.
ಇತರ ಪ್ರಾಮುಖ್ಯತೆಗಳು:
ತಿರುವನೈಕಾವಲ್ ಕೇವಲ ಧಾರ್ಮಿಕ ಸ್ಥಳಮಾತ್ರವಲ್ಲದೇ 1930 ರಲ್ಲಿ ನೋಬೆಲ್ ಪ್ರಶಸ್ತಿ ಪ್ರಡೆದ ವಿಜೇತ ಭಾರತೀಯ ವಿಜ್ಞಾನಿ ಸರ್ ಸಿ.ವಿ. ರಾಮನ್ ರವರ ಜನ್ಮಸ್ಥಳವಾಗಿಯೂ ಪ್ರಸಿದ್ದಿ ಪಡೆದಿದೆ. ತನ್ನ ರಾಮನ್ ಪರಿಣಾಮದ ಮೂಲಕ ವಿಶ್ವದ ಗಮನ ಸೆಳೆದ ಭಾರತೀಯ ವಿಜ್ಞಾನಿಯ ಹುಟ್ಟೂರನ್ನು ಹಾಗೂ ಹುಟ್ಟಿದ ಮನೆಯನ್ನು ಸಂದರ್ಶಿಸಲೆಂದೇ ಸಾವಿರಾರು ಪ್ರವಾಸಿಗರು ತಿರುವನೈಕಾವಲ್ ಗೆ ಆಗಮಿಸುತ್ತಾರೆ. ರಾಮನ್ ರವರು ಹುಟ್ಟಿ ಜೀವನದ ಬಹುಕಾಲವನ್ನು ಕಳೆದ ಈ ಮನೆಯನ್ನು ರಾಷ್ಟ್ರೀಯ ಸಂಪತ್ತನ್ನಾಗಿ ಘೋಷಿಸಲಾಗಿದ್ದು ಇಂದಿಗೂ ಸುಸ್ಥಿತಿಯಲ್ಲಿದ್ದು ಯುವಜನತೆಗೆ ಪ್ರೇರಣೆ ನೀಡುತ್ತಿದೆ.