ತಮಿಳುನಾಡಿನ ನಾಗಪಟ್ಟಿನಂ ಜಿಲ್ಲೆಯಲ್ಲಿದೆ ನಾಗಾಪಟ್ಟಿನಂ ಎಂಬ ಹೆಸರಿನ ಪಟ್ಟಣ. ಈ ಪಟ್ಟಣ ಜಿಲ್ಲೆಯ ಜಿಲ್ಲಾಕೇಂದ್ರವೂ ಹೌದು. ಬೇ ಆಫ್ ಬೆಂಗಾಲ್ ನಿಂದ ನಿರ್ಮಿತವಾದ ಭಾರತೀಯ ಪರ್ಯಾಯದ್ವೀಪದ ಪೂರ್ವ ದಿಕ್ಕಿನಲ್ಲಿ ನೆಲೆಸಿರುವ ಈ ಪಟ್ಟಣ, ಪ್ರಸಿದ್ಧ ತಂಜಾವೂರ್ ನಿಂದ ಬೇರ್ಪಟ್ಟು ಪ್ರವರ್ಧಮಾನಕ್ಕೆ ಬಂದಿತು. ಈ ಪಟ್ಟಣ ಚೆನ್ನೈನಿಂದ 350 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ.
ಮೂಲತಃ ನಾಗಪಟ್ಟಿನಂ 'ನಾಗರ್' ಮತ್ತು 'ಪಟ್ಟಿನಂ' ಎಂಬ ಎರಡು ಪದಗಳ ಸಂಯೋಜನೆಯಾಗಿದೆ. ಇಲ್ಲಿ ನಾಗರ್ ಪದವನ್ನು ಶ್ರೀಲಂಕಾದ ಜನರನ್ನು ಕುರಿತು ಸಂಭೋದಿಸಲಾಗುತ್ತಿತ್ತು ಮತ್ತು ಪಟ್ಟಿನಂ ಎಂದರೆ ಪಟ್ಟಣ ಅಥವಾ ಊರು ಎಂದಾಗುತ್ತದೆ. ಇತಿಹಾಸವನ್ನು ಕೆಣಕಿದಾಗ ತಿಳಿಯಲ್ಪಡುವ ಮತ್ತೊಂದು ವಿಷಯವೆಂದರೆ ಈ ಊರು ಇತರೆ ಹಲವು ಹೆಸರುಗಳಿಂದಲೂ ಗುರುತಿಸಿಕೊಂಡಿತ್ತು. ಚೋಳರ ಆಡಳಿತವಿದ್ದ ಸಂದರ್ಭದಲ್ಲಿ ಇದನ್ನು ಚೋಳಕುಲ ವಲ್ಲಿಪಟ್ಟಿನಂ ಎಂದೂ, ಗ್ರೀಕ್ ತತ್ವಜ್ಞಾನಿಯಾದ ಟಾಲೇಮಿ ಇದನ್ನು ನಿಕಂ ಎಂಬುದಾಗಿಯೂ ಹಾಗು ಪೋರ್ಚುಗೀಸರು ಇದನ್ನು 'ಕೋರಮಂಡಲ್ ನಗರ' ಎಂತಲೂ ಕರೆದಿದ್ದರು.
ನಾಗಪಟ್ಟಿನಂ ಸುತ್ತಮುತ್ತಲಿರುವ ಪ್ರವಾಸಿ ತಾಣಗಳು
ನಾಗಪಟ್ಟಿನಂ ತನ್ನ ಶ್ರೀಮಂತ ಇತಿಹಾಸ ಹಾಗು ಸಂಸ್ಕೃತಿಯಿಂದಾಗಿ ಪ್ರಸಿದ್ಧವಾಗಿರುವುದಲ್ಲದೆ, ಭಾರತದಲ್ಲಿ ಕಾಣಬಹುದಾದ ಕೆಲವು ಉತ್ತಮ ಎನ್ನಬಹುದಾದ ಬಂದರುಗಳಿಗೂ ಪ್ರಖ್ಯಾತವಾಗಿದೆ. ಕೆಲವು ಧಾರ್ಮಿಕ ಮಹತ್ವವುಳ್ಳ ದೇವಾಲಯಗಳನ್ನು ಇಲ್ಲಿ ನೋಡಬಹುದಾಗಿದ್ದು, ಹಲವು ಯಾತ್ರಾರ್ಥಿಗಳು ದರುಶನಕ್ಕೆಂದು ಇಲ್ಲಿ ಬರುತ್ತಲೆ ಇರುತ್ತಾರೆ.
ಸೌಂದರ್ಯರಾಜ ಪೆರುಮಾಳ್ ದೇವಾಲಯ, ನೆಲ್ಲುಕಡೈ ಮಾರಿಯಮ್ಮನ್ ದೇವಾಲಯ, ಕಾಯಾರೋಹಣಸ್ವಾಮಿ ದೇವಾಲಯ, ಅರುಮುಗಸ್ವಾಮಿ ದೇವಾಲಯ ಇಲ್ಲಿರುವ ಕೆಲವು ಪ್ರಮುಖ ದೇವಲಾಯಗಳು. ಅಷ್ಟೆ ಅಲ್ಲ, ಜಿಲ್ಲೆಯ ಪಕ್ಕದೂರಾದ ವೇದಾರಣ್ಯಂ ನಲ್ಲಿ ಪ್ರಸಿದ್ಧ ವೇದಾರಣ್ಯೇಶ್ವರ ದೇವಾಲಯವಿರುವುದನ್ನು ಮರೆಯುವಂತಿಲ್ಲ. ದೇವಾಲಯಗಳ ಹೊರತಾಗಿ ಈ ಪಟ್ಟಣದಲ್ಲಿ 16 ನೇಯ ಶತಮಾನದಲ್ಲಿ ನಿರ್ಮಿತ ಪುರಾತನ ನಾಗೋರ್ ದರ್ಗಾವನ್ನೂ ಕಾಣಬಹುದು.
'ಸಂತ ಬೆಸಿಲಿಕಾ ಆಫ್ ಅವರ್ ಲೇಡಿ ಆಫ್ ಗುಡ್ ಹೆಲ್ತ್' ಚರ್ಚಿಗೆ ಪ್ರಸಿದ್ಧವಾದ ವೇಲಾಂಕಣ್ಣಿಯು ಕೂಡ ನಾಗಪಟ್ಟಿನಂ ಬಳಿಯೇ ಇದೆ. ನಾಲ್ಕು ಪ್ರಮುಖ ಧರ್ಮಗಳಾದ ಹಿಂದೂ, ಇಸ್ಲಾಂ, ಕ್ರೈಸ್ತ ಮತ್ತು ಬೌದ್ಧ ಮತಗಳ ಸಂಕ್ಷೀಪ್ತ ರೂಪವನ್ನು ಇಲ್ಲಿನ ಜನರ ಜೀವನದಲ್ಲಿ ಕಾಣಬಹುದು.
ನಾಗಪಟ್ಟಿನಂ ಪಟ್ಟಣದಲ್ಲಿ, ಜೈವಿಕ ವೈವಿಧ್ಯತೆಯಿಂದಾಗಿ ಹೆಸರುವಾಸಿಯಾದ ಉಪ್ಪು ನೀರಿನ ಜೌಗು ಪ್ರದೇಶವೊಂದನ್ನು ಕಾಣಬಹುದು. ಇದಲ್ಲದೆ, ಪ್ರಖ್ಯಾತ ಕೊಡಿಕ್ಕಾರೈ ಅಭಯಾರಣ್ಯವೂ ನಾಗಪಟ್ಟಿನಂ ಬಳಿಯೆ ನೆಲೆಸಿದೆ.
ಸ್ಥಳದ ಸಂಕ್ಷೀಪ್ತ ಇತಿಹಾಸ
ಚೋಳರ ಕಾಲದಿಂದ ಇದರ ಇತಿಹಾಸವು ಉತ್ತಮವಾಗಿ ದಾಖಲಿಸಲ್ಪಟ್ಟಿದೆ. ಆ ಸಮಯದಲ್ಲಿ ಈ ಪ್ರದೇಶವು ಒಂದು ಬಂದರು ಹಾಗು ವ್ಯಾಪಾರ ಕೇಂದ್ರವಾಗಿ ಪ್ರಸಿದ್ಧವಾಗಿತ್ತು. 3 ನೇಯ ಶತಮಾನದಲ್ಲೆ ಅಶೋಕ ಚಕ್ರವರ್ತಿಯು ಇಲ್ಲಿ ಬುದ್ಧ ವಿಹಾರವನ್ನು ನಿರ್ಮಿಸಲು ಅಪ್ಪಣೆ ಮಾಡಿದ್ದನು ಹಾಗು ಇದರ ಪರಿಣಾಮವಾಗಿ 5 ಮತ್ತು 6 ನೇಯ ಶತಮಾನಗಳಲ್ಲೆ ಇದೊಂದು ಬೌದ್ಧ ಕೇಂದ್ರವಾಗಿ ಪ್ರಸಿದ್ಧವಾಗಿತ್ತು.
ಈ ಪ್ರದೇಶದ ವಸಾಹತುಶಾಹಿ ಇತಿಹಾಸವು 16 ನೇಯ ಶತಮಾನದಲ್ಲಿ ಯಾವಾಗ ಪೋರ್ಚುಗೀಸರು ಇಲ್ಲಿ ಬಂದು ತಮ್ಮ ವಾಣಿಜ್ಯ ಕೇಂದ್ರವನ್ನು ಸ್ಥಾಪಿಸಿದರೊ ಅಂದಿನಿಂದಲೆ ಪ್ರಾರಂಭವಾಯಿತು. ತಮ್ಮ ಮತವನ್ನು ಪ್ರಚಾರಿಸುವುದು ಕೂಡ ಈ ಸ್ಥಾಪನೆಯ ಹಲವು ಉದ್ದೇಶಗಳಲ್ಲಿ ಒಂದು ಭಾಗವೆ ಆಗಿತ್ತು. ಆದರೆ, 17 ನೇಯ ಶತಮಾನದ ಮಧ್ಯಭಾಗದಲ್ಲಿ ಇವರ ಮತ್ತು ತಂಜಾವೂರಿನ ರಾಜನ ಮಧ್ಯದಲ್ಲಿ ನಡೆದ ಒಂದು ಒಪ್ಪಂದದನ್ವಯ ಡಚ್ಚರಿಗೆ ಅಧಿಕಾರವನ್ನು ಹಸ್ತಾಂತರಿಸಲಾಯಿತು.
ಡಚ್ಚರು ಈ ಪ್ರದೇಶದಲ್ಲಿ ಹಲವಾರು ಚರ್ಚುಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸಿದ್ದಾರೆ. 1690 ರಲ್ಲಿ ಈ ಪ್ರದೇಶ ಡಚ್ ಕೋರಮಂಡಲ್ ದ ರಾಜಧಾನಿಯೂ ಸಹ ಆಗಿತ್ತು. ಡಚ್ಚರ ಆಕ್ರಮಣದ ಕುರುಹುಗಳೆಂಬಂತೆ ಇಂದಿಗೂ ಹಲವಾರು ಸ್ಮಾರಕಗಳನ್ನು ಇಲ್ಲಿ ಕಾಣಬಹುದಾಗಿದ್ದು, ಡಚ್ ಕೋಟೆ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. 1781 ರಲ್ಲಿ ಬ್ರಿಟೀಷರು ಡಚ್ಚರಿಂದ ನಾಗಪಟ್ಟಿನಂ ಅನ್ನು ವಶಪಡಿಸಿಕೊಂಡರು. ಆಂಗ್ಲರ ಆಡಳಿತದಲ್ಲಿ ಇದು ಮದ್ರಾಸ್ ಪ್ರೆಸಿಡೆನ್ಸಿಯ ಒಂದು ಭಾಗವಾಗಿರುವುದು ಮಾತ್ರವಲ್ಲದೆ, ಪ್ರದೇಶದ ಪ್ರಮುಖ ಬಂದರುಗಳಲ್ಲೊಂದಾಗಿತ್ತು.
ತಲುಪುವ ಬಗೆ
ನಾಗಪಟ್ಟಿನಂ ಪಟ್ಟಣವನ್ನು ಸಂಚಾರದ ಮೂರು ಪ್ರಮುಖ ಮಾಧ್ಯಮಗಳಾದ ವಾಯು, ರೈಲು ಮತ್ತು ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ವಿಮಾನದ ಮೂಲಕ ಬರುವುದಾದರೆ, 150 ಕಿ.ಮೀ ದೂರದಲ್ಲಿರುವ ತಿರುಚಿರಾಪಳ್ಳಿಯೆ ಹತ್ತಿರದ ಡಾಮೆಸ್ಟಿಕ್ ವಿಮಾನ ನಿಲ್ದಾಣ. ಇಲ್ಲಿಂದ ನಾಗಪಟ್ಟಿನಂಗೆ ಬಾಡಿಗೆ ಟ್ಯಾಕ್ಸಿಗಳು ಸುಲಭವಾಗಿ ದೊರೆಯುತ್ತವೆ. ಇನ್ನು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಚೆನ್ನೈ ನಗರದ ವಿಮಾನ ನಿಲ್ದಾಣ ಉತ್ತಮ ಆಯ್ಕೆ. ನಾಗಪಟ್ಟಿನಂ ತನ್ನದೆ ಆದ ರೈಲು ನಿಲ್ದಾಣವನ್ನೂ ಹೊಂದಿದ್ದು, ತಮಿಳುನಾಡಿನ ಹಲವು ಭಾಗಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ನೆರೆ ಹೊರೆಯ ರಾಜ್ಯಗಳಾದ ಕರ್ನಾಟಕ, ಕೇರಳ ಹಾಗು ಆಂಧ್ರಪ್ರದೇಶಗಳಿಂದಲೂ ಸಹ ನಾಗಪಟ್ಟಿನಂಗೆ ತೆರಳಲು ಬಸ್ಸುಗಳು ದೊರೆಯುತ್ತವೆ.
ಹವಾಮಾನ
ಮಾರ್ಚ್ ನಿಂದ ಅಕ್ಟೋಬರ್ ವರೆಗಿನ ಅವಧಿಯಲ್ಲಿ ನಾಗಪಟ್ಟಿನಂನಲ್ಲಿ ಕಂಡುಬರುವ ಹವಾಮಾನ ಅತ್ತ್ಯುತ್ತಮವಾಗಿರುತ್ತದೆ. ವರ್ಷಪೂರ್ತಿ ಪ್ರವಾಸಿಗರು ಇಲ್ಲಿಗೆ ಬರುತ್ತಿರುತ್ತಾರಾದರೂ ಏಪ್ರಿಲ್ ಮತ್ತು ಮೇ ತಿಂಗಳುಗಳು ಧಾರ್ಮಿಕ ಚಟುವಟಿಕೆಗಳ ದೃಷ್ಟಿಯಿಂದ ಮುಖ್ಯವಾಗಿವೆ. ಜೂನ್ ನಿಂದ ಸೆಪ್ಟಂಬರ್ ಅವಧಿಯು ಮಳೆಗಾಲದ ಅವಧಿಯಾಗಿದ್ದು, ಆ ಸಂದರ್ಭದಲ್ಲಿ ನಾಗಪಟ್ಟಿನಂ ಹಸಿರುಟ್ಟ ನೀರೆಯ ಹಾಗೆ ಕಂಗೊಳಿಸುತ್ತಿರುತ್ತದೆ.