ಕೃಷ್ಣಗಿರಿ ತಮಿಳುನಾಡು ರಾಜ್ಯದ 30ನೇ ಜಿಲ್ಲೆ. ಇದಕ್ಕೆ ಈ ಹೆಸರು ಈ ಪ್ರದೇಶದಲ್ಲಿ ಕಂಡುಬರುವ ಕಪ್ಪು ಗ್ರಾನೈಟ್ ಗುಡ್ಡಗಳ ಕಾರಣವಾಗಿ ಬಂದಿತು. 5143 ಚ.ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಈ ಪ್ರದೇಶವು ಒಂದು ಯಾತ್ರಾ ಸ್ಥಳವಾಗಿ ಸಹ ಖ್ಯಾತಿಯನ್ನು ಪಡೆದಿದೆ. ಅದರಲ್ಲಿಯೂ ಕೆ ಆರ್ ಪಿ ಜಲಾಶಯವು ಇಲ್ಲಿನ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಕೃಷ್ಣಗಿರಿಯು ತನ್ನ ರಮ್ಯ ಮನೋಹರವಾದ ಪರಿಸರದ ನಡುವೆ ಹಲವಾರು ಪ್ರಾಚ್ಯ ಇತಿಹಾಸದ ತಾಣಗಳು, ದೇವಾಲಯಗಳು, ಉದ್ಯಾನವನಗಳು, ಕೋಟೆಗಳು ಮತ್ತು ಸ್ಮಾರಕಗಳನ್ನು ಹೊಂದಿದೆ.
ಮಾವಿನ ಕಣಜ
"ಹಣ್ಣುಗಳ ರಾಜ"ನೆಂದೆ ಖ್ಯಾತಿ ಪಡೆದಿರುವ ಮಾವಿನ ಹಣ್ಣು ಕೃಷ್ಣಗಿರಿ ಜಿಲ್ಲೆಯ ಪ್ರಮುಖ ಮತ್ತು ಅತಿ ದೊಡ್ಡಬೆಳೆಗಳಲ್ಲಿ ಒಂದಾಗಿದೆ. ಇಲ್ಲಿಗೆ ಸಮೀಪದ ಸಂತುರ್ ಗ್ರಾಮದಲ್ಲಿ ಸುಮಾರು ನೂರೈವತ್ತಕ್ಕು ಮಿಗಿಲಾದ ಮಾವಿನ ನರ್ಸರಿಗಳು ಇವೆ. ಹಾಗಾಗಿ ಈ ಜಿಲ್ಲೆಗೆ ತಮಿಳು ನಾಡಿನ ಮಾವಿನ ಕಣಜವೆಂಬ ಖ್ಯಾತಿ ಬಂದಿರುವುದು ಸಹಜವಾಗಿದೆ. ನೀವು ಒಮ್ಮೆ ಈ ಊರಿಗೆ ಭೇಟಿಕೊಟ್ಟರೆ ನಿಮ್ಮ ಕಣ್ಣು ಹಾಯಿಸಿದೆಲ್ಲೆಡೆ ಮಾವಿನ ಮರಗಳನ್ನು ನೋಡುತ್ತೀರಿ.
ಪ್ರವಾಸಿಗರು ಮಾವಿನ ಹಣ್ಣು ಬೆಳೆಯುವ ಋತುವಿನಲ್ಲಿ ಅವುಗಳ ರುಚಿಯನ್ನು ಸವಿಯುತ್ತ, ಅವುಗಳ ಫಸಲನ್ನು ನೋಡುತ್ತ, ಅವುಗಳ ನಡುವೆಯೆ ಕಾಲ ಕಳೆಯುವ ಅವಕಾಶವನ್ನು ಪಡೆಯಬಹುದು. ಕೃಷ್ಣಗಿರಿಯಲ್ಲಿ ಪ್ರತಿ ವರ್ಷವು ಮಾವು ಮೇಳವು ನಡೆಯುತ್ತದೆ. ಅದರಲ್ಲಿ ರೈತರು ಜಾರಿಗೆ ತಂದ ಹೊಸ ಹೊಸ ಪ್ರಯೋಗಗಳನ್ನು ನೀವು ನೋಡಬಹುದು. ಇದು ರೈತರಿಗೆ ಮತ್ತು ಮಾವು ಬೆಳೆಗಾರರಿಗೆ ಉಪಯುಕ್ತವಾದ ಮೇಳವಾಗಿದೆ. ಹಾಗೆಂದು ಪ್ರವಾಸಿಗರಿಗೇನು ಬೇಸರ ತರಿಸುವುದಿಲ್ಲ. ಛಾಯಾಗ್ರಹಣದ ಅಭಿರುಚಿಯಿರುವವರಿಗೆ ಈ ಮೇಳವು ಬೇರೆಲ್ಲೂ ಸಿಗದ ಮಾವಿನ ಹಣ್ಣುಗಳ ಚಿತ್ರವನ್ನು ತೆಗೆಯುವ ಅವಕಾಶವನ್ನೊದಗಿಸುತ್ತದೆ. ಅಸಂಖ್ಯಾತ ಬಗೆಯ ಮಾವಿನ ಹಣ್ಣುಗಳು, ಅವುಗಳ ಬಣ್ಣಗಳು, ಆಕಾರಗಳು ನೋಡುಗರಿಗೆ ಪ್ರಕೃತಿಯ ಬಗ್ಗೆ ಗೌರವಾದರ ಮೂಡುವಂತೆ ಮಾಡುತ್ತದೆ. ಮಾವಿನ ಹಣ್ಣಿನ ಪ್ರಿಯರಿಗೆ ಈ ಮೇಳವು ಬಾಯಿಯಲ್ಲಿ ನೀರೂರಿಸುವುದಷ್ಟೇ ಅಲ್ಲದೆ ಎಂದಿಗೂ ಮರೆಯಲಾಗದ ರುಚಿಕರ ಮಾವಿನ ಹಣ್ಣುಗಳನ್ನು ಒದಗಿಸುತ್ತದೆ.
ಕೋಟೆ ,ದೇವಾಲಯಗಳು ಹಾಗು ಇತ್ಯಾದಿ - ಕೃಷ್ಣಗಿರಿಯ ಸುತ್ತಮುತ್ತ ಇರುವ ಪ್ರವಾಸಿ ಆಕರ್ಷಣೆಗಳು.
ಕೃಷ್ಣಗಿರಿಯು ತಮಿಳುನಾಡಿನ ಇನ್ನಿತರ ಊರುಗಳಂತೆಯೆ ವಿವಿಧ ಬಗೆಗಳ ಧಾರ್ಮಿಕ ಶ್ರದ್ಧಾವಂತರಿಗೆ ಆಶ್ರಯವನ್ನೊದಗಿಸಿದೆ. ಕೃಷ್ಣಗಿರಿಯ ಸುತ್ತಮುತ್ತ ಪ್ರಾಚೀನ ದೇವಾಲಯಗಳು ಅಲ್ಲಲ್ಲಿ ನೆಲೆಸಿವೆ.ಈ ಪ್ರದೇಶವನ್ನು ನುಳಂಬರು, ಚೋಳರು, ಗಂಗರು , ಪಲ್ಲವರು, ಹೊಯ್ಸಳರು, ವಿಜಯನಗರದ ಅರಸರು ,ಜಾಪುರದ ಸುಲ್ತಾನರು, ಮೈಸೂರಿನ ಒಡೆಯರು ಮತ್ತು ಮಧುರೈನ ನಾಯಕರು ಆಳಿದ್ದರು. ಇಲ್ಲಿ ಆಳಿದ ಪ್ರತಿಯೊಬ್ಬ ರಾಜರು ಧಾರ್ಮಿಕ ಕೇಂದ್ರಗಳ ನಿರ್ಮಾಣಕ್ಕೆ ಒತ್ತು ಕೊಟ್ಟಿದ್ದರು. ಈ ಕೇಂದ್ರಗಳು ಅಂದಿನ ಕಾಲದ ವಾಸ್ತುಶಿಲ್ಪ ಮತ್ತು ಧಾರ್ಮಿಕ ಆಚರಣೆಗಳಿಗೆ ಅನುಗುಣವಾಗಿ ನಿರ್ಮಾಣಗೊಂಡಿವೆ.
ಅಂತಹ ದೇವಾಲಯಗಳಲ್ಲಿ ಕೆಲವೊಂದು ದೇವಾಲಯಗಳು ಇಂದಿಗು ಉಳಿದುಕೊಂಡು ಬಂದಿವೆ. ಪ್ರಸ್ತುತ ವೇಣುಗೋಪಾಲ ಸ್ವಾಮಿ ದೇವಾಲಯ, ಅರುಲ್ಮಿಗು ಮರಗಥಮಿಗೈ ಚಂದ್ರ ಚೂಡೇಶ್ವರ ದೇವಾಲಯ, ಶ್ರೀ ಪಾರ್ಶ್ವ ಪದ್ಮಾವತಿ ಶಕ್ತಿಪೀಠ ತೀರ್ಥ ಧಾಮ, ಸಿ ಎಸ್ ಐ ಕ್ರೈಸ್ತರ ಚರ್ಚ್- ವಿನ್ಸೆಂಟ್ ಡಿ ಪಾಲ್ ಪರಿಷ್ ( ರೋಮನ್ ಕ್ಯಾಥೋಲಿಕರ ಒಂದು ಸಾಂಪ್ರದಾಯಿಕ ಚರ್ಚ್), ಸತ್ಯಸಾಯಿ ಸಮಿತಿ- ಕೃಷ್ಣಗಿರಿ, ಜೈನ ಧ್ಯಾನ ಮಂಟಪ, ಕೃಷ್ಣಗಿರಿ ದರ್ಗಾ, ಸೈಯದ್ ಬಾಷಾ ಬೆಟ್ಟದ ಮಸೀದಿಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳಾಗಿವೆ. ಕೃಷ್ಣಗಿರಿಯು ದಕ್ಷಿಣ ಭಾರತದ ಪ್ರಮುಖ ನಗರಗಳಾದ ಬೆಂಗಳೂರು ಮತ್ತು ಹೊಸೂರಿಗೆ ಸಮೀಪದಲ್ಲಿದೆ.
ಸುಬ್ರಹ್ಮಣ್ಯ ದೇವಾಲಯವು ಇಲ್ಲಿ ವಾರ್ಷಿಕವಾಗಿ ಜರುಗುವ ಕಾವಡಿ ಆಟಕ್ಕೆ ಪ್ರಸಿದ್ಧಿ ಪಡೆದಿದೆ. ಇದೊಂದು ನಾಟ್ಯ ಪ್ರಕಾರವಾಗಿದ್ದು, ಭಕ್ತಾಧಿಗಳು ಹರಕೆ ತೀರಿಸಲು ಇದನ್ನು ಆಡುತ್ತಾರೆ. ಇದನ್ನು ತೈಪುಸಂ ಹಬ್ಬದ ಸಂದರ್ಭದಲ್ಲಿ ಆಚರಿಸುತ್ತಾರೆ. ಹಳೇ ಪೇಟೆಯಲ್ಲಿರುವ ಧರ್ಮರಾಜ ದೇವಾಲಯದಲ್ಲಿ ಪ್ರತಿ ವರ್ಷವು "ಭಾರತಂ" ಎಂಬ ಮಹಾಭಾರತ ವಾಚನವನ್ನು ಏರ್ಪಡಿಸಲಾಗುತ್ತದೆ. ಇದರ ಜೊತೆಗೆ ಈ ದೇವಾಲಯವು ತಮಿಳು ನಾಡಿನ ಬೀದಿ ನೃತ್ಯದ ಪ್ರಕಾರವಾದ ತೇರುಕುಟ್ಟು ಆಡುವ ಸ್ಥಳವು ಸಹ ಆಗಿದೆ. ತೇರುಕುಟ್ಟು ಒಂದು ಪ್ರಾಚೀನ ಧಾರ್ಮಿಕ ವಿಧಿಯಷ್ಟೇ ಅಲ್ಲದೆ ಸಾಮಾಜಿಕ ಕಳಕಳಿಯನ್ನು ಮನೋರಂಜನೆಯ ಮೂಲಕ ಅಭಿವ್ಯಕ್ತಿಪಡಿಸುವ ಒಂದು ಮಾದ್ಯಮವಾಗಿದೆ.
ಕೃಷ್ಣಗಿರಿಯಲ್ಲಿ ಆಧುನಿಕತೆ ಮತ್ತು ಪ್ರಾಚೀನತೆ ಎರಡು ನೆರೆಹೊರೆಯವರಂತೆ ಸಮ್ಮಿಲನಗೊಂಡಿವೆ. ಒಂದು ಕಡೆ ಆಧುನಿಕ ಕಟ್ಟಡಗಳು ಈ ಜಿಲ್ಲೆಯಲ್ಲಿ ತಲೆ ಎತ್ತಿದ್ದರೆ, ಮತ್ತೊಂದೆಡೆ ಭಕ್ತಾಧಿಗಳು ಇಲ್ಲಿನ ಪ್ರಾಚೀನ ಧಾರ್ಮಿಕ ಕೇಂದ್ರಗಳಿಗೆ ದಾಂಗುಡಿಯಿಡುತ್ತಿರುತ್ತಾರೆ. ಅಲ್ಲದೆ ಮಾವು ಸಂಸ್ಕರಣಾ ಉದ್ಯಮಗಳು ಹಾಗು ಇನ್ನಿತರ ಉದ್ಯಮಗಳು ಇಲ್ಲಿನ ನಿವಾಸಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತಿವೆ.
ಕೃಷ್ಣಗಿರಿಯು ಭಾರತದ ಒಂದು ಉದಯೋನ್ಮುಖ ಅಭಿವೃದ್ಧಿಯ ನಗರವಾಗಿ ನಿರಂತರವಾಗಿ ಗುರುತಿಸಿಕೊಂಡಿದೆ. ಉದಾಹರಣೆಗೆ ಕೆ ಆರ್ ಪಿ ಜಲಾಶಯವು ಪ್ರಸ್ತುತ ನವೀಕರಣಕ್ಕೆ ಒಳಗಾಗಿರುವುದು ಇದರ ನಿರಂತರ ಸುಧಾರಣಾ ಧೋರಣೆಗೆ ಸಾಕ್ಷಿಯಾಗಿದೆ. ಕೆ ಆರ್ ಪಿ ಜಲಾಶಯದ ಜೊತೆಗೆ ಕೆಲವರಪಲ್ಲಿ ಜಲಾಶಯ ಯೋಜನೆಯು ಸಹ ಇಲ್ಲಿ ಪ್ರವಾಸಿಗರು ನೋಡಲೆ ಬೇಕಾಗಿರುವ ಸ್ಥಳಗಳಲ್ಲಿ ಒಂದಾಗಿದೆ.
ಅಂತರಿಕ್ಷದ ಅತಿಥಿಗಳು
12 ನೇ ತಾರೀಖು ಸೆಪ್ಟೆಂಬರ್ 2008 ರಂದು ಕೃಷ್ಣಗಿರಿಯು ಉಲ್ಕಾಪಾತಕ್ಕೆ ಸಾಕ್ಷಿಯಾಗಿತ್ತು. ಆದರೆ ಇಲ್ಲಿನ ಸ್ಥಳೀಯರು ಇದನ್ನು ಬಾಂಬ್ ದಾಳಿ ಎಂದು ಭಾವಿಸಿದ್ದರು. ಏಕೆಂದರೆ ಉಲ್ಕಾಪಾತವು ಕಿವಿಗಡಚಿಕ್ಕುವ ಸದ್ದು ಮತ್ತು ಕಪ್ಪನೆಯ ಧೂಮವನ್ನುಂಟು ಮಾಡಿತ್ತು. ಹಾಗಾಗಿ ಇಲ್ಲಿನ ಜನರು ತಾವು ಒಂದು ಆಕಸ್ಮಿಕ ಬಾಂಬ್ ದಾಳಿ ಅಥವಾ ಭಯೋತ್ಪಾದಕ ದಾಳಿಗೆ ಒಳಾಗಾಗಿದ್ದೇವೆ ಎಂಬ ಭೀತಿಯನ್ನುಂಟು ಮಾಡಿತ್ತು.
ಅಂದು ಇಲ್ಲಿಗೆ ಆಸುಪಾಸಿನ ಹಳ್ಳಿಯವರು ತಮ್ಮ ಮನೆಗಳ ಸಮೀಪ ಆಕಾಶದಿಂದ ಬೀಳುತ್ತಿದ್ದ ಉಲ್ಕೆಗಳನ್ನು ಭಯಭೀತರಾಗಿ ನೋಡುತ್ತ ನಿಂತಿದ್ದರು. ಈ ಉಲ್ಕೆಗಳು ಭೂಮಿಯಲ್ಲಿ 3 ಅಡಿ ಆಳ ಮತ್ತು 5 ಅಡಿ ಅಗಲದ ಕುಳಿಗಳನ್ನು ಉಂಟುಮಾಡಿದವು. ಇದರ ಕುರಿತಾದ ವರದಿಯನ್ನು ಮೊದಲು ಹೊಸೂರು ಉಲ್ಕಾಪಾತವೆಂದು ಬಣ್ಣಿಸಲಾಯಿತು. ನಂತರ ಇದನ್ನು "ಸೂಲಗಿರಿ ಉಲ್ಕಾಪಾತ" ವೆಂದು ಮರುನಾಮಕರಣ ಮಾಡಲಾಯಿತು. ಅಂತರಿಕ್ಷ ಅಧ್ಯಯನದ ಕುರಿತಾಗಿ ಆಸಕ್ತಿ ಹೊಂದಿರುವವರಿಗೆ ಈ ಪ್ರದೇಶವು ಕೌತುಕದ ಗಣಿಯಾಗಿದೆ.
ಕೃಷ್ಣಗಿರಿಗೆ ತಲುಪುವುದು ಹೇಗೆ
ಕೃಷ್ಣಗಿರಿಯು ರೈಲು ಮತ್ತು ರಸ್ತೆಯ ಉತ್ತಮ ಮಾರ್ಗಗಳನ್ನು ಹೊಂದಿದೆ.
ಕೃಷ್ಣಗಿರಿ ಹವಾಮಾನ
ಕೃಷ್ಣಗಿರಿಯಲ್ಲಿ ವರ್ಷಪೂರ್ತಿ ಆಹ್ಲಾದಕರವಾದ ವಾತಾವರಣವಿರುತ್ತದೆ.