ಥಳಿಯಲ್ಲಿರುವ ವೇಣುಗೋಪಾಲ ಸ್ವಾಮಿ ದೇವಾಲಯವು ದಕ್ಷಿಣ ಭಾರತದಲ್ಲಿರುವ ಭಕ್ತಾಧಿಗಳನ್ನು ತನ್ನತ್ತ ಆಕರ್ಷಿಸುತ್ತಿದೆ. ವೇಣುಗೋಪಾಲ ಸ್ವಾಮಿಯು ವಿಷ್ಣುವಿನ ಅವತಾರ. ಈ ದೇವಾಲಯದಲ್ಲಿ ಈ ಸ್ವಾಮಿಯವರ ಸುಂದರವಾದ ವಿಗ್ರಹವಿದೆ. ವೇಣು ಎಂದರೆ ತೆಲುಗಿನಲ್ಲಿ ಕೊಳಲು ಎಂದರ್ಥ. ಈ ದೇವಾಲಯದಲ್ಲಿ ಆ ವೇಣುವಿನ ಮಾಧುರ್ಯವನ್ನು ನೀವು ಆಸ್ವಾದಿಸಬಹುದು.
ವಿಶಾಲವಾದ ದೇವಾಲಯದ ಆವರಣವು ಅಸಂಖ್ಯಾತ ಸ್ಥಂಭಗಳು ಮತ್ತು ವಿಭಾಗಗಳಾಗಿ ಬೇರ್ಪಟ್ಟಿದೆ. ಇಲ್ಲಿನ ಕಲ್ಲಿನ ಕಂಬಗಳು ಭಾರತದ ಗತಕಾಲದ ವೈಭವವನ್ನು ಸಾರಿ ಹೇಳುತ್ತಿವೆ. ಇಲ್ಲಿನ ಕಲ್ಲು ಹಾಸಿನ ನೆಲದ ಮೇಲೆ ನಡೆಯುತ್ತಿದ್ದರೆ ಹೊರಹೊಮ್ಮುವ ನಾದವು ಸುತ್ತಲಿನ ಪ್ರಕೃತಿಯ ನಾದದೊಂದಿಗೆ ಮಿಳಿತವಾಗುತ್ತದೆ. ದೇವಾಲಯವು ಪ್ರಕೃತಿಯಿಂದ ಪ್ರತ್ಯೇಕವಾಗಿ ನಿಲ್ಲದೆ ಸುತ್ತಲಿನ ಪ್ರಕೃತಿಯ ಜೊತೆಗೆ ಬೆರೆತು ಹೋಗಿರುವುದು ಇಲ್ಲಿನ ವೈಶಿಷ್ಟ್ಯವಾಗಿದೆ. ಕಳೆದು ಹೋದ ಕಾಲವು ದೇವಾಲಯಕ್ಕೆ ಮತ್ತಷ್ಟು ಕಳೆಯನ್ನು ಒದಗಿಸಿ ಹೋಗಿದೆ.
ಅನಾದಿಕಾಲದಿಂದಲು ಅಚ್ಚಳಿಯದೇ ಉಳಿದು ಬಂದಿರುವ ಕೆಲವೇ ಕೆಲವು ಅಂಶಗಳಲ್ಲಿ ಥಳಿಯ ಈ ದೇವಾಲಯವು ಸಹ ಸೇರಿದೆ. ಹಾಗಾಗಿ ಇದು ಇಲ್ಲಿನವರ ಮತ್ತು ಇಲ್ಲಿಗೆ ಭೇಟಿ ಕೊಡುವವರ ಪಾಲಿಗೆ ಆಕರ್ಷಣೀಯವಾಗಿಯೇ ಉಳಿದಿದೆ. ಇಲ್ಲಿಗೆ ಭೇಟಿ ಕೊಡಲುಹವಾಮಾನದ ಚಿಂತೆ ಮಾಡಬೇಕಿಲ್ಲ. ಮೇ ತಿಂಗಳಿನಲ್ಲಿ ವೇಣುಗೋಪಾಲ ಸ್ವಾಮಿಯ ರಥೋತ್ಸವ ನಡೆಯುತ್ತದೆ. ನೀವು ಶಾಂತಿ ಮತ್ತು ಪ್ರಸನ್ನತೆಯನ್ನು ಬಯಸುತ್ತಿದ್ದಲ್ಲಿ ಮೇ ತಿಂಗಳು ನಿಮಗೆ ಆಶಾದಾಯಕವಾಗಿರುವುದಿಲ್ಲ. ರಥೋತ್ಸವದ ಸಂದರ್ಭದಲ್ಲಿ ಇಲ್ಲಿಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಾರೆ.