ಪ್ರತಿಯೊಬ್ಬ ಮನುಷ್ಯ ತನ್ನ ಜೀವನದಲ್ಲಿ ಅಷ್ಟೈಶ್ವರ್ಯಗಳು ಲಭಿಸಬೇಕೆಂಬ ಆಸೆ ಸಾಮಾನ್ಯವಾಗಿ ಇಟ್ಟುಕೊಂಡೆ ಇರುತ್ತಾನೆ. ಹಾಗಾಗಿ ಸರ್ವ ದೇವ ದೇವತೆಯರ ಪೂಜೆಗಳನ್ನು ಮಾಡುತ್ತಲೆ ಇರುತ್ತಾನೆ. ಆದರೆ ನಿಮಗೆ ಗೊತ್ತೆ ಈ ಎಂಟು ಸಂಪತ್ತು ಅಥವಾ ಐಶ್ವರ್ಯಗಳನ್ನು ಪ್ರತಿನಿಧಿಸುವ ದೇವಿಯ ಎಂಟು ವಿವಿಧ ರೂಪಗಳನ್ನು ಆರಾಧಿಸಲಾಗುತ್ತದೆ.
ಲಕ್ಷ್ಮಿಯನ್ನು ಸಾಮಾನ್ಯವಾಗಿ ಐಶ್ವರ್ಯ-ಸಂಪತ್ತುಗಳ ಅಧಿ ದೇವತೆಯನ್ನಾಗಿ ಆರಾಧಿಸಲಾಗುತ್ತದೆ. ಹೀಗಾಗಿ ಲಕ್ಷ್ಮಿಯ ಎಂಟು ವಿವಿಧ ರೂಪಗಳನ್ನೆ ಅಷ್ಟಲಕ್ಷ್ಮಿಯರಾಗಿ ಪೂಜಿಸಲಾಗುತ್ತದೆ. ನವಗೃಹಗಳಂತೆ ಸಾಮಾನ್ಯವಾಗಿ ಅಷ್ಟಲಕ್ಷ್ಮಿಯರ ಗುಂಪುಗಳಿರುವ ಸನ್ನಿಧಿಯು ಭಾರತದ ಕೆಲವು ದೇವಾಲಯಗಳಲ್ಲಿ ಕಂಡುಬರುತ್ತಾವಾದರೂ ಅಷ್ಟಲಕ್ಷ್ಮಿಯರ ಪ್ರಮುಖ ದೇವಾಲಯ ಕಾಣಸಿಗುವುದು ವಿರಳ.
ತಮಿಳುನಾಡಿನಲ್ಲಿ ಹೆಚ್ಚು ಭೇಟಿ ನೀಡಲ್ಪಡುವ ದೇವಿಯರಿವರು!
ಆದರೆ ಪ್ರಸ್ತುತ ಲೇಖನದಲ್ಲಿ ಅಷ್ಟ ಲಕ್ಷ್ಮಿಯರಿಗೆಂದೆ ಮುಡಿಪಾದ ಪ್ರತ್ಯೇಕವಾದ ಸನ್ನಿಧಿಗಳಿರುವ ಅಪರೂಪದ ಹಾಗೂ ನೆಚ್ಚಿನ ದೇವಾಲಯವೊಂದರ ಕುರಿತು ತಿಳಿಸಲಾಗಿದೆ. ಸಕಲ ಎಂಟು ಲಕ್ಷ್ಮಿಯರು ಇಲ್ಲಿ ಪ್ರಭಾವಶಾಲಿಗಳೆಂದು ನಂಬಲಾಗಿದ್ದು ಭಕ್ತಿ ಹಾಗೂ ನಂಬಿಕೆಯಿಂದ ಯಾರು ಈ ಲಕ್ಷ್ಮಿಯರನ್ನು ಪೂಜಿಸುತ್ತಾರೊ ಅವರಿಗೆ ಅಷ್ಟೈಶ್ವರ್ಯಗಳು ದೊರೆಯುತ್ತವೆ ಎಂದು ಹೇಳಲಾಗುತ್ತದೆ.
ಅಷ್ಟಲಕ್ಷ್ಮಿಯರ ದೇವಾಲಯ :
ಅಷ್ಟಲಕ್ಷ್ಮಿಯರಿಗೆ ಮುಡಿಪಾದ ಈ ಅಪರೂಪದ ಹಾಗೂ ಭವ್ಯವಾಗಿರುವ ದೇವಾಲಯವು ತಮಿಳುನಾಡು ರಾಜ್ಯದ ಚೆನ್ನೈ ಮಹಾನಗರದ ಬೆಸಂಟ್ ನಗರದ ಎಲಿಯಟ್ ಕಡಲತೀರದ ಬಳಿ ಸ್ಥಿತವಿದ್ದು ಸಾಕಷ್ಟು ಭಕ್ತಾದಿಗಳನ್ನು ದಿನನಿತ್ಯ ಆಕರ್ಷಿಸುತ್ತದೆ.
ಚಿತ್ರಕೃಪೆ: Sudharsun.j
ಅಷ್ಟಲಕ್ಷ್ಮಿಯರ ದೇವಾಲಯ :
ಕಂಚಿ ಕಾಮಕೋಟಿ ಪೀಠದ / ಕಂಚಿ ಮಠದ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳ ಇಚ್ಛೆಯಂತೆ ಅಷ್ಟಲಕ್ಷ್ಮಿಯರ ದೇವಾಲಯವನ್ನು ನಿರ್ಮಿಸಲಾಗಿದೆ. ಈ ದೇವಾಲಯಕ್ಕೆ ನಿರ್ಮಾಣದ ಅಡಿಪಾಯವನ್ನು ಜನವರಿ 1974 ರಂದು ಹಾಕಲಾಯಿತು ಹಾಗೂ ಏಪ್ರಿಲ್ 1976 ರಲ್ಲಿ ಅಹೋಬಲ ಮಠದ ವೇದಾಂತ ದೇಶಿಕ ಯತೀಂದ್ರ ಮಹಾದೇಶಿಕನ್ ಸ್ವಾಮಿಗಳ ಸಮ್ಮುಖದಲ್ಲಿ ಪ್ರತಿಷ್ಠಾಪಿಸಲಾಯಿತು.
ಚಿತ್ರಕೃಪೆ: mckaysavage
ಅಷ್ಟಲಕ್ಷ್ಮಿಯರ ದೇವಾಲಯ :
ಈ ಭವ್ಯವಾದ ದೇವಾಲಯದಲ್ಲಿ ಅಷ್ಟಲಕ್ಷ್ಮಿಯರಿಗೆ ಮುಡಿಪಾದ ಎಂಟು ಪ್ರತ್ಯೇಕ ಸನ್ನಿಧಿಗಳಿದ್ದು, ಒಂಭತ್ತನೆಯ ಸನ್ನಿಧಿಯಲ್ಲಿ ಲಕ್ಷ್ಮಿಯು-ನಾರಾಯಣನ ಸಮೇತನಾಗಿ ನೆಲೆಸಿರುವುದನ್ನು ಕಾಣಬಹುದು. ಇದರ ವಿಶೇಷತೆಯೆಂದರೆ ಎಲ್ಲೆಡೆ ದೇವಾಲಯಗಳಲ್ಲಿ ಕಂಡುಬರುವಂತೆ ಇಲ್ಲಿ ನಾರಾಯಣನಿಗಿಂತಲೂ ಹೆಚ್ಚಿನ ಪ್ರಾಶಸ್ತ್ಯ ಲಕ್ಷ್ಮಿ ದೇವಿಗೆ ನೀಡಿರುವುದಾಗಿದೆ. ಇನ್ನೂ ಆ ಅಷ್ಟ ಲಕ್ಷ್ಮಿಯರು ಯಾರು ಯಾರು ಎಂದು ಮುಂದಿನ ಸ್ಲೈಡುಗಳಲ್ಲಿ ತಿಳಿಯಿರಿ.
ಚಿತ್ರಕೃಪೆ: Summer yellow
ಅಷ್ಟಲಕ್ಷ್ಮಿಯರ ದೇವಾಲಯ :
ಆದಿ ಲಕ್ಷ್ಮಿ : ಲಕ್ಷ್ಮಿ ದೇವಿಯ ಈ ರೂಪವು ವೈಕುಂಠದಲ್ಲಿ ನಾರಾಯಣನೊಂದಿಗೆ ಕುಳಿತಿರುವ ಅವತಾರವಾಗಿದೆ. ಅಂದರೆ ಮೂಲ ಲಕ್ಷ್ಮಿ ಎಂದೆ ಹೇಳಬಹುದು. ಆದಿ ಲಕ್ಷ್ಮಿಗೆ ಮುಡಿಪಾದ ಸನ್ನಿಧಿ ಇಲ್ಲಿದೆ.
ಚಿತ್ರಕೃಪೆ: Rajasekhar1961
ಅಷ್ಟಲಕ್ಷ್ಮಿಯರ ದೇವಾಲಯ :
ಧಾನ್ಯ ಲಕ್ಷ್ಮಿ : ಧಾನ್ಯ ಎಂದರೆ ಬೆಳೆ ಎಂದಾಗುತ್ತದೆ. ಇದು ಸಾಮಾನ್ಯವಾಗಿ ಆಹಾರವನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಧಾನ್ಯ ಲಕ್ಷ್ಮಿಯು ಉತ್ತಮ ಆಹಾರ ಹಾಗೂ ಆ ಮೂಲಕ ಉತ್ತಮ ಆರೋಗ್ಯ ದೊರೆಯುವಂತೆ ಹರಸುವ ರೂಪದವಳಾಗಿದ್ದಾಳೆ. ಧಾನ್ಯ ಲಕ್ಷ್ಮಿಗೆ ಮುಡಿಪಾದ ಸನ್ನಿಧಿ ಈ ದೇವಾಲಯದಲ್ಲಿದೆ.
ಚಿತ್ರಕೃಪೆ: Rajasekhar1961
ಅಷ್ಟಲಕ್ಷ್ಮಿಯರ ದೇವಾಲಯ :
ಧೈರ್ಯ ಲಕ್ಷ್ಮಿ : ನೀವು ಕೆಳಿರಬಹುದು "ಧೈರ್ಯಂ ಸರ್ವತ್ರ ಸಾಧನಂ" ಅಂದರೆ ಮನುಷ್ಯನಿಗೆ ಎಂತಹ ಕ್ಲಿಷ್ಟಕರ ಸಂದರ್ಭ ಎದುರಾದರೂ ಎಂದಿಗೂ ಧೈರ್ಯವನ್ನು ಮಾತ್ರ ಕಳೆದುಕೊಳ್ಳಬಾರದು. ಆ ಮೂಲಕ ಆತ ಎಲ್ಲವನ್ನು ಸಮರ್ಥವಾಗಿ ನಿಭಾಯಿಸಬಲ್ಲ. ಇಂತಹ ಧೈರ್ಯವನ್ನು ಕರುಣಿಸುವ ಧಿರ್ಯ ಲಕ್ಷ್ಮಿಯ ಸನ್ನಿಧಾನವು ಈ ದೇವಾಲಯದಲ್ಲಿದೆ.
ಚಿತ್ರಕೃಪೆ: Rajasekhar1961
ಅಷ್ಟಲಕ್ಷ್ಮಿಯರ ದೇವಾಲಯ :
ಗಜ ಲಕ್ಷ್ಮಿ : ಸಮುದ್ರ ಮಂಥನದ ಸಂದರ್ಭದಲ್ಲಿ ಸಂಪೂರ್ಣವಾಗಿ ಅರಳಿದ ಕಮಲದ ಮೇಲೆ ಕಮಲದ ಹೂವುಗಳನ್ನು ಹಾಗೂ ಅಕ್ಕಪಕ್ಕದಲ್ಲಿ ಎರಡು ಗಜಗಳು ಅಂದರೆ ಆನೆಗಳು ತಮ್ಮ ಸೊಂಡಿಲಿನಲ್ಲಿ ಹಿಡಿದಿರುವ ಪಾತ್ರೆಗಳಲ್ಲಿರುವ ಹಾಲಿನಿಂದ ಅಭಿಷೇಕ ಮಾಡುತ್ತಿರುವ ಸ್ಥಿತಿಯಲ್ಲಿ ಉದ್ಭವಗೊಂಡ ಲಕ್ಷ್ಮಿಯೆ ಗಜ ಲಕ್ಷ್ಮಿ.
ಚಿತ್ರಕೃಪೆ: Rajasekhar1961
ಅಷ್ಟಲಕ್ಷ್ಮಿಯರ ದೇವಾಲಯ :
ಸಂತಾನ ಲಕ್ಷ್ಮಿ : ಹೆಸರೆ ಸೂಚಿಸುವ ಹಾಗೆ ಮಕ್ಕಳಿಲ್ಲದ ದಮ್ಪತಿಗಳು ಈ ಲಕ್ಷ್ಮಿಯನ್ನು ಅತಿ ಭಕ್ತಿ ಹಾಗೂ ಶೃದ್ಧೆಗಳಿಂದ ಪೂಜಿಸುವುದರ ಮೂಲಕ ಸಂತಾನ ಫಲವನ್ನು ಪಡೆಯುತ್ತಾರೆ. ಹೀಗೆ ಸಂತಾನ ಫಲ ಕರುಣಿಸುವ ಈಕೆಯನ್ನು ಸಂತಾನ ಲಕ್ಷ್ಮಿ ಎಂದು ಕರೆಯುತ್ತಾರೆ. ಅಷ್ಟೈಶ್ವರ್ಯಗಳಲ್ಲಿ ಸಂತಾನವೂ ಸಹ ಒಂದಲ್ಲವೆ!
ಚಿತ್ರಕೃಪೆ: Rajasekhar1961
ಅಷ್ಟಲಕ್ಷ್ಮಿಯರ ದೇವಾಲಯ :
ವಿಜಯ ಲಕ್ಷ್ಮಿ : ಪ್ರತಿಯೊಬ್ಬನಿಗೂ ತಾನು ಮಾಡುವ ಕಾರ್ಯದಲ್ಲಿ ಸಫಲತೆ, ವಿಜಯ ದೊರಕಬೇಕೆಂಬ ಆಸೆ ಇದ್ದೆ ಇರುತ್ತದೆ. ನಿಮ್ಮ ಆ ಆಸೆಯು ಈಡೇರಬೇಕೆಂದರೆ ಲಕ್ಷ್ಮಿಯ ಅಷ್ಟ ರೂಪಗಳಲ್ಲೊಂದಾದ ವಿಜಯ ಲಕ್ಷ್ಮಿಯನ್ನು ಆರಾಧಿಸಬೇಕು. ಈ ದೇವಾಲಯದಲ್ಲಿ ವಿಜಯ ಲಕ್ಷ್ಮಿಯ ಸನ್ನಿಧಿಯು ಸಹ ಸಾಕಷ್ಟು ಗಮನ ಸೆಳೆಯುತ್ತದೆ.
ಚಿತ್ರಕೃಪೆ: Rajasekhar1961
ಅಷ್ಟಲಕ್ಷ್ಮಿಯರ ದೇವಾಲಯ :
ಧನ ಲಕ್ಷ್ಮಿ : ಧನ ಪ್ರಾಪ್ತಿಯಾಗುವಂತೆ, ಸಂಪತ್ತು ವೃದ್ದಿಯಾಗುವಂತೆ ಕರುಣಿಸುತ್ತಾಳೆ ಧನ ಲಕ್ಷ್ಮಿ. ಧನ ಲಕ್ಷ್ಮಿಗೆ ಮುಡಿಪಾದ ಸಾಕಷ್ಟು ದೇವಾಲಯಗಳು ಭಾರತದ ವಿವಿಧೆಡೆ ಸಾಮಾನ್ಯವಾಗಿ ಕಂಡು ಬಂದೆ ಬರುತ್ತವೆ.
ಚಿತ್ರಕೃಪೆ: Rajasekhar1961
ಅಷ್ಟಲಕ್ಷ್ಮಿಯರ ದೇವಾಲಯ :
ವಿದ್ಯಾ ಲಕ್ಷ್ಮಿ : ಸರಸ್ವತಿ ದೇವಿಯನ್ನು ನಾವು ವಿದ್ಯೆಯ ಅಧಿದೇವತೆಯನ್ನಾಗಿ ಆರಾಧಿಸುತ್ತಿವಾದರೂ ಲಕ್ಶ್ಮಿಯ ಒಂದು ರೂಪವಾದ ವಿದ್ಯಾ ಲಕ್ಷ್ಮಿಯೂ ಸಹ ಬೇಡಿ ಬರುವ ಭಕ್ತಾದಿಗಳಿಗೆ ವಿದ್ಯೆ-ಬುದ್ಧಿ ಪ್ರಾಪ್ತಿಯಾಗುವಂತೆ ಹರಸುತ್ತಾಳೆ. ಈ ರೀತಿಯಾಗಿ ಒಂದೆ ದೇವಾಲಯದಲ್ಲಿ ಅಷ್ಟ ಲಕ್ಷ್ಮಿಯರಿಗೆ ಮುಡಿಪಾದ ಎಂಟು ವಿವಿಧ ದೇಗುಲಗಳ ಇಲ್ಲಿ ಪಡೆಯಬಹುದಾಗಿದೆ.
ಚಿತ್ರಕೃಪೆ: Rajasekhar1961
ಅಷ್ಟಲಕ್ಷ್ಮಿಯರ ದೇವಾಲಯ :
ಬೆಸಂಟ್ ನಗರದಲ್ಲಿರುವ ಲಕ್ಷ್ಮಿ ದೇವಿಯ ಈ ದೇವಾಲಯವು ಪ್ರತಿ ದಿನ ಬೆಳಿಗ್ಗೆ 6.30 ರಿಂದ ಮಧ್ಯಾಹ್ನ 12 ಘಂಟೆಯವರೆಗೂ ಹಾಗೂ ಸಂಜೆ 4 ಘಂಟೆಯಿಂದ ರಾತ್ರಿ 9 ಘಂಟೆಯವರೆಗೂ ತೆರೆದಿರುತ್ತದೆ. ಶನಿವಾರ ಹಾಗೂ ಭಾನುವಾರಗಳಂದು ಮಧ್ಯಾಹ್ನದಲ್ಲಿ ತೆರೆದಿರುವ ಸಮಯ ಒಂದು ಘಂಟೆಯವರೆಗೂ ವಿಸ್ತಿರಿಸಿರುತ್ತದೆ. ದೇವಾಲಯದಲ್ಲಿ ನಿರ್ಮಿಸಲಾಗಿರುವ ಸಮುದ್ರ ಮಂಥನದ ಕಲಾಕೃತಿ.
ಚಿತ್ರಕೃಪೆ: Niranjan Ramesh
ಅಷ್ಟಲಕ್ಷ್ಮಿಯರ ದೇವಾಲಯ :
ದೇವಾಲಯದ ದರ್ಶನದ ನಂತರ ನಿಮಗೆ ಸಮಯ ಸಿಕ್ಕರೆ ಸುಂದರವಾದ ಎಲಿಯಟ್ ಕಡಲ ತೀರಕ್ಕೂ ಒಂದು ಸುಂದರ ಭೇಟಿ ನೀಡಬಹುದು. ಇದನ್ನು ಜನಪ್ರೀಯವಾಗಿ ಬೆಸಂಟ್ ನಗರ ಬೀಚ್ ಎಂದೆ ಕರೆಯುತ್ತಾರೆ. ದೇವಾಲಯಕ್ಕೆ ಬಹಳ ಹತ್ತಿರದಲ್ಲೆ ಈ ಕಡಲ ತೀರವಿದೆ.
ಚಿತ್ರಕೃಪೆ: KARTY JazZ
ಅಷ್ಟಲಕ್ಷ್ಮಿಯರ ದೇವಾಲಯ :
ಚೆನ್ನೈನ ಪ್ರಖ್ಯಾತ ಕಡಲ ತೀರವಾದ ಮರೀನಾ ಕಡಲ ತೀರದ ಕೊನೆಯ ಹಂತವನ್ನು ಸೂಚಿಸುವ ಈ ಕಡಲ ತೀರಕ್ಕೆ ಹಿಂದೆ ವಸಾಹತುಶಾಹಿ ಸಮಯದಲ್ಲಿ ಅಂದಿನ ಮದ್ರಾಸ್ ಗವರ್ನರ್ ಆಗಿದ್ದ ಎದ್ವರ್ಡ್ ಎಲಿಯಟ್ ಅವರ ಹೆಸರನ್ನಿಡಲಾಗಿದೆ.
ಚಿತ್ರಕೃಪೆ: lensbug.chandru
ಅಷ್ಟಲಕ್ಷ್ಮಿಯರ ದೇವಾಲಯ :
ಹಿಂದೊಮ್ಮೆ ಬ್ರಿಟೀಷರಿಗೆ ಮಾತ್ರ ಸೀಮಿತವಾದಂತಿದ್ದ ಈ ಕಡಲ ತೀರದಲ್ಲಿ ಇಂದು ಸಾಕಷ್ಟು ಹೋಟೆಲುಗಳು, ಉಪಹಾರಗೃಹಗಳಿರುವುದನ್ನು ಕಾಣಬಹುದು. ಸಂಜೆಯ ಸಮಯವನ್ನು ಹಾಯಾಗಿ ಕಳೆಯಲು ಆದರ್ಶಮಯವಾದ ಕಡಲ ಕಿನಾರೆ ಇದಾಗಿದೆ. ಕಡಲ ತೀರಕ್ಕೆ ಕರೆದೊಯ್ಯುವ ಬೆಸಂಟ್ ನಗರದ ರಸ್ತೆ ಮಾರ್ಗ.
ಚಿತ್ರಕೃಪೆ: Gowrishanker