ಬೃಂದಾವನದಲ್ಲಿ ನೆಲೆಸಿ ಇಂದಿಗೂ ಭಕ್ತರನ್ನು ಕಷ್ಟ-ಕಾರ್ಪಣ್ಯಗಳಿಂದ ಕಾಪಾಡುತ್ತ, ಹೊಸ ಜೀವನ ನೀಡಿ ಹರಸುತ್ತ ಭಕ್ತರ ಹೃದಯದಲ್ಲಿ ನಿರಂತರವಾಗಿ ನೆಲೆಯೂರಿರುವ ಗುರು ರಾಘವೇಂದ್ರರು ಬಹು ಜನರಿಗೆ ನೆಚ್ಚಿನ ಹಾಗೂ ಆರಾಧ್ಯ ದೈವ. ದ್ವೈತ ಪಂಥದ ಪರಿಪಾಲಕರಾದ ರಾಯರಿಗೆಂದೆ ಮುಡಿಪಾದ ರಾಯರ ಮಠಗಳನ್ನು, ದೇವಾಲಯಗಳನ್ನು ದೇಶದೆಲ್ಲೆಡೆ ಕಾಣಬಹುದು.
ಸಮಾನ್ಯವಾಗಿ ದಕ್ಷಿಣ ಭಾರತದಲ್ಲಿ ಗುರು ರಾಯರಿಗೆ ಮುಡಿಪಾದ ಅನೇಕ ಮಠಗಳನ್ನು ಕಾಣಬಹುದು. ಕಲಿಯುಗದಲ್ಲೂ ಸಹ ಗುರು ರಾಯರು ಸಾಕಷ್ಟು ಪವಾಡಗಳನ್ನು ಮಾಡಿದ್ದಾರೆ ಹಾಗೂ ಮಾಡುತ್ತಲೂ ಇದ್ದಾರೆ ಎಂಬ ನಂಬಿಕೆ ರಾಯರ ಭಕ್ತರಲ್ಲಿ ಅಚ್ಚುಳಿದಂತೆ ಮನೆ ಮಾಡಿದೆ. ಅದಕ್ಕೆ ಪೂರಕವೆಂಬಂತೆ ಎಷ್ಟೊ ಜನರು ತಮಗೆ ಒಳಿತಾದುದನ್ನೂ ಸಹ ಕಂಡಿದ್ದಾರೆಂದು ಹೇಳಲಾಗುತ್ತದೆ.
ರಾಯರ ನೆಚ್ಚಿನ ಪಂಚಮುಖಿ ಆಂಜನೇಯ
ಪ್ರಸ್ತುತ ಲೇಖನದಲ್ಲಿ ಗುರು ರಾಯರ ಪರಮ ಪವಿತ್ರ ಕ್ಷೇತ್ರವಾದ ಮಂತ್ರಾಲಯವನ್ನು ಹೊರತು ಪಡಿಸಿ ಉಳಿದೆಡೆ ಇರುವ ಮೂರು ಆಯ್ದ ಹಾಗೂ ವಿಶಿಷ್ಟವೆಂದೆ ಹೇಳಬಹುದಾದ ರಾಯರ ಮಠಗಳ ಕುರಿತು ತಿಳಿಸಲಾಗಿದೆ. ಇಲ್ಲಿನ ಬೃಂದಾವನಗಳಲ್ಲಿ ರಾಯರು ಜಾಗೃತರಾಗಿದ್ದು ಬೇಡಿ ಬರುವ ಸಕಲ ಭಕ್ತರನ್ನು ತುಂಬು ಮನದಿಂದ ಹರಸುತ್ತಾರೆಂದು ನಂಬಲಾಗುತ್ತದೆ.
ಆಂಧ್ರಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯಲ್ಲಿರುವ ಮಂತ್ರಾಲಯಂ ರಾಯರು ನೆಲೆಸಿರುವ ಪರಮ ಪಾವನ ಕ್ಷೇತ್ರವಾಗಿದೆ. ಅವರಿ ತಮ್ಮ ಭಕ್ತರಿಗೆ ನೀಡಿರುವ ಮಾತಿನಂತೆ ಇಂದಿಗೂ ಸಮಾಧಿ ಸ್ಥಿತಿಯಲ್ಲಿ ಜೀವಂತವಾಗಿದ್ದು ಅವರನ್ನು ನಂಬಿ ಬರುವ ಸಕಲ ಭಕ್ತರ ಅಡೆ ತಡೆಗಳನ್ನು ದೂರ ಮಾಡುತ್ತಿದ್ದಾರೆನ್ನಲಾಗಿದೆ. ಹೀಗಾಗಿ ಅವರು ನೆಲೆಸಿರುವ ಬೃಂದಾವನು ಅಪಾರ ಮಹತ್ವವುಳ್ಳ ಸಾನಿಧ್ಯವಾಗಿದೆ.
ಮಂತ್ರಾಲಯದ ಹೊರತಾಗಿಯೂ ದಕ್ಷಿಣ ಭಾರತದಲ್ಲಿ ಕೆಲವು ಅನನ್ಯವಾದ ಅಥವಾ ವಿಶಿಷ್ಟವಾದ ರಾಘವೇಂದ್ರರ ಸನ್ನಿಧಾನಗಳನ್ನು ಕಾಣಬಹುದಾಗಿದೆ. ಈ ಕ್ಷೇತ್ರಗಳೂ ಸಹ ಸಾಕಷ್ಟು ಪಾವಿತ್ರ್ಯತೆಯುಳ್ಳ ಗುರು ರಾಯರ ಸನ್ನಿಧಾನಗಳಾಗಿವೆ ಎಂದು ಹೇಳಲಾಗುತ್ತದೆ ಹಾಗೂ ರಾಜ್ಯದ ಮೂಲೆ ಮೂಲೆಗಳಿಂದ ರಾಯರ ಅಪ್ಪಟ ಭಕ್ತರು ಈ ಸನ್ನಿಧಾನಗಳಿಗೆ ಭೇಟಿ ನೀಡುತ್ತಲೆ ಇರುತ್ತಾರೆ.
ದ್ವಿತೀಯ ಮಂತ್ರಾಲಯ
ಮೊದಲನೇಯದಾಗಿ ದ್ವಿತೀಯ ಮಂತ್ರಾಲಯ. ಹೌದು ಇದನ್ನು ಎರಡನೇಯ ಮಂತ್ರಾಲಯವೆಂದೆ ಭಕ್ತಾದಿಗಳಿಂದ ಕರೆಯಲಾಗುತ್ತದೆ. ಸ್ವತಃ ಗುರು ರಾಯರೆ ಇಲ್ಲಿ ಆಗಮಿಸಿ ಬೃಂದಾವನ ಪ್ರತಿಷ್ಠಾಪಿಸಿದರೆಂಬ ಪ್ರತೀತಿಯಿದೆ. ಒಂದೊಮ್ಮೆ ಭಕ್ತರು ಮಂತ್ರಾಲಯದ ಬೃಂದಾವನದಿಂದ ಮಣ್ಣನ್ನು ತಂದು ಇಲ್ಲಿ ರಾಯರ ಮಠ ನಿರ್ಮಿಸುತ್ತಿದ್ದಾಗ ಸಂತ ವೇಷಧಾರಿಯೊಬ್ಬರು ಒಳ ಪ್ರವೇಶಿಸಿದರೆ ಹೊರತು ಎಂದಿಗೂ ಹೊರಬರಲಿಲ್ಲ.
ಸಾಂದರ್ಭಿಕ ಚಿತ್ರ, ಚಿತ್ರಕೃಪೆ: Mohan Krishnan
ನಂತರ ತಿಳಿದ ವಿಷಯವೆಂದರೆ ಅವರು ಸ್ವತಃ ರಾಯರು ಎಂದೆ. ಇಂದಿಗೂ ಅವರು ತಂದಿದ್ದ ಒಂದು ಪಾತ್ರೆ ಹಾಗೂ ಹನುಮನ ವಿಗ್ರಹವನ್ನು ಸಂರಕ್ಷಿಸಿಡಲಾಗಿದೆ. ಮತ್ತೊಂದು ವಿಶೇಷವೆಂದರೆ ಮಂತ್ರಾದಯದ ರೀತಿಯಲ್ಲೆ ತುಂಗಗಭದ್ರಾ ನದಿ ತಟದ ಮೇಲೆ ಗುರುರಾಯರ ಈ ಮಠವಿದೆ. ಇದು ಇರುವುದು ಕರ್ನಾಟಕದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಎಂಬಲ್ಲಿ. ಶಿವಮೊಗ್ಗ ಇದಕ್ಕೆ ಹತ್ತಿರದಲ್ಲಿರುವ ಪಟ್ಟಣವಾಗಿದೆ (40 ಕಿ.ಮೀ).
ನೆಲದಡಿಯ ರಾಘವೇಂದ್ರ ಸನ್ನಿಧಾನ
ಇದೂ ಸಹ ಒಂದು ವಿಶಿಷ್ಟವಾದ ಗುರು ರಾಯರ ಸನ್ನಿಧಿಯಾಗಿದೆ. ರಘುಪ್ರೇಮ ತೀರ್ಥರು ಈ ರಾಯರ ಮಠದ ಹಿಂದಿರುವ ಪ್ರಮುಖ ನಿರ್ಮಾತೃ. ಸ್ವತಃ ಅವರೆ ಇಲ್ಲಿ ಸಮಾಧಿ ತೆಗೆದುಕೊಳ್ಳಲು ಬಯಸಿದ್ದರು ಆದರೆ ರಾಯರು ಕನಸಿನಲ್ಲಿ ಬಂದು ಆ ರೀತಿ ಮಾಡದಿರಲು ಸೂಚಿಸಿದರೆನ್ನಲಾಗಿದೆ. ಹೀಗಾಗಿ ಅವರು ಮಧ್ವಾಚಾರ್ಯರ ತಂತ್ರಸಾರ ಸಂಗ್ರಹ ಗ್ರಂಥದ ಪ್ರಕಾರವಾಗಿ ರಾಯರ ಮಠದ ವಿನ್ಯಾಸ ಮಾಡಿ ನಿರ್ಮಿಸಿದರೆನ್ನಲಾಗಿದೆ.
ಸಾಂದರ್ಭಿಕ ಚಿತ್ರ, ಚಿತ್ರಕೃಪೆ: Dr Murali Mohan Gurram
ಇಲ್ಲಿ ಬೃಂದಾವನವು ನೆಲದಡಿಯಲ್ಲಿ ಸ್ಥಿತವಿದ್ದು 23 ಮೆಟ್ಟಿಲುಗಳನ್ನು ಇಳಿಯುವುದರ ಮೂಲಕ ತಲುಪಬಹುದಾಗಿದೆ. ದಕ್ಷಿಣ ಭಾರತದಲ್ಲಿರುವ ರಾಯರ ವಿಶಿಷ್ಟ ಸನ್ನಿಧಾನಗಳ ಪೈಕಿ ಒಂದಾಗಿರುವ ಈ ರಾಯರ ಮಠವು ಕರ್ನಾಟಕದ ಐತಿಹಾಸಿಕ ಜಿಲ್ಲೆಯಾದ ವಿಜಯಪುರ (ಹಿಂದಿನ ಬಿಜಾಪುರ) ಪಟ್ಟಣದ ಬಬಲೇಶ್ವರ ರಸ್ತೆಯಲ್ಲಿರುವ ಜೋರಾಪುರ ಪೇಟೆಯಲ್ಲಿ ಸ್ಥಿತವಿದೆ.
ದಕ್ಷಿಣ ಮಂತ್ರಾಲಯ
ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿರುವ ಪಪ್ಪಾರಪಟ್ಟಿಯಲ್ಲಿರುವ ಗುರು ರಾಘವೇಂದ್ರ ಸ್ವಾಮಿಯ ಮಠವನ್ನೆ ಇಂದು ದಕ್ಷಿಣ ಮಂತ್ರಾಲಯ ಎಂದು ಕರೆಯಲಾಗುತ್ತದೆ. ಇಲ್ಲಿನ ಸ್ಥಳ ಪುರಾಣದ ಪ್ರಕಾರ, ಹಿಂದೆ ದಂಪತಿಗಳಿಬ್ಬರು ಸತತವಾಗಿ ಮಕ್ಕಳುಗಳನ್ನು ಒಬ್ಬರಾದ ಮೇಲೊಬ್ಬರಂತೆ ಕಳೆದುಕೊಂಡು ಅಪಾರವಾದ ದುಖದಲ್ಲಿದ್ದರು. ರಾಯರ ಭಕ್ತರಾಗಿದ್ದ ಇವರಿಗೆ ಮತ್ತೆ ಒಂದು ಗಂಡು ಸಂತಾನವಾದರೂ, ಅದೂ ಸಹ ಕಾಯಿಲೆಯಿಂದ ಪ್ರಾಣಾಪಯದಲ್ಲಿತ್ತು. ಇದರಿಂದ ದುಖಿತರಾಗಿದ್ದ ಅಂಪತಿಗಳು ಮಗು ಸಮೇತರಾಗಿ ಮಂತ್ರಾಲಯಕ್ಕೆ ತೆರಳಿದ್ದರು.
ಸಾಂದರ್ಭಿಕ ಚಿತ್ರ, ಚಿತ್ರಕೃಪೆ: Harsha K R
ಹೀಗಿರುವಾಗ ಪಪ್ಪಾರಪಟ್ಟಿಯಲ್ಲಿದ್ದ ಗಂಡನ ಸಹೋದರನಿಗೆ ರಾತ್ರಿಯಲ್ಲಿ ಕನಸೊಂದು ಬಿದ್ದು ರಾಯರು ತಾವು ಅಲ್ಲಿಗೆ ಆಗಮಿಸುವುದಾಗಿ ಹೇಳಿದರಂತೆ. ಇದೆ ಸಂದರ್ಭದಲ್ಲಿ ಇತ್ತ ಹೆಂಡತಿಗೂ ಸಹ ಕನಸಿನಲ್ಲಿ ರಾಯರು ಮಗುವಿಗೆ ಆಶೀರ್ವದಿಸುತ್ತಿರುವ ರೀತಿಯಲ್ಲಿ ಕನಸು ಬಿದ್ದಿತ್ತು. ಮರುದಿನ ಪವಾಡವೆಂಬಂತೆ ಆ ಮಗು ಸಮ್ಪೂರ್ಣವಾಗಿ ಗುಣಮುಖವಾಗಿತ್ತು. ಇದರಿಂದ ಸಂತಸ ದಂಪತಿಗಳು ಹಾಗೂ ಗಂಡನ ಸಹೋದರ ಒಟ್ಟಾಗಿ ಇಲ್ಲಿ ರಾಯರ ಮಠವನ್ನು ನಿರ್ಮಿಸಿದರು. ಈ ರೀತಿಯಾಗಿ ರಾಯರು ನೆಲೆಸಿ ಹರಸುತ್ತಿರುವ ದಕ್ಷಿಣ ಮಂತ್ರಾಲಯವಾಗಿ ಪಪ್ಪಾರಪಟ್ಟಿ ಹೆಸರುವಾಸಿಯಾಗಿದೆ.
ಗುರು ರಾಯರು ನೆಲೆಸಿರುವ ಮಂತ್ರಾಲಯಕ್ಕೊಂದು ಭೇಟಿ