ನೀಲಕಂಠ, ಶಂಕರ, ಪರಮಾತ್ಮ, ಕರುಣಾಸಾಗರ, ಭೋಲೆನಾಥನಾಗಿ ಸರ್ವರ ಮನದಲ್ಲೂ ನೆಲೆಸಿರುವ ಶಿವ ಅತಿ ಭಕ್ತಿ ಹಾಗು ಶೃದ್ಧೆಗಳಿಂದ ಪೂಜಿಸಲ್ಪಡುವ ಮಹಾದೇವ. ಶಿವನಿಗೆ ಮುಡಿಪಾದ ಅದೇಷ್ಟೊ ಅಸಂಖ್ಯಾತ ದೇವಾಲಯಗಳು ನಮ್ಮ ಭಾರತ ದೇಶದಲ್ಲಿವೆ. ಇದೆ ರೀತಿಯಾಗಿ ಶಿವನ 12 ಜ್ಯೋತಿರ್ಲಿಂಗಗಳು ಹಿಂದುಗಳ ಪಾಲಿಗೆ ಅತ್ಯಂತ ಪವಿತ್ರವಾಗಿದ್ದು ಈ ಹನ್ನೆರಡು ಜ್ಯೋತಿರ್ಲಿಂಗಗಳನ್ನು ದರ್ಶಿಸಿದರೆ ಪರಮೇಶ್ವರನ ಕೃಪಾ ಕಟಾಕ್ಷ ದೊರೆತು ಮೋಕ್ಷ ಲಭಿಸುವುದೆಂದು ನಂಬಲಾಗಿದೆ. ಸಮಯ ಸಿಕ್ಕಾಗ ಖಂಡಿತವಾಗಿಯೂ ಈ ಸ್ಥಳಗಳಿಗೊಮ್ಮೆ ಪ್ರವಾಸ ಮಾಡಿ ಶಿವನ ಕೃಪೆಗೆ ಪಾತ್ರರಾಗಿ.
ಜ್ಯೋತಿರ್ಲಿಂಗಗಳ ಹಿಂದಿನ ರೋಚಕ ಕಥೆ:
ಶಿವ ಮಹಾಪುರಾಣದ ಪ್ರಕಾರ, ಒಮ್ಮೆ ವಿಷ್ಣು ಹಾಗು ಬ್ರಹ್ಮರ ಮಧ್ಯೆ ತಮ್ಮಲ್ಲಿ ಯಾರು ಶ್ರೇಷ್ಠರೆಂಬುದರ ಕುರಿತು ಪೈಪೋಟಿ ಏರ್ಪಟ್ಟಿತು. ಈ ಪೈಪೋಟಿ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಮಹಾದೇವನು ಮಧ್ಯೆ ಪ್ರವೇಶಿಸಿ ಮೂರು ಲೋಕಗಳನ್ನು ಸೀಳಿದ ಪ್ರಖರವಾದ ಜ್ಯೋತಿಯ ರೇಖೆಯೊಂದನ್ನು ಸೃಷ್ಟಿಸಿ ಅವುಗಳ ತುದಿಗಳನ್ನು ಕಂಡುಹಿಡಿಯಿರಿ ಎಂದು ಇಬ್ಬರಿಗೂ ಆದೇಶಿಸಿದನು. ಇದರಂತೆ ಬ್ರಹ್ಮನು ಮೇಲ್ಮುಖವಾಗಿಯೂ, ವಿಷ್ಣು ರೇಖೆಯ ಕೆಳಮುಖವಾಗಿಯೂ ತುದಿಯನ್ನು ಮುಟ್ಟಲು ಕ್ರಮಿಸ ತೊಡಗಿದರು. ಎಷ್ಟೆ ಕ್ರಮಿಸಿದರೂ ಅವರಿಗೆ ತುದಿಯನ್ನು ಮುಟ್ಟಲಾಗಲಿಲ್ಲ. ಕೊನೆಗೆ ವಿಷ್ಣುವಿಗೆ ತನಗುಂಟಾದ ಅಹಂಕಾರದಿಂದ ಮಾಡಿದ ತಪ್ಪಿನ ಅರಿವಾಗಿ ಪಶ್ಚಾತಾಪ ಪಟ್ಟನು.
ಆದರೆ ಇತ್ತ ಬ್ರಹ್ಮನು ಚಲಿಸುತ್ತಿರುವಾಗ ಮೇಲಿನಿಂದ ಕೇದಿಗೆಯ ಹೂವೊಂದು ಬಿಳುವುದನ್ನು ಗಮನಿಸಿ ಅದನ್ನು ಕುರಿತು ವಿಚಾರಿಸಿದನು. ಅದಕ್ಕೆ ಆ ಹೂ ತುದಿಯಿಂದ ಬಿದ್ದಿರುವುದಾಗಿ ಹೇಳಿತು. ಇದರಿಂದ ಸಂತಸಗೊಂಡ ಬ್ರಹ್ಮನು ತಾನು ತುದಿಯನ್ನು ತಲುಪಿದೆನೆಂದು ಅದರ ಕುರುಹಾಗಿ ಈ ಕೇದಿಗೆಯ ಹೂವನ್ನು ತಂದಿರುವೆನೆಂದು ಸುಳ್ಳು ಹೇಳಿದನು. ಇದರಿಂದ ಕೋಪಗೊಂಡ ಶಿವನು ಬ್ರಹ್ಮನನ್ನು ಕುರಿತು ಈ ಲೋಕದಲ್ಲಿ ನಿನ್ನ ಪೂಜೆಯನ್ನು ಯಾರು ಮಾಡಬಾರದು ಎಂತಲೂ, ಕೇದಿಗೆಯನ್ನು ಕುರಿತು ನೀನು ಯಾವ ದೇವರಿಗೂ ಸಲ್ಲದೆಂತಲೂ ಶಪಿಸಿದನು. ಈ ಪವಿತ್ರ ಪ್ರಕಾಶ ಜ್ಯೋತಿಯ ರೇಖೆಯನ್ನೆ ಇಂದು ಜ್ಯೋತಿರ್ಲಿಂಗಗಳಾಗಿ ಪೂಜಿಸಲಾಗುತ್ತದೆ.
ಮೂಲತಃ 64 ಜ್ಯೋತಿರ್ಲಿಂಗಗಳಿವೆಯೆಂದು ನಂಬಲಾಗಿದ್ದು ಅವುಗಳಲ್ಲಿ 12 ಜ್ಯೋತಿರ್ಲಿಂಗಗಳು ಅತಿ ಪವಿತ್ರವಾದವುಗಳೆಂದು ಪರಿಗಣಿಸಲಾಗಿದೆ. ಈ ಲೇಖನದ ಮೂಲಕ ಆ ಹನ್ನೇರಡು ಜ್ಯೋತಿರ್ಲಿಂಗಗಳು ಯಾವುವು ಹಾಗು ಅವು ಎಲ್ಲೆಲ್ಲಿವೆ ಎಂಬುದರ ಕುರಿತು ತಿಳಿಯಿರಿ.
ಸೋಮನಾಥ:
ಗುಜರಾತ್ ರಾಜ್ಯದ ಸೌರಾಷ್ಟ್ರ ಭಾಗದ ವೇರಾವಳ್ ಪ್ರದೇಶದ ಪ್ರಭಾಸ ಕ್ಷೇತ್ರದಲ್ಲಿ ಸೋಮನಾಥ ಜ್ಯೋತಿರ್ಲಿಂಗವಿದೆ. ಇದನ್ನು ಅನಂತಮಯ ದೇಗುಲವೆಂದು ಬಣ್ಣಿಸಲಾಗಿದೆ.
ಚಿತ್ರಕೃಪೆ: BeautifulEyes
ಮಹಾಕಾಲೇಶ್ವರ:
ಮಧ್ಯ ಪ್ರದೇಶದ ಪುರಾತನ ಹಾಗು ಪವಿತ್ರ ನಗರವಾದ ಉಜ್ಜಯಿನಿಯಲ್ಲಿ ಮಹಾಕಾಲೇಶ್ವರ ಜ್ಯೋತಿರ್ಲಿಂಗವಿದೆ. ಸ್ವಯಂಭೂ ಲಿಂಗ ರೂಪದ ಮಹಾಕಾಲೇಶ್ವರ ದೇವಸ್ಥಾನವು ರುದ್ರ ಸಾಗರ ಕೆರೆಯ ತಟದಲ್ಲಿದೆ.
ಓಂಕಾರೇಶ್ವರ:
ಓಂಕಾರೇಶ್ವರ ಶಿವನ ದೇವಸ್ಥಾನವು ಮಧ್ಯ ಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಹರಿದಿರುವ ನರ್ಮದಾ ನದಿಯ ಮೇಲಿರುವ ಶಿವಪುರಿ/ಮಂಡತ ಎಂಬ ದ್ವೀಪದಲ್ಲಿ ಸ್ಥಿತವಿದೆ. ಈ ದ್ವೀಪವು ಹಿಂದುಗಳ ಪವಿತ್ರ ಸಂಕೇತವಾದ ॐ ಆಕಾರದಲ್ಲಿರುವುದರಿಂದ ಓಂಕಾರೇಶ್ವರ ಎಂಬ ಹೆಸರು ಬಂದಿದೆ. ಈ ದ್ವೀಪದಲ್ಲಿ ಎರಡು ದೇವಸ್ಥಾನಗಳಿದ್ದು ಅವುಗಳು ಪ್ರಣವನಾದ ಓಂಕಾರೇಶ್ವರ ದೇವಸ್ಥಾನ ಹಾಗು ಚಿರಾಯು/ಅಮರನಾದ ಅಮರೇಶ್ವರ ದೇವಸ್ಥಾನ. ದಂತಕಥೆಯ ಪ್ರಕಾರ, ಶಿವ ಲಿಂಗವನ್ನು ಎರಡು ಭಾಗಗಳನ್ನಾಗಿ ಮಾಡಿ ಒಂದು ಓಂಕಾರೇಶ್ವರವಾಗಿಯೂ ಇನ್ನೊಂದು ಮಾಮಲೇಶ್ವರ ಅಥವಾ ಅಮರೇಶ್ವರವಾಗಿಯೂ ಪ್ರಸಿದ್ಧವಾಗಿವೆ.
ಚಿತ್ರಕೃಪೆ: ShivShankar.in
ಕೇದಾರನಾಥ:
ಉತ್ತರಾಖಂಡ್ ರಾಜ್ಯದ ಹಿಮಾಲಯ ಶ್ರೇಣಿಯ ಗಡ್ವಾಲ್ ಪ್ರದೇಶದ ಮಂದಾಕಿನಿ ನದಿ ಬಳಿಯಿರುವ ಕೇದಾರನಾಥ ಒಂದು ಪ್ರಸಿದ್ಧವಾದ ಹಿಂದು ಧಾರ್ಮಿಕ ಕೇಂದ್ರವಾಗಿದೆ. ಪ್ರದೇಶದ ವಾತಾವರಣದಲ್ಲಿ ಏರು ಪೇರು ಹೆಚ್ಚಾಗುವುದರಿಂದ ಈ ಜ್ಯೋತಿರ್ಲಿಂಗವು ವರ್ಷದ ಏಪ್ರಿಲ್ ಕೊನೆಯಿಂದ ನವಂಬರ್ ತಿಂಗಳಿನವರೆಗೆ ಮಾತ್ರ ತೆರೆದಿರುತ್ತದೆ.
ಚಿತ್ರಕೃಪೆ: Shaq774
ಭೀಮಾಶಂಕರ:
ಜ್ಯೋತಿರ್ಲಿಂಗ ತಾಣವಾದ ಭೀಮಾಶಂಕರ ದೇವಸ್ಥಾನವು ಮಹಾರಾಷ್ಟ್ರ ರಾಜ್ಯದ ಪುಣೆ ಬಳಿಯಿರುವ ಖೇದ್ ತಾಲೂಕಿನಲ್ಲಿದೆ. ಭೀಮಾ ನದಿ ತಟದಲ್ಲಿ ಶಿವನು ಭೀಮಾಶಂಕರನಾಗಿ ನೆಲೆಸಿ ಭಕ್ತರನ್ನು ಅಶಿರ್ವದಿಸುತ್ತಿದ್ದಾನೆ.
ಚಿತ್ರಕೃಪೆ: ସୁରଥ କୁମାର ପାଢ଼ୀ
ಕಾಶಿ ವಿಶ್ವನಾಥ:
ಉತ್ತರ ಪ್ರದೇಶದ ವಾರಣಾಸಿ ಅಥವಾ ಕಾಶಿಯಲ್ಲಿ ಶಿವನು ವಿಶ್ವನಾಥನಾಗಿ ಭಕ್ತರನ್ನು ಹರಸುತ್ತಿದ್ದಾನೆ. ಇದೊಂದು ಬಹು ಪ್ರಖ್ಯಾತ ಹಿಂದು ಧಾರ್ಮಿಕ ಯಾತ್ರಾ ಕೇಂದ್ರವಾಗಿದೆ.
ಚಿತ್ರಕೃಪೆ: Wedstock 2011
ತ್ರಯಂಬಕೇಶ್ವರ:
ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ತ್ರಯಂಬಕ ಪಟ್ಟಣದಲ್ಲಿರುವ ತ್ರಯಂಬಕೇಶ್ವರ ದೇವಸ್ಥಾನವು ಪುರಾತನ ಪ್ರಸಿದ್ಧ ಜ್ಯೋತಿರ್ಲಿಂಗ ದೇವಾಲಯವಾಗಿದೆ. ನಾಶಿಕ್ ಪಟ್ಟಣದಿಂದ 28 ಕಿ.ಮೀ ದೂರದಲ್ಲಿರುವ ತ್ರಯಂಬಕೇಶ್ವರವು ಪೆನಿನ್ಸುಲಾ ಭಾರತದ ಅತಿ ಉದ್ದನೆಯ ನದಿಯಾದ ಗೋದಾವರಿ ನದಿ ಮೂಲದ ಸಮೀಪ ಸ್ಥಿತವಿದೆ.
ಚಿತ್ರಕೃಪೆ: Niraj Suryawanshi
ವೈದ್ಯನಾಥ:
ಇದರ ನಿಖರವಾದ ಸ್ಥಳದ ಕುರಿತು ಇನ್ನೂ ವಿವಾದವಿದ್ದರೂ ಜಾರ್ಖಂಡ್ ರಾಜ್ಯದ ದೇವ್ಗಡ್ ನಲ್ಲಿರುವ ವೈದ್ಯನಾಥ ಜ್ಯೋತಿರ್ಲಿಂಗವನ್ನು 12 ಜ್ಯೋತಿರ್ಲಿಂಗಗಳ ಪೈಕಿ ಒಂದನ್ನಾಗಿ ಪರಿಗಣಿಸಲಾಗಿದೆ.
ನಾಗೇಶ್ವರ:
ಉತ್ತರಾಖಂಡ್ ರಾಜ್ಯದ ಜಾಗೇಶ್ವರದಲ್ಲಿರುವ ನಾಗೇಶ್ವರ ಜ್ಯೋತಿರ್ಲಿಂಗ ತಾಣವು ಬಹು ಪ್ರಖ್ಯಾತವಾದ ಜ್ಯೋತಿರ್ಲಿಂಗ ತಾಣವಾಗಿದೆ. ಈ ಜ್ಯೋತಿರ್ಲಿಂಗವನ್ನು ಭೂಮಿಯ ಮೊದಲ ಜ್ಯೋತಿರ್ಲಿಂಗವೆಂದು ಪರಿಗಣಿಸಲಾಗಿದೆ.
ರಾಮೇಶ್ವರ:
ತಮಿಳುನಾಡಿನ ರಾಮೇಶ್ವರಂ ನಲ್ಲಿರುವ ರಾಮೇಶ್ವರ ಜ್ಯೋತಿರ್ಲಿಂಗ ದೇವಸ್ಥಾನವು ದಕ್ಷಿಣದ ಪ್ರಮುಖ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದೆ.
ಚಿತ್ರಕೃಪೆ: Jyothis
ಘುಶ್ಮೇಶ್ವರ:
ರಾಜಸ್ಥಾನದ ಜೈಪುರ್ ನಗರದಿಂದ 100 ಕಿ.ಮೀ ದೂರವಿರುವ ಶಿವಾರ್ ಎಂಬಲ್ಲಿದೆ ಈ ಜ್ಯೋತಿರ್ಲಿಂಗ ದೇವಸ್ಥಾನ. ಇದನ್ನು ಕೊನೆಯ ಅಂದರೆ ಹನ್ನೆರಡನೆಯ ಜ್ಯೋತಿರ್ಲಿಂಗವೆಂದು ಪರಿಗಣಿಸಲಾಗಿದೆ.
ಚಿತ್ರಕೃಪೆ: Ghushmeshwar jyotirlinga
ಮಲ್ಲಿಕಾರ್ಜುನ:
ಆಂಧ್ರದ ಕರ್ನೂಲ್ ಜಿಲ್ಲೆಯ ಶ್ರೀಶೈಲಂ ನಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನವು ಪವಿತ್ರ 12 ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿದೆ. ಕೃಷ್ಣಾ ನದಿ ತಟದಲ್ಲಿ ನೆಲೆಸಿರುವ ಭ್ರಮರಾಂಬಾ ಮಲ್ಲಿಕಾರ್ಜುನ ದೇವಸ್ಥಾನವು ಪ್ರಖ್ಯಾತವಾದ ಧಾರ್ಮಿಕ ಯಾತ್ರಾ ಕೇಂದ್ರವಾಗಿದೆ.