ಸೋಮನಾಥ ದೇವಾಲಯವು "ಜ್ಯೋತಿರ್ಲಿಂಗ ಗುಡಿ" ಗೆ ಪ್ರಸಿದ್ಧವಾಗಿದ್ದು, ಸಮಸ್ತ ಭಾರತದ ಹಿಂದೂಗಳಿಂದ ಪೂಜಿಸಲ್ಪಡುತ್ತದೆ.
ದೇವಸ್ಥಾನದ ಹಿನ್ನೆಲೆ
ದಕ್ಷ ಪ್ರಜಾಪತಿಯ ಶಾಪದ ಪರಿಣಾಮವಾಗಿ, ಕಳೆದುಕೊಂಡಿದ್ದ ತನ್ನ ತೇಜಸ್ಸನ್ನು ಮರಳಿ ಪಡೆಯುವುದಕ್ಕೋಸ್ಕರ, ಚಂದ್ರ ದೇವನಾದ "ಸೋಮ" ನು ದೇವಸ್ಥಾನದ ಪ್ರಧಾನ ಭಾಗವನ್ನು ಚಿನ್ನದಿಂದ ಕಟ್ಟಿಸಿದನು ಎಂದು ನಂಬಲಾಗಿದೆ. ತದನಂತರ ಸೂರ್ಯ ದೇವನಾದ "ರವಿ" ಯು ಬೆಳ್ಳಿಯಿಂದಲೂ ತರುವಾಯ ಶ್ರೀ ಕೃಷ್ಣನು ಮರದಿಂದಲೂ ಇದನ್ನು ಕಟ್ಟಿದನು.
ಹನ್ನೊಂದನೆಯ ಶತಮಾನದಲ್ಲಿ, ಸೋಲಂಕಿ ರಜಪೂತರು ಚಾಲುಕ್ಯ ಶೈಲಿಯಲ್ಲಿ, ಶಿಲೆಯಿಂದ ಒಂದು ಹೊಸ ದೇವಸ್ಥಾನವನ್ನು ಕಟ್ಟಿದರು ಮತ್ತು ಇದರ ಶಿಖರವು 50 ಮೀ ನಷ್ಟು ಎತ್ತರದಲ್ಲಿತ್ತು. ದೇವಸ್ಥಾನದ ಎತ್ತರವು ಅತ್ಯುನ್ನತವಾಗಿ ಮೈನವಿರೇಳಿಸುವಂತಿದ್ದು, ತನ್ನ ಗೋಡೆಗಳ ಮೇಲೆ ಅನೇಕ ಸವಿಸ್ತಾರವಾದ ಕೆತ್ತನೆಯ ಕೆಲಸಗಳನ್ನು ಹೊಂದಿದೆ. ನಂದಿಯ ವಿಗ್ರಹವೊಂದು ಇಲ್ಲಿದ್ದು, ದೇವಸ್ಥಾನದ ಕೇಂದ್ರ ಭಾಗದಲ್ಲಿ, ಭಾರತದ 12 ಜ್ಯೋತಿರ್ಲಿಂಗಗಳ ಪೈಕಿ ಒಂದಾದ ಶಿವಲಿಂಗವು ಪ್ರತಿಷ್ಟಾಪಿಸಲ್ಪಟ್ಟಿದೆ.
ದೇವಸ್ಥಾನದ ಮುಖ್ಯ ಭಾಗದೆದುರುಗಡೆ, ವಿಶಾಲವಾದ ಪ್ರಾಂಗಣವಿದ್ದು, ದೇವಸ್ಥಾನದ ಗೋಪುರಗಳು ಪಿರಮಿಡ್ ಗಳಂತಹ ವಿನ್ಯಾಸವನ್ನು ಹೊಂದಿವೆ. ಅವಜ್ಞೆಯ ಕಾರಣದಿಂದಾಗಿ, ಇವು ದುರಸ್ತಿ ಕಾಣದ ಸ್ಥಿತಿಯಲ್ಲಿದ್ದವು. ಆದರೆ, 1951 ರಲ್ಲಿ ಸರದಾರ ಪಟೇಲರು ಹಳೆಯ ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಮುಂದಡಿಯಿಟ್ಟರು ಮತ್ತು ಆ ಬಳಿಕವೇ, ಈಗಿರುವ ದೇವಸ್ಥಾನವು ಕಟ್ಟಲ್ಪಟ್ಟಿತು. ಸೋಮನಾಥ ದೇವಾಲಯವು 6 ಬಾರಿ ದಾಳಿಗಳಿಗೊಳಗಾಯಿತು ಮತ್ತು ಈಗಿರುವ ದೇವಸ್ಥಾನವು ಮೂಲ ದೇವಸ್ಥಾನದ 7 ನೆಯ ಪುನರ್ನಿರ್ಮಾಣವಾಗಿದೆ.
ಭೌಗೋಳೀಕತೆ
ಸೋಮನಾಥವು ಕರಾವಳಿ ತೀರದ ಒಂದು ಪಟ್ಟಣದ ನಗರವಾಗಿದ್ದು, ಇದು ನೀರಿನಲ್ಲಿ ಚಾಚಿಕೊಂಡಿರುವ ಸೌರಾಷ್ಟ್ರದ ಭೂಭಾಗದ ತುದಿಯಲ್ಲಿದೆ. ಇದು ತನ್ನ ಒಂದು ಪಾರ್ಶ್ವದಲ್ಲಿ ಅರಬ್ಬೀ ಸಮುದ್ರವನ್ನು ಹೊಂದಿದೆ. ಅಹಮದಾಬಾದ್ ನಿಂದ 385 ಕಿ. ಮೀ. ದೂರದಲ್ಲಿದೆ.
ಸಂಸ್ಕೃತಿ
ಸೋಮನಾಥವು ಭಾರತದ ಪೌರಾಣಿಕ ಮತ್ತು ಧಾರ್ಮಿಕ ಪರಂಪರೆಯನ್ನು ಕಾಪಿಟ್ಟುಕೊಂಡಿದೆ. ಇಲ್ಲಿನ ಜನರು ಅತ್ಯಂತ ಧಾರ್ಮಿಕ ಪ್ರವೃತ್ತಿ ಉಳ್ಳವರಾಗಿದ್ದು, ಎಲ್ಲಾ ಸಂಪ್ರದಾಯಗಳನ್ನೂ ಕೂಡ ನಂಬಿಕೆ, ವಿಶ್ವಾಸಗಳಿಂದ ಅನುಸರಿಸುತ್ತಾರೆ. ಎಲ್ಲಾ ಹಬ್ಬಗಳೂ ಕೂಡ ಇಲ್ಲಿ ಅಮಿತೋತ್ಸಾಹದಿಂದ ಆಚರಿಸಲ್ಪಡುತ್ತವೆ.
ಹವಾಗುಣ
ಸೋಮನಾಥವು ಅರೇಬಿಯನ್ ಸಮುದ್ರಕ್ಕೆ ಸಮೀಪವಿರುವುದರಿಂದ ಇಲ್ಲಿನ ಹವಾಮಾನವು ಹಿತಮಿತವಾಗಿದೆ. ಬೇಸಿಗೆಗಳು ತುಸು ಬಿಸಿಯಾಗಿದ್ದು, ಚಳಿಗಾಲವು ಹದವಾಗಿರುತ್ತವೆ. ಮಳೆಗಾಲವು ಮಾರುತಗಳಿಂದ ಕೂಡಿದ್ದು, ಕುಂಭದ್ರೋಣ ವರ್ಷಧಾರೆಗೈಯುತ್ತದೆ. ಸೋಮನಾಥವನ್ನು ಸಂದರ್ಶಿಸಲು, ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಅವಧಿಯು ಅತೀ ಸೂಕ್ತವಾಗಿದೆ.
ಸಂದರ್ಶಿಸಲು ಯೋಗ್ಯವಾದ ಸ್ಥಳಗಳು
ಪ್ರಮುಖವಾದ ಮಹಾದೇವ ದೇವಾಲಯವನ್ನು ಹೊರತುಪಡಿಸಿ, ಸೋಮನಾಥವು ಸೂರ್ಯ ದೇವಾಲಯಗಳಂತಹ ಇತರ ದೇವಾಲಯಗಳನ್ನು ಹೊಂದಿದೆ. ಸೂರ್ಯ ದೇವಾಲಯವು 14 ನೆಯ ಶತಮಾನದಲ್ಲಿ ನಿರ್ಮಾಣಗೊಂಡಿದ್ದು, ಇಲ್ಲಿ ಸೂರ್ಯ ದೇವನ ಹಾಗೂ ಆತನ ಇಬ್ಬರು ಅಂಗರಕ್ಷಕರ ಮೂರ್ತಿಗಳಿವೆ. ಶ್ರೀ ಕೃಷ್ಣನು ಆಕಸ್ಮಿಕವಾಗಿ, ಗುರಿಯು ತಪ್ಪಲ್ಪಟ್ಟು, ಜರನೆಂಬ ಬೇಟೆಗಾರನಿಂದ ಹೊಡೆಯಲ್ಪಟ್ಟ ಸ್ಥಳವು ಭಾಲ್ಕ ತೀರ್ಥ (Bhalka Tirtha) ವಾಗಿದ್ದು, ದೆಹೊತ್ಸರ್ಗ್ ತೀರ್ತ್ (Dehotsarg Tirth) ವು ಭಗವಾನ್ ಶ್ರೀ ಕೃಷ್ಣನ ದೇಹ ಸಂಸ್ಕಾರವಾದ ಸ್ಥಳವಾಗಿದೆ.
ಸೋಮನಾಥ್ ಬೀಚ್ ಮತ್ತೊಂದು ಪ್ರವಾಸೀ ತಾಣವಾಗಿದೆ. ಇಲ್ಲಿನ ಸಾಗರದ ಅಲೆಗಳು ಬಹಳ ಉಗ್ರವಾಗಿರುವುದರಿಂದ ಈ ಬೀಚ್ ನಲ್ಲಿ ಈಜಾಡುವುದು ಸೂಕ್ತವಲ್ಲ. ಆದರೆ, ಈ ಬೀಚ್ ಖಂಡಿತವಾಗಿಯೂ ಪ್ರಕೃತಿ ಸಾಮೀಪ್ಯದ ಉತ್ತಮ ಅನುಭವವನ್ನೂ, ತಿನಿಸುಗಳು, ಹಾಗೂ ಒಂಟೆ ಸವಾರಿಯಂತಹ ಮನರಂಜನೆಯನ್ನೂ ಒದಗಿಸುತ್ತದೆ. ಅಹ್ಮೆದ್ಪುರ್ ಮಾಂಡ್ವಿ (Ahmedpur Mandvi) ಯು ತರಾವರಿಯ ಜಲಕ್ರೀಡಾ ಸಾಹಸಗಳಲ್ಲಿ ತೊಡಗಿಕೊಳ್ಳಲು ಮತ್ತು ಈಜಾಡಲು ಅತ್ಯುತ್ತಮವಾದ ಬೀಚ್ ಆಗಿದೆ.
ಇದು ದೀವ್ ದ್ವೀಪಕ್ಕೆ ಅತೀ ಸಮೀಪದಲ್ಲಿದ್ದು, ಇಲ್ಲಿನ ನೀರು ಸ್ಪಟಿಕದಷ್ಟು ಸ್ವಚ್ಚವಾಗಿದೆ. ಪ್ರವಾಸಿಗರು ಇಲ್ಲಿ ಪೋರ್ಚುಗೀಸ್ ಮತ್ತು ಸೌರಾಷ್ಟ್ರಿಯನ್ ಅಡುಗೆ ಮತ್ತು ಸಂಸ್ಕೃತಿಗಳ ಸಂಯೋಜನೆಯನ್ನು ಸವಿಯಬಹುದಾಗಿದೆ. ಸಂದರ್ಶನೀಯವಾದ ಇತರ ಸ್ಥಳಗಳೆಂದರೆ, ಭೌದ್ಧರ ಸಾನಾ ಗುಹೆಗಳು, ಮಾಯಿ ಪುರಿ ಮಸೀದಿ, ವೆರವಲ್ ಮತ್ತು ಇನ್ನೂ ಅನೇಕ.