10,500 ಚದರ ಕಿ.ಮೀ ವಿಸ್ತೀರ್ಣದಲ್ಲಿ ವಿಶಾಲವಾಗಿ ಆವರಿಸಿದ ಸತಾರಾ ಜಿಲ್ಲೆ ಮಹಾರಾಷ್ಟ್ರ ರಾಜ್ಯದಲ್ಲಿದ್ದು, ಇದು ಪೂರ್ವಕ್ಕೆ ಸೋಲಾಪುರ್, ಪಶ್ಚಿಮದಲ್ಲಿ ರತ್ನಾಗಿರಿ, ಉತ್ತರದಲ್ಲಿ ಪುಣೆ, ಮತ್ತು ದಕ್ಷಿಣದಲ್ಲಿ ಸಾಂಗ್ಲಿಗಳಿಂದ ಸುತ್ತುವರೆದಿದೆ. ಜಿಲ್ಲೆಯು ತನ್ನ ಸುತ್ತಲೂ ಏಳು ಬೆಟ್ಟಗಳಿಂದ ಆವರಿಸಿದ್ದು, ಸ್ಥಳೀಯ ಭಾಷೆಯಲ್ಲಿ ಸ್ಥೂಲವಾಗಿ 'ಏಳು ಬೆಟ್ಟಗಳ' ಪ್ರದೇಶವನ್ನು ಸತಾರಾ ಎಂದು ಪರಿಭಾಷಿಸಲಾಗಿದೆ. ಇಲ್ಲಿ ಜರಂದೇಶ್ವರ, ಯವತೇಶ್ವರ, ಅಜಿಂಕ್ಯತಾರ, ಕಿತ್ಲಿಚ ದೊಂಗಾರ್, ಸಜ್ಜನಗಡ, ಪೆಢ್ಯಾಚಾ ಭೈರೋಬಾ ಮತ್ತು ನಕ್ಡಿಚಾ ದೊಂಗಾರ್ ಗಳೆಂಬ ಏಳು ಬೆಟ್ಟಗಳಿವೆ.
ಐತಿಹಾಸಿಕ ಹಿನ್ನೆಲೆ
ಸತಾರಾವನ್ನು ಮೊದಲು ರಾಷ್ಟ್ರಕೂಟರು, ನಂತರ ಮೌರ್ಯ ಸಾಮ್ರಾಜ್ಯ, ಅನಂತರ ಚಾಲುಕ್ಯ ರಾಜವಂಶಗಳು ಆಳಿದವು. 17ನೇ ಶತಮಾನದಲ್ಲಿ ಮುಸ್ಲಿಂ ಆಕ್ರಮಣದ ನಂತರ, ಸತಾರಾ ಜಿಲ್ಲೆಯು ಮರಾಠಾ ಸಾಮ್ರಾಜ್ಯದ ಸಿಂಹಾಸನವಾಗಿಯೂ ಕಾರ್ಯನಿರ್ವಹಿಸಿತ್ತು.
ಮೂರನೆ ಆಂಗ್ಲೋ ಮರಾಠ ಯುದ್ಧದ ಗೆಲುವಿನ ನಂತರ, ಬ್ರಿಟೀಷರು ಸತಾರಾ ಪ್ರದೇಶವನ್ನು ಮರಾಠರಿಂದ ಕಸಿದುಕೊಂಡು ರಾಜ ಪ್ರತಾಪ್ ಸಿಂಗ್ ನನ್ನು ನಗರದ ನಿರ್ವಹಣೆ ನೋಡಿಕೊಳ್ಳಲು ನೇಮಿಸಿದರು. ಕಾಲಾನಂತರ ಇದು ಬಾಂಬೆ ಪ್ರೆಸಿಡೆನ್ಸಿಯ ಭಾಗವಾಯಿತು.
ಸತಾರಾವು ಭಾರತೀಯ ಸ್ವಾತಂತ್ರ್ಯ ಚಳವಳಿಯ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿ ಕಾರ್ಯನಿರ್ವಹಿಸಿದೆ.
ನೀವಿಲ್ಲಿ ಏನೇನು ನೋಡಬಹುದು
ಸತಾರಾ ಜಿಲ್ಲೆಯು ಅದ್ಭುತ ದೇವಾಲಯಗಳು ಮತ್ತು ಕೋಟೆಗಳಿಂದ ತುಂಬಿದೆ. ರಾಜ ಭೋಜನಿಂದ ನಿರ್ಮಿತವಾದ ಅಜಿಂಕ್ಯತಾರ ಕೋಟೆಯು ಇಲ್ಲಿನ ಪ್ರಮುಖ ಹೆಗ್ಗುರುತಾಗಿದ್ದು ಸುಮಾರು 3,000 ಅಡಿ ಎತ್ತರದ ಈ ಕೋಟೆಯನ್ನು ಶತ್ರುಗಳಿಂದ ರಕ್ಷಣೆ ಪಡೆವ ದೃಷ್ಟಿಯಿಂದ ನಿರ್ಮಿಸಲಾಗಿತ್ತು. ಈ ಕೋಟೆಯ ಮೇಲಿಂದ ಇಡಿ ಸತಾರಾ ನಗರವನ್ನು ಸ್ಪಷ್ಟವಾಗಿ ಕಾಣಬಹುದು. ಕೋಟೆಯ ಆವರಣದಲ್ಲಿ ಮಂಗಲೈ ದೇವಿಯ ಆಕರ್ಷಕ ದೇವಸ್ಥಾನವನ್ನು ಕಾಣಬಹುದು.
ವಸೊಟ ಕೋಟೆ ಮತ್ತು ಸಜ್ಜನಗಡ ಕೋಟೆಗಳು ಮರಾಠಾ ಶೈಲಿಯ ವಾಸ್ತುಶಿಲ್ಪವನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಿದ ಕೋಟೆಗಳಾಗಿವೆ. ವಾಸ್ತುಶಿಲ್ಪದಲ್ಲಿ ಆಸಕ್ತಿ ಉಳ್ಳವರು ಈ ಕೋಟೆಗಳ ಭವ್ಯತೆ ಮತ್ತು ಶಿಲ್ಪಿಯ ಕೌಶಲ್ಯವನ್ನು ಮೆಚ್ಚಿ ಪ್ರಸಂಶಿಸುವದರಲ್ಲಿ ಎರಡು ಮಾತಿಲ್ಲ.
ಗೇರ್ ಗಣಪತಿ ದೇವಸ್ಥಾನ, ಭೈರೋಬ ದೇವಸ್ಥಾನ, ಕೃಷ್ಣೇಶ್ವರ ದೇವಸ್ಥಾನ, ಭವಾನಿ ಮಾತಾ ದೇವಾಲಯ, ಮತ್ತು ಅಭ್ಯಂಕರ ವಿಷ್ಣು ದೇವಾಲಯಗಳು ಸತಾರಾದಲ್ಲಿ ಕಂಡುಬರುವ ಇತರೆ ಪ್ರಸಿದ್ಧ ದೇವಾಲಯಗಳಲ್ಲಿ ಕೆಲವು. ಸುಮಾರು 500 ವರ್ಷಗಳ ಹಿಂದೆ ಅಂದರೆ 16 ನೇ ಶತಮಾನದಲ್ಲಿ ಕಟ್ಟಲಾದ ಶಿವನ ದೇವಾಲಯವಾದ ಕೋಟೇಶ್ವರ ಮಂದಿರವು ಇಲ್ಲಿನ ಮತ್ತೊಂದು ಪ್ರಖ್ಯಾತ ದೇವಸ್ಥಾನವಾಗಿದೆ.
ಕೌಸ್ ಸರೋವರ ಮತ್ತು ಕೌಸ್ ಪ್ರಸ್ಥಭೂಮಿಗಳೆರಡೂ, ಈ ಪ್ರದೇಶದ ನಿರ್ಮಲ ಪರಿಸರದ ತಾಣವಾಗಿದ್ದು, ಇಲ್ಲಿನ ವಿವಿಧ ಪ್ರಭೇಧಗಳ ಸಸ್ಯಗಳು ಮತ್ತು ಮೂಲಿಕೆಗಳು ಪ್ರಕೃತಿ ಪ್ರಿಯರು ವೀಕ್ಷಿಸಲೇಬೇಕಾದಂತಹವು. ಕೌಸ್ ಸರೋವರವು ಸತಾರಾದ ಪ್ರಾಥಮಿಕ ನೀರಿನ ಮೂಲವಾಗಿದೆ. ಮಳೆಗಾಲದಲ್ಲಿ ನಯನಾಕರ್ಷಕವಾಗಿ ಧುಮ್ಮಿಕ್ಕುವ ಥೊಸೆಗರ್ಹ್ ಜಲಪಾತವು ಇಲ್ಲಿನ ಮತ್ತೊಂದು ನೋಡತಕ್ಕ ತಾಣವಾಗಿದೆ.
ಪೊವೈ ನಾಕಾದಲ್ಲಿ ಸ್ಥಾಪಿಸಲಾದ ಮಹಾನ್ ಛತ್ರಪತಿ ಶಿವಾಜಿ ಮಹಾರಾಜರ ಅನನ್ಯ ಪ್ರತಿಮೆಯು ಇಡಿ ದೇಶದಲ್ಲೆ ಹೋಲಿಕೆಗೆಟುಕದಷ್ಟು ಅಪ್ರತಿಮವಾಗಿದೆ.
ಒಮ್ಮೆ ರುಚಿಸಿದರೆ ಮತ್ತೆ ಮತ್ತೆ ಬೇಕೆನಿಸುವ ಮಧುರವಾದ ಸಿಹಿ ತಿನಿಸು ಕಂದಿ ಫೆಡೆ. ಇಲ್ಲಿಗೆ ಬಂದಾಗ್ಯೂ ನೀವು ಈ ತಿನಿಸನ್ನು ಸವಿಯದಿದ್ದಲ್ಲಿ ನಿಜಕ್ಕೂ ನೀವು ದುರದೃಷ್ಟವಂತರೆ ಸರಿ.
ಸೇರಿಸಲಾದ ಕೆಲವು ನೈಜತೆಗಳು
ಸತಾರಾದಲ್ಲಿ ಬೇಸಿಗೆ ಸ್ವಲ್ಪ ಹೆಚ್ಚಾಗಿಯೆ ಬಿಸಿ ಇರುವದರಿಂದ ಸಾಮಾನ್ಯವಾಗಿ ಈ ಕಾಲದಲ್ಲಿ ಪ್ರವಾಸಿ ಚಟುವಟಿಕೆಗಳು ಸ್ವಲ್ಪ ಇಳಿಮುಖವಾಗುತ್ತವೆ. ದಿನದ ಸಮಯದಲ್ಲಿ ತಾಪಮಾನವು ಸುಮಾರು 40 ° C ಗೆ ಮುಟ್ಟಬಹುದಾದ್ದರಿಂದ ಹೋಟೆಲ್ ಕೋಣೆಯಲ್ಲಿ ಕೂರುವದನ್ನು ಬಿಟ್ಟು ಬೇರೆ ಆಯ್ಕೆಗಳೆ ಇಲ್ಲದಂತಾಗುತ್ತದೆ. ಬೇಸಿಗೆಯ ಬಿಸಿಯಿಂದ ತತ್ತರಿಸಿದವರಿಗೆ ಮಳೆಗಾಲವು ವರದಾನವಾಗಿ ಪರಿಣಮಿಸುತ್ತದೆ. ಉತ್ತಮವಾಗಿ ಮಳೆ ಬೀಳುವ ಈ ದಿನಗಳಲ್ಲಿ ಮಳೆಯಲ್ಲಿ ನೆನೆಯುವುದು ಇಷ್ಟವಿದ್ದವರು ಪ್ರವಾಸಮಾಡುಬಹುದು. ಮಳಿಗಾಲದಲ್ಲಿ ಸತಾರಾ ನಳನಳಿಸುವ ಹಸಿರನ್ನುಟ್ಟು ಚಿತ್ರಸದೃಶವಾಗಿ ಗೋಚರಿಸುತ್ತದೆ. ಚಳಿಗಾಲದಲ್ಲಿ, ನಗರವು ಆಹ್ಲಾದಕರ ಬದಲಾವಣೆಗೊಳಗಾಗುತ್ತದೆ. ವಾತಾವರಣದಲ್ಲಿ ತಣ್ಣನೆಯ ಗಾಳಿ ಸುಳಿಯಲಾರಂಭಿಸುತ್ತದೆ. ಈ ಕಾಲವು ಭೇಟಿ ನೀಡುವವರಿಗೆ ನಗರವನ್ನು ಸುತ್ತಲು, ವಿವಿಧ ದೃಶ್ಯಾವಳಿಗಳನ್ನು ಅನ್ವೇಷಿಸಲು ಅನುವು ಮಾಡಿಕೊಡುತ್ತದೆ.
ಸತಾರಾವು ಪುಣೆ, ಮುಂಬೈ ಮತ್ತು ರತ್ನಾಗಿರಿಯಂತಹ ದೊಡ್ಡ ನಗರಗಳಿಗೆ ಸಮೀಪದಲ್ಲಿರುವದರಿಂದ ವಾಯುಯಾನ, ರೈಲು ಮತ್ತು ರಸ್ತೆಯ ಮೂಲಕ ಎಲ್ಲಾ ಪ್ರಮುಖ ನಗರಗಳು ಮತ್ತು ಪಟ್ಟಣಗಳ ಸಂಪರ್ಕ ಪಡೆದಿದೆ. ವಿಮಾನದಲ್ಲಿ ಸಂಚರಿಸುವವರಿಗೆ ಪುಣೆ ವಿಮಾನ ನಿಲ್ದಾಣವು ಅತ್ಯುತ್ತಮ ಆಯ್ಕೆ. ಇನ್ನೊಂದೆಡೆ ಸತಾರಾ ರೈಲ್ವೆ ನಿಲ್ದಾಣವು, ನಿಯಮಿತ ಇಂಟರ್ ಸಿಟಿ ಹಾಗು ಅಂತರ್ ರಾಜ್ಯದ ರೈಲುಗಳ ಮೂಲಕ ಹಲವು ನಗರಗಳ ಉತ್ತಮ ಸಂಪರ್ಕ ಪಡೆದಿದೆ. ನೀವು ನಗರಕ್ಕೆ ರಸ್ತೆ ಮೂಲಕ ಹೋಗಲು ಯೋಚಿಸಿದ್ದರೆ, ಪುಣೆ-ಬೆಂಗಳೂರು ಹೆದ್ದಾರಿ ಮತ್ತು ಮುಂಬೈ ಪುಣೆ ಎಕ್ಸ್ ಪ್ರೆಸ್ ವೇ ಗಳು ಆರಾಮವಾಗಿ ನಗರವನ್ನು ತಲುಪಲು ಸಹಾಯ ಮಾಡುವ ಅತ್ಯುತ್ತಮ ರಸ್ತೆ ಮಾರ್ಗಗಳಾಗಿವೆ.
ಸತಾರಾವು ಪ್ರಾಚೀನ ಶ್ರೀಮಂತ ಪರಂಪರೆಯನ್ನು ತುಂಬಿಕೊಂಡಿರುವ ಅದೃಷ್ಟವಂತ ನಗರ. ಇದು, ಕೋಟೆ ಕೊತ್ತಲಗಳನ್ನು ತೋರಿಸುತ್ತಾ ರಾಜ ಮಹಾರಾಜರ ರೋಚಕ ಕಥೆಗಳನ್ನು ಹೇಳುತ್ತದೆ, ಪ್ರಕೃತಿಯೊಳಗೆ ಕೈಹಿಡಿದು ನಡೆಸುತ್ತದೆ ಅಲ್ಲದೆ ವನ್ಯಜೀವಿ ಅಭಯಾರಣ್ಯಗಳಲ್ಲಿ ಪ್ರತ್ಯಕ್ಷವಾಗಿ - ಪರೋಕ್ಷವಾಗಿ ನಮ್ಮಿಂದಲೆ ಅಳಿವಿನ ಅಂಚಿನಲ್ಲಿರುವ ಪ್ರಾಣಿ ಪಕ್ಷಿಗಳನ್ನು ಭೇಟಿಮಾಡಿಸುತ್ತದೆ. ಈ ನಗರವು ಮರಾಠ ಸಾಮ್ರಾಜ್ಯದ ರಾಜಧಾನಿಯಾಗಿದ್ದು ಹೆಚ್ಚು ಪ್ರವಾಸಿ ಸ್ಥಳಗಳನ್ನು ಹೊಂದಿದೆ. ನಮ್ಮ ಮಹಾನ್ ವಂಶಾವಳಿಯ ಮಹತ್ವ ಅರಿಯಬೇಕಾದರೆ ಐತಿಹಾಸಿಕ ಹೆಗ್ಗುರುತಾದ ಸತಾರಾ ನಗರಕ್ಕೆ ಒಮ್ಮೆ ಭೇಟಿ ನೀಡಿ.