ಹರಿಹರೇಶ್ವರ ಮಹಾರಾಷ್ಟ್ರ ರಾಜ್ಯದ ರತ್ನಾಗಿರಿ ಜಿಲ್ಲೆಯಲ್ಲಿರುವ ಒಂದು ವಿಶಿಷ್ಟವಾದ ಸಣ್ಣ ಪಟ್ಟಣವಾಗಿದೆ. ಹರಿಹರೇಶ್ವರವು ಬ್ರಹ್ಮಾದ್ರಿ, ಪುಷ್ಪಾದ್ರಿ, ಹರ್ಶಿಣಾಚಲ್ ಮತ್ತು ಹರಿಹರ್ ಎನ್ನುವ ನಾಲ್ಕು ಬೆಟ್ಟಗಳಿಂದ ಆವೃತ್ತವಾಗಿದೆ. ಹರಿಹರೇಶ್ವರವು ಕೊಂಕಣ ಪ್ರಾಂತ್ಯದಲ್ಲಿದ್ದು ಒಂದೆಡೆ ಹಚ್ಚ ಹಸಿರಿನಿಂದ ಕೂಡಿದ ಕಾಡುಗಳಿಂದ ಕೂಡಿದ್ದು, ಮತ್ತೊಂದೆಡೆ ನಿರ್ಮಲವಾದ ಬೀಚುಗಳಿಂದ ಕೂಡಿದೆ.
ಹರಿಹರೇಶ್ವರವು ಶಿವನ ದೇವಾಲಯದಿಂದಾಗಿ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಪ್ರದೇಶವನ್ನು ದೇವ್ ಘರ್ ಎಂದು ಕರೆಯುತ್ತಾರೆ. ಅಂದರೆ ದೇವರ ಮನೆಯೆಂದು ಅರ್ಥ. ಇಲ್ಲಿನ ಮತ್ತೊಂದು ವಿಶೇಷವೆಂದರೆ ಭೋರ್ಗರೆದು ಹರಿಯುವ ಸಾವಿತ್ರಿ ನದಿಯು ಅರಬ್ಬೀ ಸಮುದ್ರದಲ್ಲಿ ಐಕ್ಯವಾಗುವ ತಾಣವು ಇಲ್ಲಿದೆ.
ಇತಿಹಾಸದ ಪ್ರಾಮುಖ್ಯತೆ ಕುರಿತು
ಹರಿಹರೇಶ್ವರದ ಹಿನ್ನಲೆಯು, ಮರಾಠರ ಶ್ರೇಷ್ಠ ದೊರೆಯಾದ ಶಿವಾಜಿಯ ಕಾಲದವರೆಗು ಹಿಂದಕ್ಕೆ ಕರೆದೊಯ್ಯುತ್ತದೆ. ಪ್ರಥಮ ಪೇಶ್ವೆಯಾದ ಬಾಜಿರಾವನು ಇಲ್ಲಿಗೆ 1723 ರಷ್ಟು ಹಿಂದೆಯೆ ಭೇಟಿಕೊಟ್ಟಿದ್ದನೆಂದು ಇತಿಹಾಸ ಸಾರುತ್ತದೆ.
ಇಲ್ಲಿರುವ ಪ್ರತಿಯೊಂದು ದೇವಾಲಯಗಳು ಪ್ರಾಚೀನ ಭಾರತೀಯರು ಹಿಂದಿನ ಕಾಲದಲ್ಲಿ ಅಳವಡಿಸಿಕೊಂಡಿದ್ದ ವಾಸ್ತುಕಲೆಗೆ ಸಾಕ್ಷಿಗಳಾಗಿ ನಿಂತಿವೆ. ಪ್ರತಿಯೊಂದು ಶಿಲೆಯು ತನ್ನಲ್ಲಿಯ ಒಂದೊಂದು ಕಥೆಯನ್ನು ಒತ್ತಿ ಹೇಳುತ್ತಿವೆ. ಶಿಲೆಗಳಲ್ಲಿ ಮಹಾಕಾವ್ಯವನ್ನು ಕೆತ್ತಿರುವ ಪರಿಗೆ ನೀವು ಮಂತ್ರಮುಗ್ಧರಾಗಿ ಬಿಡುವಿರಿ.
ಹರಿಹರೇಶ್ವರ - ಒಂದು ಧಾರ್ಮಿಕ ಕೇಂದ್ರ
ಹರಿಹರೇಶ್ವರವು ಧಾರ್ಮಿಕವಾಗಿ ಒಂದು ಪ್ರಮುಖ ಯಾತ್ರಾಸ್ಥಳವಾಗಿದ್ದು, ದಕ್ಷಿಣ ಕಾಶಿಯೆಂದು ಪರಿಗಣಿಸಲ್ಪಟ್ಟಿದೆ. ಈ ಊರು ಶಿವ, ವಿಷ್ಣು ಮತ್ತು ಬ್ರಹ್ಮದೇವರುಗಳ ಹಲವು ದೇವಾಲಯಗಳನ್ನು ತನ್ನಲ್ಲಿ ಒಳಗೊಂಡಿದೆ. ಕಾಲಭೈರವ ಮತ್ತು ಯೋಗೇಶ್ವರಿಯ ಎರಡು ದೇವಾಲಯಗಳು ಇನ್ನಿತರ ಪ್ರಮುಖ ಧಾರ್ಮಿಕ ಸ್ಥಳಗಳಾಗಿವೆ.
ಹರಿಹರೇಶ್ವರವು ನಯನಮನೋಹರವಾದ ಬೀಚನ್ನು ಹೊಂದಿದ್ದು, ವಾರಾಂತ್ಯದಲ್ಲಿ ಕಾಲ ಕಳೆಯಲು ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿಗೆ ಸಮೀಪದ ಪುಷ್ಪಾದ್ರಿ ಬೆಟ್ಟವು ಇಲ್ಲಿನ ಸೌಂದರ್ಯಕ್ಕೆ ಇಂಬು ಕೊಟ್ಟಿದೆ.
ಹರಿಹರೇಶ್ವರಕ್ಕೆ ಹೇಗೆ ಹೋಗಬಹುದು
ಹರಿಹರೇಶ್ವರಕ್ಕೆ ವಿಮಾನ, ರೈಲು ಮತ್ತು ರಸ್ತೆ ಸಾರಿಗೆಯ ಮೂಲಕ ಸುಲಭವಾಗಿ ತಲುಪಬಹುದು. ಇಲ್ಲಿಗೆ ವರ್ಷದ ಯಾವುದೇ ತಿಂಗಳಿನಲ್ಲಿ ಭೇಟಿಕೊಡಬಹುದಾಗಿದೆ. ಆದರು ಮಳೆಗಾಲದ ನಂತರದ ಅವಧಿ ಮತ್ತು ಚಳಿಗಾಲಗಳು ಈ ಊರಿಗೆ ಭೇಟಿಕೊಡಲು ಮತ್ತು ಇಲ್ಲಿ ಸುತ್ತಾಡಲು ಅತ್ಯಂತ ಸೂಕ್ತ ಸಮಯವಾಗಿದೆ.
ಹರಿಹರೇಶ್ವರವು ಅಪಾರ ಜನಸ್ತೋಮವನ್ನು ಪ್ರತಿವರ್ಷ ಆಕರ್ಷಿಸುತ್ತಿರುತ್ತದೆ. ಅದು ಕೇವಲ ಇಲ್ಲಿನ ದೇವಾಲಯಗಳಿಂದಾಗಿ ಮಾತ್ರವಲ್ಲದೆ ಇಲ್ಲಿನ ಸುಂದರ ಬೀಚುಗಳು ಸಹಾ ಜನಾಕರ್ಷಕವಾಗಿವೆ. ಇದು ನಗರದ ಗೌಜು ಗದ್ದಲಗಳಿಂದ ದೂರವಾಗಿ ನೆಮ್ಮದಿಯಾಗಿ ಕಾಲ ಕಳೆಯಲು ಹೇಳಿ ಮಾಡಿಸಿದ ತಾಣವಾಗಿದೆ. ಹಿತವಾದ ಹವಾಗುಣ, ಮನಸೂರೆಗೊಳ್ಳುವ ಬೀಚುಗಳು, ಪ್ರಾಚೀನ ದೇಗುಲಗಳು ಎಲ್ಲವು ಹರಿಹರೇಶ್ವರದಲ್ಲಿ ಕಾಣಸಿಗುತ್ತವೆ.