ಅಮ್ರಾವತಿ ಮಹಾರಾಷ್ಟ್ರದ ಉತ್ತರ ಗಡಿಭಾಗದಲ್ಲಿರುವ ಊರಾಗಿದೆ. ಅಮ್ರಾವತಿ ಎಂದರೆ 'ಅಮರರಾದವರ ನೆಲೆ' ಎಂದು ಅರ್ಥೈಸಬಹುದು.
ದಖನ್ ಪ್ರಸ್ತ ಭೂಮಿಯಲ್ಲಿರುವ ಈ ನಗರವು ಮುಖ್ಯವಾಗಿ ತಾಪಿ ಮುಖಜ ಭೂಮಿಯಲ್ಲಿ ನೆಲೆಗೊಂಡಿದೆ. ಈ ನಗರದ ಕೆಲವು ಪೂರ್ವ ಭಾಗಗಳು ವಾರ್ಧಾ ಕಣಿವೆಯಲ್ಲಿ ಇವೆ. ಮಹಾರಾಷ್ಟ್ರದ ಏಳನೇ ಅತ್ಯಂತ ಜನಸಂಖ್ಯೆ ಹೊಂದಿರುವ ನಗರವಾದ ಅಮ್ರಾವತಿಯು 12,626 ಚ.ಕಿ.ಮೀ ವಿಸ್ತೀರ್ಣದಲ್ಲಿ ವ್ಯಾಪಿಸಿದೆ. ಅಮ್ರಾವಾತಿಯು ಸಮುದ್ರಮಟ್ಟದಿಂದ 343 ಅಡಿ ಎತ್ತರದಲ್ಲಿ ನೆಲೆಸಿದ್ದು, ನಾಗ್ಪುರದಿಂದ 156 ಕಿ.ಮೀ ದೂರದಲ್ಲಿದೆ.
ಅಮ್ರಾವತಿ ಎಂಬ ಪದವು 'ಔದುಂಬರಾವತಿ' ಎಂಬ ಪದದಿಂದ ಬಂದಿದೆ ಎಂದೂ ಹೇಳಲಾಗುತ್ತದೆ. ಕಾರಣ ಈ ಪ್ರಾಂತ್ಯದಲ್ಲಿ ಯಥೇಚ್ಛವಾಗಿರುವ ಔದುಂಬರ ವೃಕ್ಷಗಳಿಂದ ಈ ಹೆಸರು ಬಂದಿದೆ. ಇನ್ನು ಕೆಲವರು ಇಲ್ಲಿರುವ ಪುರಾತನವಾದ ಅಂಬಾದೇವಿಯ ದೇವಾಲಯದಿಂದಾಗಿ ಈ ಊರಿಗೆ ಅಮ್ರಾವತಿ ಎಂಬ ಹೆಸರು ಬಂದಿತು ಎಂದೂ ನಂಬುತ್ತಾರೆ. ಅಮೃತಶಿಲೆಯಿಂದ ನಿರ್ಮಿಸಲಾದ ಆದಿನಾಥ ಋಷಭನಾಥನ ಮೂರ್ತಿಯ ಪೀಠದಲ್ಲಿ ಕೆತ್ತಲಾಗಿರುವ ಶಾಸನದಲ್ಲಿ ಅಮ್ರಾವತಿಯ ಪುರಾತನ ಉಲ್ಲೇಖಗಳು ಸಿಗುತ್ತವೆ. ಹಿಂದಿನ ಕಾಲದಲ್ಲಿ ಅಮ್ರಾವತಿಯು ಮೌರ್ಯ ಸಾಮ್ರಾಜ್ಯದ ಅಶೋಕನ ಆಡಳಿತಾವಧಿಯಲ್ಲಿ ಪ್ರಮುಖ ಪಾತ್ರವಹಿಸಿತ್ತು. ಈಸ್ಟ್ ಇಂಡಿಯಾ ಕಂಪನಿಯವರು 1833 ರಲ್ಲಿ ಈ ಊರನ್ನು ವಶಪಡಿಸಿಕೊಳ್ಳುವ ಮೊದಲು ನಿಜಾಮನು ಈ ಊರನ್ನು ಅರ್ಧ ಶತಮಾನಗಳ ಕಾಲ ಆಳಿದ್ದನು.
ಅಮ್ರಾವತಿ - ಕೆಲವು ಅಂಶಗಳು
ಧಾರ್ಮಿಕ ಆಸಕ್ತರು, ಅಮ್ರಾವತಿಯು ಸುರರ ಅರಸನಾದ ದೇವೆಂದ್ರನಿಗೆ ಸೇರಿದ್ದೆಂದು ವಾದಿಸುತ್ತಾರೆ. ಹಿಂದು ಪುರಾಣದ ಪ್ರಕಾರ, ಅಮ್ರಾವತಿಯ ಪ್ರಸಿದ್ಧ ಅಂಬಾದೇವಿ ದೇವಾಲಯದಿಂದ ಕೃಷ್ಣನು ರುಕ್ಮಿಣಿ ದೇವಿಯ ಮದುವೆ ಸಂದರ್ಭದಲ್ಲಿ ಆಕೆಯನ್ನು ಇಲ್ಲೊಂದಲೇ ಅಪಹರಿಸಿದ್ದನೆಂದು ಹೇಳಲಾಗುತ್ತದೆ. ವಿಧರ್ಭ ಪ್ರಾಂತ್ಯದಲ್ಲಿರುವ ಈ ಅಂಬಾ ದೇವಿ ದೇವಾಲಯವು ಭಾರತದ ವಾಸ್ತುಶಿಲ್ಪ ಪರಂಪರೆಯ ದ್ಯೋತಕವಾಗಿ ನಿಂತಿದೆ. ಕೃಷ್ಣನು ರುಕ್ಮಿಣಿ ದೇವಿಯ ಜೊತೆ ಸಾಗಿದ ಸುರಂಗವೊಂದು ಇಲ್ಲಿದ್ದು, ಅದರ ಉದ್ದವನ್ನು ಅಳೆಯಲು ಹಲವು ಸಂಶೋಧಕ ತಂಡಗಳು ಪ್ರಯತ್ನಿಸಿವೆ. ಆದರೆ ಅವರ ಪರಿಶ್ರಮವೆಲ್ಲ ವ್ಯರ್ಥವಾಗಿದೆ.
ಹಳೆ ಅಮ್ರಾವತಿಯಲ್ಲಿ ಬಾಲಕೃಷ್ಣ ದೇವಾಲಯ, ಸೋಮೇಶ್ವರ ದೇವಾಲಯ, ಮುರಳೀಧರ್ ಮತ್ತು ಬ್ರಹ್ಮಚಾರಿ ಮಹಾರಾಜ್ ದೇವಾಲಯ ಮುಂತಾದ ಪ್ರಸಿದ್ಧ ದೇವಾಲಯಗಳನ್ನು ನೋಡಲು ಮರೆಯಬಾರದು.
ಅಮ್ರಾವತಿಯು, ದೇವಾಲಯಗಳಿಗಷ್ಟೆ ಅಲ್ಲದೆ ಇಲ್ಲಿ ಆಚರಿಸಲಾಗುವ ನವರಾತ್ರಿ, ದೀಪಾವಳಿ ಮತ್ತು ಹೋಳಿ ಹಬ್ಬಗಳಿಗೂ ಸಹ ಹೆಸರುವಾಸಿಯಾಗಿದೆ. ನವರಾತ್ರಿ ಹಬ್ಬವು ಇಲ್ಲಿ ಅತ್ಯಂತ ವೈಭವದಿಂದ ಆಚರಿಸಲಾಗುವ ಹಬ್ಬವಾಗಿದೆ. ಸಾಯಿನಗರದಲ್ಲಿರುವ ಸಾಯಿ ಭಕ್ತಿಧಾಮ ದೇವಾಲಯ ಮತ್ತು ರತ್ನಗಾಂವ್ ನಲ್ಲಿರುವ ಶ್ರೀ ಸ್ವಾಮಿ ಸಮರ್ಥ್ ದೇವಾಲಯಕ್ಕೆ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು, ಹಬ್ಬದ ಸಮಯಗಳಲ್ಲಿ ಪೂಜೆಸಲ್ಲಿಸಲು ಆಗಮಿಸುತ್ತಾರೆ. ಹಿಂದೆ ಹೇಳಲಾದ ಪ್ರಾಚೀನ ಅಂಬಾ ದೇವಿ ದೇವಾಲಯವು ಕೃಷ್ಣನೊಂದಿಗೆ ನೇರ ಸಂಬಂಧವನ್ನು ಹೊಂದಿದ್ದು, ಭಕ್ತಾಧಿಗಳು ಮತ್ತು ಕೃಷ್ಣನ ಅನುಯಾಯಿಗಳ ವಲಯದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿದೆ.
ವನ್ಯಜೀವಿ ಮತ್ತು ಪ್ರಾಣಿ ಪ್ರಿಯರು ತಪ್ಪದೆ ಚಿಕ್ಕಲಧಾರ ವನ್ಯಜೀವಿ ಧಾಮ, ಗುಗರ್ನಲ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿಕೊಡಬೇಕು. ಈ ಎರಡು ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಕಾಡು ಹಂದಿ, ಚಿರತೆ, ಕರಡಿ ಮತ್ತು ಸಾಂಬರ್ ಗಳನ್ನು ಕಾಣಬಹುದು. ಮೇಲ್ಘಾಟ್ ಹುಲಿ ಧಾಮವು ನೋಡಲೆ ಬೇಕಾಗಿರುವ ಪ್ರವಾಸಿ ತಾಣವಾಗಿದೆ. ಇದು 40 ವಿವಿಧ ಜಾತಿಯ ಸಸ್ತನಿಗಳಿಗೆ, 250 ಜಾತಿಯ ಪಕ್ಷಿಗಳಿಗೆ ಮತ್ತು 150 ಜಾತಿಯ ಸರಿಸೃಪಗಳಿಗೆ ಆಶ್ರಯ ನೀಡಿದೆ. ಪ್ರಕೃತಿ ಪ್ರಿಯರು ಮತ್ತು ಕಾಡಿನ ಬಗ್ಗೆ ಆಸಕ್ತಿ ಹೊಂದಿರುವವರು ಇಲ್ಲಿರುವ ವೈವಿಧ್ಯಮಯ ಜೀವ ಸಂಕುಲವನ್ನು ಖಂಡಿತವಾಗಿ ಇಷ್ಟಪಡುತ್ತಾರೆ.
ಅಮ್ರಾವತಿ - ರಾಷ್ಟ್ರ ನಾಯಕರ ತವರೂರು
ಅಭಿವೃದ್ಧಿ ಹೊಂದುತ್ತಿರುವ ಕೈಗಾರಿಕಾ ಕೇಂದ್ರವಾದ ಅಮ್ರಾವತಿಯು ಮಹಾರಾಷ್ಟ್ರದ ಸಾಹಿತ್ಯ ಮತ್ತು ಸಂಸ್ಕೃತಿಯ ವಿಚಾರದಲ್ಲಿ ಪ್ರಮುಖ ಪಾತ್ರವಹಿಸಿದೆ. ಗೋಪಾಲ ನೀಲಕಾಂತ್ ದಾಂಡೇಕರ್ ಮತ್ತು ಸುರೇಶ್ ಭಟ್ ರಂತಹ ಪ್ರಸಿದ್ಧ ವ್ಯಕ್ತಿಗಳು ಇದೇ ಪ್ರಾಂತ್ಯದಿಂದ ಬಂದವರು. ಕ್ರಾಂತಿಕಾರಿ ಭಗತ್ ಸಿಂಗ್ ಭೂಗತನಾಗಿದ್ದಾಗ ಇದೇ ಊರಿನಲ್ಲಿ 3 ದಿನಗಳ ಕಾಲ ಅವಿತು ಕೊಂಡಿದ್ದರಂತೆ. ಇಷ್ಟೆ ಅಲ್ಲದೆ ಅಮರಾವತಿ ಸ್ಮರಣೀಯವಾದ ಅನೇಕ ವ್ಯಕ್ತಿಗಳ ಜನ್ಮಸ್ಥಳವಾಗಿದೆ. ಅನೇಕ ಸಂತರು, ಸಾಮಾಜಿಕ ಮತ್ತು ರಾಜಕೀಯ ಧುರೀಣರು, ಕಲಾವಿದರು ಮತ್ತು ಸ್ವಾತಂತ್ರ್ಯ ಹೋರಾಟಗಾರರು ಇಲ್ಲಿಗೆ ಸೇರಿದವರಾಗಿದ್ದಾರೆ. ಮತ್ತೊಂದು ಆಸಕ್ತಿದಾಯಕ ವಿಚಾರವೆಂದರೆ ಅಮ್ರಾವತಿಯು ಅನೇಕ ರಾಜಕೀಯ ನಾಯಕರ ಜನ್ಮ ಸ್ಥಳವಾಗಿದೆ. ಭಾರತದ ಮಾಜಿ ರಾಷ್ಟ್ರಪತಿ ಶ್ರೀಮತಿ ಪ್ರತಿಭಾ ಪಾಟೀಲ್ ಅಮ್ರಾವತಿಗೆ ಸೇರಿದವರಾಗಿದ್ದಾರೆ.
ಯಾವಾಗ ಮತ್ತು ಹೇಗೆ ಹೋಗಬೇಕು
ಅಮ್ರಾವತಿಯು ಸಮಶೀತೋಷ್ಣವಲಯದ ಹವಾಗುಣವನ್ನು ಹೊಂದಿದ್ದು, ಒಣಹವೆಯಿಂದ ಕೂಡಿದ ಸುಡು ಬಿಸಿಲಿನ ಬೇಸಿಗೆಯನ್ನು ಹೊಂದಿರುತ್ತದೆ. ಆಗ ಇಲ್ಲಿನ ಉಷ್ಣಾಂಶ 40° ಸೆಲ್ಶಿಯಸ್ ಇರುತ್ತದೆ. ಮಾರ್ಚ್ ನಿಂದ ಜೂನ್ ವರೆಗಿನ ಈ ಕಾಲದಲ್ಲಿ ಇಲ್ಲಿಗೆ ಭೇಟಿಕೊಡದಿರುವುದು ಒಳ್ಳೆಯದು. ಮಳೆಗಾಲದಲ್ಲಿ ಇಲ್ಲಿ ತಕ್ಕಮಟ್ಟಿಗೆ ಒಳ್ಳೆಯ ಮಳೆ ಬೀಳುತ್ತದೆ. ಹಾಗಾಗಿ ಇಲ್ಲಿಗೆ ಭೇಟಿಕೊಡಲು ಅಕ್ಟೋಬರ್ ತಿಂಗಳ ಮಧ್ಯಭಾಗದಿಂದ ಮಾರ್ಚ್ ವರೆಗಿನ ಚಳಿಗಾಲವು ಅತ್ಯಂತ ಪ್ರಶಸ್ತವಾದ ಕಾಲವಾಗಿದೆ. ಆಗ ಇಲ್ಲಿನ ಹವಾಗುಣವು ಅತ್ಯಂತ ಸುಖಕರವಾಗಿರುತ್ತದೆ. ಉಷ್ಣಾಂಶವು ಆಗ 12°ಸೆಲ್ಶಿಯಸ್ ವರೆಗು ಕುಸಿದಿರುತ್ತದೆ. ಹೀಗಾಗಿ ಈ ತಂಪಾದ ಕಾಲವು ಪ್ರವಾಸಿಗರಿಗೆ ಊರನ್ನು ಸುತ್ತಾಡಲು ಅನುಕೂಲಕರ ಮಾಡಿಕೊಡುತ್ತದೆ.
ಅಮ್ರಾವತಿಯು ಮುಂಬೈ - ಕೊಲ್ಕತ್ತಾ ಹೆದ್ದಾರಿಯಲ್ಲಿದ್ದು ಸುಲಭವಾಗಿ ರಸ್ತೆ, ರೈಲು ಮತ್ತು ವಿಮಾನಯಾನದ ಮೂಲಕ ತಲುಪಬಹುದು. ರಾಜ್ಯ ಸಾರಿಗೆ ಮತ್ತು ಖಾಸಗಿ ಬಸ್ಸು ನಿರ್ವಾಹಕರು ಅಮ್ರಾವತಿ - ಪುಣೆ ಮತ್ತು ಅಮ್ರಾವತಿ - ಇಂದೋರ್ ಮಾರ್ಗಗಳಲ್ಲಿ ಬಸ್ಸುಗಳಲ್ಲಿ ನಿಮ್ಮನ್ನು ಅಮ್ರಾವತಿಗೆ ತಲುಪಿಸುತ್ತಾರೆ. ಮಹಾರಾಷ್ಟ್ರದ ಒಳಗಿನ ನಾಗ್ಪುರ್, ಮುಂಬೈ ಮತ್ತು ಔರಂಗಬಾದ್ ಗಳಿಂದ ಅಮ್ರಾವತಿಗೆ ರಸ್ತೆ ಮತ್ತು ವಿಮಾನಯಾನದ ಮೂಲಕ ತಲುಪಬಹುದು. ಅಲ್ಲದೆ ಮಹಾರಾಷ್ಟ್ರದ ಪ್ರಮುಖ ನಗರಗಳಿಂದ ಅಮ್ರಾವತಿಗೆ ರೈಲಿನಲ್ಲಿ ತಲುಪಬಹುದು.
ಅಮ್ರಾವತಿ ಭಾರತದ ಸಾಂಸ್ಕೃತಿಕ ಬೇರುಗಳನ್ನು ಆಳವಾಗಿ ಹೊಂದಿರುವ ಹಾಗು ಆ ಮೂಲಕ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ನೀವೇನಾದರು ಕಲಾಭಿಮನಿಗಳಾಗಿದ್ದರೆ, ವಾಸ್ತುಶಿಲ್ಪ ಆಸಕ್ತರಾಗಿದ್ದರೆ ಅಥವಾ ಸುತ್ತಾಡುವವರಾಗಿದ್ದರೆ, ಅಮ್ರಾವತಿಯು ಯಾರನ್ನು ನಿರಾಸೆಗೊಳಿಸಲಾರದು.