ನೂತನವಾಗಿ ನಿರ್ಮಾಣಗೊಂಡಿರುವ ಭಾರತದ ತೆಲಂಗಾಣ ರಾಜ್ಯದ ಎರಡನೆಯ ಅತಿ ದೊಡ್ಡ ನಗರ ಎಂಬ ಖ್ಯಾತಿಗೆ ಪಾತ್ರವಾದ ವಾರಂಗಲ್ ರಾಜ್ಯದಲ್ಲಿ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವ ಜಿಲ್ಲೆಯಾಗಿ ಗಮನಸೆಳೆಯುತ್ತದೆ. ಪ್ರವಾಸೋದ್ಯಮದ ದೃಷ್ಟಿಯಿಂದಲೂ ಸಹ ವಾರಂಗಲ್ ತನ್ನದೆ ಆದ ಅನೇಕ ಪುರಾತನ ರಚನೆಗಳು ಹಾಗೂ ದೇವಾಲಯಗಳಿಂದಾಗಿ ಹೆಸರುವಾಸಿಯಾಗಿದೆ.
ಹನುಮಕೊಂಡ ಎಂಬುದು ವಾರಂಗಲ್ ನಗರದ ಹೊರವಲದಲ್ಲಿರುವ ಒಂದು ಪ್ರದೇಶ. ಗ್ರೇಟರ್ ವಾರಂಗಲ್ ಮುನಿಸಿಪಲ್ ಕಾರ್ಪೊರೇಷನ್ ಗೆ ಒಳಪಡುವ ಹನುಮಕೊಂಡ ವಾರಂಗಲ್ ನಗರ ಪ್ರದೇಶದಿಂದ ಕೇವಲ ಆರೇಳು ಕಿ.ಮೀ ಗಳಷ್ಟು ದೂರದಲ್ಲಿ ಮಾತ್ರವೆ ಸ್ಥಿತವಿದ್ದು ತಲುಪಲು ಅನೇಕ ಬಸ್ಸುಗಳು ಹಾಗೂ ಆಟೋಗಳು ವಾರಂಗಲ್ ರೈಲು ನಿಲ್ದಾಣ ಹಾಗೂ ಬಸ್ಸು ನಿಲ್ದಾಣಗಳಿಂದ ದೊರೆಯುತ್ತವೆ.
ವಿಶೇಷವೆಂದರೆ ಹನುಮಕೊಂಡವು ಮೂರು ಅದ್ಭುತವಾದ ದೇವಾಲಯಗಳಿಗೆ ಆಶ್ರಯ ತಾಣವಾಗಿದ್ದು ಸಾಕಷ್ಟು ಜನ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿರುವ ಈ ಮೂರು ದೇವಾಲಯಗಳು ವಾರಂಗಲ್ಲಿನ ಮೂರು ಅದ್ಭುತ ದೇವಾಲಯಗಳೆಮ್ದು ಕರೆಯಬಹುದು. ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ಪ್ರಾಚೀನತೆಯ ದ್ಯೋತಕವಾಗಿವೆ ಈ ಆಕರ್ಷಕ ದೇವಾಲಯಗಳು.
ಪ್ರಸ್ತುತ ಲೇಖನದ ಮೂಲಕ, ವಾರಂಗಲ್ ನಲ್ಲಿರುವ ಆ ಪ್ರಮುಖ ಮೂರು ದೇವಾಲಯಗಳು ಯಾವುವು ಹಾಗೂ ಅವುಗಳ ವಿಶೇಷತೆ ಏನು, ಎಂಬುದರ ಕುರಿತು ತಿಳಿಸಲಾಗಿದೆ. ಇನ್ನೂ ವಾರಂಗಲ್ ತೆಲಂಗಾಣದ ಪ್ರಮುಖ ನಗರಗಳಲ್ಲೊಂದಾಗಿರುವುದರಿಂದ ರೈಲು ಹಾಗೂ ಬಸ್ಸುಗಳ ಉತ್ತಮ ಸಂಪರ್ಕ ಹೊಂದಿದೆ. ಹೈದರಾಬಾದ್ ನಿಂದ ವಾರಂಗಲ್ ಗೆ ತೆರಳಲು ಬಸ್ಸು ಹಾಗೂ ರೈಲುಗಳು ದೊರೆಯುತ್ತವೆ.
ಹನುಮಕೊಂಡ
ವಾರಂಗಲ್ ಜಿಲ್ಲೆಯ ವಾರಂಗಲ್ ಹಾಗೂ ಹನುಮಕೊಂಡ ಅವಳಿ ನಗರಗಳ ಮಧ್ಯದಲ್ಲಿರುವ ಬೆಟ್ಟವೊಂದರ ಮೇಲೆ ನೆಲೆಸಿರುವ ಭದ್ರಕಾಳಿಯ ದೇವಾಲಯವು ಸಾಕಷ್ಟು ಪ್ರಸಿದ್ಧಿ ಪಡೆದಿರುವ ಶಕ್ತಿ ದೇವಿಯ ದೇವಾಲಯವಾಗಿದೆ.
ಚಿತ್ರಕೃಪೆ: Adityamadhav83
ಚೌಕಾಕಾರ
ಈ ಭದ್ರಕಾಳಿಯ ದೇವಾಲಯದ ಬಲು ಪ್ರಮುಖ ವಿಶೇಷತೆ ಎಂದರೆ ಅಮ್ಮನವರ ವಿಗ್ರಹ. ಚೌಕಾಕಾರದಲ್ಲಿ ಹೆಚ್ಚು ಅಗಲವಾಗಿ ಭದ್ರಕಾಳಿಯ ವಿಗ್ರಹವಿದ್ದು ವಿಶೇಷವಾಗಿ ಗಮನಸೆಳೆಯುತ್ತದೆ. ಈ ದುರ್ಗೆಯನ್ನು ಭಕ್ತರೆಲ್ಲರೂ ಬೇಡಿದ್ದೆಲ್ಲ ಕೊಡುವ ತಾಯಿ ಎಂಬ ನಾಮದಿಂದಲೆ ಸಂಬೋಧಿಸುತ್ತಾರೆ.
ಚಿತ್ರಕೃಪೆ: Adityamadhav83
ವಾತಾವರಣ
ಭದ್ರಕಾಳಿ ಅಮ್ಮನವರ ದೇವಾಲಯವು ಸಾಕಷ್ಟು ಪ್ರಶಾಂತಮಯವಾದ ಪ್ರದೇಶದಲ್ಲಿ ನೆಲೆಸಿದ್ದು ಅನನ್ಯವಾದ ಅನುಭವವನ್ನು ಭೇಟಿ ನೀಡುವವರಿಗೆ ಕರುಣಿಸುತ್ತದೆ. ಇದರ ಮತ್ತೊಂದು ವಿಶೇಷತೆ ಎಂದರೆ ದೇವಾಲಯದ ಬಳಿಯಿರುವ ಭದ್ರಕಾಳಿ ಕೆರೆ. ಸುಮಾರು ಐದು ಕಿ.ಮೀ ಗಳಷ್ಟು ವ್ಯಾಸ ಹೊಂದಿರುವ ಕೆರೆ ಇದಾಗಿದ್ದು ಪ್ರದೇಶದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ.
ಚಿತ್ರಕೃಪೆ: Rajib Kumar Ghosh
ಧನಾತ್ಮಕತೆ
ಈ ಕೆರೆಯ ಸುತ್ತಮುತ್ತಲು ಅನೇಕ ಚಿತ್ರ, ವಿಚಿತ್ರ ಆಕಾರಗಳ ಕಲ್ಲು ಬಂಡೆಗಳು, ಬೆಟ್ಟಗಳು ಕಂಡುಬರುತ್ತವೆ. ಇವು ಒಂದು ವಿಶೀಷ್ಟ ಧನಾತ್ಮಕ ಭಾವವನ್ನು ಭಕ್ತರಲ್ಲಿ ಮೂಡಿಸುತ್ತದೆ. ಧ್ಯಾನ ಮಾಡಬಯಸುವವರಿಗೆ ಅದ್ಭುತ ತಾಣ ಇದಾಗಿದೆ. ಕೆಲವರು ಹೇಳುವಂತೆ ಇಲ್ಲಿರುವ ಕೆಲವು ವಿಚಿತ್ರ ಬಂಡೆಗಳು ಧನಾತ್ಮಕ ಅಂಶಗಳನ್ನು ಹೊರಸೂಸುತ್ತವಂತೆ. ಅಂತಹ ಬಂಡೆಗಳ ಮೇಲೆ ಕುಳಿತು ಧ್ಯಾನ ಮಾಡಿದರೆ ಮನಶ್ಶಾಂತಿ ಲಭಿಸುತ್ತದಂತೆ!
ಚಿತ್ರಕೃಪೆ: Warangalite
ಹನುಮಕೊಂಡ
ಇನ್ನೂ ಇಲ್ಲಿರುವ ಎರಡನೇಯ ದೇವಾಲಯವಾಗಿ ಪದ್ಮಾಕ್ಷಿ ದೇವಾಲಯ ಗಮನಸೆಳೆಯುತ್ತದೆ. ಇದು ಕುತೂಹಲ ಕೆರಳಿಸುವ ಬೆಟ್ಟ ತಾಣವಾಗಿದ್ದು ಧಾರ್ಮಿಕವಾಗಿ ಸಾಕಷ್ಟು ಮಹತ್ವಗಳಿಸಿದೆ. ಜೈನ ಹಾಗೂ ಹಿಂದು ಧರ್ಮದ ವಾಸ್ತುಶೈಲಿಯನ್ನು ಏಕಕಾಲದಲ್ಲಿ ಇಲ್ಲಿ ನೋಡಬಹುದು. ಜೈನ ಧರ್ಮಕ್ಕೆ ಸಂಬಂಧಿಸಿದಂತೆ ಬಸದಿ ಹಾಗೂ ತೀರ್ಥಂಕರರ ವಿಗ್ರಹವಿದ್ದರೆ, ಹಿಂದು ಧರ್ಮಕ್ಕೆ ಸಂಬಂಧಿಸಿದಂತೆ ಪದ್ಮಾಕ್ಷಿಯ ನೆಲೆಯಿರುವ ದೇವಾಲಯವಿದೆ.
ಚಿತ್ರಕೃಪೆ: Sharma.ND
ಬತುಕಮ್ಮ
ಇದು ತೆಲಂಗಾಣದ ಉತ್ಸವವಾದ ಬತುಕಮ್ಮ ಪಂಡುಗ ಹಬ್ಬಕ್ಕೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಉತ್ಸವದ ವೈಭವವನ್ನು ನೋಡಲು ಎರಡು ಕಣ್ಣುಗಳೂ ಸಾಲದು. ಅದನ್ನು ಈ ಸ್ಥಳಕ್ಕೆ ತೆರಳಿಯೆ ಅನುಭವಿಸಬೇಕು. ಸಾಕಷ್ಟು ಪುರಾತನವಾಗಿರುವ ಈ ಗುಡ್ಡ ದೇವಾಲಯವು ಇಂದು ಎಲ್ಲರೂ ಇಷ್ಟ ಪಟ್ಟು ವರ್ಷಪೂರ್ತಿ ಭೇಟಿ ನೀಡುವ ಐತಿಹಾಸಿಕ ಆಕರ್ಷಣೆಯಾಗಿಯೂ ಗಮನ ಸೆಳೆಯುತ್ತಿದೆ. ಇದನ್ನು ಮತ್ತಷ್ಟು ಜನಪ್ರೀಯಗೊಳಿಸಲೆಂದು ತೆಲಂಗಾಣ ಸರ್ಕಾರವು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ.
ಚಿತ್ರಕೃಪೆ: Sharma.ND
ಪ್ರಾಚೀನ ದೇವಾಲಯ
ಹನ್ನೇರಡನೇಯ ಶತಮಾನದಲ್ಲಿ ಇಂದಿನ ತೆಲಂಗಾಣ ಪ್ರದೇಶವನ್ನು ಆಳುತ್ತಿದ್ದ ಕಾಕತೀಯರಿಂದ ಈ ಗುಡ್ಡ ದೇವಾಲಯ ನಿರ್ಮಿತವಾಗಿದೆ. ಅದಕ್ಕೂ ಮೊದಲು ಇಲ್ಲಿ ಜೈನ ಶಿಲ್ಪಕಳೆಗಳಿರುವುದನ್ನು ಕಾಣಬಹುದು. ಜೈನ ಬಸದಿ, ತೀರ್ಥಂಕರರ ವಿಗ್ರಹ ಹೀಗೆ ಹಲವು ಜೈನ ಕುರುಹುಗಳನ್ನು ಕಾಣಬಹುದು. ಆ ನಂತರ ಆಳಿದ ಕಾಕತೀಯರು ಇಲ್ಲಿ ಪದ್ಮಾಕ್ಷಿಯನ್ನು ಪ್ರತಿಷ್ಠಾಪಿಸಿದರು. ತೆಲಂಗಾಣದಲ್ಲಿ ಕಾಕತೀಯರ ವೈಭವ ಸಾರುವ ಹಲವು ದೇವಾಲಯಗಳ ಪೈಕಿ ಇದೂ ಸಹ ಒಂದು.
ಚಿತ್ರಕೃಪೆ: Adityamadhav83
ಶಾಂತಿಯುತವಾಗಿದೆ
ಈ ತಾಣವು ಬೆಟ್ಟ ಗುಡ್ಡಗಳಿರುವ ಪ್ರದೇಶದಲ್ಲಿ ನೆಲೆಸಿದ್ದು ಸಾಕಷ್ಟು ಪ್ರಶಾಂತಮಯವಾಗಿದೆ. ವಿಶಾಲವಾದ ಬಂಡೆಗಲ್ಲಿನ ಬೆಟ್ಟವೊಂದರ ಮೇಲೆ ನೆಲೆಸಿರುವ ಈ ದೇವಾಲಯವನ್ನು ಸುಲಭವಾಗಿ ಏರಬಹುದು. ಬೆಟ್ಟ ಹತ್ತಲು ಮೆಟ್ಟಿಲುಗಳನ್ನು ಕೊರೆಯಲಾಗಿದ್ದು ಪ್ರವಾಸಿಗರು/ಭಕ್ತರು ಬೆಟ್ಟ ಏವುದನು ಇದು ಇನ್ನಷ್ಟು ಸುಗಮಗೊಳಿಸಿದೆ.
ಚಿತ್ರಕೃಪೆ: Adityamadhav83
ಗೋಡೆಯ ಮೇಲೆ
ದೇವಾಲಯದ ಗೋಡೆಯ ಮೇಲೆ ಪದ್ಮಾಕ್ಷಿಯ ವರ್ಣಚಿತ್ರವಿದ್ದು ಸ್ಥಳೀಯರು ಆಕೆಯನ್ನು ಬತುಕಮ್ಮ ಅಥವಾ ಪದ್ಮಾಕ್ಷಮ್ಮ ಎಂದೆ ಆರಾಧಿಸುತ್ತಾರೆ. ಒಂದು ಕಥೆಯಂತೆ ಹಿಂದೆ ಚೋಳ ರಾಜನಾದ ಧರ್ಮಾಂಗದನಿಗೆ ಒಂದು ಸಂತಾನವೂ ಇರಲಿಲ್ಲ.
ಚಿತ್ರಕೃಪೆ: Adityamadhav83
ಸಂತಾನಾಪೇಕ್ಷೆ
ಆ ರಾಜ ದಂಪತಿಗಳು ಎಲ್ಲ ಗುಡಿ-ಗುಂಡಾರಗಳನ್ನು ಸುತ್ತಿದರು, ಹರಕೆ ಕಟ್ಟಿಕೊಂಡರು, ಪೂಜೆಗಳನ್ನು ಮಾಡಿದರು. ಆ ನಂತರ ಬಹು ಸಮಯದ ನಂತರ ಅವರಿಗೆ ಹೆಣ್ಣು ಸಂತಾನವಾಯಿತು. ಆ ಸಂತಾನ ಹುಟ್ಟಿದಾಗಿನಿಂದಲೂ ಸಾಕಷ್ಟು ಅವಗಢ/ಅಪಘಾತಗಳಿಗೆ ಒಳಗಾದರೂ ಪವಡವೆಂಬಂತೆ ಬದುಕಿದಳು. ಹೀಗಾಗಿ ಅವಳನ್ನು ಬತುಕಮ್ಮ (ಬದುಕಮ್ಮ) ಎಂಬ ಹೆಸರು ಬಂದಿತೆನ್ನಲಾಗಿದೆ.
ಚಿತ್ರಕೃಪೆ: padmakshi.org
ಆಚರಿಸಲ್ಪಡುತ್ತದೆ
ತೆಲಂಗಾಣದ ರಾಜ್ಯ ಮಟ್ಟದ ಉತ್ಸವವಾಗಿರುವ ಬತುಕಮ್ಮ ಪಂಡುಗವನ್ನು ಇಲ್ಲಿ ಬಲು ಅದ್ದೂರಿಯಿಂದ ಆಚರಿಸಲಾಗುತ್ತದೆ. ಈ ಉತ್ಸವವು ಸೆಪ್ಟಂಬರ್-ಅಕ್ಟೋಬರ್ ಸಮಯದಲ್ಲಿ ಬರುತ್ತದೆ. ವಿಶೇಷವೆಂದರೆ ಈ ಉತ್ಸವವು ಮಹಿಳೆಯರಿಂದ ಮಾತ್ರವೆ ಆಚರಿಸಲ್ಪಡುವುದು. ರಾಜ್ಯದ ಎಲ್ಲ ಭಾಗಗಳಲ್ಲಿ ಇದು ಆಚರಿಸಲ್ಪಡುತ್ತದೆ. ಆದರೆ ಪದ್ಮಾಕ್ಷಿ ಗುಟ್ಟದ ಉತ್ಸವ ಸಾಕಷ್ಟು ವಿಶೇಷವಗಿರುತ್ತದೆ.
ಚಿತ್ರಕೃಪೆ: Randhirreddy
ಸಾವಿರ ಕಂಬಗಳ ದೇಗುಲ
ಕಾಕತೀಯರ ಕಾಲದಲ್ಲಿ ನಿರ್ಮಿತವಾದ ಬಲು ಪ್ರಾಚೀನ ದೇವಾಲಯ ಇದಾಗಿದೆ. ಅತ್ಯಾಕರ್ಷಕ ಕೆತ್ತನೆ ಕೆಲಸ ಹಾಗೂ ವಾಸ್ತುಶೈಲಿ ಈ ದೇವಾಲಯದಲ್ಲಿ ಕಂಡುಬರುತ್ತದೆ. ಆದಾಗ್ಯೂ ಈ ದೇವಾಲಯದ ವಿಶೇಷತೆ ಎಂದರೆ ಇಲ್ಲಿರುವ ಅನಂತ ಕಂಬಗಳು. ಕಣ್ಣು ಹಾಯಿಸಿದಷ್ಟೂ ಎಲ್ಲೆಲ್ಲೂ ಕಂಬವೆ ಕಂಬಗಳು.
ಚಿತ್ರಕೃಪೆ: Kotagaunisrinivas
ದೇವಾಲಯಗಳ ನಿರ್ಮಾಣ
ಹಿಂದೆ ವಾರಂಗಲ್ ಭಾಗದಲ್ಲಿ ಐತಿಹಾಸಿಕವಾಗಿ ಗಮನಿಸಿದಾಗ ಹನ್ನೊಂದು ಹಾಗೂ ಹನ್ನೆರಡನೇಯ ಶತಮಾನಗಳಲ್ಲಿ ಕಾಕತೀಯರ ಸಾಮ್ರಾಜ್ಯವಿತ್ತು. ಕಾಕತೀಯ ಸಾಮ್ರಾಜ್ಯದಲ್ಲಿ ಪ್ರಮುಖವಾಗಿ ಗಣಪತಿ ದೇವ, ರುದ್ರಮ ದೇವಿ ಹಾಗೂ ಪ್ರತಾಪರುದ್ರರು ದೇವಾಲಯಗಳ ನಿರ್ಮಾಣದಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ.
ಚಿತ್ರಕೃಪೆ: Gopal Veeranala
ರುದ್ರ ದೇವ
ಪ್ರಸ್ತುತ ಸಾವಿರ ಕಂಬಗಳ ದೇವಾಲಯವು ಹನ್ನೊಂದರಿಂದ ಹದಿಮೂರನೇಯ ಶತಮಾನದ ಮಧ್ಯದ ಸಮಯದಲ್ಲಿ ನಿರ್ಮಾಣವಾಗಿದ್ದು ಇದರ ನಿರ್ಮಾಣವು ರುದ್ರ ದೇವ ರಾಜನ ಇಚ್ಛೆಯಿಂದಾಗಿದೆ ಎಂದು ತಿಳಿದುಬರುತ್ತದೆ.
ಚಿತ್ರಕೃಪೆ: Devadaskrishnan
150 ಕಿ.ಮೀ ಗಳಷ್ಟು
ರಾಜ್ಯದ ರಾಜಧಾನಿ ಹೈದರಾಬಾದ್ ನಗರದಿಂದ 150 ಕಿ.ಮೀ ಗಳಷ್ಟು ದೂರದಲ್ಲಿ ಹನುಮಕೊಂಡ-ವಾರಂಗಲ್ ಹೆದ್ದಾರಿಯ ಮೇಲೆ ಅವಶೇಷಗಳಾಗಿ ಕಂಡುಬರುವ ಈ ಆಕರ್ಷಕ ದೇವಾಲಯ ತಾಣವು ಇತ್ತೀಚಿನ ಕೆಲ ಸಮಯದಿಂದ ಐತಿಹಾಸಿಕ ಪ್ರವಾಸಿ ಆಕರ್ಷಣೆಯಾಗಿ ಗಮನಸೆಳೆಯುತ್ತಿದೆ.
ಚಿತ್ರಕೃಪೆ: AnushaEadara
ನಿರ್ವಹಣೆ
ಭಾರತೀಯ ಪುರಾತತ್ವ ಇಲಾಖೆಯಿಂದ ದೇವಾಲಯವು ನಿರ್ವಹಿಸಲ್ಪಡುತ್ತಿದ್ದು ಆಧುನಿಕ ತಂತ್ರಜ್ಞರು ಈ ದೇವಾಲಯವನ್ನು ನವೀಕರಣಗೊಳಿಸುವಲ್ಲಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ದೇವಾಲಯವನ್ನು ಒಂದು ಮೀ. ಎತ್ತರವಾಗಿ ನಿರ್ಮಿಸಲಾದ ಕಟ್ಟೆಯ ಮೇಲೆ ನಿರ್ಮಾಣ ಮಾಡಲಾಗಿದೆ.
ಚಿತ್ರಕೃಪೆ: Bornav Raychaudhury
ನಂದಿ ವಿಗ್ರಹ
ದೇವಾಲಯದ ಆವರಣದಲ್ಲಿ ಕಂಡುಬರುವ ಆನೆಗಳು ಸುಂದರವಾಗಿ ಕೆತ್ತಲ್ಪಟ್ಟಿರುವುದನ್ನು ಕಾಣಬಹುದು. ಅಲ್ಲದೆ ಸಾಕಷ್ಟು ಹೊಳಪಿರುವ ಕಪ್ಪು ಶಿಲೆಯಲ್ಲಿ ಅದ್ಭುತವಾಗಿ ಕಡಿಯಲಾದ ನಂದಿ ವಿಗ್ರಹವು ನೋಡಿದ ಕ್ಷಣದಲ್ಲೆ ಆಕರ್ಷಿಸಿಬಿಡುತ್ತದೆ.
ಚಿತ್ರಕೃಪೆ: AnushaEadara
ಶಿವಲಿಂಗಗಳು
ಈ ದೇವಾಲಯವು ನಕ್ಷತ್ರಾಕಾರದಲ್ಲಿದ್ದು ಶಿವಲಿಂಗಗಳನ್ನು ಹೊಂದಿರುವುದನ್ನು ಕಾಣಬಹುದು. ಅಲ್ಲದೆ ಮುಖ್ಯ ದೇವಾಲಯದಲ್ಲಿ ಮೂರು ಪ್ರಮುಖ ಸನ್ನಿಧಿಗಳಿದ್ದು ಇದನ್ನು ತ್ರಿಕೂಟಾಲಯ ಎಂದು ಕರೆಯಲಾಗಿದೆ. ತ್ರಿಕೂಟಾಲಯ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರನ ಸನ್ನಿಧಿಗಳನ್ನು ಒಳಗೊಂಡಿದೆ.
ಚಿತ್ರಕೃಪೆ: AnushaEadara
ಅಡ್ಡ ಬರುವುದಿಲ್ಲ
ಇನ್ನೂ ಕೊನೆಯದಾಗಿ ಆದರೆ ಬಲು ಮುಖ್ಯವಾಗಿ ಈ ದೇವಾಲಯದ ಬಗ್ಗೆ ಹೇಳಬೇಕೆಂದರೆ ಇಲ್ಲಿರುವ ಸಾವಿರ ಕಂಬಗಳು. ಅದರಿಂದಲೆ ಇದಕ್ಕೆ ಸಾವಿರ ಕಂಬಗಳ ದೇವಾಲಯ ಎಂಬ ಹೆಸರು ಬಂದಿದೆ. ಈ ಸಾವಿರ ಕಂಬಗಳನ್ನು ಬಲು ಚಾಣಾಕ್ಷತೆಯಿಂದ ವಿವಿಧ ಸ್ಥಳಗಳಲ್ಲಿ ನಿಲ್ಲಸಲಾಗಿದ್ದು, ದೇವಾಲಯದ ಯಾವುದೆ ಭಾಗದಿಂದ ಗರ್ಭಗೃಹವನ್ನು ನೋಡುವಾಗ ಕಂಬಗಳು ಅಡ್ಡಬರುವುದಿಲ್ಲ.
ಚಿತ್ರಕೃಪೆ: Manasa kethiri
ದೂರ ಎಷ್ಟು?
ವಾರಂಗಲ್ ರೈಲು ನಿಲ್ದಾಣದಿಂದ ಕೇವಲ ನಾಲ್ಕು ಕಿ.ಮೀ ಗಳಷ್ಟು ದೂರದಲ್ಲಿದೆ ಸಾವಿರ ಕಂಬಗಳ ದೇವಾಲಯ. ತಲುಪಲು ರಿಕ್ಷಾಗಳು ಹಾಗೂ ಬಾಡಿಗೆ ಕಾರುಗಳು ನಿರಾಯಾಸವಾಗಿ ವಾರಂಗಲ್ ನಿಂದ ದೊರೆಯುತ್ತವೆ.
ಚಿತ್ರಕೃಪೆ: G41rn8