ವಿಷ್ಣುವಿನ ದಶಾವತಾರಗಳಲ್ಲಿ ಒಂದಾಗಿದೆ ಕೂರ್ಮಾವತಾರ. ಮೊದಲಿಗೆ ಮತ್ಸ್ಯನಾಗಿ ವಿಷ್ಣು ಲೋಕವನ್ನು ಕಾಪಾಡಿದರೆ ತನ್ನ ಎರಡನೇಯ ಅವತಾರದಲ್ಲಿ ಕೂರ್ಮನಾಗಿ ಅಂದರೆ ಆಮೆಯ ರೂಪದಲ್ಲಿ ಅವತರಿಸಿ ದೇವತೆಗಳು ತಾವು ಕಳೆದುಕೊಂಡ ಅಮರತ್ವ ಹಾಗೂ ದೈವಿಕ ಶಕ್ತಿ, ಪ್ರಭಾವಗಳನ್ನು ಮರು ಸಿಗುವಂತೆ ಮಾಡಿದ.
ವಿಷ್ಣುವಿನನ್ನು ಕೂರ್ಮ ರೂಪದಲ್ಲಿಯೆ ಅಂದರೆ ಆಮೆಯ ರೂಪದಲ್ಲಿಯೆ ಆರಾಧಿಸಲಾಗುವ ದೇವಾಲಯಗಳನ್ನು ಭಾರತದಲ್ಲಿ ಕಾಣಬಹುದಾಗಿದ್ದರೂ ಅವುಗಳ ಸಂಖ್ಯೆ ಅತಿ ವಿರಳವೆಂದೆ ಹೇಳಬಹುದು. ಆದಾಗ್ಯೂ ಇತ್ತೀಚಿನ ಕೆಲ ವರ್ಷಗಳಲ್ಲಿ ಹಲವೆಡೆ ಕೂರ್ಮಾವತಾರದ ದೇವಾಲಯಗಳ ನಿರ್ಮಾಣವಾಗಿದ್ದರೂ ಪ್ರಮುಖವಾಗಿ ಮೊದಲಿನಿಂದಲೂ ಮೂರು ಮುಖ್ಯ ದೇವಾಲಯಗಳನ್ನು ನೋಡಬಹುದು.
ಅಷ್ಟಕ್ಕೂ ವಿಷ್ಣುವಿನ ಕೂರ್ಮಾವತಾರಕ್ಕೆ ಕಾರಣವೇನು? ಒಮ್ಮೆ ದುರ್ವಾಸ ಮುನಿಗಳು ದೇವತೆಗಳ ಕೆಲಸದಿಂದ ಸಂತಸಪಟ್ಟು ದೇವಲೋಕಕ್ಕೆ ಆಗಮಿಸಿ ದೇವೇಂದ್ರನಿಗೆ ಹೂಮಾಲೆಯನ್ನು ಅರ್ಪಿಸುತ್ತಾರೆ. ಆ ಮಾಲೆಯನ್ನು ಇಂದ್ರನು ತೆಗೆದುಕೊಂಡು ತನ್ನ ಐರಾವತ ಆನೆಯ ಮೇಲಿಡಲು ಅದು ಅದನ್ನು ವಿರೂಪಗೊಳಿಸಿ ಕೆಳ ಬೀಳಿಸುತ್ತದೆ. ಇದರಿಂದ ಅವಮಾನಿತರಾದ ಮುನಿಗಳು ಕೋಪಗೊಳ್ಳುತ್ತಾರೆ.
ಚಿತ್ರಕೃಪೆ: wikipedia
ಹೀಗೆ ಕೋಪಗೊಂಡ ಮುನಿಗಳು ಸಕಲ ದೇವತೆಗಳ ದೈವಿ ಶಕ್ತಿ ತೊಲಗಿ ಹೋಗುವಂತೆ ಶಪಿಸುತ್ತಾರೆ. ಈಗ ಅಳುವ ಸರದಿ ದೇವತೆಗಳದ್ದು. ಎಲ್ಲರೂ ಕ್ಷಮಾಪಣೆ ಕೇಳಿ ಕೊನೆಗೆ ವಿಷ್ಣುವಿನ ಮೊರೆ ಹೋಗುತ್ತಾರೆ. ವಿಷ್ಣು ಅವರ ಪಾಶ್ಚಾತಾಪವನ್ನು ಅರಿತು ಸಮುದ್ರ ಮಂಥನ ನಡೆಸಿ ಅದರಿಂದ ಉತ್ಪತ್ತಿಯಾಗುವ ಅಮೃತವನ್ನು ಸೇವಿಸುವಂತೆ ಉಪದೇಶಿಸುತ್ತಾನೆ.
ಹೀಗೆ ಸುರರು ಹಾಗೂ ಅಸುರರು ವಾಸುಕಿ ಸರ್ಪವನ್ನು ಮಂಥನದ ಹಗ್ಗವಾಗಿಯೂ, ಮಂದಾರ ಪರ್ವತವನ್ನು ಮಂಥನದ ಕಟ್ಟಿಗೆಯಾಗಿಯೂ ಬಳಸುತ್ತ ಸಮುದ್ರವನ್ನು ಕಡಿಯಲು ಪ್ರಾರಂಭಿಸುತ್ತಾರೆ. ಆದರೆ ಮಂದಾರ ಪರ್ವತವು ಸಮುದ್ರ ತಳದೊಳಗೆ ನುಸುಳಲಾರಂಭಿಸುತ್ತದೆ. ಮತ್ತೆ ದೇವತೆಗಳ ಅಳಲನ್ನು ಪುರಸ್ಕರಿಸಿದ ವಿಷ್ಣು ಆಮೆಯ ಅವತಾರ ತಾಳಿ ಮಂದಾರ ಪರ್ವತ ತಳದೊಳಗೆ ಹೊಕ್ಕದಿರಲು ಅವಕಾಶ ಕಲ್ಪಿಸುತ್ತಾನೆ.
ಚಿತ್ರಕೃಪೆ: wikipedia
ಈ ರೀತಿಯಾಗಿ ಕೂರ್ಮಾವತಾರವನ್ನು ಧರಿಸಿದ ವಿಷ್ಣು ಮತ್ತೆ ಲೋಕ ಕಲ್ಯಾಣವನ್ನುಂಟು ಮಾಡುತ್ತಾನೆ. ಈ ಅವತಾರಕ್ಕೆ ಗೌರವಾರ್ಥವಾಗಿ ಇಂದಿಗೂ ವಿಷ್ಣುವಿನನ್ನು ಕೂರ್ಮಾವತಾರದಲ್ಲಿಯೂ ಸಹ ಪೂಜಿಸಲಾಗುತ್ತದೆ. ಹಾಗಾದರೆ ಎಲ್ಲೆಲ್ಲಿ ಕೂರ್ಮಾವತಾರದ ದೇವಾಲಯಗಳನ್ನು ಕಾಣಬಹುದು? ಹಾಗಿದ್ದಲ್ಲಿ ಈ ಲೇಖನ ಪೂರ್ತಿಯಾಗಿ ಓದಿ, ಸಂದರ್ಭ ಸಿಕ್ಕಾಗ ನೀವೂ ಸಹ ಆ ದೇವಾಲಯಗಳಿಗೆ ಭೇಟಿ ನೀಡಿ.
ಶ್ರೀ ಕೂರ್ಮಂ ದೇವಾಲಯ : ಆಂಧ್ರಪ್ರದೇಶ ರಾಜ್ಯದ ಶ್ರೀಕಾಕುಲಂ ಜಿಲ್ಲೆಯ ಗಾರ ಮಂಡಲದಲ್ಲಿರುವ (ತಾಲೂಕು) ಶ್ರೀಕೂರ್ಮಂ ಎಂಬ ಗ್ರಾಮದಲ್ಲಿ ವಿಷ್ಣುವಿನ ಕೂರ್ಮಾವತಾರದ ಬಲು ಪ್ರಸಿದ್ಧ ಹಾಗೂ ಸಾಕಷ್ಟು ಪುರಾತನವಾದ ಅದ್ಭುತ ದೇವಾಲಯವಿದೆ. ಶ್ರೀಕಾಕುಲಂ ಪಟ್ಟಣದಿಂದ ಕೇವಲ ಹದಿನಾಲ್ಕು ಕಿ.ಮೀ ಗಳಷ್ಟು ದೂರದಲ್ಲಿರುವ ಈ ದೇವಾಲಯಕ್ಕೆ ತೆರಳಲು ಸಾಕಷ್ಟು ಬಸ್ಸುಗಳು ದೊರೆಯುತ್ತವೆ.
ಕೂರ್ಮನಾಥ, ಶ್ರೀಕಾಕುಲಂ, ಚಿತ್ರಕೃಪೆ: విశ్వనాధ్.బి.కె.
ಇಲ್ಲಿ ದೊರೆತಿರುವ ಶಾಸನಗಲ ಪ್ರಕಾರ ಈ ದೇವಾಲಯದ ಕಾಲಮಾನ ಸುಮಾರು ಹನ್ನೆರಡನೇಯ ಶತಾಮಾನ. ಶ್ರೀ ರಾಮಾನುಜಾಚಾರ್ಯರು ಪುರಿಯ ಜಗನ್ನಾಥನಿಂದ ಪ್ರಭಾವಿತರಾಗಿ ಇಲ್ಲಿ ಕೂರ್ಮಕ್ಷೇತ್ರವನ್ನು ಮತ್ತೆ ಪ್ರವರ್ಧಮಾನಕ್ಕೆ ಕರೆತಂದರು. ನಂತರ ಈ ಕ್ಷೇತ್ರವು ವಿಜಯನಗರ ಅರಸರ ಸುಪರ್ದಿಗೆ ಸೇರಿತು.
ಶ್ರೀ ಕೂರ್ಮಂ ದೇವಾಲಯದಲ್ಲಿ ವಿಷ್ಣುವಿನನ್ನು ಕೂರ್ಮನಾಥನನ್ನಾಗಿ ಪೂಜಿಸಲಾಗುತ್ತದೆ. ಇಲ್ಲಿರುವ ಸಾಲಿಗ್ರಾಮವು ಕೂರ್ಮನಾಥನ ಮೂಲ ಸ್ಥಾನ ಎಂದು ಪರಿಗಣಿಸಲಾಗಿದೆ. ಅಲ್ಲದೆ ದೇವಾಲಯದ ಗೋಡೆಗಳಲ್ಲಿ ಹಲವಾರು ಇತರೆ ದೇವ, ದೇವತೆಯರ ಸುಂದರ ಕೆತ್ತನೆಗಳಿರುವುದನ್ನೂ ಕಾಣಬಹುದು.
ಶ್ರೀಕಾಕುಲಂ ಕಲ್ಯಾಣಿ, ಚಿತ್ರಕೃಪೆ: విశ్వనాధ్.బి.కె.
ಕೂರ್ಮೈ : ಆಂಧ್ರದ ಚಿತ್ತೂರು ಜಿಲ್ಲೆಯ ಪಲಮನೇರ ಮಂಡಲದಲ್ಲಿರುವ ಕೂರ್ಮಾಯಿ ಅಥವಾ ಕೂರ್ಮೈ ಗ್ರಾಮವೂ ಸಹ ಕೂರ್ಮನಾಥನ ದೇವಾಲಯವಿರುವ ಧಾರ್ಮಿಕ ಮಹತ್ವದ ಸ್ಥಳವಾಗಿದೆ. ಇಲ್ಲಿರುವ ವಿಷ್ಣುವಿನನ್ನು ಕೂರ್ಮ ವರದರಾಜ ಸ್ವಾಮಿ ಎಂದು ಆರಾಧಿಸಲಾಗುತ್ತದೆ. ಈ ದೇವಾಲಯವೂ ಸಾಕಷ್ಟು ಪ್ರಾಚೀನವಾಗಿದ್ದು ವೈಷ್ಣ ಭಕ್ತಾದಿಗಳನ್ನು ಸೆಳೆಯುತ್ತದೆ.
ವಿಷ್ಣುವಿನ ಸಹೋದರಿಯ ದೇವಾಲಯ!
ಗವಿ ರಂಗನಾಥಸ್ವಾಮಿ ದೇವಾಲಯ : ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದ ಬಳಿಯಿರುವ ಗವಿ ರಂಗಾಪುರ ಎಂಬುದು ಒಂದು ಗ್ರಾಮವಾಗಿದ್ದು ಅದು ತನ್ನಲ್ಲಿರುವ ಗವಿ ರಂಗನಾಥಸ್ವಾಮಿಯ ದೇವಾಲಯದಿಂದಾಗಿ ಪ್ರಸಿದ್ಧಿ ಪಡೆದಿದೆ. ಮೂಲತಃ ಗವಿಯೊಂದರಲ್ಲಿ ನೆಲೆಸಿರುವ ರಂಗನಾಥ ಸ್ವಾಮಿಯು ಕೂರ್ಮಾವತಾರದಲ್ಲಿರುವುದು ವಿಶೇಷ. ಹಾಗಾಗಿ ಇದೊಂದು ಪ್ರಸಿದ್ಧ ಕೂರ್ಮ ದೇವಾಲಯವಾಗಿದೆ.
ಕರ್ನಾಟಕದ ಪ್ರಸಿದ್ಧ ವಿಷ್ಣು ದೇವಾಲಯಗಳು