ಪ್ರತಿಯೊಬ್ಬರು ಮನೆಕಟ್ಟಿಸುವಾಗ ಅದಕ್ಕೆ ಭದ್ರವಾದ ಬಾಗಿಲನ್ನು ನಿರ್ಮಿಸುತ್ತಾರೆ. ಯಾಕೆಂದರೆ ಬಾಗಿಲು ಮನೆಗೆ ಸುರಕ್ಷಾ ಕವಚವಿದ್ದಂತೆ. ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಕಾಪಾಡಲು ಬಾಗಿಲು ಬೇಕೆ ಬೇಕು. ಇಲ್ಲವಾದಲ್ಲಿ ಮನೆಯಲ್ಲಿರುವ ಸ್ವತ್ತುಗಳೆಲ್ಲಾ ಕಳ್ಳಕಾಕರ ಪಾಲಾಗಬಹುದು. ಆದರೆ ಇದಕ್ಕೆ ತದ್ವಿರುದ್ಧವಾಗಿರುವ ಹಳ್ಳಿಯೊಂದಿದೆ ಮಹಾರಾಷ್ಟ್ರದಲ್ಲಿ. ಆ ಹಳ್ಳಿಯ ಜನರು ಬಾಗಿಲುಗಳಿಲ್ಲದ ಮನೆಯಲ್ಲಿ ಹೇಗೆ ವಾಸಿಸುತ್ತಿದ್ದಾರೆ. ಯಾಕಾಗಿ ಮನೆಗಳಿಗೆ ಬಾಗಿಲು ನಿರ್ಮಿಸುತ್ತಿಲ್ಲ ಎನ್ನುವುದರ ಹಿಂದಿದೆ ಒಂದು ಕುತೂಹಲಕಾರಿ ಕಥೆ.

ಎಲ್ಲಿದೆ ಈ ಊರು?
PC: PTI
ಸಾಮಾನ್ಯವಾಗಿ ಯಾವುದೇ ಮನೆಯಲ್ಲಾದರೂ ಬಾಗಿಲು ಇದ್ದೇ ಇರುತ್ತದೆ. ಮಹಾರಾಷ್ಟ್ರದಲ್ಲಿರುವ ಶನಿ ಶಿಂಗನಪುರ ಎನ್ನುವ ಹಳ್ಳಿಯಲ್ಲಿ ಜನರು ಬಾಗಿಲು ಇಲ್ಲದ ಮನೆಗಳಲ್ಲೇ ವಾಸ ಮಾಡುತ್ತಿದ್ದಾರೆ. ಕೇವಲ ಮನೆಗಳಿಗೇ ಅಲ್ಲ. ಇಲ್ಲಿನ ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ಗಳಿಗೂ ಬಾಗಿಲುಗಳಿಲ್ಲ. ಪ್ರತಿಯೊಂದು ಕಟ್ಟಡವು ಕೇವಲ ಬಾಗಿಲಿನ ಚೌಕಟ್ಟು ಮಾತ್ರ ಇದೆ. ಆದರೆ ಬಾಗಿಲುಗಳು ಇಲ್ಲ.

ಇಲ್ಲಿದೆ ಪ್ರಸಿದ್ಧ ಶನಿ ದೇವಸ್ಥಾನ
PC: Booradleyp1
ಈ ಊರಿನಲ್ಲಿ ಒಂದು ಪ್ರಸಿದ್ಧ ಶನಿ ದೇವಸ್ಥಾನವಿದೆ. ಶನಿ ದೇವರು ಇಲ್ಲಿನ ಜನರನ್ನು ಹಳ್ಳಿಯನ್ನು ರಕ್ಷಿಸುತ್ತಾರೆ ಎನ್ನುವ ನಂಬಿಕೆ ಇಲ್ಲಿನ ಜನರದ್ದು. ಹಾಗಾಗಿ ಇಲ್ಲಿನ ಬ್ಯಾಂಕ್ಗಳು, ಮನೆಗಳಿಗೆ ಬಾಗಿಲುಗಳಿಲ್ಲ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಈ ಊರಿನ ಬಗ್ಗೆ ಹೇಳಲು ಒಂದು ಕಥೆ ಕೂಡಾ ಇದೆ.

ಇದರ ಹಿಂದಿದೆ ಇಂಟ್ರಸ್ಟಿಂಗ್ ಕಥೆ
PC: PTI
ಶನಿ ಶಿಂಗಾಪುರದಲ್ಲಿ ಬಹಳ ವರ್ಷಗಳ ಹಿಂದೆ ಒಬ್ಬ ಕುರುಬ ನೆಲೆಸುತ್ತಿದ್ದ. ಆತ ಕಪ್ಪು ಬಣ್ಣದ ಕಲ್ಲನ್ನು ಒಂದು ರಾಡ್ನಿಂದ ಮುಟ್ಟಿದ ತಕ್ಷಣ ಆ ಕಲ್ಲಿನಿಂದ ರಕ್ತ ಸುರಿಯಲು ಪ್ರಾರಂಭವಾಯಿತು. ಇದನ್ನು ಕಂಡ ಊರಿನವರೆಲ್ಲಾ ಆಶ್ಚರ್ಯಕ್ಕೊಳಗಾದರು. ಅದೇ ದಿನ ರಾತ್ರಿ ಆತನ ಕನಸಿನಲ್ಲಿ ಶನಿ ದೇವ ಬಂದು ಆ ಕಲ್ಲು ನನ್ನದೇ ಅವತಾರ ಎಂದಿತ್ತು. ಅದನ್ನು ಕೇಳಿದ ಕುರುಬ. ಹಾಗಾದರೆ ಆ ಕಲ್ಲಿಗೊಂದು ದೇವಸ್ಥಾನವನ್ನು ಕಟ್ಟಿಸುವುದಾಗಿ ಹೇಳಿದಾಗ, ನಾನು ಆಕಾಶದ ಕೆಳಗೇ ಇರಲು ಇಚ್ಛಿಸುತ್ತೇನೆ. ಇಡೀ ಆಕಾಶವೇ ನನಗೆ ಉಪ್ಪರಿಗೆ ಎಂದಿತ್ತು. ಅಲ್ಲದೆ ಪ್ರತಿ ಶನಿವಾರ ತನಗೆ ಪೂಜೆ ಮಾಡಬೇಕೆಂದು ಕುರುಬನಲ್ಲಿ ಹೇಳಿತ್ತು ಶನಿ. ಬದಲಿಗೆ ತಾನು ಆ ಊರನ್ನು ಕಳ್ಳ ಕಾಕರಿಂದ ರಕ್ಷಿಸುವುದಾಗಿ ತಿಳಿಸಿತ್ತು ಎನ್ನಲಾಗುತ್ತದೆ.

ಬ್ಯಾಂಕ್ಗಳಿಗೂ ಬಾಗಿಲುಗಳಿಲ್ಲ
PC: PTI
ಇಂದಿನವರೆಗೂ ಆ ಊರಿನಲ್ಲಿ ಬಾಗಿಲುಗಳೇ ಇಲ್ಲ. ಮನೆಗಳು, ಶಾಲೆಗಳು. ಪೋಸ್ಟ್ ಆಫೀಸ್, ಬ್ಯಾಂಕ್ಗಳಿಗೂ ಬಾಗಿಲುಗಳು ಇಲ್ಲ. ಆದರೆ 2011ರಲ್ಲಿ ಸ್ಥಾಪನೆಯಾದ ಯುಸಿಓ ಬ್ಯಾಂಕ್ ಮಾತ್ರ ಈ ಹಳೆಯ ಸಂಪ್ರದಾಯವನ್ನು ಮುಂದುವರಿಸಿಲ್ಲ. ಈ ಬ್ಯಾಂಕ್ನ ಕಟ್ಟಡಕ್ಕೆ ಬಾಗಿಲುಗಳಿವೆ. ಲಾಕರ್ಗಳಿವೆ. ಹಿಂದಿನ ಸಂಪ್ರದಾಯ ಏನೇ ಇದ್ದರೂ ಈ ಬ್ಯಾಂಕ್ಗೆ ಮಾತ್ರ ಕಳ್ಳಕಾಕರ ಭಯವಿದೆ ಹಾಗಾಗಿ ಬ್ಯಾಂಕ್ಗೆ ಬಾಗಿಲನ್ನು ನಿರ್ಮಿಸಿದೆ. ಈ ಹಳ್ಳಿಯಲ್ಲಿರುವ ಸುಮಾರು 6000 ಜನರ ಮನೆಗೆ ಬಾಗಿಲುಗಳೇ ಇಲ್ಲ.

ಕಳ್ಳತನ ಮಾಡಿದವರು ರಕ್ತ ಕಾರಿದರು
PC: PTI
2010ರವರೆಗೆ ಯಾವುದೇ ಕಳ್ಳತನದ ಪ್ರಕರಣಗಳು ಬೆಳಕಿಗೆ ಬಂದಿಲ್ಲ. ಈ ಊರಿನಲ್ಲಿ ಕಳ್ಳತನ ಮಾಡುವವರನ್ನು ಶನಿ ದೇವರು ಶಿಕ್ಷಿಸುತ್ತಾರೆ ಎಂದು ನಂಬುತ್ತಾ ಬಂದಿದ್ದಾರೆ ಇಲ್ಲಿನ ಜನತೆ. 2010ರಲ್ಲಿ ಕೆಲವು ಸ್ಥಳೀಯ ವ್ಯಕ್ತಿಗಳು ಕಳ್ಳತನದಲ್ಲಿ ಭಾಗಿಯಾಗಿದ್ದರು. ಆದರೆ ಈ ಪ್ರಕರಣವಾದ ಕೆಲವೇ ಗಂಟೆಗಳಲ್ಲಿ ರಕ್ತ ಕಾರುತ್ತಾ ಅವರು ಸಾವನ್ನಪ್ಪಿದ್ದಾರೆ. ಊರಿನ ಬಾರ್ಡರ್ನ್ನೂ ಅವರಿಂದ ದಾಟಲು ಸಾಧ್ಯವಾಗಿಲ್ಲ.

ಬಾಗಿಲು ಸದಾ ಎಲ್ಲರಿಗಾಗಿ ತೆರೆದೇ ಇರುತ್ತದೆ
PC: PTI
ಹಾಗಾಗಿ ಶನಿ ಶಿಂಗನ್ಪುರ ಭಾರತದಲ್ಲಿಯೇ ಭದ್ರತೆಯ ಹಳ್ಳಿ ಎನ್ನಲಾಗುತ್ತದೆ. ಇಲ್ಲಿನ ಜನರು ಯಾವುದೇ ಭಯವಿಲ್ಲದೆ ಜೀವಿಸುತ್ತಿದ್ದಾರೆ. ಇಲ್ಲಿನ ಪ್ರತಿ ಮನೆಯ ಬಾಗಿಲು ಯಾವಾಗಲೂ ಎಲ್ಲರಿಗೂ ತೆರೆದೇ ಇರುತ್ತದೆ. ಶನಿ ದೇವರ ಮೇಲೆ ನಂಬಿಕೆ ಇಟ್ಟಿದ್ದಾರೆ.


Click it and Unblock the Notifications
















