ಇಂದು ದುರ್ಗಾ ದೇವಿ, ಭಗವತಿ ದೇವಿ ಎಂದೆಲ್ಲ ಕರೆಸಿಕೊಳ್ಳುವ ಈ ದೇವಿಯು ಹಿಂದೆ ಒಬ್ಬ ಸಾಧಾರಣ ಮನುಷ್ಯ. ಬ್ರಾಹ್ಮಣ ಕುಲದ ಅಗಾಧ ಜ್ಞಾನ ಹೊಂದಿರುವ ಒಬ್ಬ ಪುಟ್ಟ ಹುಡುಗಿಯಾಗಿ, ಪಂಡಿತರೊಡನೆ ವಾದ ಮಂಡನೆಗಳನ್ನು ಮಾಡಿ, ಅವರನ್ನು ಭಯಭೀತಗೊಳಿಸಿ ಕೊನೆಗೆ ಅವರ ಹುನ್ನಾರಕ್ಕೆ ಬಲಿಯಾಗಿ ಪಡಬಾರದ ಕಷ್ಟ ಕಾರ್ಪಣ್ಯಗಳನ್ನು ಪಟ್ಟು ಕೊನೆಗೆ ಪ್ರಾಣ ತ್ಯಜಿಸಿದವಳ ಕಥೆ ಇದು.
ಹೌದು, ಇಂದು ಈಕೆಯನ್ನು ದುರ್ಗೆಯ ಅವತಾರವೆಂದೆ ಪೂಜಿಸಲಾಗುತ್ತದೆ ಹಾಗೂ ವಾಣಿಯಾ ಸಮುದಾಯದವರು ಈಕೆಯನ್ನು ಕುಲ ದೇವಿಯಾಗಿಯೆ ಆರಾಧಿಸುತ್ತಾರೆ. ವಾಣಿಯಾ ಸಮುದಾಯದವರು ಮೂಲತಃ ಕೊಬ್ಬರಿ ಎಣ್ಣೆಯನ್ನು ತಯಾರಿಸಿ ಮಾರುವ ಜನಾಂಗದವರು. ಹೀಗೆ ಇವರನ್ನು ವಾಣಿಯರೆಂದೆ ಕರೆಯಲಾಗುತ್ತದೆ ಮತ್ತು ಇವರು ಕೇರಳದ ವ್ಯಾಪಾರಿಗಳು.
ಕೇರಳದ ಏಳು ಆಶ್ಚರ್ಯಕರ ದೇವಾಲಯಗಳು!
ಇವರನ್ನು ಮುಚ್ಚಿಲೋಡರು ಎಂತಲೂ ಕರೆಯಲಾಗುತ್ತದೆ. ಈ ಭಗವತಿ ದೇವಿಯು ಮುಚ್ಚಿಲೋಡರ ಕುಲ ದೇವಿಯಾಗಿರುವುದರಿಂದ ಈ ದೇವಿಯನ್ನು ಮುಚ್ಚಿಲೋಡ್ ಭಗವತಿ ಎಂದು ಕರೆಯುತ್ತಾರೆ ಮತ್ತು ನಂಬಿಕೆಯಂತೆ ಈಕೆಯ ಅವತಾರ ಸರ್ವ ರೀತಿಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಕ್ಕಾಗಿದೆ ಎನ್ನಲಾಗುತ್ತದೆ.
ಹಾಗಾದರೆ ಬನ್ನಿ, ಈ ದೇವಿಯ ಮಹಿಮೆ, ಸ್ಥಳ ಪುರಾಣ ಹಾಗೂ ಈ ದೇವಿಗೆ ಮುಡಿಪಾದ ದೇವಾಲಯಗಳಲ್ಲಿ ಪ್ರಮುಖವಾದ ಕೂವೇರಿ ಮುಚ್ಚಿಲೋಡ್ ಭಗವತಿ ದೇವಾಲಯದ ಕುರಿತು ಪ್ರಸ್ತುತ ಲೇಖನದ ಮೂಲಕ ತಿಳಿಯಿರಿ. ಸ್ಥಳ ಪುರಾಣ, ವಿಶಿಷ್ಟ ಆಚರಣೆಗಳಲ್ಲಿ ಆಸಕ್ತಿ ಇರುವವರು ಈ ತಾಣಕ್ಕೆ ಖಂಡಿತವಾಗಿಯೂ ಒಮ್ಮೆ ಭೇಟಿ ನೀಡಲೇಬೇಕು.
ವಿಶಿಷ್ಟ ದೇವಾಲಯ
ಮುಚ್ಚಿಲೋಡ್ ಭಗವತಿಯ ಈ ದೇವಾಲಯವು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತಲಿಪರಂಬಾ ತಾಲೂಕಿನ ಕೂವೇರಿ ಎಂಬ ಗ್ರಾಮದಲ್ಲಿದೆ. ಕಣ್ಣೂರಿನಿಂದ ಕೂವೇರಿಗೆ ತೆರಳಲು ಬಸ್ಸುಗಳು ದೊರೆಯುತ್ತವೆ.
ಚಿತ್ರಕೃಪೆ: Vaikoovery
ಹೇಗೆ ತಲುಪಬಹುದು
ಕಣ್ಣೂರಿನಿಂದ ತಲಿಪರಂಬಾ 22 ಕಿ.ಮೀ ಗಳಷ್ಟು ದೂರವಿದ್ದು, ತಲಿಪರಂಬಾನಿಂದ ಕೂವೇರಿ ಕೇವಲ 10 ಕಿ.ಮೀ ಗಳಷ್ಟು ದೂರದಲ್ಲಿದೆ. ಇನ್ನೂ ಕಣ್ಣೂರಿಗೆ ತೆರಳಲು ಬೆಂಗಳೂರಿನಿಂದ ರೈಲು ಹಾಗೂ ಬಸ್ಸುಗಳೆರಡೂ ದೊರೆಯುತ್ತವೆ.
ಚಿತ್ರಕೃಪೆ: Vaikoovery
ದೇವಿಯ ಹಿನ್ನಿಲೆ
ಇನ್ನೂ ಈ ದೇವಿಯ ಅವತಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕಥೆಗಳು ಚಾಲ್ತಿಯಲ್ಲಿವೆಯಾದರೂ ಪ್ರಮುಖ ನಂಬಿಕೆಯೊಂದು ಹೀಗಿದೆ : ಹಿಂದೆ ಮನಿಯೋಟ್ ಮನ ಎಂಬ ಸ್ಥಳದಲ್ಲಿ ಒಬ್ಬ ಪುಟ್ಟ ಬ್ರಾಹ್ಮಣ ಕುಲದ ಬಾಲಕಿಯೊಬ್ಬಳಿದ್ದಳು. ಅವಳು ಹುಟ್ಟಿನಿಂದಲೆ ಸಾಕಷ್ಟು ಚುರುಕಾಗಿದ್ದಳು ಹಾಗೂ ಬೆಳೆ ಬೆಳೆಯುತ್ತ ಅಪಾರ ಜ್ಞಾನ ಹಾಗೂ ಬುದ್ಧಿ ಹೊಂದಿದ್ದಳು.
ಚಿತ್ರಕೃಪೆ: Manojk
ನಡೆದ ಕಥೆ
ಈಕೆಯು 12 ವರ್ಷದವಳಿರುವಾಗಲೆ ವೇದ ಶಾಸ್ತ್ರಗಳ ಅಪಾರ ಜ್ಞಾನವನ್ನು ಸಂಪಾದಿಸಿದ್ದಳು. ಲೌಕಿಕವಾಗಿ ತಲೆ ದೋರುವ ಅನೇಕ ಸಮಸ್ಯೆಗಳಿಗೆ ಸಾಮಾನ್ಯ ಜನರಿಗೆ ಅತಿ ಸೂಕ್ತವಾದ ರೀತಿಯಲ್ಲೆ ಪರಿಹಾರಗಳನ್ನು ಸೂಚಿಸುತ್ತಿದ್ದಳು. ಹೀಗಾಗಿ ಎಲ್ಲರ ಮಧ್ಯದಲ್ಲಿ ಸಾಕಷ್ಟು ಗೌರವ ಸಂಪಾದಿಸಿದ್ದಳು.
ಚಿತ್ರಕೃಪೆ: Vaikoovery
ನಮ್ಮೋದಿಗೆ ವಾದ ಮಾಡುವಿರಾ?
ಹೀಗಿರುವಾಗ, ಆಕೆಯ ಗ್ರಾಮಕ್ಕೊಮ್ಮೆ ಪಂಡಿತಾರಾಧ್ಯರು, ವಿದ್ವಾನರ ಗುಂಪೊಂದು ಬಂದು ಎಲ್ಲರಿಗೂ ತಮ್ಮೊಡನೆ ವಾಗ್ವಾದ ಮಾಡಲು ಸವಾಲನ್ನೆಸೆದರು. ಅವರು ಪ್ರಬಲ ಪಂಡಿತರಾದ್ದರಿಂದ ಅವರೊಡನೆ ವೇದ ಶಾಸ್ತ್ರಗಳ ಕುರಿತು ವಾಗ್ವಾದ ಅಥವಾ ವಾದ ಮಂಡಿಸಲು ಯಾರೂ ಮುಂದೆ ಬರಲಿಲ್ಲ.
ಚಿತ್ರಕೃಪೆ: Vaikoovery
ನಾ ಮಾಡುವೆ ವಾದ
ಕೊನೆಗೆ ಆ ಪುಟ್ಟ ಬಾಲಕಿಯ ಸ್ನೇಹಿತೆಯು ಬಾಲಕಿ ಹತ್ತಿರ ತೆರಳಿ ವಿಷಯ ಪ್ರಸ್ತಾಪಿಸಿ ಬಾಲಕಿಯು ಅವರೊಡನೆ ವಾದ ಮಾಡಬೇಕೆಂದು ಕೋರಿಕೊಂಡಳು. ಸ್ನೇಹಿತೆಗೆ ಆ ಬಾಲಕಿಯೆ ಮೇಲೆ ಅಪಾರವಾದ ನಂಬಿಕೆ ಇದ್ದಿತು. ಅದಕ್ಕೆ ಪೂರಕವಾಗಿ ಬಾಲಕಿಯು ಒಪ್ಪಿ ಆ ವಿದ್ವಾನರ ಮುಂದೆ ತೆರಳಿ ವಾದ ಮಾಡಲು ಮುಂದಾದಳು.
ಚಿತ್ರಕೃಪೆ: Vaikoovery
ಎಲ್ಲರ ಪ್ರಶಂಸೆ
ಮೊದ ಮೊದಲು ಪುಟ್ಟ ಬಾಲಕಿ ಎಂದು ನಿರ್ಲಕ್ಷಿಸಿದ ಪಂಡಿತರು ಕೊನೆಗೆ ಆಕೆಯ ಕುರಿತು ಜನರಲ್ಲಿರುವ ವಿಶ್ವಾಸ ಮನಗಂಡು ವಾದ ಮಾಡಲು ಪ್ರಾರಂಭಿಸಿದರು. ಹೀಗೆ ಪ್ರಶ್ನೋತ್ತರಗಳು ರಭಸವಾಗಿ ಸಾಗಿತು. ಪಂಡಿತರ ಪ್ರತಿಯೊಂದು ಪ್ರಶ್ನೆಗಳಿಗೆ ತೀಕ್ಷ್ಣವಾದ ಉತ್ತರಗಳನ್ನು ಬಾಲಕಿ ಕೊಡಹತ್ತಿದಳು. ಎರಡು ದಿನಗಳ ಕಾಲ ವಾದ ಮುಂದುವರೆಯಿತು. ಕೊನೆಗೆ ಪಂಡಿತರಿಗೆ ಆಕೆಯಿಂದ ಸೋಲುವಂತಹ ಪರಿಸ್ಥಿತಿ ಬರಬಹುದೆಂಬ ಸಂದೇಹ ಬಂದಿತು.
ಚಿತ್ರಕೃಪೆ: Vaikoovery
ಕ್ಲಿಷ್ಟಕರ ಪ್ರಶ್ನೆಗಳು
ಹಾಗಾಗಿ ಅವರೆಲ್ಲ ಕೂಡಿಕೊಂಡು ಬಾಲಕಿಯನ್ನು ಹೇಗಾದರೂ ಮಾಡಿ ವಾದದಿಂದ ಹೊರ ಹಾಕಬೇಕೆಂದು ನಿಶ್ಚಯಿಸಿ ಮರು ದಿನ ಆಕೆಗೆ ಎರಡು ಕ್ಲಿಷ್ಟಕರ ಪ್ರಶ್ನೆಗಳನ್ನು ಕೇಳಿದರು. ಅವುಗಳೆಂದರೆ ಜೀವನದಲ್ಲಿ ಅತ್ಯಂತ ಸುಂದರ ಅನುಭವ ಯಾವುದು ಹಾಗೂ ನೋವಿನ ಅನುಭವ ಯವುದು?
ಚಿತ್ರಕೃಪೆ: Vaikoovery
ಕುಹುಕುತನದ ಅನಾವರಣ
ಅದಕ್ಕೆ ಬಾಲಕಿಯು ಕ್ಷಣ ಮಾತ್ರದಲ್ಲೆ ಮೊದಲನೆಯದು ಕಾಮ ಹಾಗೂ ಎರಡನೇಯದು ಹೆರಿಗೆ ನೋವು ಎಂದು ಉತ್ತರಿಸಿಯೆ ಬಿಟ್ಟಳು. ಈ ಸಂದರ್ಭದಲ್ಲಿ ವಿದ್ವಾನರು ಈ ಅನುಭವಗಳನ್ನು ಅನುಭವಿಸದ ಹೊರತು ಅವುಗಳ ಕುರಿತು ಹೇಳಲು ಸಾಧ್ಯವಿಲ್ಲವೆಂದು ಮಂಡಿಸಿ, ಹಾಗಾಗಿ ಆ ಪುಟ್ಟ ಬಾಲಕಿಯು ನೈತಿಕತೆ ಮರೆತು ಮಾಡ ಬಾರದ ಪಾಪಗಳನ್ನು ಮಾಡಿರುವಳೆಂದು ತಿರ್ಮಾನಿಸಿ ಆಕೆಗೆ ಬಹಿಷ್ಕಾರ ಹಾಕುವಂತೆ ಮಾಡಿದರು.
ಚಿತ್ರಕೃಪೆ: Vaikoovery
ಪ್ರಾಣ ತ್ಯಾಗ
ಇದರಿಂದ ಮನನೊಂದ ಆ ಬಾಲಕಿ ಅಲ್ಲಿಂದ ಉತ್ತರ ದಿಕ್ಕಿಗೆ ಪ್ರಯಾಣ ಬೆಳೆಸಿ ಕೊನೆಗೆ ಕರಿವೆಲ್ಲೂರಿನ ಶಿವ ದೇವಾಲಯಕ್ಕೆ ಬಂದು ಶಿವನಲ್ಲಿ ಪ್ರಾರ್ಥಿಸುತ್ತ ನಿಂತಳು. ಅಲ್ಲಿಯೆ ಸಾಗುತ್ತಿದ್ದ ವಾಣಿಯಾ ಜನಾಂಗದವನೊಬ್ಬನನ್ನು ತಡೆದು ಬೆಂಕಿಯಿಂದಾವೃತವಾದ ಕಲ್ಲಿದ್ದಿಲುಗಳಲ್ಲಿ ಎಣ್ಣೆ ಸುರಿಯಲು ಹೇಳಿ ಅದರಿಂದ ಉತ್ಪತ್ತಿಯಾದ ಅಗ್ನಿಯಲ್ಲಿ ತನ್ನ ಪ್ರಾಣ ತ್ಯಜಿಸಿ ಮಾಯವಾಗಿ ಹೋದಳು.
ಚಿತ್ರಕೃಪೆ: Manojk
ದೇವಿಯಾಗಿ ಬಂದಾಗ
ಹೀಗೆ ಶಿವನನ್ನು ತಲುಪಿದ ಆ ಬಾಲಕಿ ಶಿವನ ಕೃಪೆಗೆ ಪಾತ್ರಳಾಗಿ ಶಿವನಿಂದ ವರದಾನಗಳನ್ನು, ಆಶೀರ್ವಾದಗಳನ್ನು ಪಡೆದು ದೇವಿಯ ಸ್ಥಾನಮಾನ ಹೊಂದಿದಳು ಹಾಗೂ ಶಿವನ ಇಚ್ಛೆಯಂತೆ ಮತ್ತೆ ಭೂಲೋಕಕ್ಕೆ ಹಿಂತಿರುಗಿದಳು. ಅದರಲ್ಲೂ ವಿಶೇಷವಾಗಿ ಮುಚ್ಚಿಲೋಡ್ ಜನಾಂಗದವನೊಬ್ಬನ ಕನಸಿನಲ್ಲಿ ಪ್ರತ್ಯಕ್ಷಳಾಗಿ ಆ ಜನಾಂಗದ ಕುಲ ದೇವಿಯಾಗಿ ಮರು ಅವತರಿಸಿದಳು.
ಚಿತ್ರಕೃಪೆ: Vaikoovery
ಕೂವೇರಿ ಭಗವತಿ ದೇವಾಲಯ
ಈ ರೀತಿಯಾಗಿ ಈ ಭಗವತಿ ದೇವಿಯ ಅವತಾರವು ಜನ್ಮ ತಳೆಯಿತು ಹಾಗೂ ಇಂದು ಕೇರಳದ ಮಲಬಾರ್ ಪ್ರಾಂತ್ಯದ ಹಲವಾರು ಭಾಗಗಳಲ್ಲಿ ಮುಚ್ಚಿಕೋಡ್ ಭಗವತಿ ದೇವಿಯ ದೇವಾಲಯಗಳನ್ನು ಕಾಣಬಹುದು.
ಚಿತ್ರಕೃಪೆ: Vaikoovery
ಕನ್ನನ್ಗಟ್ಟು ಭಗವತಿ
ಕೂವೇರಿಯಲ್ಲಿರುವ ಭಗವತಿಯ ಈ ದೇವಾಲಯವು ಸಾಕಷ್ಟು ಪ್ರಸಿದ್ಧವಾಗಿದೆ. ಕನ್ನನ್ಗಟ್ಟು ಭಗವತಿ ದೇವಿಯ ವೇಷ್ಧಾರಿಯಾಗಿ ನರ್ತಕನೊಬ್ಬ ದೇವಾಲಯದ ಉತ್ಸವದಲ್ಲಿ ಅದ್ಭುತವಾಗಿ ನರ್ತಿಸುವ ಪದ್ಧತಿ ರೂಢಿಯಲ್ಲಿದೆ.
ಚಿತ್ರಕೃಪೆ: Vaikoovery
ಎಲ್ಲದಕ್ಕೂ ಯುದ್ಧ
ಅಲ್ಲದೆ ಈ ದೇವಾಲಯದಲ್ಲಿ ಇನ್ನೊಂದು ವಿಚಿತ್ರ ಆಚರಣೆಯಿದ್ದು ಅದರ ಪ್ರಕಾರವಾಗಿ ಚಂಗನ್ ಹಾಗೂ ಪೊಂಗನ್ ಎಂಬಿಬ್ಬರು ತಮ್ಮೊಳಗೆ ಜಗಳವಾಡುವ ವಿಶಿಷ್ಟ ಆಚರಣೆಯೊಂದನ್ನು ಇಲ್ಲಿ ಕಾಣಬಹುದು.
ಚಿತ್ರಕೃಪೆ: Vaikoovery
ಎಲ್ಲರೂ ಬನ್ನಿ
ಇದು ಸಾಕಷ್ಟು ಕುತೂಹಲ ಮೂಡಿಸುವ ಉತ್ಸವವಾಗಿದ್ದು ಅಕ್ಕ ಪಕ್ಕ ಗ್ರಾಮಗಳ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುತ್ತದೆ.
ಚಿತ್ರಕೃಪೆ: Vaikoovery