ತಮಿಳುನಾಡಿನ ರಾಜಧಾನಿ ನಗರವಾದ ಚೆನ್ನೈನಲ್ಲಿ ಸಾಕಷ್ಟು ಧಾರ್ಮಿಕವಾಗಿ ಮಹತ್ವ ಪಡೆದಿರುವ ದೇವಸ್ಥಾನಗಳಿವೆ. ಅದರಲ್ಲೂ ಕೆಲವು ಪುರಾತನವಾದ ದೇವಾಲಯಗಳು ಇಂದಿಗೂ ತಮ್ಮ ಪ್ರಭಾವವನ್ನು ಉಳಿಸಿಕೊಂಡು ಇಂದು ಆಕರ್ಷಕ ಧಾರ್ಮಿಕ ಸ್ಥಳಗಳಾಗಿವೆ. ಅಂತಹ ಒಂದು ಧಾರ್ಮಿಕ ಸ್ಥಳವಾಗಿದೆ ಕಾಪಾಲೀಶ್ವರನ ದೇವಾಲಯ.
ನಿಮಗಿಷ್ಟವಾಗಬಹುದಾದ : ಕಣ್ಣಿಗೆ ಕಟ್ಟುವ ಕಪ್ಪುಬಿಳುಪಿನ ಅಂದಿನ "ಮದ್ರಾಸ್"
ಚೆನ್ನೈ ನಗರದ ಮೈಲಾಪೂರು (ಮೈಲಾಪೋರ್) ಎಂಬ ನಗರದಲ್ಲಿರುವ ಶಿವನ ಈ ದೇವಾಲಯವು ನಗರದ ಅತಿ ದೊಡ್ಡ ದೇವಾಲಯಗಳ ಪೈಕಿ ಒಂದಾಗಿದ್ದು ಸಾಕಷ್ಟು ಜನ ಭಕ್ತಾದಿಗಳು ಪ್ರತಿನಿತ್ಯ ಈ ದೇವಾಲಯಕ್ಕೆ ಭೆಟಿ ನಿಡುತ್ತಾರೆ. ಇಲ್ಲಿ ಮುಖ್ಯವಾಗಿ ಶಿವನನ್ನು ಕಾಪಾಲೀಶ್ವರನನ್ನಾಗಿ ಹಾಗೂ ಪಾರ್ವತಿಯ ಇನ್ನೊಂದು ರೂಪವನ್ನು ಕರ್ಪಗಂಬಲ ದೇವಿಯಾಗಿ ಪೂಜಿಸಲಾಗುತ್ತದೆ.

ಚಿತ್ರಕೃಪೆ: Mohan Krishnan
ದೇವಾಲಯ ಸಂಕೀರ್ಣವು ವಿಶಾಲವಾಗಿದ್ದು ಇತರೆ ಹಲವು ದೇವ ದೇವತೆಯರ ಸನ್ನಿಧಿಗಳನ್ನೂ ಇಲ್ಲಿ ಕಾಣಬಹುದು. ಪುರಾಣದ ಪ್ರಕಾರ ಶಕ್ತಿ ದೇವಿಯು ನವಿಲಿನ ರೂಪದ ಶಿವನನ್ನು ಇಲ್ಲಿ ಆರಾಧಿಸಲಾಗಿ ಈ ಪ್ರದೇಶದ ಹೆಸರು ಮೈಲೈ (ತಮಿಳಿನಲ್ಲಿ ನವಿಲು ಎಂಬರ್ಥವಿದೆ) ಎಂದು ಬಂದು ಕ್ರಮೇಣವಾಗಿ ಮೈಲಾಪುರ ಎಂದಾಯಿತು ಎಂದು ಹೇಳಲಾಗಿದೆ.
ಪುರಾಣ ದಂತಕಥೆಯ ಪ್ರಕಾರ, ಹಿಂದೆ ಕೈಲಾಸ ಪರ್ವತದಲ್ಲಿ ಶಿವ ಹಾಗೂ ಬ್ರಹ್ಮ ದೇವರು ಒಬ್ಬರಿಗೊಬ್ಬರು ಭೇಟಿಯಾದಾಗ ಬ್ರಹ್ಮನು ಅಹಂಕಾರದಿಂದ ಮೈಮರೆತು ಶಿವನಿಗೆ ಯಾವ ಗೌರವವನ್ನೂ ಸೂಚಿಸಲಿಲ್ಲ. ಅದಕ್ಕೆ ಕೋಪಗೊಂಡ ಶಿವನು ಬ್ರಹ್ಮನ ಒಂದು ತಲೆಯನ್ನು ಕಿತ್ತಿ ತೆಗೆದ. ಈ ಪ್ರಕಾರವಾಗಿ ಶಿವನು ಬ್ರಹ್ಮನ ಕಪಾಲ (ತಲೆ) ಹಿಡಿದಿದ್ದರಿಂದ ಅವನಿಗೆ ಕಾಪಾಲೀಶ್ವರ ಎಂಬ ಹೆಸರು ಬಂದಿತು.

ಕರ್ಪಗಂಬಲ ದೇವಿ ಚಿತ್ರಕೃಪೆ: Raji.srinivas
ನಂತರ ತನ್ನ ತಪ್ಪಿನ ಅರಿವಾದ ಬ್ರಹ್ಮನು ತನ್ನ ಅಹಂಕಾರವನ್ನು ಹೋಗಲಾಡಿಸಲು ಈ ದೇವಾಲಯವಿರುವ ಸ್ಥಳದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜಗೈದ. ಇನ್ನೂ ಕೆಲವು ಕಥೆಗಳ ಪ್ರಕಾರ, ಇದೆ ಸ್ಥಳದಲ್ಲಿ, ಶಿವನ ಮಗ ಶಣ್ಮುಖನಿಗೆ ಪಾರ್ವತಿ ದೇವಿಯಿಂದ ರಕ್ಕಸವೊಬ್ಬನನ್ನು ಸಂಹರಿಸಲು ಆಯುಧ ದೊರೆತಿದೆ. ಈ ಒಂದು ಸ್ಥಳದಲ್ಲಿ ನಾಲ್ಕೂ ವೇದಗಳು ಶಿವನನ್ನು ಪೂಜಿಸಿವೆ.

ಚಿತ್ರಕೃಪೆ: Anish dass
ಈ ಒಂದು ಸ್ಥಳದಲ್ಲೆ ಶುಕ್ರಾಚಾರ್ಯರು ಶಿವನನ್ನು ಪೂಜಿಸಿ ಕಳೆದು ಹೋದ ತಮ್ಮ ಒಂದು ಕಣ್ಣಿನ ದೃಷ್ಟಿಯನ್ನು ಮರಳಿ ಪಡೆದರಂತೆ. ರಾಮನು ಲಂಕೆಗೆ ತೆರಳುವ ಮುಂಚೆ ತನ್ನ ವಿಜಯಕ್ಕಾಗಿ ಇಲ್ಲಿಯೆ ಶಿವನನ್ನು ಆರಾಧಿಸಿದ್ದನಂತೆ. ಈ ರೀತಿಯಾಗಿ ಈ ಒಂದು ದೇವಾಲಯವು ಚೆನ್ನೈ ನಗರದಲ್ಲಿ ಭೇಟಿ ನೀದಬಹುದಾದ ಮುಖ್ಯ ದೇವಾಲಯವಾಗಿ ಹೆಸರುವಾಸಿಯಾಗಿದೆ.

ಕಾಪಾಲೀಶ್ವರ ಉತ್ಸವ, 1940, ಚಿತ್ರಕೃಪೆ: Vadakkan
ಪ್ರಸ್ತುತ ಈ ದೇವಾಲಯದ ರಚನೆಯನ್ನು ಹದಿನಾರನೇಯ ಶತಮಾನದಲ್ಲಿ ತುಳುವ ಸಾಮ್ರಾಜ್ಯದ ವಿಜಯನಗರ ಅರಸರಿಂದ ಮಾಡಲ್ಪಟ್ಟಿದೆ ಎಂದು ಹೇಳಲಾಗುತ್ತದೆ. ಪ್ರತಿ ದಿನ ಬೆಳಿಗ್ಗೆ 5.30 ರಿಂದ ರಾತ್ರಿ 10.30 ರವರೆಗೆ ತೆರೆದಿರುವ ಈ ದೇವಾಲಯದಲ್ಲಿ ದಿನಕ್ಕೆ ಆರು ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಲಾಗುತ್ತದೆ.
ನಿಮಗಿಷ್ಟವಾಗಬಹುದಾದ : ಮನಸ್ಸಿಗೆ ತಂಪೆರೆವ ಚೆನ್ನೈನ ರೋಮಾಂಚಕ ರಾತ್ರಿಗಳು
ಶೈವ ಸಂಪ್ರದಾಯವನ್ನು ಒಳಗೊಂಡಿರುವ ಈ ದೇವಸ್ಥಾನದಲ್ಲಿ ವಾರ್ಷಿಕವಾಗಿ ನಾಲ್ಕು ಉತ್ಸವಗಳನ್ನು ಆಚರಿಸಲಾಗುತ್ತದೆ. ಅವುಗಳಲ್ಲಿ ತಮಿಳು ಕ್ಯಾಲೆಂಡರಿನ ಪಾಂಗುನಿ ಮಾಸದಲ್ಲಿ ನಡೆಯುವ ಅರುಬಾತಿಮೂವಲ್ ಉತ್ಸವವು ಅತಿ ಪ್ರಮುಖವಾಗಿರುತ್ತದೆ. ಸುಂದರವಾದ ಪುಷ್ಕರಿಣಿಯಿಂದ ಶೋಭಿಭೂತವಾಗಿರುವ ಈ ದೇವಾಲಯಕ್ಕೊಮ್ಮೆ ಖಂಡಿತವಾಗಿಯೂ ಭೇಟಿ ನೀಡಿ.


Click it and Unblock the Notifications
















