ತಣ್ಣೀರುಬಾವಿ ಬೀಚ್ ಮಂಗಳೂರಿನ ಜನಪ್ರಿಯ ಬೀಚ್ಗಳಲ್ಲಿ ಒಂದಾಗಿದೆ. ಮಂಗಳೂರು ರೈಲು ನಿಲ್ದಾಣದಿಂದ ಸುಮಾರು 12 ಕಿ.ಮೀ. ದೂರದಲ್ಲಿರುವ ತಣ್ಣೀರುಬಾವಿ ಬೀಚ್, ಮಂಗಳೂರು ಬಂದರಿನ ದಕ್ಷಿಣ ತುದಿಯಲ್ಲಿದೆ. ಈ ಕಡಲತೀರವು ಮಂಗಳೂರು ಬಂದರು ಟ್ರಸ್ಟ್ನ ಆಸ್ತಿಯಾಗಿದ್ದು, ಇದು ಇಲ್ಲಿನ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ.
ಚಿನ್ನದ ಬಣ್ಣದ ಮರಳಿನ ಮೇಲೆ ನಡೆಯುತ್ತಾ ತಂಪಾದ ತಾಜಾ ಗಾಳಿಯನ್ನು ಸೇವಿಸಲು ಸ್ಥಳೀಯರು, ಪ್ರವಾಸಿಗರು ಇಲ್ಲಿಗೆ ಭೇಟಿ ಕೊಡುತ್ತಿರುತ್ತಾರೆ. ಈ ಸ್ಥಳದ ನೈಸರ್ಗಿಕ ಸೌಂದರ್ಯಕ್ಕೆ ಆಕರ್ಷಿತರಾಗದ ಜನರೇ ಇಲ್ಲ. ವಿಶೇಷವಾಗಿ ವಾರಾಂತ್ಯ ಮತ್ತು ಸಾರ್ವಜನಿಕ ರಜಾದಿನಗಳಲ್ಲಿ ಬೀಚ್ ಹೆಚ್ಚಾಗಿ ಕಿಕ್ಕಿರಿದಿರುತ್ತದೆ.
ಜನಪ್ರಿಯತೆ ಪಡೆಯುತ್ತಿರುವ ಬೀಚ್
ವಾಶ್ರೂಮ್ಗಳು, ಪಾರ್ಕಿಂಗ್ ಸ್ಥಳಗಳು, ಲೈಫ್ಗಾರ್ಡ್ಗಳು ಮತ್ತು ಹಲವಾರು ತಿಂಡಿ ತಿನಿಸು ಸ್ಟಾಲ್ಗಳಂತಹ ಆಧುನಿಕ ಸೌಲಭ್ಯಗಳ ಸ್ಥಾಪನೆಯೊಂದಿಗೆ ತಣ್ಣೀರುಬಾವಿ ಬೀಚ್ ಇತ್ತೀಚೆಗೆ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಪ್ರವಾಸಿಗರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಒಂದೆರಡು ಕಾಂಕ್ರೀಟ್ ಬೆಂಚುಗಳು ಮತ್ತು ಶೆಡ್ಗಳನ್ನು ಸಹ ಸ್ಥಾಪಿಸಲಾಗಿದೆ ಮತ್ತು ಎತ್ತರದ ಲೈಟ್ ಮಾಸ್ಟ್ಗಳನ್ನು ಇರಿಸಲಾಗಿದೆ. ನೀವಿಲ್ಲಿಗೆ ಬಂದಾಗ ಜಲ ಕ್ರೀಡೆಗಳಲ್ಲಿ ಒಂದನ್ನು ಸಹ ಪ್ರಯತ್ನಿಸಬಹುದು. ಪ್ರವಾಸಿಗರಿಗೆ ಯಾವುದೇ ಹಾನಿಯಾಗದಂತೆ ರಕ್ಷಿಸಲು ಕಣ್ಗಾವಾಲಾಗಿ ಜೀವರಕ್ಷಕರಿದ್ದಾರೆ. ಆದರೂ ಪ್ರವಾಸಿಗರು ನೀರಿಗೆ ಪ್ರವೇಶಿಸುವಾಗ ಜಾಗರೂಕರಾಗಿರಲು ಸೂಚಿಸಲಾಗಿದೆ.
ಸೂರ್ಯಾಸ್ತ ವೀಕ್ಷಿಸಿಲು ಬರುವ ಜನರು
ಕಡಲತೀರದಲ್ಲಿರುವ ಮೃದುವಾದ ಮರಳು ಮತ್ತು ಅರಬ್ಬಿ ಸಮುದ್ರದ ತಂಗಾಳಿಯು ನಿಜಕ್ಕೂ ನಿಮಗೆ ಸ್ಮರಣೀಯ ಅನುಭವವನ್ನು ನೀಡುತ್ತದೆ. ಅಂದಹಾಗೆ ತಣ್ಣೀರುಬಾವಿ ಬೀಚ್ ಗೆ ಬಹುತೇಕರು ಸೂರ್ಯಾಸ್ತವನ್ನು ವೀಕ್ಷಿಸಲು ಬರುತ್ತಾರೆ. ಸೂರ್ಯಾಸ್ತ ವೀಕ್ಷಣೆಗೆ ಇದು ಅದ್ಭುತ ತಾಣವಾಗಿದೆ. ಅಷ್ಟೇ ಅಲ್ಲ, ಕಡಲತೀರದ ಬಳಿ 15 ವರ್ಷಗಳ ಹಿಂದೆ ಮುಳುಗಿದ ಹಡಗಿನ ಅವಶೇಷವನ್ನು ಸಹ ನೀವು ನೋಡಬಹುದು. ಕೆಲವು ಸಮಯ ಈ ಬೀಚ್ ನಿರ್ಜನವಾಗಿರುತ್ತದೆ. ಈಜಲು ಉತ್ತಮ ಸ್ಥಳವಾಗಿದೆ. ಸ್ವಲ್ಪ ಸಾರಿಗೆ ಸಂಪರ್ಕದ ಕೊರತೆ ಇರುವ ಕಾರಣ, ಮಂಗಳೂರಿನ ಈ ಬೀಚ್ಗೆ ಭೇಟಿ ನೀಡಲು ನಿಮ್ಮ ಸ್ವಂತ ವಾಹನವನ್ನು ತೆಗೆದುಕೊಂಡು ಹೋಗುವುದು ಮುಖ್ಯವಾಗಿದೆ. ಸಾಮಾನ್ಯವಾಗಿ ಬೀಚ್ ನೋಡಲು ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಸಮಯ ನಿಗದಿಪಡಿಸಲಾಗಿದೆ. ಪ್ರವೇಶ ಉಚಿತವಾಗಿದೆ.
ತಣ್ಣೀರುಬಾವಿ ಬೀಚ್ ಆಕರ್ಷಣೆಗಳು
ತಣ್ಣೀರಬಾವಿ ಟ್ರೀ ಪಾರ್ಕ್ ಬೀಚ್ ಬಳಿ 15 ಹೆಕ್ಟೇರ್ ದೊಡ್ಡ ಭೂಮಿಯನ್ನು ಆಕ್ರಮಿಸಿಕೊಂಡಿದೆ. ಇದನ್ನು ಕರ್ನಾಟಕದ ಅರಣ್ಯ ಇಲಾಖೆ ಸಂರಕ್ಷಿಸುತ್ತದೆ ಮತ್ತು ನಿರ್ವಹಿಸುತ್ತದೆ. ಭಾರತದ ಪಶ್ಚಿಮ ಘಟ್ಟಗಳಲ್ಲಿರುವ ವಿಶಿಷ್ಟವಾದ ಹಲವಾರು ಪ್ರಭೇದಗಳು ಟ್ರೀ ಪಾರ್ಕ್ನಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ಕೆಲವು ಔಷಧೀಯ ಗುಣಗಳನ್ನು ಹೊಂದಿವೆ ಮತ್ತು ಆಯುರ್ವೇದದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಟ್ರೀ ಪಾರ್ಕ್ ಈ ಪ್ರದೇಶದ ಸಂಪ್ರದಾಯಗಳು ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಕೆಲವು ಶಿಲ್ಪಗಳನ್ನು ಹೊಂದಿದೆ.
ಜಲ ಕ್ರೀಡೆಗಳು
ತಣ್ಣೀರಬಾವಿ ಬೀಚ್ ಜಲ ಕ್ರೀಡೆಗಳಿಗೂ ಸಹ ಸಾಕಷ್ಟು ಹೆಸರುವಾಸಿಯಾಗಿದೆ. ಸುಂದರವಾದ ಅರೇಬಿಯನ್ ಸಮುದ್ರ ಮತ್ತು ಮಲಬಾರ್ ಕರಾವಳಿಯ ವಿಸ್ತರಣೆಯನ್ನು ಅನ್ವೇಷಿಸಲು ಬೋಟಿಂಗ್, ಸರ್ಫಿಂಗ್, ಜೆಟ್ ಸ್ಕೀಯಿಂಗ್, ಮೋಟರ್ ಬೋಟ್ಗಳು ಮತ್ತು ಕಯಾಕ್ಸ್ಗಳನ್ನು ನೀವು ಆಯ್ಕೆ ಮಾಡಬಹುದು.
ತಣ್ಣೀರುಬಾವಿ ಬೀಚ್ ತಲುಪುವುದು ಹೇಗೆ?
ತಣ್ಣೀರುಬಾವಿ ಬೀಚ್ ಮಂಗಳೂರು ನಗರದ ಮಧ್ಯಭಾಗದಿಂದ ಕೇವಲ 11 ಕಿಲೋಮೀಟರ್ ದೂರದಲ್ಲಿದೆ. ಎನ್ ಎಚ್ 66 ಮೂಲಕ ತಣ್ಣೀರಬಾವಿ ಬೀಚ್ ರಸ್ತೆಯನ್ನು ತಲುಪಲು ಬೆಜೈ - ಕಾವೂರು ರಸ್ತೆಯನ್ನು ತೆಗೆದುಕೊಳ್ಳಬಹುದು. ನಗರದಲ್ಲಿ ಸಾರ್ವಜನಿಕ ಸಾರಿಗೆಗಳಾದ ಸ್ಥಳೀಯ ಬಸ್ಗಳು ಮತ್ತು ಆಟೋ-ರಿಕ್ಷಾಗಳು ನಿಮಗೆ ಲಭ್ಯವಿದೆ.
ಬಿಜೈ - ಕಾವೂರು ರಸ್ತೆಯಲ್ಲಿ ಸಾಗಿ, ಮುಲ್ಲಕಾಡ್ ಮೊದಲ ಅಡ್ಡ ರಸ್ತೆಯ ಕಡೆಗೆ ಸಾಗಿದರೆ, ಕುಂಟಿಕಾನ ಜಂಕ್ಷನ್ನಲ್ಲಿ ಬಲಕ್ಕೆ ತಿರುಗಿ ಸುಮಾರು ಅರ್ಧ ಕಿಲೋಮೀಟರ್ ಪ್ರಯಾಣಿಸಿ. ನಂತರ ನೀವು ಸೇತುವೆ ಕಾಣುವವರೆಗೆ ಎನ್ ಎಚ್ 66 ಗೆ ಎಡಕ್ಕೆ ತಿರುಗಿ. ಈಗ ಸೇತುವೆಯನ್ನು ಹಾದುಹೋದರೆ ತಣ್ಣೀರುಬಾವಿ ಬೀಚ್ ರಸ್ತೆಗೆ ಹೋಗಲು ಎಡಕ್ಕೆ ತೆಗೆದುಕೊಳ್ಳಿ.
ಸುಲ್ತಾನ್ ಬತ್ತೇರಿಯಿಂದ ಪ್ರಯಾಣಿಸುವ ಪ್ರವಾಸಿಗರು ಸಮುದ್ರತೀರವನ್ನು ತಲುಪಲು ಗುರುಪುರ ನದಿಯನ್ನು ದಾಟಲು ದೋಣಿ ಸವಾರಿ ಮಾಡಬಹುದು. ಇಲ್ಲಿಂದ ತಣ್ಣೀರಬಾವಿ ಬೀಚ್ ತಲುಪಲು ಮರಗಳಿಂದ ಆವೃತವಾದ ವಿಶಾಲವಾದ ಪ್ರದೇಶದ ಮೂಲಕ ನಡೆದುಕೊಂಡು ಹೋಗಬೇಕು.
ಮಂಗಳೂರಿಗೆ ಭೇಟಿ ನೀಡಲು ಉತ್ತಮ ಸಮಯ
ಸೆಪ್ಟೆಂಬರ್ನಿಂದ ಏಪ್ರಿಲ್ ಮಂಗಳೂರಿಗೆ ಭೇಟಿ ನೀಡಲು ಉತ್ತಮ ತಿಂಗಳುಗಳು. ಆಹ್ಲಾದಕರ ಚಳಿಗಾಲ ಇರುವುದರಿಂದ ತಾಪಮಾನವು 30 ಡಿಗ್ರಿಗಿಂತ ಹೆಚ್ಚಿರುವುದಿಲ್ಲ ಮತ್ತು ತೇವಾಂಶವು ಸಹ ಕಡಿಮೆಯಾಗಿರುತ್ತದೆ. ವಿವಿಧ ಕಡಲತೀರಗಳನ್ನು ಅನ್ವೇಷಿಸಲು ಈ ಹವಾಮಾನ ಸಾಕಷ್ಟು ಆಹ್ಲಾದಕರವಾಗಿರುತ್ತದೆ. ಬೇಸಿಗೆ ಸಮಯದಲ್ಲಿ ತುಂಬಾ ಬಿಸಿಲು ಇರುತ್ತದೆ. ಮಂಗಳೂರಿನಲ್ಲಿ ಜುಲೈ ಮತ್ತು ಆಗಸ್ಟ್ನಲ್ಲಿ ಭಾರೀ ಮಳೆ ಇರುತ್ತದೆ. ಆದ್ದರಿಂದ ಇದು ಭೇಟಿ ನೀಡಲು ಸೂಕ್ತವಲ್ಲದ ಸಮಯವಾಗಿದೆ. ಆದ್ದರಿಂದ, ಚಳಿಗಾಲ ಮತ್ತು ಮಾನ್ಸೂನ್ ನಂತರದ ಅವಧಿಯು ಮಂಗಳೂರಿಗೆ ಪ್ರವಾಸವನ್ನು ಯೋಜಿಸಲು ಉತ್ತಮ ಸಮಯವಾಗಿದೆ.