ತೆಲುಗುವಿನಲ್ಲಿ ತಲಪು (ತಲುಪು ಎಂದರೆ ಬಾಗಿಲು) ಎಂದರೆ ಯೋಚಿಸುವುದು ಎಂಬರ್ಥವಿದೆ. ಅಂದರೆ ಈ ದೇವಿಯ ಕುರಿತು ಯೋಚಿಸಿದರೇನೇ ಸಾಕು, ಆ ದಯಾಮಯಿ ಮಾತೆಯು ತನ್ನ ಭಕ್ತರ ಬಳಿಗೆ ಬಂದು ಹರಸುತ್ತಾಳೆ. ಹಾಗಾಗಿ ಈ ದೇವಿಯನ್ನು ತಲಪುಲಮ್ಮ ಎಂದೆ ಪೂಜಿಸಲಾಗುತ್ತದೆ.
ಈಕೆ ಒಬ್ಬ ಗ್ರಾಮದೇವಿಯಾಗಿದ್ದು ಈ ದೇವಾಲಯ ಸ್ಥಿತವಿರುವ ಜಿಲ್ಲೆಯಲ್ಲೆ ಬಹು ಪ್ರಸಿದ್ಧಳಾಗಿದ್ದಾಳೆ. ಈಕೆಯ ಅನುಗ್ರಹ ದೊರೆತರೆ ಅಥವಾ ಈಕೆಯನ್ನು ಸದಾ ಕಾಲ ಪೂಜಿಸುವವರ ವಾಹನಗಳು ಎಂದಿಗೂ ಅಪಘಾತವಾಗುವುದಿಲ್ಲವೆಂಬ ನಂಬಿಕೆಯಿದೆ.
ಸದಾ ನೆನಪಿನಲ್ಲುಳಿಯುವ ಆಂಧ್ರ ಕರಾವಳಿ
ಹಾಗಾಗಿ ಹೊಸ ವಾಹನ ಖರೀದಿಸುವ ಇಲ್ಲವೆ ಖಾಸಗಿ ವಾಹನ ಸಾರಿಗೆ ನಡೆಸುತ್ತಿರುವ ಮಾಲಿಕರು ಈಕೆಯ ಪರಮ ಭಕ್ತರು. ವರ್ಷದಲ್ಲಿ ಒಮ್ಮೆಯಾದರೂ ಈ ದೇವಿಯ ದೇವಾಲಯಕ್ಕೆ ಭೇಟಿ ನೀಡಿ ಅನುಗ್ರಹ ಪಡೆಯುತ್ತಾರೆ. ಇನ್ನುಳಿದಂತೆ ನಿಸರ್ಗಪ್ರಿಯ ಪ್ರವಾಸಿಗರ ಹಾಗೂ ಕುಟುಂಬದೊಡನೆ ಪ್ರವಾಸ ಮಾಡುವವರ ನೆಚ್ಚಿನ ತಾಣವಾಗಿಯೂ ಇದು ಗಮನಸೆಳೆಯುತ್ತದೆ.
ಎರಡು ದಟ್ಟವಾದ ಹಸಿರಿನಿಂದ ಕೂಡಿದ ಗುಡ್ಡಗಳ ಮಧ್ಯೆ ನೆಲೆಸಿರುವ ದೇವಾಲಯ ಇದಾಗಿದ್ದು ಸುತ್ತಲೂ ರಮಣೀಯವಾದ ಪ್ರಕೃತಿ ಸೌಂದರ್ಯವನ್ನು ಇದು ಹೊಂದಿದೆ. ಹಾಗಾಗಿ ಕೇವಲ ಧಾರ್ಮಿಕಾಸಕ್ತರಿಗೆ ಮಾತ್ರವಲ್ಲದೆ ನಿಸರ್ಗಪ್ರೀಯರಿಗೂ ಹಿಡಿಸುವ ದೇವಾಲಯ ತಾಣ ಇದಾಗಿದೆ.
ಪೂರ್ವ ಗೋದಾವರಿ
ತಲಪುಲಮ್ಮ ದೇವಾಲಯವು ಆಂಧ್ರಪ್ರದೇಶದ "ದೇವರ ಸ್ವಂತ ಜಿಲ್ಲೆ" ಎಂಬ ಬಿರುದನ್ನು ಪಡೆದಿರುವ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಸ್ಥಿತವಿದೆ. ಆಂಧ್ರ ಕರಾವಳಿಯ ಪೂರ್ವ ಗೋದಾವರಿ ಜಿಲ್ಲೆಯ ತುಣಿ ಮಂಡಲದಲ್ಲಿ ಬರುವ ಲೋವಾ ಎಂಬ ಗ್ರಾಮದಲ್ಲಿರುವ ಈ ದೇವಾಲಯವು ತಲಪುಲಮ್ಮ ತಲ್ಲಿ ದೇವಾಲಯ ಎಂದೆ ಪ್ರಸಿದ್ಧವಾಗಿದೆ.
ಅಚ್ಚುಮೆಚ್ಚಿನ ದೇವಿ
ಈ ದೇವಾಲಯದ ಇನ್ನೊಂದು ವಿಶೇಷತೆ ಎಂದರೆ ಟ್ರಕ್ಕು, ಟೆಂಪೊ ಹಾಗೂ ಇತರೆ ಖಾಸಗಿ ವಾಹನಗಳ ಮಾಲಿಕರ ಅಚ್ಚು ಮೆಚ್ಚಿನ ದೇವಾಲಯವಾಗಿದೆ ಇದು. ನಂಬಿಕೆಯಂತೆ ಈ ದೇವಿಯನ್ನು ಪೂಜಿಸಿದರೆ ಅವಳ ಅನುಗ್ರಹದಿಂದ ಯಾವ ವಾಹನಗಳು ಅಪಘಾತಕ್ಕೊಳಪಡುವುದಿಲ್ಲವಂತೆ! ಅಲ್ಲದೆ ಮಾಲಿಕರ ಸಾರಿಗೆ ವ್ಯಾಪರವೂ ಕುದುರಿ ಹೆಚ್ಚಿಇನ ಲಾಭ ದೊರಕುವುದಂತೆ.
ನೊಂದಣಿ ಸಂಖ್ಯೆ
ಅದಕ್ಕಾಗಿಯೆ ಟ್ರಕ್ಕು, ಕಾರು ಮುಂತಾದ ವಾಹನಗಳ ಮಾಲಿಕರು ಈ ದೇವಾಲಯಕ್ಕೆ ಆಗಾಗ ಭೇಟಿ ನೀಡುತ್ತಲೆ ಇರುತ್ತಾರೆ ಹಾಗೂ ತಮ್ಮ ತಮ್ಮ ವಾಹನಗಳ ನೊಂದಣಿ ಸಂಖ್ಯೆಯನ್ನು ಇಲ್ಲಿ ಗೋಡೆಗಳ ಮೇಲೆ ಬರೆಯುತ್ತಾರೆ. ಇದಲ್ಲದೆ ಹೊಸ ವಾಹನ ಖರೀದಿಸುವವರೂ ಸಹ ಈ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯುತ್ತಾರೆ.
ನೈವೇದ್ಯ ಆಹಾರ
ಇಲ್ಲಿಗೆ ಬರುವ ಭಕ್ತಾದಿಗಳು ಮುಖ್ಯವಾಗಿ ತಾವೆ ಆಹಾರವನ್ನು ಇಲ್ಲಿ ತಯಾರಿಸಿ ನೈವೇದ್ಯ ಮಾಡಿಕೊಂಡು ತಿಂದು ಮನೆಗೆ ತೆರಳುತ್ತಾರೆ. ತಾವು ತಯಾರಿಸಿದ ಆಹಾರವು ಉಳಿದಿತ್ತೆಂದರೆ ಮನೆಗೆ ಒಯ್ಯುವಂತಿಲ್ಲ, ಬದಲಾಗಿ ಇಲ್ಲಿನ ಸ್ಥಳೀಯರಿಗೆ ಅದನ್ನು ಪ್ರಸಾದ ರೂಪದಲ್ಲಿ ಕೊಟ್ಟು ಮುಗಿಸಬೇಕು.
ನಿರಾಸೆಯಾಗದು!
ಮಾಂಸಾಹಾರ ಪ್ರಿಯರು ಇಲ್ಲಿನ ಅಂಗಡಿ ಮುಗ್ಗಟ್ಟುಗಳಲ್ಲಿ ದೊರಕುವ ಮಾಂಸವನ್ನು ಖರೀದಿಸಿ ಅಡುಗೆಗೆ ಬೇಕಾದ ಪರಿಕರಗಳನ್ನು ಬಾಡಿಗೆಗೆ ಪಡೆದುಕೊಂಡು ಆಹಾರ ತಯಾರಿಸಬಹುದು. ದೇವಾಲಯವು ಎರಡು ಗುಡ್ಡಗಳ ಮಧ್ಯೆ ನೆಲೆಸಿದ್ದು ಇದೂ ಸಹ ಭೂಮಟ್ಟದಿಂದ ಸಾಕಷ್ಟು ಎತ್ತರದಲ್ಲಿದೆ.
ಮಧ್ಯದಲ್ಲಿ ವಿರಮಿಸಬಹುದು
ದೇವಾಲಯ ತಲುಪಲು ಸ್ವಾಗತ ಕಮಾನಿನಿಂದ ತೀಕ್ಷ್ಣವಾದ ಮೆಟ್ಟಿಲುಗಳಿದ್ದು ಏರುತ್ತ ದೇವಾಲಯವನ್ನು ತಲುಪಬೇಕು. ಮಧ್ಯದಲ್ಲಿ ವಿಶ್ರಮಿಸುವ ಅಂಗಳಾಕಾರದ ಸ್ಥಳವಿದ್ದು ಅಲ್ಲಿ ಗಣೇಶ ಹಾಗೂ ಇತರೆ ಕೆಲವು ದೇವರುಗಳ ಸನ್ನಿಧಿಯಿದೆ. ಅವುಗಳನ್ನು ಪೂಜಿಸಿ ನಂತರ ಮತ್ತೆ ಮೆಟ್ಟಿಲುಗಳನ್ನು ಏರುತ್ತ ದೇವಾಲಯ ತಲುಪಬೇಕು.
ಚಿತ್ರಕೃಪೆ: Srichakra Pranav
ತಪಗೈದಿದ್ದರು
ದಂತಕಥೆಯ ಪ್ರಕಾರ, ಅಗಸ್ತ್ಯ ಋಷಿಗಳು ಒಮ್ಮೆ ಈ ಪ್ರದೇಶದಿಂದ ಹೋಗುತ್ತಿರುವಾಗ ಈ ಪ್ರದೇಶದ ಅಂದ ಚೆಂದವನ್ನು ನೋಡಿ ಪ್ರಸನ್ನರಾದರು ಹಾಗೂ ಕೆಲ ಸಮಯ ಇಲ್ಲಿಯೆ ವಾಸಿಸಲು ನಿರ್ಧರಿಸಿದರು. ಅವರು ಇಲ್ಲಿ ವಾಸ ಮಾಡುವ ಸಂದರ್ಭದಲ್ಲಿ ಇಲ್ಲಿರುವ ಎರಡು ಗುಡ್ಡಗಳಲ್ಲಿ ದೊರಕುತ್ತಿದ್ದ ಹಣ್ಣು-ಹಂಪಲುಗಳನ್ನು ತಿಂದು ಹಾಗೂ ಇಲ್ಲಿಯೆ ಇದ್ದ ನೀರಿನ ತೊರೆಯಿಂದ ನೀರು ಕುಡಿದು ವಾಸ ಮಾಡಿದ್ದರು.
ಸೂಚಿಸಿದರು
ಅವರೆ ಕ್ರಮವಾಗಿ ಇಲ್ಲಿನ ಎರಡು ಗುಡ್ಡಗಳನ್ನು "ದರಕೊಂಡ" ಹಾಗೂ "ತೀಗಕೊಂಡ" ಎಂದು ಹೆಸರಿಸಿದರು. ಇಂದಿಗೂ ಇಲ್ಲಿನ ದರಕೊಂಡದಿಂದ ನೀರಿನ ತೊರೆಯೊಂದು ಹರಿಯುವುದನ್ನು ಕಾಣಬಹುದು. ಇನ್ನೂ ದೇವಾಲಯ ಕುರಿತಂತೆ ಇಲ್ಲಿರುವ ತಲಪುಲಮ್ಮ ದೇವಿಯ ವಿಗ್ರಹವು ಸ್ವಯಂಭು ಎನ್ನಲಾಗಿದೆ.
ಎಷ್ಟು ದೂರ?
ಲೋವಾ ಗ್ರಾಮದಲ್ಲಿರುವ ತಲಪುಲಮ್ಮ ದೇವಾಲಯವು ಕಾಕಿನಾಡದಿಂದ 70 ಕಿ.ಮೀ, ರಾಜಮಂಡ್ರಿಯಿಂದ 106 ಕಿ.ಮೀ ಹಾಗೂ ತುಣಿ ರೈಲು ನಿಲ್ದಾಣದಿಂದ 8 ಕಿ.ಮೀ ಗಳಷ್ಟು ದೂರದಲ್ಲಿದೆ. ತುಣಿಯಿಂದ ಇಲ್ಲಿಗೆ ವಿಶೆಷವಾದ ಬಸ್ಸು ಸೌಲಭ್ಯವಿದೆ. ಮಿಕ್ಕಂತೆ ಉಳಿದ ನಗರಗಳಿಂದ ಬಾಡಿಗೆ ವಾಹನಗಳ ಮೂಲಕ ಈ ದೇವಾಲಯ ತಾಣವನ್ನು ಸುಲಭವಾಗಿ ತಲುಪಬಹುದಾಗಿದೆ.