'ದೇವನೊಬ್ಬ ನಾಮ ಹಲವು'ಈ ಮಾತು ಸಾರ್ವಕಾಲಿಕ ಸತ್ಯವೆಂದರೆ ತಪ್ಪಾಗಲಾರದು. ಈ ನಂಬಿಕೆಯಲ್ಲಿಯೇ ಜೀವನ ನಡೆಸುತ್ತಿರುವ ನಮಗೆ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ ಆಗ ನೆನೆಯುವುದೇ ಆ ಸ್ವಾಮಿಯನ್ನು. ಬನ್ನಿ ಇಲ್ಲೊಂದು ದೇವಾಲಯವಿದೆ, ಇಲ್ಲಿಗೆ ಭೇಟಿ ನೀಡಿದರೆ ಸಂತಾನ ಭಾಗ್ಯ ಮತ್ತು ಮದುವೆ ಭಾಗ್ಯ ಖಂಡಿತವಾಗಿಯೂ ಸಿಗುತ್ತೆ ಎಂಬ ನಂಬಿಕೆ ಇದೆ. ಹಾಗಾದರೆ ಯಾವುದೀ ದೇವಸ್ಥಾನ, ಎಲ್ಲಿದೆ, ದೇವಾಲಯದ ವಿಶೇಷವೇನು, ದರ್ಶನದ ಸಮಯ ಮತ್ತು ಇಲ್ಲಿಗೆ ತಲುಪುವುದು ಹೇಗೆ ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.
ಸುಗ್ಗನಹಳ್ಳಿ ಶ್ರೀ ಲಕ್ಷೀನರಸಿಂಹ ಸ್ವಾಮಿ ದೇವಸ್ಥಾನ :
ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸುಗ್ಗನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನವು ಸುಮೂರು 800 ವರ್ಷಗಳ ಇತಿಹಾಸವನ್ನು ಹೊಂದಿದೆ. ಈ ದೇವಾಲಯಕ್ಕೆ ಭೇಟಿ ನೀಡಿದರೆ ಭಕ್ತಾದಿಗಳ ಸಮಸ್ಯೆಗಳು ಪರಿಹಾರವಾಗುತ್ತದೆ. ಇಲ್ಲಿನ ಗರುಡನ ದರ್ಶನ ಪಡೆದರೆ ಸಂತಾನ ಮತ್ತು ಮದುವೆ ಭಾಗ್ಯ ಸಿಗುತ್ತದೆ ಎನ್ನುವುದು ಹಲವರ ನಂಬಿಕೆ. ಬನ್ನಿ ಈ ದೇವಾಲಯದ ಇತಿಹಾಸವನ್ನು ತಿಳಿಯೋಣ.
ಶ್ರೀ ಲಕ್ಷೀನರಸಿಂಹ ಸ್ವಾಮಿ ದೇವಾಲಯ ಸ್ಥಾಪಿಸಿದ ಇತಿಹಾಸ :
ಒಮ್ಮೆ ಶುಕ ಮಹರ್ಷಿಗಳು ಬದರೀ ವೃಕ್ಷದ ಕೆಳಗೆ ಕುಳಿತು ತಪ್ಪಸ್ಸು ಮಾಡುವಾಗ ನರಸಿಂಹನು ದರ್ಶನ ನೀಡುತ್ತಾನೆ. ಆಗ ಕಂಡ ನರಸಿಂಹನ ರೂಪವನ್ನೇ ಇಲ್ಲಿ ದೇವಾಲಯವಾಗಿ ಪ್ರತಿಷ್ಠಾಪಿಸಲಾಗಿದೆ ಎಂದು ಹೇಳಲಾಗುತ್ತದೆ.
ಶ್ರೀ ಲಕ್ಷೀನರಸಿಂಹ ಸ್ವಾಮಿ ದೇವಾಲಯದ ವಿಶೇಷತೆಗಳು :
ಶ್ರೀ ಲಕ್ಷೀನರಸಿಂಹ ಸ್ವಾಮಿ ಒಂದು ಸುಂದರವಾದ ಜಾಗದಲ್ಲಿ ನೆಲೆಸಿದ್ದು, ಇಲ್ಲಿ ನಿಂತ ಆಕಾರದಲ್ಲಿರುವ ನರಸಿಂಹನನ್ನು ಕಾಣಬಹುದು. ಈ ದೇವಾಲಯದ ಆವರಣದಲ್ಲಿ ಆಂಡಾಳಮ್ಮನ ಸನ್ನಿಧಿ, ಸುದರ್ಶನ ಆಳ್ವಾರ್, ಲಕ್ಷ್ಮೀ ಅಮ್ಮನವರು, ಆಂಜನೇಯ, ಅಂಬೆಗಾಲು ಕೃಷ್ಣ, ಶ್ರೀದೇವಿ ಮತ್ತು ಭೂದೇವಿ, ಗರುಡ ದೇವರುಗಳು ನೆಲೆಸಿದ್ದಾರೆ.
ಈ ದೇವಾಲಯದಲ್ಲಿ ಎಳ್ಳಾರತಿ ಮಾಡುವುದು ವಿಶೇಷವಾಗಿರುತ್ತದೆ. ಜಾತ್ರಾ ಕಾಲದಲ್ಲಿ ಆಂಜನೇಯನ ಉತ್ಸವನ್ನು ಮಾಡಲಾಗುತ್ತದೆ. ಇಲ್ಲಿ ಯಾಗಶಾಲೆಯಿದ್ದು ಜಾತ್ರಾ ಸಮಯದಲ್ಲಿ 7 ದಿನಗಳ ಕಾಲ ಹೋಮವನ್ನು ಮಾಡಲಾಗುತ್ತದೆ.
ಶ್ರೀ ಲಕ್ಷೀನರಸಿಂಹ ಸ್ವಾಮಿ ದೇವಸ್ಥಾನದ ಮಹಿಮೆ :
ಲಕ್ಷ್ಮೀನರಸಿಂಹ ದೇವಾಲದಲ್ಲಿ ಗರುಡ ದೇವನು ಹೆಚ್ಚು ಪ್ರಸಿದ್ಧಿಯನ್ನು ಹೊಂದಿದ್ದಾನೆ. ಅನೇಕ ಭಕ್ತಾದಿಗಳು ಇಲ್ಲಿಗೆ ಗರುಡನ ದರ್ಶನ ಪಡೆಯಲೆಂದೇ ಬರುತ್ತಾರೆ. ಇಲ್ಲಿನ ಗರುಡನ ದರ್ಶನ ಪಡೆದರೆ ಎಂತಹುದೇ ಸಮಸ್ಯೆಗಳು ಪರಿಹಾರವಾಗುತ್ತದೆ, ಅದರಲ್ಲೂ ಸರ್ಪದೋಷ ಮತ್ತು ನಾಗರಹುಣ್ಣು ಸಮಸ್ಯೆಗಳು ಬಗೆಹರಿಯುತ್ತವೆ. ಅದಲ್ಲದೇ ಮದುವೆ ಭಾಗ್ಯ ಮತ್ತು ಸಂತಾನ ಭಾಗ್ಯ ಲಭಿಸುತ್ತದೆ ಎಂಬುದು ಭಕ್ತಾದಿಗಳ ನಂಬಿಕೆ.
ಶ್ರೀ ಲಕ್ಷೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ದರ್ಶನ ಪಡೆಯುವ ಸಮಯ :
ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಪ್ರತಿದಿನ ಬೆಳಿಗ್ಗೆ 10:00 ರಿಂದ 1:30ರ ವರೆಗೆ ಮತ್ತು ಸಂಜೆ 6:30 ರಿಂದ ರಾತ್ರಿ 8:30ರ ವರೆಗೆ ಭೇಟಿ ನೀಡಿ ದೇವರ ಕೃಪೆಗೆ ಪಾತ್ರರಾಗಬಹುದು. ಶನಿವಾರ ಮತ್ತು ಭಾನುವಾರದಂದು ಇಲ್ಲಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.
ಶ್ರೀ ಲಕ್ಷೀನರಸಿಂಹ ಸ್ವಾಮಿ ದೇವಸ್ಥಾನಕ್ಕೆ ತಲುಪುವುದು ಹೇಗೆ ? :
ಲಕ್ಮೀನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲು ಯಶವಂತಪುರ ಇಂದ ಬಸ್ಗಳು ಲಭ್ಯವಿದೆ. ಸೋಲೂರಿನ ಮೂಲಕವೂ ತಲುಪಬಹುದು. ತುಮಕೂರಿನಿಂದ ಇಲ್ಲಿಗೆ ಬಸ್ಗಳು ಸಾಕಷ್ಟು ಲಭ್ಯವಿದೆ.