ಏನಪ್ಪಾ ಸದರ್ನ್ ಸ್ಪ್ಲೆಂಡರ್ ಅಂದ್ರೆ? ಈ ಪ್ರಶ್ನೆ ನಿಮ್ಮ ಮನದಲ್ಲಿ ಮೂಡುವುದು ಸಹಜ. ಭಾರತೀಯ ರೈಲು ನಿಗಮವು ಪ್ರವಾಸೋದ್ಯಮವನ್ನು ಪ್ರೊತ್ಸಾಹಿಸುವ ನಿಟ್ಟಿನಲ್ಲಿ ಕೆಲವು ವಿಶೀಷ್ಟವಾದ ರೈಲುಗಳನ್ನು ಪ್ರವಾಸಿಗರ ಅನುಕೂಲಕ್ಕಾಗಿ ರೂಪಿಸಿದೆ. ಈ ರೈಲುಗಳು ಸಾಮಾನ್ಯವಾಗಿ ಇತರೆ ರೈಲುಗಳಂತಿರದೆ ವೈಭವಯುತವಾದ ಹವಾ ನಿಯಂತ್ರಿತ ಬೋಗಿಗಳನ್ನು ಒಳಗೊಂಡಿದ್ದು, ಕೇವಲ ಪ್ರವಾಸಿ ದೃಷ್ಟಿಯಿಂದ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾ ಪ್ರತಿಯೊಂದು ಸ್ಥಳಗಳ ವಿಶೇಷತೆಯನ್ನು ಪ್ರವಾಸಿಗರ ಮನದಲ್ಲಿ ಬಿತ್ತುತ್ತಾ ಕೆಲವು ದಿನಗಳ ವಿರಾಮವನ್ನು ಆನಂದಮಯವಾಗಿ ಸವಿಯಲು ಅದ್ಭುತ ಅವಕಾಶವನ್ನು ಒದಗಿಸುತ್ತವೆ.
ಪ್ರಸ್ತುತ ಭಾರತೀಯ ರೈಲು ಇಲಾಖೆಯಿಂದ ನಡೆಸಲ್ಪಡುವ ರಾಜ ವೈಭೋಗದ ಐಷಾರಾಮಿ ರೈಲುಗಳೆಂದರೆ, ಪ್ಯಾಲೇಸ್ ಆನ್ ವ್ಹೀಲ್ಸ್, ಗೋಲ್ಡನ್ ಚಾರಿಯಟ್ ಟೂರ್ (ಇದೆ ರೈಲು, ಸದರ್ನ್ ಸ್ಪ್ಲೆಂಡರ್ ಆಗಿಯೂ ಕಾರ್ಯ ನಿರ್ವಹಿಸುತ್ತದೆ), ಬುದ್ಧಿಸ್ಟ್ ಪಿಲಿಗ್ರಿಮೇಜ್, ಮಹಾರಾಜಾ, ರಾಯಲ್ ರಾಜಸ್ಥಾನ್, ಡೆಕ್ಕನ್ ಒಡೆಸ್ಸಿ. ಈ ಲೇಖನವು ಸದರ್ನ್ ಸ್ಪ್ಲೆಂಡರ್ ಕುರಿತು ತಿಳಿಸುತ್ತದೆ. ಈ 8 ದಿನ ಹಾಗು 7 ರಾತ್ರಿಗಳ ಭವ್ಯ ರೈಲು ಪ್ರವಾಸದ ವೇಳಾಪಟ್ಟಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಬೆಂಗಳೂರಿನಿಂದ ನಿರ್ಗಮಿಸುವ ಈ ರೈಲಿನ ಪ್ರವಾಸಿ ವಿವರಗಳನ್ನು ತಿಳಿದುಕೊಳ್ಳಲು ಸ್ಲೈಡುಗಳನ್ನು ಕ್ಲಿಕ್ಕಿಸುತ್ತಾ ಹೋಗಿ. ಗಮನದಲ್ಲಿಡಬೇಕಾದ ಸಂಗತಿಯೆಂದರೆ ಇದೊಂದು ಪ್ಯಾಕೇಜ್ ಪ್ರವಾಸ ಇರುವುದರಿಂದ ಮೊದಲೆ ಈ ರೈಲಿನಲ್ಲಿ ಸ್ಥಳಗಳನ್ನು ಕಾಯ್ದಿರಿಸಬೇಕಾಗಿರುತ್ತದೆ ಹಾಗು ವೆಚ್ಚವು ದುಬಾರಿಯಾಗಿರುತ್ತದೆ.

ಮೊದಲನೆಯ ದಿನ ಸೋಮವಾರ:
ಬೆಂಗಳೂರಿನ ಪ್ರತಿಷ್ಠಿತ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಮಧ್ಯಾಹ್ನ 3 ಘಂಟೆಗೆ ಸಮ್ಮಿಳಿತರಾಗಬೇಕು. ಅವಶ್ಯಕವಾದ ಸೂಚನೆಗಳನ್ನು ಕೇಳಿದ ನಂತರ ಪ್ರಯೋಜಿಸಲಾಗುವ ಸ್ಥಳ ವೀಕ್ಷಣೆ ಮಾಡಿಸಿ ನಂತರ ರೈಲು ನಿಲ್ದಾಣಕ್ಕೆ ವೈಭವಯುತ ಸವಾರಿ ನಿರ್ಗಮಿಸುವ ಸಮಯಕ್ಕೆ ಕರೆತರಲಾಗುತ್ತದೆ. ಇಲ್ಲಿಂದಲೆ ಈ ಪ್ರವಾಸ ಆರಂಭಗೊಳ್ಳುತ್ತದೆ.
ಚಿತ್ರಕೃಪೆ: Ichattopadhyaya

ದಿನ 2 ಮಂಗಳವಾರ: ಚೆನ್ನೈ ಮತ್ತು ಮಹಾಬಲಿಪುರಂ
ಈ ರೈಲು ಮಂಗಳವಾರ ಬೆಳಿಗ್ಗೆ 5.30 ನಿಮಿಷಕ್ಕೆ ಚೆನ್ನೈ ನಗರವನ್ನು ತಲುಪುತ್ತದೆ. ನಂತರ ಪ್ರಸ್ತುತಪಡಿಸಲಾಗುವ ತಿಂಡಿ, ಚಹಾಗಳನ್ನು ಸವಿದು ಎ.ಸಿ ಬಸ್ಸುಗಳಲ್ಲಿ ಸ್ಥಳ ವೀಕ್ಷಣೆಗೆ ಕರೆದೊಯ್ಯಲಾಗುತ್ತದೆ. ಕಡಲ ತೀರಗಳ ನೋಟವನ್ನು ಸವಿಯುತ್ತ ನಿಮ್ಮ ಬಸ್ಸು ಮಹಾಬಲಿಪುರಂ ನೆಡೆಗೆ ಸಾಗುತ್ತದೆ.
ಚಿತ್ರಕೃಪೆ: Wikitom2

ಮಹಾಬಲಿಪುರಂ:
ಯುನೆಸ್ಕೊ ಮಾನ್ಯತೆ ಪಡೆದಿರುವ ತಾಣ ಮಹಾಬಲಿಪುರಂಗೆ ನಿಮ್ಮ ಬಸ್ಸು ನಿಮ್ಮನ್ನು ಕರೆತರುತ್ತದೆ. ಇಲ್ಲಿನ ಸಮುದ್ರ ದಂಡೆಯ ಅದ್ಭುತವಾದ ದೇವಾಲಯಗಳನ್ನು ನೀವು ಮನಸೊ ಇಚ್ಛೆ ಇಲ್ಲಿ ನೋಡಬಹುದು. ನಂತರ ಹೋಟೆಲ್ ರಿಸಾರ್ಟೊಂದರಲ್ಲಿ ಮಧ್ಯಾಹ್ನದ ಭೋಜನವನ್ನು ಆಸ್ವಾದಿಸಿ ಬಸ್ಸಿನ ಮೂಲಕ "ಫ್ರೆಂಚ್ ನಗರಿ" ಪಾಂಡಿಚೆರಿಗೆ ಪ್ರಸ್ಥಾನಗೊಳ್ಳುತ್ತಿರಿ.
ಚಿತ್ರಕೃಪೆ:

ಪಾಂಡಿಚೆರಿ:
ಪಾಂಡಿಚೆರಿಯಲ್ಲಿ ರಾತ್ರಿಯ ಊಟ ಹಾಗು ವಸತಿಯನ್ನು ಏರ್ಪಡಿಸಲಾಗಿರುತ್ತದೆ.
ಚಿತ್ರಕೃಪೆ

ದಿನ 3 ಬುಧವಾರ: ಅರೋವಿಲ್ಲೆ ಆಶ್ರಮ
ಮೂರನೆಯ ದಿನ ಬುಧವಾರ ಬೆಳಿಗ್ಗೆ ಉಪಹಾರ ಮುಗಿಸಿಕೊಂಡು ಪಾಂಡಿಚೆರಿಯಲ್ಲಿನ ಅರೋವಿಲ್ಲೆ ಆಶ್ರಮಕ್ಕೆ ಕರೆದೊಯ್ಯಲಾಗುತ್ತದೆ. 1930 ರಲ್ಲಿ ಪ್ರಾರಂಭವಾದ ಈ ಆಶ್ರಮವು ಎಲ್ಲ ಧರ್ಮಗಳ ಸಮನ್ವಯತೆಯನ್ನು ಸಾರುತ್ತದೆ. ನಂತರ ಮಧ್ಯಾಹ್ನ ಭರ್ಜರಿ ಭೋಜನವನ್ನು ಸವಿದು ಫ್ರೆಂಚ್ ಕಾಲೋನಿಗೆ ಭೇಟಿ ನೀಡಲು ಸಿದ್ಧರಾಗಿ. ಬೀದಿ ಬೀದಿಗಳಲ್ಲಿ ಖುಷಿಯಾಗಿ ಸುತ್ತಾಡುತ್ತ, ಸ್ಥಳೀಯ ಜೀವನದ ನೋಟವನ್ನು ಗಮನಿಸುತ್ತ ಇಷ್ಟವಿದ್ದಲ್ಲಿ ನಿಮ್ಮ ಪ್ರೀತಿ ಪಾತ್ರದವರಿಗೆ ಖರೀದಿಯನ್ನೂ ಸಹ ಮಾಡಬಹುದು. ನಂತರ ರಾತ್ರಿ ಸ್ಥಳೀಯ ಹೋಟೆಲೊಂದರಲ್ಲಿ ಊಟ ಮುಗಿಸಿ 10 ಘಂಟೆಯವರೆಗೆ ನಿಮ್ಮ ನೆಚ್ಚಿನ ಟ್ರೈನ್ ನತ್ತ ಆಗಮಿಸುತ್ತಿರಿ.
ಚಿತ್ರಕೃಪೆ: Tapanmajumdar

ದಿನ 4 ಗುರುವಾರ: ತ್ರಿಚಿ/ತಿರುಚಿರಾಪಳ್ಳಿ
ಪಾಂಡಿಚೆರಿಯಲ್ಲಿ ಕಳೆದ ಸುಮಧುರ ಕ್ಷಣಗಳನ್ನು ಅವಲೋಕಿಸುತ್ತ ನಿದ್ದೆಗೆ ಜಾರಿ ಬೆಳಿಗ್ಗೆ ಎದ್ದೊಡನೆಯೆ ನಿಮಗೆ ತಿರುಚಿರಾಪಳ್ಳಿಯ ರೈಲು ನಿಲ್ದಾಣವು ಶುಭೋದಯವನ್ನು ಕೋರುತ್ತದೆ. ದೈನಂದಿನ ಕಾರ್ಯಕ್ರಮಗಳನ್ನು ಯಥಾವತ್ತಾಗಿ ಮುಗಿಸಿಕೊಂಡು ಎ.ಸಿ ಬಸ್ಸಿನಲ್ಲಿ ಮತ್ತೊಂದು ದಿನ ಪ್ರವಾಸಕ್ಕೆ ಸಜ್ಜಾಗಿ. ತ್ರಿಚಿಯ ಪುರಾತನ ದೇವಾಲಯಗಳಿಗೆ ಭೇಟಿಯಿತ್ತು ನಂತರ ನೇರವಾಗಿ ಯುನೆಸ್ಕೊ ಮಾನ್ಯತೆ ಪಡೆದಿರುವ 11 ನೆಯ ಶತಮಾನದ, 216 ಅಡಿಗಳಷ್ಟು ಎತ್ತರದ ಗೋಪುರವಿರುವ ತಂಜಾವೂರಿನ ಪ್ರಖ್ಯಾತ ಬೃಹದೇಶ್ವರ ದೇವಾಲಯಕ್ಕೆ ಭೇಟಿ ನೀಡಿ. ಮಧ್ಯಾಹ್ನದ ಊಟವನ್ನು ಮುಗಿಸಿಕೊಂಡು ತಂಜಾವೂರಿನ ರೈಲು ನಿಲ್ದಣಕ್ಕೆ ನಿಮ್ಮ ನಿರೀಕ್ಷೆಯಲ್ಲಿರುವ ಟ್ರೈನ್ ಅನ್ನು ಹತ್ತಲು ರೆಡಿಯಾಗಿ.
ಚಿತ್ರಕೃಪೆ: Abhinav Phangcho Choudhury

ದಿನ 5 ಶುಕ್ರವಾರ: ಮದುರೈ
ದೇವಾಲಯಗಳ ನಗರಿ ಎಂದೆ ಪ್ರಖ್ಯಾತವಾದ ಮದುರೈ ನಗರವನ್ನು ಬೆಳಿಗ್ಗೆ ತಲುಪುತ್ತಿರಿ. ಎರಡುವರೆ ಸಾವಿರ ವರ್ಷಗಳಷ್ಟು ಪುರಾತನವಾದ ಮೀನಾಕ್ಷಿ ದೇವಾಲಯದ ವೈಭವವನ್ನು ದಿನವಿಡಿ ಸವಿದು, ಬೇಕಾದರೆ ಶಾಪಿಂಗ್ ಮಾಡಿ, ಸಾಯಂಕಾಲ ತಿರುಮಲೈ ನಾಯಕರ್ ಮಹಲ್ ನಲ್ಲಿ ಏರ್ಪಡಿಸಲಾಗುವ ಸೌಂಡ್ ಆಂಡ್ ಲೈಟ್ ಪ್ರದರ್ಶನವನ್ನು ನಿಮ್ಮ ಕಣ್ಣಿನಲ್ಲಿ ತುಂಬಿಕೊಳ್ಳಿ. ರಾತ್ರಿ ಊಟ ಮುಗಿಸಿಕೊಂಡು ಮುಂದಿನ ಭೇಟಿಗೆ ಸಿದ್ಧರಾಗಿ.
ಚಿತ್ರಕೃಪೆ: Surajram

ದಿನ 6 ಶನಿವಾರ: ಕನ್ಯಾಕುಮಾರಿ ಸೂರ್ಯೋದಯ ವೀಕ್ಷಣಾ ತಾಣ
ಬೆಳಿಗ್ಗೆ 5 ಘಂಟೆ 15 ನಿಮಿಷಕ್ಕೆ ನಾಗರಕೋಯಿಲ್ ರೈಲು ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಸಜ್ಜಾಗಿ ನಿಂತಿರುವ ಬಸ್ಸಿನ ಮೂಲಕ ಕನ್ಯಾಕುಮಾರಿಯೆಡೆಗೆ ನಿಮ್ಮ ಪ್ರಯಾಣ ಮುಂದುವರೆಯುತ್ತದೆ. ದಕ್ಷಿಣದ ತುತ್ತತುದಿ ಹಾಗು ಬಂಗಾಳ ಕೊಲ್ಲಿ, ಹಿಂದು ಮಹಾಸಾಗರ, ಅರೇಬಿಯನ್ ಸಮುದ್ರಕ್ಕೆ ಎದುರಾಭಿಮುಖವಾಗಿ ನಿಂತಿರುವ ಈ ಪ್ರದೇಶದಲ್ಲಿ ಸುಂದರ ಸೂರ್ಯೋದಯದ ಅನುಭವಪಡೆದು, ಫೊಟೊಗಳನ್ನು ಕ್ಲಿಕ್ಕಿಸುತ್ತ 7.30 ಘಂಟೆಯವರೆಗೆ ಮತ್ತೆ ನಾಗರಕೋಯಿಲ್ ರೈಲು ನಿಲ್ದಾಣಕ್ಕೆ ಆಗಮಿಸಬೇಕು. ಟ್ರೈನಿನಲ್ಲೆ ಉಪಹಾರದ ವ್ಯವಸ್ಥೆಯಿರುತ್ತದೆ. ಇಲ್ಲಿಂದ ನಿಮ್ಮ ಪ್ರಯಾಣ ಕೇರಳ ರಾಜ್ಯದೆಡೆ ಸಾಗುತ್ತದೆ.
ಚಿತ್ರಕೃಪೆ: Nikhilb239

ದಿನ 6 ಶನಿವಾರ ಸಾಯಂಕಾಲ: ಕೋವಲಂ ಕಡಲ ತೀರ
ನಿಮ್ಮ ಟ್ರೈನು ಕೇರಳದ ತ್ರಿವೇಂದ್ರಮ್ ರೈಲು ನಿಲ್ದಾಣಕ್ಕೆ ಮಧ್ಯಾಹ್ನ 3 ಘಂಟೆಯವರೆಗೆ ಆಗಮಿಸುತ್ತದೆ. ನಂತರ 5 ಘಂಟೆಗೆ ಅಲ್ಲಿಂದ ಏರ್ಪಡಿಸಲಾಗಿರುವ ಬಸ್ಸನ್ನು ಏರಿ ಕೋವಲಂ ಕಡಲ ತೀರ, ಅದರ ಅಕ್ಕ ಪಕ್ಕದಲ್ಲಿ ಹಾಯಾಗಿ ಸುತ್ತಾಡಿ. ನಂತರ ಕಡಲ ತೀರದ ತಾರಾ ಹೋಟೆಲೊಂದರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸವಿದು, ಭರ್ಜರಿ ಭೋಜನ ಭುಜಿಸಿ ರಾತ್ರಿ 10 ಘಂಟೆಯ ಸುಮಾರಿಗೆ ನಿಮ್ಮ ಟ್ರೈನನ್ನು ಹತ್ತಿ ಹಾಯಾಗಿ ಮಲಗಿ. ಮರು ದಿನ ಬೆಳಿಗ್ಗೆ 5 ಘಂಟೆಗೆ ಟ್ರೈನು ನಿರ್ಗಮಿಸುತ್ತದೆ.
ಚಿತ್ರಕೃಪೆ: mehul.antani

ದಿನ 7 ರವಿವಾರ ಬೆಳಿಗ್ಗೆ: ಅಲ್ಲೆಪಿ
ತ್ರಿವೇಂದ್ರಮ್ ರೈಲು ನಿಲ್ದಾಣದಿಂದ ಬೆಳಿಗ್ಗೆ ಐದು ಘಂಟೆಗೆ ನಿರ್ಗಮಿಸುವ ಟ್ರೈನು ಬೆಳಿಗ್ಗೆ 8.30 ಕ್ಕೆ ಅಲ್ಲೆಪಿಯನ್ನು ತಲುಪುತ್ತದೆ. ನಂತರ ಆಯೋಜಿಸಲಾದ ಬಸ್ಸಿನ ಮೂಲಕ ನಿರ್ದಿಷ್ಟ ಪ್ರದೇಶಕ್ಕೆ ತೆರಳಿ ಕೇರಳದ ಪ್ರಖ್ಯಾತ ಆಕರ್ಷಣೆಯಾದ ದೋಣಿಮನೆ ಸವಾರಿಗೆ ಸಜ್ಜಾಗಿ. ಇದೊಂದು ವಿಶೀಷ್ಟ ಅನುಭೂತಿ ನೀಡುವ ದಿನ ಪ್ರವಾಸವಾಗಿದ್ದು, ಹಿನ್ನೀರಿನಲ್ಲಿ ಸಾಗುತ್ತ, ಪ್ರಕೃತಿಯ ಅಚ್ಚರಿಯ ನೋಟಗಳನ್ನು ಸವಿಯುತ್ತ, ಕೇರಳದ ಸಾಂಪ್ರದಾಯಿಕ ಆಹಾರವನ್ನು ಭುಜಿಸುತ್ತ ಹಾಯಾಗಿ ಮಜಾ ಮಾಡಿ. ನಂತರ ಬೋಟ್ ಜೆಟ್ಟಿ ಕೇಂದ್ರಕ್ಕೆ ತೆರಳಿ ಸಜ್ಜಾಗಿ ನಿಂತಿರುವ ಬಸ್ ಅನ್ನು ಏರಿ ಕೊಚ್ಚಿ ನಗರವನ್ನು ಸುತ್ತಾಡಿ.
ಚಿತ್ರಕೃಪೆ: keralatourism

ದಿನ 7 ರವಿವಾರ ಮಧ್ಯಾಹ್ನ: ಕೊಚ್ಚಿ
ಪುರಾತನವಾದ ಕೊಚ್ಚಿ ನಗರವು ಇಂದು ಎರ್ನಾಕುಲಂ ಜಿಲ್ಲೆಯ ಆಧುನಿಕ ವಾಣಿಜ್ಯ ನಗರವಾಗಿ ಹೊರಹೊಮ್ಮಿದೆ. ಇಲ್ಲಿ ಕಂಡುಬರುವ ಪುರಾತನ ಪೋರ್ಚುಗೀಸ್ ಕೋಟೆಗಳು, ಚರ್ಚುಗಳು ಹೀಗೆ ಮುಂತಾದವುಗಳಿಗೆ ಭೇಟಿ ನೀಡಿ ಎರ್ನಾಕುಲಂ ರೈಲು ನಿಲ್ದಾಣಕ್ಕೆ ಸಾಯಂಕಾಲ 6.30 ನಿಮಿಷದ ವರೆಗೆ ಬಂದು ತಲುಪುತ್ತಿರಿ. ಇಲ್ಲಿಂದ ನಿಮ್ಮ ನಿರೀಕ್ಷೆಯಲ್ಲಿ ಕಾದು ಕುಳೀತಿರುವ ನಿಮ್ಮ ಟ್ರೈನು ನಿಮ್ಮನ್ನು ಸ್ವಾಗತಿಸಿ ತನ್ನ ಕೊನೆಯ ಆಯಾಮಕ್ಕೆ ಹೊರಡಲು ಪ್ರಾರಂಭಿಸುತ್ತದೆ. ರಾತ್ರಿ ಊಟ ಉಪಹಾರ ಟ್ರೈನಿನಲ್ಲೆ.
ಚಿತ್ರಕೃಪೆ: DileepKS69

ದಿನ 8 ಸೋಮವರ ಬೆಳಿಗ್ಗೆ: ಬೆಂಗಳೂರು
ಕಳೆದ ಏಳು ದಿನಗಳಲ್ಲಿ ಅತಿ ಸುಮಧುರವಾದ ಪ್ರತಿಯೊಂದು ಕ್ಷಣಗಳನ್ನು ಕಳೆದು, ನೆನೆಪಿನ ಮುತ್ತುಗಳನ್ನು ಜೋಡಿಸುತ್ತ, ದಣಿದ ಮನವನ್ನು ಪ್ರಫುಲ್ಲಿತಗೊಳಿಸಿ ಕೊನೆಯದಾಗಿ ಪ್ರವಾಸವನ್ನು ಪ್ರಾರಂಭಿಸಿದ ತಾಣವಾದ ಬೆಂಗಳೂರಿಗೆ ಸೋಮವಾರ ಬೆಳಿಗ್ಗೆ ಬಂದು ತಲುಪುತ್ತಿರಿ. ಒದಗಿಸಲಾಗುವ ತಿಂಡಿಯನ್ನು ಸವಿದು ನೆನಪಿನ ಬುತ್ತಿಯನ್ನು ಕಟ್ಟಿಕೊಂಡು 8 ದಿನಗಳ ನಿರಂತರ, ಅಮೋಘ ಪ್ರವಾಸಕ್ಕೆ ಬೈ ಬೈ ಹೇಳುವ ಸಮಯವಿದು.
ಚಿತ್ರಕೃಪೆ: Rsrikanth05


Click it and Unblock the Notifications


















