ಏನಿದು? ರಾಮಸೇತುವಿನ ನಿರ್ಮಾಣ...ಅದೂ ಕಲಿಯುಗದಲ್ಲಿ, ತುಸು ಆಶ್ಚರ್ಯವಾಗಬಹುದಲ್ಲವೆ? ಆದರೆ ಈ ರೀತಿಯ ಸಾಂಕೇತಿಕ ಆಚರಣೆಯೊಂದು ಇಂದಿಗೂ ನಡೆಯುತ್ತದೆ ಎಂದರೆ ನಿಮಗಾಶ್ಚರ್ಯವಾಗಬಹುದು. ಹೌದು ಅಂತಹ ಆಚರಣೆಯೊಂದು ಇಂದಿಗೂ ಕೇರಳ ರಾಜ್ಯದಲ್ಲಿ ವಾರ್ಷಿಕವಾಗಿ ಆಚರಿಸಲ್ಪಡುತ್ತದೆ.
ಇದನ್ನು ಸೇತುಬಂಧನಂ ಎಂದು ಕರೆಯಲಾಗುತ್ತದೆ ಹಾಗೂ ಇದು ಶ್ರೀರಾಮನ್ ಚಿರಾ ಅಥವಾ ಚಿರಾ ಕೆಟ್ಟಾಲ್ ಎಂಬಲ್ಲಿ ನಡೆಯುತ್ತದೆ. ಶ್ರೀರಾಮನ್ ಚಿರಾ ಕೇರಳದ ತ್ರಿಶ್ಶೂರ್ ಜಿಲ್ಲೆಯ ತ್ರಿಪ್ರಯಾರ್ ಪಟ್ಟಣದ ಸಮೀಪವಿರುವ ಚೆಮ್ಮಪ್ಪಿಲ್ಲಿ ಎಂಬ ಗ್ರಾಮದ ಬಳಿ ವಿಶಾಲವಾಗಿ 900 ಹೆಕ್ಟೇರುಗಳಷ್ಟು ಪ್ರದೇಶದಲ್ಲಿ ಹರಡಿರುವ ನೀರಿನ ಕೆರೆಯಾಗಿದೆ.
ಶ್ರೀರಾಮನ್ ಚಿರಾ, ಚಿತ್ರಕೃಪೆ: Epggireesh
ಈ ಕೆರೆಯು ವಿಶೇಷವಾಗಿ ಭತ್ತದ ಗದ್ದೆಗಳಿಂದ ಆವೃತವಾಗಿದೆ. ಹಿಂದೆ ರಾವಣನು ಸೀತೆಯನ್ನು ಅಪಹರಿಸಿ ಲಂಕೆಗೆ ಕೊಂಡೊಯ್ದಾಗ ರಾಮನು ತನ್ನ ಸೈನ್ಯ ಸಮೇತ ಲಂಕೆಗೆ ಆಕ್ರಮಣ ಮಾಡಲು ಹೊರಡುತ್ತಾನೆ. ಈ ಸಮಯದಲ್ಲಿ ಲಂಕೆಯು ಸಮುದ್ರದಲ್ಲಿರುವ ಒಂದು ದ್ವೀಪವಾದ ಕಾರಣ ಅಲ್ಲಿಗೆ ತೆರಳಲು ರಾಮನಿಗೆ ಕಷ್ಟಕರವಾಗುತ್ತದೆ.
ಆ ಸಮಯದಲ್ಲಿ ವಾನರ ಸೈನ್ಯವೆಲ್ಲ ಕೂಡಿ ರಾಮನಾಮ ಜಪಿಸುತ್ತ ಕಲ್ಲುಗಳನ್ನು ಒಂದೊಂದಾಗಿ ತೇಲಿ ಬಿಡುತ್ತ ರಾಮಸೇತುವಿನ ನಿರ್ಮಾಣ ಮಾಡುತ್ತಾರೆ. ಅಂದರೆ ಮೂಲವಾಗಿ ಇವರು ರಾಮನಿಗೆಂದು ಸೇತುವೆ ನಿರ್ಮಾಣ ಮಾಡುತ್ತಾರೆ. ಆ ಒಂದು ಭಕ್ತಿಯನ್ನೆ ಸಾಂಕೇತಿಕವಾಗಿ ತೋರಿಸಲೆಂದು ಇಲ್ಲಿ ಸೇತುಬಂಧನ ಆಚರಣೆಯನ್ನು ಮಾಡಲಾಗುತ್ತದೆ.
ಆಚರಣೆ, ಚಿತ್ರಕೃಪೆ: Epggireesh
ವಿಶೇಷವೆಂದರೆ ಶ್ರೀರಾಮನ್ ಚಿರಾ ಬಳಿಯಿರುವ ತ್ರಿಪ್ರಯಾರ ದೇವಾಲಯವು ರಾಮನಿಗೆ ಮುಡಿಪಾದ ಬಲು ಪ್ರಮುಖ ದೇವಾಲಯವಾಗಿದೆ. ರಾಮನೊಂದಿಗಿರುವ ಭಕ್ತಿಯನ್ನು ತೋರ್ಪಡಿಸುವ ಉದ್ದೇಶದಿಂದಾಗಿ ಪ್ರಾಚೀನ ಕಾಲದಿಂದಲೂ ಶ್ರೀರಾಮನ್ ಚಿರಾದಲ್ಲಿ ಸೇತುಬಂಧನಂನ ಆಚರಣೆಯನ್ನು ಮಾಡುತ್ತ ಬರಲಾಗಿದೆ.
ಇದೊಂದು ಧಾರ್ಮಿಕ ವಿಧಿಯಾಗಿದ್ದು ತ್ರಿಪ್ರಯಾರ್ ದೇವಾಲಯದ ಪ್ರಮುಖ ಅರ್ಚಕರಿಂದ ನೆರವೇರಿಸಲ್ಪಡುತ್ತದೆ. ಈ ಆಚಣೆ ಮಾಡುವ ದಿನದಂದು ತ್ರಿಪ್ರಯಾರ ರಾಮನ ದೇವಾಲಯದಲ್ಲಿ ಧೂಪದಾರತಿ ಹಾಗೂ ರಾತ್ರಿ ಆರತಿಗಳ ಬೇಗನೆ ಮುಗಿಸಿ ದ್ವಾರಗಳನ್ನು ಮುಚ್ಚಲಾಗುತ್ತದೆ. ತದನಂತರ ಅರ್ಚಕಾದಿ ಸಮೇತ ಭಕ್ತರೆಲ್ಲರೂ ಶ್ರೀರಾಮನ್ ಚಿರಾ ತೆರಳುತ್ತಾರೆ.
ತ್ರಿಪ್ರಯಾರ ರಾಮನ ದೇವಾಲಯ, ಚಿತ್ರಕೃಪೆ: Vsathian
ಇಲ್ಲಿ ಬಂದು ಶಾಸ್ತ್ರೋಕ್ತವಾಗಿ ಸೇತುಬಂಧನದ ಕಾರ್ಯವನ್ನು ನೆರವೇರಿಸಲಾಗುತ್ತದೆ. ಈ ಆಚರಣೆಯನ್ನು ಸೇರಿರುವ ಸಕಲ ಭಕ್ತಾದಿಗಳು ಕಣ್ಣಾರೆ ಕಂಡು ಪುನಿತರಾದ ಭಾವನೆ ತಾಳುತ್ತಾರೆ. ಇನ್ನೊಂದು ವಿಷಯವೆಂದರೆ ಈ ಸೇತುಬಂಧನ ಕಾರ್ಯವನ್ನು ಖುದ್ದಾಗಿ ರಾಮನೆ ಬಂದು ವೀಕ್ಷಿಸುತ್ತಾನೆಂಬ ಪ್ರತೀತಿಯಿದೆ.
ತ್ರಿಪ್ರಯಾರ್ ರಾಮನ ದೇವಾಲಯದ ಮುಂಭಾಗದಲ್ಲಿರುವ ನದಿಯ ಮುಲಕ ಮೊಸಳೆಯನ್ನೇರಿ ಭಗವಂತನು ಈ ಸ್ಥಳಕ್ಕೆ ಬರುತ್ತಾನೆಂದು ಹೇಳಲಾಗುತ್ತದೆ. ಕಾಕತಾಳಿಯವೋ ಅಥವಾ ಪವಾಡವೋ ಗೊತ್ತಿಲ್ಲ, ದೇವರು ಬರುವ ಆ ಘಳಿಗೆಯಲ್ಲಿ ಶ್ರೀರಾಮನ್ ಚಿರಾದ ನೀರಿನಲ್ಲಿ ಅತ್ಯಂತ ಘೋರವಾದ ಅಲೆಗಳು ಉಕ್ಕಲಾರಂಭಿಸುತ್ತವೆ.
ರಾಮನ ಈಶ್ವರ ಭಕ್ತಿ ರಾಮೇಶ್ವರಂನ ಶಕ್ತಿ
ಅಷ್ಟೆ ಅಲ್ಲ ಆ ದಿನದಂದು ಮಳೆಯು ಅತ್ಯಧಿಕಗೊಂಡು ಗದ್ದೆಗಳೆಲ್ಲವೂ ಸ್ನೀರಿನಲ್ಲಿ ಸಂಪೂರ್ಣವಾಗಿ ಮುಳುಗುತ್ತವೆ ಎನ್ನಲಾಗುತ್ತದೆ. ಈ ರಿತಿಯ ನೈಸರ್ಗಿಕ ಘಟನೆಗಳೆ ದೇವರು ಬಂದು ನೋಡುತ್ತಿರುವುದರ ಸಂಕೇತವೆಂದೆ ಧಾರ್ಮಿಕಾಸಕ್ತರು ನಂಬುತ್ತಾರೆ.