ರಾಮನು ಇಲ್ಲಿನ ಕಲ್ಲುಗಳ ಮೇಲೆ ಕಾಲು ಮೆಟ್ಟಿದ ಸ್ಥಳ ಇದಾಗಿರುವುದರಿಂದ ಇದಕ್ಕೆ ರಾಮಕ್ಕಾಲ್ಮೇಡು ಅಥವಾ ರಾಮಕ್ಕಲ್ ಮೇಡು ಎಂಬ ಹೆಸರು ಬಂದಿದೆ. ಸ್ಥಳ ಪುರಾಣದ ಪ್ರಕಾರ, ರಾಮಾಯಣದ ಸಂದರ್ಭದಲ್ಲಿ ಸೀತೆ ರಾವಣನಿಂದ ಅಪಹರಿಸಲ್ಪಟ್ಟು ಆಕೆಯನ್ನು ಹುಡುಕುತ್ತ ಬರುವ ರಾಮ-ಲಕ್ಷ್ಮಣರು ಈ ಸ್ಥಳಕ್ಕೆ ಬರುತ್ತಾರೆ.
ಈ ಪ್ರದೇಶವು ಅದ್ಭುತವಾದ ಕಲ್ಲಿನ ಬೆಟ್ಟಗಳಿಂದ ಆವೃತವಾಗಿದ್ದು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಪಕ್ಷಿ ನೋಟವನ್ನು ಅದ್ಭುತವಾಗಿ ಕರುಣಿಸುತ್ತದೆ. ಹಾಗಾಗಿ ಇಲ್ಲಿನ ಕಲ್ಲಿನ ಬೆಟ್ಟದ ಮೇಲೆ ಶ್ರೀರಾಮನು ಮೇಲೇರಿ ತನ್ನ ಮಡದಿಯಾದ ಸೀತೆಯನ್ನು ಹುಡುಕಲು ಪ್ರಯತ್ನಿಸುತ್ತಾನೆ. ಹಾಗಾಗಿ ರಾಮನಿಂದ ಏರಿದ ಬೆಟ್ಟ ಎಂಬ ಖ್ಯಾತಿಗಳಿಸಿದ ಈ ಗಿರಿಧಾಮ ಕ್ರಮೇಣವಾಗಿ ರಾಮಕ್ಕಾಲ್ಮೇಡು ಎಂಬ ಹೆಸರು ಪಡೆದುಕೊಂಡಿತು.
ಮಂತ್ರಮುಗ್ಧಗೊಳಿಸುವ ಕೇರಳದ ಹಿನ್ನೀರು ಪ್ರವಾಸ!
ಇತ್ತೀಚಿನ ಕೆಲ ಸಮಯದಿಂದ ಈ ಗಿರಿಧಾಮ ಸಾಕಷ್ಟು ಜನಪ್ರೀಯವಾಗುತ್ತಿದೆ. ವಿದೇಶಿಗರೂ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ದೇಶದ ಮೂಲೆ ಮೂಲೆಗಳಿಂದ ಈ ಗಿರಿಧಾಮಕ್ಕೆ ಭೇಟಿ ನೀಡುತ್ತಿದ್ದಾರೆ. ಹಾಲಿವುಡ್ ಚಿತ್ರ ತಾರೆ ಲಿಯೊನಾರ್ಡಿ ಡಿಕಾಪ್ರಿಯೊ ಅವರ ಪ್ರಕಾರ, "ಭೂಮಿಯ ಮೇಲೆ ಸ್ವರ್ಗವೆಂಬುದಿದ್ದರೆ ಅದು ಇದೆ" ಎಂಬ ಪ್ರಶಂಸೆಯನ್ನೂ ಸಹ ಈ ಸ್ಥಳಗಳಿಸಿದೆ.
ಹಾಗಾದರೆ ಬನ್ನಿ, ಪ್ರಸ್ತುತ ಲೇಖನದ ಮೂಲಕ ಈ ಗಿರಿಧಾಮದ ಕುರಿತು ಪ್ರವಾಸಿ ಮಾಹಿತಿಯನ್ನು ತಿಳಿಯೋಣ. ಅಲ್ಲದೆ ಇದು ಎಲ್ಲಿದೆ ಹಾಗೂ ಹೇಗೆ ತಲುಪಬಹುದೆಂಬುದರ ಕುರಿತೂ ತಿಳಿಯೋಣ. ದಂತಕಥೆಯೊಂದರ ಪ್ರಕಾರ ಆದರ್ಶ ಪ್ರೇಮಿಗಳಿಬ್ಬರ ಕುರಿತು ತಿಳಿಯೋಣ. ಏಕೆಂದರೆ ಆ ಪ್ರೇಮಿಗಳ ಬೃಹತ್ ಪ್ರತಿಮೆಗಳು ಈ ಗಿರಿಧಾಮದಲ್ಲಿ ಕಂಡುಬರುತ್ತವೆ ಹಾಗೂ ಪ್ರಮುಖವಾಗಿ ಆಕರ್ಷಿಸುತ್ತವೆ.
ಗಿರಿಧಾಮ
ರಾಮಕ್ಕಾಲ್ಮೇಡು ಕೇರಳ ರಾಜ್ಯದಲ್ಲಿರುವ ಒಂದು ಸುಂದರ ಗಿರಿಧಾಮ ಪ್ರದೇಶವಾಗಿದೆ. ವಿಶೇಷವೆಂದರೆ ಈ ಗಿರಿಧಾಮದಲ್ಲಿ ವರ್ಷದ ಎಲ್ಲಾ ಸಮಯ ಗಾಳಿಯು ಅತ್ಯಂತ ರಭಸವಾಗಿಯೆ ಬೀಸುತ್ತಿರುತ್ತದೆ. ಹಾಗಾಗಿ ಒಂದು ರೀತಿಯ ಅದ್ಭುತ ಅನುಭವ ನೀಡುವ ತಾಣ ಇದಾಗಿದೆ.
ಚಿತ್ರಕೃಪೆ: Editzz by me
ಏಷಿಯಾದಲ್ಲೆ
ಮಾಹಿತಿಗಳ ಪ್ರಕಾರ, ಏಷಿಯಾದಲ್ಲೆ ಸದಾ ಕಾಲ ಗಾಳಿಯು ಬೀಸುವ ಮೊದಲ ಹತ್ತು ಸ್ಥಳಗಳ ಪೈಕಿ ರಾಮಕ್ಕಾಲ್ಮೇಡು ಗಿರಿಧಾಮವೂ ಸಹ ಒಂದು. ಹಾಗಾಗಿ ಇಲ್ಲಿ ಗಾಳಿಯಿಂದ ವಿದ್ಯುತ್ ಉತ್ಪಾದಿಸುವ ವಿಂಡ್ ಎನರ್ಜಿ ಮೀಲ್ ಸಹ ಇರುವುದನ್ನು ಕಾಣಬಹುದು. ಆದರೆ ಈ ಪ್ರದೇಶದಲ್ಲಿ ಪ್ರವಾಸಿಗರು ಸುತ್ತಾಡಲು ಅನುಮ್ತಿಯಿಲ್ಲ.
ಚಿತ್ರಕೃಪೆ: Balachand
ನಾಲ್ಕು ಸಾವಿರ ಅಡಿ!
ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಬರುವ ಈ ಸುಂದರ ಗಿರಿಧಾಮವು ಸಮುದ್ರ ಮಟ್ಟದಿಂದ ನಾಲ್ಕುವರೆ ಸಾವಿರ ಅಡಿಗಳಷ್ಟು ಎತ್ತರದಲ್ಲಿರುವುದರಿಂದ ಸುತ್ತ ಮುತ್ತಲಿನ ಹಲವಾರು ಗ್ರಾಮಗಳ ಅತ್ಯದ್ಭುತ ಹಾಗೂ ವಿಹಂಗಮ ನೋಟಗಳನ್ನು ಇದು ಕರುಣಿಸುತ್ತದೆ.
ಚಿತ್ರಕೃಪೆ: Aml jhn
ಅದ್ಭುತ ವಿಶ್ರಾಂತಿ
ಹಾಗೆ ಸುಮ್ಮನೆ ಹಾಯಾಗಿ ಎತ್ತರದ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಗಾಳಿಯಲ್ಲಿ ಆನಂದದಿಂದ ತೇಲಾಡುತ್ತ, ಸುತ್ತಮುತ್ತಲಿನ ಬೆಟ್ಟ-ಗುಡ್ಡಗಳ ರಮಣೀಯ ನೋಟ ನೋಡುತ್ತಾ ಮನೆಯಿಂದ ಹೊತ್ತು ತಂದ ಆಹಾರ-ಪಾಣಿಯಗಳನ್ನು ಹೀರುತ್ತ, ಬಂಧುಗಳು, ಸ್ನೇಹಿತರೊಂದಿಗೆ ಅದ್ಭುತವಾದ ಸಮಯವನ್ನು ಕಳೆಯಬೇಕೆಂದಿದ್ದಲ್ಲಿ ಈ ಗಿರಿಧಾಮಕ್ಕೊಮ್ಮೆ ಭೇಟಿ ನೀಡಿ.
ಚಿತ್ರಕೃಪೆ: Mprabaharan
ಏರಬಹುದು
ಈ ಗಿರಿಪ್ರದೇಶವು ಏರಲು ಅಷ್ಟೊಂದೇನೂ ಕಷ್ಟಕರವಾಗಿಲ್ಲ ಅಲ್ಲದೆ ಈ ಗಿರಿಧಾಮವನ್ನು ತಲುಪುವುದೂ ಸಹ ಬಲು ಸುಲಭವಾಗಿದೆ. ಹಾಗಾಗಿ ಇತ್ತೀಚಿನ ಕೆಲ ಸಮಯದಿಂದ ಇಲ್ಲಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕಯಾಗಿದೆ.
ಚಿತ್ರಕೃಪೆ: Rojypala
ವಿದೇಶಿಯರೂ ಸಹ
ಇನ್ನೊಂದು ವಿಶೇಷವೆಂದರೆ ಇಲ್ಲಿ ಕೇವಲ ಭಾರತದ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಹಾಗಾಗಿ ಇಲ್ಲಿ ಪ್ರವಾಸೋದ್ಯಮವು ದಿನದಿಂದದಿನಕ್ಕೆ ಬೆಳೆಯುತ್ತಲೆ ಇದೆ ಎಂದು ಹೇಳಬಹುದು.
ಚಿತ್ರಕೃಪೆ: Rojypala
ಇನ್ನೂ ಯೋಜನೆಗಳಿವೆ
ಮೊದ ಮೊದಲು ಯಾವ ಮೂಲ ಸೌಕರ್ಯವೂ ಇರದ ಈ ಪ್ರದೇಶದಲ್ಲಿ ಇಂದು ಹಲವಾರು ಮೂಲಭೂತ ಸೌಕರ್ಯಗಳನ್ನು ಕೇರಳ ಸರ್ಕಾರದ ಪ್ರವಸಿ ಇಲಾಖೆಯು ಒದಗಿಸಿದೆ. ಆದಾಗ್ಯೂ ಈ ತಾಣವನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾಗಿ ಪರಿವರ್ತಿಸುವುದರ ಕುರಿತು ಹಲವಾರು ಯೋಜನೆಗಳನ್ನು ಸರ್ಕಾರ ಕೈಗೊಳ್ಳಲು ನಿರ್ಧರಿಸಿದೆ.
ಚಿತ್ರಕೃಪೆ: Navaneeth Krishnan S
ಲಿಯೊನಾರ್ಡೊ ಡಿಕಾಪ್ರಿಯೊ
ಈ ತಾಣದ ಸೌಂದರ್ಯ ಎಷ್ಟಿದೆ ಎಂದರೆ ಒಂದೊಮ್ಮೆ ಹಾಲಿವುಡ್ ಜನಪ್ರೀಯ ತಾರೆಯಾದ ಲಿಯೊನಾರ್ಡೊ ಡಿಕಾಪ್ರಿಯೊ ಅವರು ಇಲ್ಲಿಗೆ ಭೇಟಿ ನೀಡಿದ್ದಾಗ ಇದರ ಸೌಂದರ್ಯವನ್ನು ಕುರಿತು ಹೊಗಳಿದ ಬಗೆ ಸಾಕಷ್ಟು ಸಂತಸ ನೀಡುತ್ತದೆ. ಈ ಸ್ಥಳದ ಅಂದ ಚೆಂದ ನೋಡುತ್ತಿದ್ದ ಅವರು "ಭೂಮಿಯ ಮೇಲೆ ಸ್ವರ್ಗವಿರುವುದೆ ಆದಲ್ಲಿ ಅದು ಇದೆ" ಎಂದು ಬಣ್ಣಿಸಿದ್ದರು.
ಚಿತ್ರಕೃಪೆ: Rishadkhan.29
ಶೋಲಾ ಅರಣ್ಯಗಳು
ಇಲ್ಲಿನ ಪರಿಸರವು ಹೆಚ್ಚಾಗಿ ಹುಲ್ಲುಗಾವಲಿನ ಮೈದಾನಗಳು ಹಾಗೂ ಶೋಲಾ ಅರಣ್ಯಗಳಿಂದ ಕೂಡಿದೆ. ಅಲ್ಲಲ್ಲಿ ಬಿದಿರಿನ ಕಾಡುಗಳೂ ಸಹ ಕಂಡುಬರುತ್ತವೆ. ಈ ಗಿರಿಧಾಮದ ಮತ್ತೊಂದು ವಿಶೇಷತೆ ಎಂದರೆ ಇಲ್ಲಿನ ಬೆಟ್ಟದ ಮೇಲೆ ಅದ್ಭುತವಾಗಿ ನಿರ್ಮಿಸಲಾಗಿರುವ ಪ್ರೇಮಿಗಳಿಬ್ಬರ ಬೃಹತ್ ಪ್ರತಿಮೆಗಳು.
ಚಿತ್ರಕೃಪೆ: Vssekm
ಕುರುವನ್ ಹಾಗೂ ಕುರುತಿ
ಬುಡಕಟ್ಟು ಜನಾಂಗವೊಂದಕ್ಕೆ ಸೇರಿದ ಈ ಪ್ರೇಮಿಗಳಿಬ್ಬರ ಹೆಸರು ಕುರುವನ್ ಹಾಗೂ ಕುರತಿ. ಇವರನ್ನು ಆದರ್ಶ ಪ್ರೇಮಿಗಳು, ದಂಪತಿಗಳೆಂದು ಇಂದಿಗೂ ಕೊಂಡಾಡಲಾಗುತ್ತದೆ. 40 ಅಡಿಗಳಷ್ಟು ಎತ್ತರದ ಈ ಪ್ರತಿಮೆಗಳನ್ನು ಕಾಂಕ್ರೀಟ್ ಬಳಸಿ ನಿರ್ಮಿಸಲಾಗಿದ್ದು ಅತ್ಯಾಕರ್ಷಕವಾಗಿ ಕಂಡುಬರುತ್ತವೆ.
ಚಿತ್ರಕೃಪೆ: Augustus Binu
ಆದರ್ಶ ಸ್ಥಳ
ಸ್ಥಳ ಪುರಾಣದಂತೆ ಕುರುವನ್ ಎಂಬ ಪುರುಷನೆ ಇಂದು ಪ್ರಸಿದ್ಧವಾಗಿರುವ ಇಡುಕ್ಕಿ ಆರ್ಚ್ ಆಣೆಕಟ್ಟೆಯನ್ನು ನಿರ್ಮಿಸಲು ಆದರ್ಶಮಯವಾದ ಸ್ಥಳವೊಂದನ್ನು ವಿನ್ಯಾಸಗಾರರಿಗೆ ಪರಿಚಯಿಸಿದ್ದನಂತೆ. ಎರಡು ಗುಡ್ಡಗಳ ಮಧ್ಯೆ ಸ್ಥಿತವಿರುವ ಆರ್ಚ್ ಡ್ಯಾಂ ಅದ್ಭುತವಾಗಿ ಕಾಣುತ್ತದೆ ಹಾಗೂ ಅಕ್ಕ ಪಕ್ಕದ ಬೆಟ್ಟಗಳು ಕುರುವನ್ ಹಾಗೂ ಕುರುತಿ ಬೆಟ್ಟಗಳೆಂದೆ ಪ್ರಸಿದ್ಧಿ ಪಡೆದಿವೆ.
ಚಿತ್ರಕೃಪೆ: Sreejithk2000
ಪ್ರತಿಮೆಗಳು
ಈ ಪ್ರೇಮಿಗಳ ಗೌರವಾರ್ಥವಾಗಿಯೆ ಇಡುಕ್ಕಿ ಬಳಿಯಲ್ಲೆ ಸ್ಥಿತವಿರುವ ರಾಮಕ್ಕಾಲ್ಮೇಡುವಿನಲ್ಲಿ ಇವರಿಬ್ಬರ ಬೃಹತ್ ಪ್ರತಿಮೆಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಕುರುವನ್ ಕೋಳಿಯೊಂದನ್ನು ತನ್ನ ಎದೆಯ ಬಳಿ ಹಿಡಿದಿದ್ದು ಕುರಿತು ಚಿಕ್ಕ ಮಗುವಿನೊಂದಿಗೆ ತನ್ನ ಗಂಡನ ಪಕ್ಕ ಕುಳಿತಿರುವುದನ್ನು ಕಾಣಬಹುದು. ಇದು ಆ ಬುಡಕಟ್ಟು ಜನಾಂಗದವರ ಹೋರಾಡುವ ಕೆಚ್ಚೆದೆಯನ್ನು ಬಿಂಬಿಸುತ್ತದೆ ಎನ್ನಲಾಗಿದೆ.
ಚಿತ್ರಕೃಪೆ: Balachand
ಎಲ್ಲಿದೆ?
ಇನ್ನೂ ರಾಮಕ್ಕಾಲ್ಮೇಡು ಗಿರಿಧಾಮವನ್ನು ಬಲು ಸುಲಭವಾಗಿ ತಲುಪಬಹುದಾಗಿದೆ. ಏಕೆಂದರೆ ಈ ಗಿರಿಧಾಮವು ಮುನ್ನಾರ್-ತೆಕ್ಕಡಿ ಮಾರ್ಗದಲ್ಲಿ ಸ್ಥಿತವಿರುವುದರಿಂದ ಸಾಕಷ್ಟು ಬಸ್ಸುಗಳಾಗಲಿ ಅಥವಾ ಬಾಡಿಗೆ ಕಾರುಗಳಾಗಲಿ ಇಲ್ಲಿಗೆ ತೆರಳಲು ಮುನ್ನಾರ್ ಅಥವಾ ತೆಕ್ಕಡಿಯಿಂದ ದೊರೆಯುತ್ತವೆ.
ಚಿತ್ರಕೃಪೆ: Navaneeth Krishnan S
ಬಾಡಿಗೆ ಕಾರು
ಇಡುಕ್ಕಿ ಜಿಲ್ಲೆಯಲ್ಲಿರುವ ರಾಮಕ್ಕಾಲ್ಮೇಡು ಮುನ್ನಾರ್ ನಿಂದ 77 ಕಿ.ಮೀ ಹಾಗೂ ತೆಕ್ಕಡಿಯಿಂದ 45 ಕಿ.ಮೀ ಗಳಷ್ಟು ದೂರವಿದ್ದು ಮುನ್ನಾರ್-ತೆಕ್ಕಡಿ ರಸ್ತೆ ಮಾರ್ಗದಲ್ಲಿಯೆ ಬರುತ್ತದೆ. ಹಾಗಾಗಿ ಬಾಡಿಗೆ ಕಾರುಗಳ ಮೂಲಕ ಒಂದು ದಿನದ ಮಟ್ಟಿಗೆ ಈ ಗಿರಿಧಾಮಕ್ಕೆ ಭೇಟಿ ನೀಡಿ ಬರಬಹುದಾಗಿದೆ.
ಚಿತ್ರಕೃಪೆ: Rojypala
ತಮಿಳುನಾಡು ನೋಟ
ಇಲ್ಲಿ ಮುಖ್ಯವಾಗಿ ಆಸ್ವಾದಿಸಬಹುದಾದ ಚಟುವಟಿಕೆಗಳೆಂದರೆ ಬೆಟ್ಟದ ಮೇಲಿಂದ ತಮಿಳುನಾಡಿನ ವಿಹಂಗಮ ನೋಟ ನೋಡುವುದು, ಪ್ರತಿಮೆಗಳು, ಅದ್ಭುತವಾಗಿ ಬೀಸುವ ಗಾಳಿ ಹಾಗೂ ಪಕ್ಷಿ ವೀಕ್ಷಣೆ ಮಾಡುವುದಾಗಿದೆ.
ಚಿತ್ರಕೃಪೆ: Edukeralam
ಉಪಹಾರಗೃಹಗಳಿಲ್ಲ
ಈ ಪ್ರದೇಶದ ಬೆಟ್ಟದ ಕೆಳಗೆಯಾಗಲಿ ಅಥವಾ ಏರಿದಾಗ ಮೇಲಾಗಲಿ ಉಪಹಾರಗೃಹಗಳು ಇರುವುದಿಲ್ಲ. ಹಾಗಾಗಿ ನಿಮಗೆ ಬೇಕಾದ ಆಹಾರ-ತಿಂಡಿಗಳನ್ನು ಮೊದಲೆ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ. ಆದಾಗ್ಯೂ ಬೆಟ್ಟದ ಕೆಳ ಪ್ರದೇಶದಲ್ಲಿ ಕೆಲವೆ ಕೆಲವು ಚಿಕ್ಕ ಪುಟ್ಟ ಕುರುಕಲು ತಿಂಡಿಗಳ ಅಂಗಡಿ ಮುಗ್ಗಟ್ಟುಗಳಿವೆ.
ಚಿತ್ರಕೃಪೆ: Edukeralam