ನಿಸರ್ಗಪ್ರಿಯರಿಗೆ ಕೇರಳದ ಇಡುಕ್ಕಿ ಪ್ರದೇಶ ದೇವರು ಕೊಟ್ಟ ವರವೇ ಸೈ. ದೃಷ್ಟಿ ನೆಟ್ಟಷ್ಟೂ ದೂರ ಕಾಣುವ ಹಸಿರು ವನರಾಶಿ ಇಲ್ಲಿಯ ಜೀವಂತಿಕೆಯ ಪ್ರತೀಕ. ಮುಗಿಲು ಮುಟ್ಟುವ ಪರ್ವತಗಳು ಇಲ್ಲಿಯ ಹೆಮ್ಮೆ. ಭಾರತದ ಅತಿದೊಡ್ಡ ಪರ್ವತಗಳ ಸಾಲಿನಲ್ಲಿ ಸ್ಥಾನ ಪಡೆದಿರುವ ಆನಮುಡಿ ಇರುವುದೂ ಇಲ್ಲಿಯೇ. ಇಲ್ಲಿನ ಮತ್ತೊಂದು ವಿಶೇಷವೆಂದರೆ ವಿಶ್ವದ ಎರಡನೇ ಅತೀದೊಡ್ಡ ಕಮಾನು ಆಣೆಕಟ್ಟು ಇಲ್ಲಿದೆ. ಐತಿಹಾಸಿಕವಾಗಿ ಇಲ್ಲಿನ ಹೆಜ್ಜೆಗುರುತುಗಳನ್ನು ಗುರುತಿಸುವುದಾದರೆ, ಚೇರರು ಇಲ್ಲಿ ಆಳ್ವಿಕೆ ನಡೆಸಿದ್ದರು. ಯುರೋಪಿಯನ್ ಮೂಲದ ಅದೇಷ್ಟೋ ಮಂದಿ ಇಲ್ಲಿಗೆ ವಲಸೆ ಬಂದು ತಮ್ಮ ವಸಾಹತು ಸ್ಥಾಪಿಸಿದ್ದರು. ತೇಗ, ಗಂಧ, ರೋಸ್ವುಡ್ನಂತಹ ಬೆಲೆಬಾಳುವ ಮರಗಳು ಇಲ್ಲಿನ ಕಾಡುಗಳ ಜೀವಾಳವಾಗಿದ್ದು ಇಲ್ಲಿನ ಆರ್ಥಿಕ ಸ್ಥಿತಿಯನ್ನೂ ಅವು ಕಾಯುತ್ತವೆ. ವಿದೇಶಗಳಿಗೆ ಇಲ್ಲಿಂದಲೇ ಪೂರೈಕೆಯಾಗುತ್ತವೆ. 1947 - 48 ನೇ ಸಾಲಿನಲ್ಲಿ ಇಲ್ಲಿನ ಉದುಂಬಂಚೋಲಾ ಮತ್ತು ಪೀರ್ಮೆಡು ಬಳಿ ಉತ್ಖನನ ನಡೆಸಿದಾಗ ಅನೇಕ ಐತಿಹಾಸಿಕ ಪುರಾವೆಗಳು ಲಭಿಸಿದ್ದು, ಸ್ಮಾರಕ ಶಿಲೆಗಳು, ಗೋರಿಗಳು ಶಿಲಾಯುಗದ ಕಾಲದವುಗಳೆಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.
1972ನೇ ಇಸ್ವಿಯ ಜನೆವರಿ 27ರಂದು ರಚಿಸಲಾದ ಮಾಹಿತಿಯ ಪ್ರಕಾರ ಇಡುಕ್ಕಿ ಜಿಲ್ಲೆ ದೇವಿಕುಳಂ, ಆಧಿಮಲಿ, ಉದುಂಬಂಚೋಲಾ, ಪೀರ್ಮೆಡು, ಥೋಡಪೂಝಾ ಮುಂತಾದ ಪ್ರಮುಖ ಪಟ್ಟಣಗಳನ್ನು ಒಳಗೊಂಡಿದೆ. ಇಡುಕ್ಕಿಯಲ್ಲಿ ಥೋಡಪೂಝಾಯಾರ್ ಮತ್ತು ಥಲಯಾ ನದಿಗಳು ಹರಿದಿದ್ದು, ಇಲ್ಲಿನ ರೈತರಿಗೆ ಬೆಳೆಗಳನ್ನು ಬೆಳೆಯುವುದಕ್ಕೆ ನೆರವಾಗಿವೆ. ವಿಶಿಷ್ಠವಾದ ಹದಿಮೂರು ಪರ್ವತಶ್ರೇಣಿಗಳನ್ನು ಹೊಂದಿರುವ, ಸಮುದ್ರ ಮಟ್ಟದಿಂದ 2000 ಮೀಟರ್ ಎತ್ತರದಲ್ಲಿರುವ ಅನಾಮುಡಿ ಪರ್ವತವು ಕೂಡ ಇಲ್ಲಿಯ ಪ್ರಮುಖ ಆಕರ್ಷಣೆ.
ರಾಜ್ಯಕ್ಕೆ ಅಗತ್ಯವಿರುವ ವಿದ್ಯುಚ್ಛಕ್ತಿಯ ಶೇ. 60 ರಷ್ಟು ವಿದ್ಯುತ್ ಇಲ್ಲಿಯೇ ಉತ್ಪಾದನೆಯಾಗುತ್ತದೆ. ಇಡುಕ್ಕಿಗೆ ವಿಶ್ವಮಾನ್ಯತೆ ತಂದುಕೊಟ್ಟಿರುವ ಕಮಾನಾಕೃತಿಯ ಅಣೆಕಟ್ಟು, ಕುಳಮಾವು ಹಾಗೂ ಛೆರುಥೋಣಿಯ ಆಣೆಕಟ್ಟುಗಳು ಇಲ್ಲಿನ ಪ್ರಮುಖ ವಿದ್ಯುದಾಗಾರಗಳು. ರಾಮಕ್ಕಾಲುಮೆಡು ಹಾಗೂ ಇಡುಕ್ಕಿಯ ಗಿರಿಧಾಮಗಳಲ್ಲಿ ಪವನ ವಿದ್ಯುತ್ ಪಂಕಗಳನ್ನು ಅಳವಡಿಸಲಾಗಿದ್ದು, ಇಡುಕ್ಕಿಯನ್ನು ಕೇರಳದ ಫವರ್ಹೌಸ್ ಎಂದೇ ಕರೆಯಲಾಗುತ್ತದೆ. ಇಲ್ಲಿನ ಮಾಲಂಕಾರ ಜಲಾಶಯದಲ್ಲಿ ಬೋಟಿಂಗ್ ಹಾಗೂ ಮೀನುಗಾರಿಕೆಗೆ ವಿಫುಲ ಅವಕಾಶವಿದ್ದು ಇದು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಇಲ್ಲಿನ ಚಹಾ ಮತ್ತು ಕಾಫಿ ತೋಟಗಳು ಕಣ್ಮನ ಸೆಳೆಯತ್ತವೆ. ಇವುಗಳ ಮಧ್ಯೆ ಹರಿಯುವ ತೊರೆಗಳು, ಪುಟ್ಟ ಪುಟ್ಟ ಜಲಪಾತಗಳು, ಪ್ರಶಾಂತವಾದ ಮುಂಜಾನೆಯ ಮಂಜಿನ ಹನಿಗಳು ಮನಸಿಗೆ ಮುದ ನೀಡುತ್ತವೆ. ಇಳಿಜಾರಿನಲ್ಲಿ ತೋಟಗಳ ಮಧ್ಯೆ ಹಾದು ಹೋಗಿರುವ ರಸ್ತೆಗಳನ್ನು ಬೆಟ್ಟದ ಮೇಲೆ ನಿಂತು ನೋಡುವ ಸೊಬಗೇ ಅತ್ಯಂತ ಮಜವಾದದದ್ದು. ಚಹಾ ಮತ್ತು ಕಾಫಿಯನ್ನು ಹೊರತುಪಡಿಸಿದರೆ ಮೆಣಸು, ಏಲಕ್ಕಿ ಇಲ್ಲಿನ ಪ್ರಮುಖ ಬೆಳೆ. ಮುರ್ರೀಖಡಿ ಹಾಗೂ ನೇಡುಂಖಮಡಂ ಪ್ರದೇಶಗಳಲ್ಲಿ ಹೆಚ್ಚಾಗಿ ಮಸಾಲೆ ಬೆಳೆಗಳನ್ನು ಉತ್ಪಾದಸಲಾಗುತ್ತಿದ್ದು, ಈ ಪ್ರದೇಶಗಳನ್ನಬು ಮಸಾಲೆ ನಾಡು ಅಂತಲೇ ಕರೆಯುತ್ತಾರೆ. ಕಾಡು ಪ್ರಾಣಿಗಳು, ಹಾಗೂ ಅಭಯಾರಣ್ಯವೂ ಕೂಡ ಇಲ್ಲಿದ್ದು, ವನ್ಯಜೀವಿ ಪ್ರಿಯರಿಗೂ ಇಡುಕ್ಕಿಯಲ್ಲಿ ಸಾಕಷ್ಟು ಅನುಭವಗಳು ಕಾದುನಿಂತಿವೆ. ಮಧ್ಯಪ್ರಿಯರಿಗಂತೂ ಪ್ರಸಿದ್ಧ ಕಾಸ್ಕಾದೆಸ್ ಹಾಗೂ ಸೆಲ್ಲಾರ್ ಕೋವಿಲ್ಗಳು ಇಲ್ಲಿನ ವಿಶೇಷವೆಂಬಂತೆ ಕಾಣುತ್ತವೆ.
ಪ್ರವಾಸದ ಸೂಜಿಗಲ್ಲುಗಳು:
ಇತಿಹಾಸ ಪ್ರಸಿದ್ದವಾದ ಇಡುಕ್ಕಿ ದೇವಾಲಯಗಳ ತವರೂ ಹೌದು. ರಾಜ ವಡಕ್ಕುಂಕೂರ್ ಕಟ್ಟಿಸಿದನೆನ್ನಲಾಗುವ ಮಂಗಳಾದೇವಿ ದೇವಸ್ಥಾನ ಇಲ್ಲಿನ ಪ್ರಮುಖ ಆಕರ್ಷಣೆ. ಇದು ಸಮುದ್ರ ಮಟ್ಟದಿಂದ 1337 ಮೀಟರ್ ಎತ್ತರದಲ್ಲಿದೆ. ಕರಿಕ್ಕೋಡೆಯಲ್ಲಿ ಚೋಳರ ವಾಸ್ತುಶಾಸ್ತ್ರದ ಪ್ರಕಾರ ನಿರ್ಮಿಸಲಾಗಿರುವ ಅಣ್ಣಾಮಾಲಾ ದೇವಸ್ಥಾನ ಇನ್ನೊಂದು ಪ್ರಸಿದ್ಧ ಕ್ಷೇತ್ರ. ಮುಸ್ಲಿಂ ಸಮುದಾಯದ ಸೈನಿಕರಿಗಾಗಿ ರಾಜಾ ವಡಕ್ಕುಂಕೂರ್ ನಿರ್ಮಿಸಿರುವ ಕೋಟೆಯನ್ನೂ ನೋಡಬಹುದು. ಇಲ್ಲಿಯೇ ಮಸೀದಿ, ಚಾರಿತ್ರಿಕ ಹಿನ್ನೆಲೆಯ ಕುರುಹುಗಳನ್ನು ಕಾಣಬಹುದಾಗಿದೆ. ಸುಮಾರು 13 ನೇ ಶತಮಾನದ ಹೊತ್ತಿಗೆ ಈ ಕೋಟೆಯನ್ನು ಕಟ್ಟಲಾಗಿದೆ. ಥೋಡಪುಝಾ ಬಳಿ ಹಳೆ ಕಾಲದ ಚರ್ಚ್ ಇದೆ. ಪ್ರಸಿದ್ಧವಾದ ಟೇಕ್ಕಡಿ ಪೆರಿಯಾರ್ ರಾಷ್ಟ್ರೀಯ ಉದ್ಯಾನವನ ವನ್ಯಜೀವಿ ಪ್ರಿಯರಿಗೆ ರಸದೌತಣ ನೀಡುವ ತಾಣ.
ಇಲ್ಲಿನ ಕುರುಂಜಿಮಾಲಾ ಅಭಯಾರಣ್ಯ ಅಪರೂಪದ ಸಸ್ಯಸಂಪತ್ತು ಹಾಗೂ ವನ್ಯ ಜೀವಿಗಳ ನೆಲೆಯಾಗಿದೆ. ಇಲ್ಲೇ ಸಮೀಪದಲ್ಲಿಯೇ ಚಿನ್ನಾರ್ ಮತ್ತು ಇಂಧಿರಾಗಾಂಧಿ ಅಭಯಾರಣ್ಯಗಳಿವೆ. ಅನಮುಡಿಯ ಶೋಲಾ ನ್ಯಾಶನಲ್ಪಾರ್ಕ್, ಎರವೀಕುಲಮ್ ನ್ಯಾಶನಲ್ ಪಾರ್ಕ್ ಮತ್ತು ಪಂಪಾದಮ್ ನ್ಯಾಶನಲ್ ಪಾರ್ಕ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಪರಿಸರ ಪ್ರಿಯರನ್ನು ಆಕರ್ಷಿಸುತ್ತಿರುವ ಕೇಂದ್ರಗಳು. ನೀಲಗಿರಿ ಕಾಡುಜಿಂಕೆ, ಪಾರಿವಾಳ, ಹುಲಿ ಬಣ್ಣದ ಕಪ್ಪೆಗಳು, ನಸುಬೂದುಬಣ್ಣದ ರಾಕ್ಷಸ ಅಳಿಲು, ಆನೆ, ಸಾಂಬಾರ್ ಜಿಂಕೆ ಮತ್ತು ನೀಲಕುರಿಂಜಿಗಳನ್ನು ನೋಡಲು ವಿಶ್ವದ ಎಲ್ಲೆಡೆಯಿಂದ ಪ್ರವಾಸಿಗರು ಇಲ್ಲಿಗೆ ಲಗ್ಗೆಯಿಡುತ್ತಾರೆ. ನೀವೂ ಬನ್ನಿ!
ಸಲೀಂ ಅಲಿ ಪಕ್ಷಿಧಾಮ ಇಲ್ಲಿನ ಮತ್ತೊಂದು ವಿಶೇಷ. ಸ್ಥಳಿಯ ಸರೀಸೃಪಗಳ ಜತೆ ಪರ್ಯಾಯ ದ್ವೀಪದ ಗೂಬೆ, ಮಲಬಾರ್ ಹಾರ್ನಬಿಲ್, ಗುಲಾಬಿ ಕೊಕ್ಕಿನ ರೋಲರ್, ಕಡುಗೆಂಪು ಕುತ್ತಿಗೆಯ ಬಾರ್ಬರ್, ಕ್ರೆಸ್ಟೆಡ್ ಸರ್ಪೆಂಟ್ ಹದ್ದು, ಗ್ರೇಟ್ ಇಂಡಿಯನ್ ಹಾರ್ನ್ಬಿಲ್ ಸೇರಿದಂತೆ ಇನ್ನೂ ಅನೇಕ ಅಪರೂಪದ ಪಕ್ಷಿಗಳನ್ನು ಇಲ್ಲಿ ಕಾಣಬಹುದು. ಈ ಪ್ರದೇಶದಲ್ಲಿ ಚಾರಣಕ್ಕೂ ಅವಕಾಶವಿದ್ದು, ಸಾಹಸಪ್ರಿಯರು ಧಾರಾಳವಾಗಿ ಇಲ್ಲಿಗೆ ಬರಬಹುದು. ಕಳಾವರಿ ಬೆಟ್ಟ, ಕುಳಮಾವು, ಪಳ್ಕುಳಮೇಡು, ನೀಡುಂಕಂಡಂ ಗಳಲ್ಲಿ ನೀವು ಸಾಹಸ ಚಾರಣ ಮಾಡಬಹುದು. ಸುತ್ತಲೂ ಹಸಿರು ಗೋಡೆಗಳಂತೆ ಪರಿಸರವನ್ನು ಹೊಂದಿರುವ ಹಿಲ್ವ್ಯೂ ಪಾರ್ಕ್ ನಿಮ್ಮ ಮನಸೂರೆಗೊಳಿಸದೇ ಇರದು. ಥುಂಪಾಚಿ ಕಾಲ್ವೇರಿ ಸಮುಚ್ಚಯಕ್ಕೂ ಭೇಟಿ ನೀಡಿ ಅಲ್ಲಿನ ಸೌಂದರ್ಯವನ್ನು ಆಸ್ವಾಧಿಸಬಹುದು.