ಪುರಾಣ, ಪುಣ್ಯ ಕಥೆಗಳ ಪ್ರಕಾರ, ನಮ್ಮ ಭಾರತ ದೇಶವು ಸಾಕಷ್ಟು ಅದೃಷ್ಟ ಹೊಂದಿರುವ ದೇಶವೆಂದು ತಿಳಿದು ಬರುವ ಅಂಶವಾಗಿದೆ. ಈ ಪುಣ್ಯ ಭೂಮಿಯಲ್ಲಿ ಅದೇಷ್ಟೊ ಪವಾಡ, ಅಚ್ಚರಿಗಳು ನಡಿದಿವೆ. ಹಲವಾರು ದೈವಿಕ ಘಟನೆಗಳು ನಡಿದಿವೆ ಹಾಗೂ ಪುಣ್ಯ ಕ್ಷೇತ್ರಗಳ ನಿರ್ಮಾಣಕ್ಕೆ ಕಾರಣವೂ ಆಗಿವೆ. ವಿಭಿನ್ನ ಹಿನ್ನಿಲೆಗಳಿಂದಲೆ ಇಂದು ಸಾಕಷ್ಟು ಕ್ಷೇತ್ರಗಳು ತಮ್ಮದೆ ಆದ ದೈವಿ ಪ್ರಭಾವವನ್ನು ಹೊಂದಿದ್ದು ಹಿಂದೂ ಭಕ್ತ ಜನರನ್ನು ಸದಾ ಆಕರ್ಷಿಸುತ್ತವೆ. ಈ ಲೇಖನವು ರೋಚಕ ಹಿನ್ನಿಲೆಯುಳ್ಳ ಪಂಚರಾಮ ಕ್ಷೇತ್ರಗಳ ಕುರಿತು ತಿಳಿಸುತ್ತದೆ.
ವಿಶೇಷ ಲೇಖನ : ಪರಶುರಾಮ ಕ್ಷೇತ್ರಗಳು
ಹೆಸರು ಕೇಳಿದಾಗ ಮೊದಲಿಗೆ ನಿಮಗೆ ಈ ಕ್ಷೇತ್ರಗಳು ರಾಮಾಯಣದ ಶ್ರೀರಾಮನ ಕುರಿತಾದವುಗಳೆಂದು ಅನಿಸಿರಬಹುದು. ಆದರೆ ಖಂಡಿತವಾಗಿಯೂ ಆ ರೀತಿ ಇಲ್ಲ. ಈ ಪಂಚರಾಮ ಕ್ಷೇತ್ರಗಳು ಶಿವನಿಗೆ ಮುಡಿಪಾದ ದೇವಸ್ಥಾನಗಳಾಗಿವೆ. ಈ ಐದೂ ಕ್ಷೇತ್ರಗಳು ಇರುವುದು ಆಂಧ್ರಪ್ರದೇಶ ರಾಜ್ಯದಲ್ಲೆ. ಇಂದ್ರ, ಸೂರ್ಯ, ಚಂದ್ರ, ವಿಷ್ಣು ಹಾಗೂ ಕುಮಾರಸ್ವಾಮಿಯಿಂದ ಪ್ರತ್ಯೇಕವಾಗಿ ಐದು ವಿವಿಧ ಸ್ಥಳಗಳಲ್ಲಿ ಶಿವಲಿಂಗಗಳು ಪ್ರತಿಷ್ಠಾಪಿಸಲ್ಪಟ್ಟಿದ್ದು ಈ ಎಲ್ಲ ಐದು ಲಿಂಗಗಳು ಒಂದೆ ಶಿವಲಿಂಗದಿಂದ ಮಾಡಲ್ಪಟ್ಟಿರುವುದು ವಿಶೇಷ. ಆ ಸ್ಥಳಗಳು ಯಾವುವು ಎನ್ನುವುದರ ಕುರಿತು ಕೆಳಗೆ ತಿಳಿಯಿರಿ.
ವಿಶೇಷ ಲೇಖನ : ರಾಮಾಯಣ ಮಹಾಭಾರತದ ಸ್ಥಳಗಳು
ಅಮರಲಿಂಗೇಶ್ವರ ದೇವಸ್ಥಾನ
ಚಿತ್ರಕೃಪೆ: RameshSharma
ಅಮರರಾಮ : ಆಂಧ್ರದ ಗುಂಟೂರು ಜಿಲ್ಲೆಯ ಅಮರಾವತಿ ಪಟ್ಟಣದಲ್ಲಿ ಅಮರಲಿಂಗೇಶ್ವರನಾಗಿ ಶಿವಲಿಂಗವು ಪ್ರತಿಷ್ಠಾಪಿಸಲ್ಪಟ್ಟಿದೆ. ಕಥೆಯ ಪ್ರಕಾರ, ಇಂದ್ರನು ಈ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದಾನೆ. ಗುಂಟೂರಿನಿಂದ ಈ ದೇವಸ್ಥಾನಕ್ಕೆ ತೆರಳುವುದು ಸುಲಭವಾಗಿದೆ. ಸಾಕಷ್ಟು ಬಸ್ಸುಗಳು ದೇವಸ್ಥಾನದವರೆಗೂ ದೊರೆಯುತ್ತವೆ. ದೇವಸ್ಥಾನ ಸಂಕೀರ್ಣದಲ್ಲಿ ಮುಖ್ಯ ದೇಗುಲವಲ್ಲದೆ ಇತರೆ ಸನ್ನಿಧಿಗಳೂ ಸಹ ಇವೆ.
ದ್ರಕ್ಷರಾಮ ಕ್ಷೇತ್ರ
ಚಿತ್ರಕೃಪೆ: Aditya Gopal
ದ್ರಕ್ಷರಾಮ : ಪೂರ್ವ ಗೋದಾವರಿ ಜಿಲ್ಲೆಯಲ್ಲಿರುವ ರಾಮಚಂದ್ರಾಪುರಂ ಬಳಿಯ ದ್ರಕ್ಷರಾಮಂನಲ್ಲಿ ಈ ದೇವಸ್ಥಾನವಿದೆ. ಈ ದೇವಾಲಯ ದೊಡ್ಡದಾಗಿದ್ದು ಶಿವನು ಇಲ್ಲಿ ಭಿಮೇಶ್ವರನಾಗಿ ನೆಲೆಸಿದ್ದಾನೆ. ರಾಮನ ಯಾವುದೆ ರೀತಿಯ ಹಿನ್ನಿಲೆ ದೇವಸ್ಥಾನದ ಹಿನ್ನಿಲೆಯೊಂದಿಗೆ ಇಲ್ಲದೆ ಹೋದರೂ ಇಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಶಿವನನ್ನು ಶ್ರೀರಾಮನು ಪೂಜಿಸಿದ್ದನು. ನಂತರ ಸೂರ್ಯ ಹಾಗೂ ಇಂದ್ರನು ಪೂಜಿಸಿದ್ದರು.
ಸೋಮರಾಮ ಕ್ಷೇತ್ರ
ಚಿತ್ರಕೃಪೆ: PV Bhaskar
ಸೋಮರಾಮ : ಆಂಧ್ರದ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಲ್ಲಿರುವ ಗುನುಪುಡಿ ಎಂಬಲ್ಲಿ ಸೋಮೇಶ್ವರ ಸಾಮಿಯಾಗಿ ಶಿವನು ನೆಲೆಸಿದ್ದಾನೆ. ದೇವಸ್ಥಾನವು ಹೊಸತೆಂಬಂತೆ ಗೋಚರಿಸುತ್ತದೆ. ದೇವಾಲಯದ ಮುಂದೆ ಕಲ್ಯಾಣಿಯೊಂದಿದ್ದು ಅದನ್ನು ಚಂದ್ರಕುಂಡ ಎಂದು ಕರೆಯಲಾಗುತ್ತದೆ. ಇಲ್ಲಿನ ಶಿವಲಿಂಗವನ್ನು ಚಂದ್ರನು ಪೂಜಿಸಿ ತನ್ನೆಲ್ಲ ಪಾಪಕರ್ಮಗಳನ್ನು ತೊಳೆದುಕೊಂಡನೆಂದು ಹೇಳಲಾಗಿದೆ.
ಕ್ಷೀರರಾಮ ಕ್ಷೇತ್ರ
ಕ್ಷೀರರಾಮ : ಪಶ್ಚಿಮ ಗೋದಾವರಿ ಜಿಲ್ಲೆಯ ಪಲಕಲ್ಲು ಎಂಬಲ್ಲಿ ನಾಲ್ಕನೇಯ ಕ್ಷೇತ್ರವಾಗಿ ಕ್ಷೀರ ರಾಮಲಿಂಗ ಸ್ವಾಮಿಯು ನೆಲೆಸಿದ್ದಾನೆ. ಪ್ರತೀತಿಯ ಪ್ರಕಾರ, ಶಿವನು ಇಲ್ಲಿಯೆ ವಿಷ್ಣುವಿಗೆ ಸುದರ್ಶನ ಚಕ್ರವನ್ನು ಕರುಣಿಸಿದ. ಅಲ್ಲದೆ ಉಪಮನ್ಯ ಮಹರ್ಷಿಯು ಇಲ್ಲಿಯೆ ಶಿವನಿಂದ ಹಾಲು ಹಾಗೂ ವರವನ್ನು ಪಡೆದಿದ್ದರಂತೆ. ಅಂತೆಯೆ ಇದಕ್ಕೆ ಕ್ಷೀರರಾಮ ಎಮ್ಬ ಹೆಸರು.
ಕುಮಾರರಾಮ ಕ್ಷೇತ್ರ
ಚಿತ್ರಕೃಪೆ: Amruth varma
ಕುಮಾರರಾಮ : ಕಾಕಿನಾಡ ಜಿಲ್ಲೆಯ ಸಾಮರ್ಲಕೋಟ ಎಂಬಲ್ಲಿ ಈ ಶಿವನು ಕುಮಾರರಾಮನಾಗಿ ನೆಲೆಸಿದ್ದಾನೆ. ಕಾಕಿನಾಡದಿಂದ 20 ಕಿ.ಮೀ ಹಾಗೂ ಸಾಮರ್ಲಕೋಟ ರೈಲು ನಿಲ್ದಾಣದಿಂದ ಒಂದು ಕಿಮೀ ದೂರದಲ್ಲಿ ಈ ದೇವಸ್ಥಾನವಿದೆ. ಕುಮಾರರಾಮನೆ ಇಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದರಿಂದ ಇದಕ್ಕೆ ಕುಮಾರರಾಮನೆಂಬ ಹೆಸರು ಬಂದಿದೆ.
ಪಂಚರಾಮ ಕ್ಷೇತ್ರಗಳ ಹಿನ್ನಿಲೆ:
ಒಮ್ಮೆ ತಾರಕಾಸುರನೆಂಬ ಅಸುರನಿದ್ದನು ಅವನ ಬಳಿ ದಿವ್ಯ ಶಕ್ತಿ ಹೊಂದಿರುವ ಶಿವಲಿಂಗವಿದ್ದುದರಿಂದ ಅವನನ್ನು ಯಾರು ಕೂಡ ಸೋಲಿಸಲಾಗುತ್ತಿರಲಿಲ್ಲ. ಒಂದೊಮ್ಮೆ ದೇವತೆಗಳೊಂದಿಗೆ ಯುದ್ಧ ಮಾಡುವಾಗ ಕುಮಾರರಾಮ ಹಾಗೂ ತಾರಕಾಸುರ ಎದುರುಬದುರಾದರು. ಕುಮಾರರಾಮನು ತಕ್ಷಣವೆ ತನ್ನಲ್ಲಿದ್ದ ಶಕ್ತಿ ಆಯುಧದಿಂದ ತಾರಕಾಸುರನ ದೇಹವನ್ನು ತುಂಡು ತುಂಡು ಮಾಡಿದನು. ಆದರೆ ಆ ಎಲ್ಲ ತುಂಡುಗಳು ಮತ್ತೆ ಕ್ರೋಢಿಕರಣಗೊಂಡು ತಾರಕಾಸುರನು ಮತ್ತೆ ಪ್ರತ್ಯಕ್ಷನಾದನು ಇದರಿಂದ ವಿಚಲಿತನಾದ ಕುಮಾರ ರಾಮನು ಮತ್ತೆ ಮತ್ತೆ ಅವನ ದೇಹವನ್ನು ಛಿದ್ರ ಮಾಡಿದರೂ ಏನೂ ಪ್ರಯೋಜನವಾಗಲಿಲ್ಲ.
ಇದರಿಂದ ಆಶ್ಚರ್ಯ ಹಾಗೂ ಅವಮಾನಿತನಾದ ಕುಮಾರರಾಮನ ಎದುರಿಗೆ ವಿಷ್ಣು ಪ್ರತ್ಯಕ್ಷನಾಗಿ ಚಿಂತಿಸಬೇಡ ಕುಮಾರಾ, ಅವನ ಬಳಿಯಿರುವ ಶಿವಲಿಂಗವನ್ನು ತುಂಡು ಮಾಡಿ ನಂತರ ಅವನನ್ನು ವಧಿಸು ಎಂದು ಹೇಳಿದನು. ಅಲ್ಲದೆ ಶಿವಲಿಂಗವು ತುಂಡಾದಾಗಲೂ ಸಹ ಅವು ಮತ್ತೆ ಕೂಡಲು ಪ್ರಯತ್ನ ಪಡುತ್ತವೆ. ಆದ್ದರಿಂದ ಅವುಗಳನ್ನು ಪ್ರತ್ಯೇಕವಾಗಿ ಪೂಜಿಸಿ ದೇವಸ್ಥಾನ ನಿರ್ಮಿಸುವುದರಿಂದ ಅವುಗಳನ್ನು ಕೂಡುವುದರಿಂದ ತಡೆಯಬಹುದು ಎಂದು ಹೇಳಿದನು. ಅದರಂತೆ ಕುಮಾರರಾಮನು ಲಿಂಗವನ್ನು ಐದು ತುಂಡು ಮಾಡಿ ಇಂದ್ರ, ಸೂರ್ಯ, ಚಂದ್ರ, ವಿಷ್ಣು ಹಾಗೂ ಕುಮಾರರಾಮರು ಪೂಜಿಸಿದರು. ಅಂತೆಯೆ ಪಂಚರಾಮ ಕ್ಷೇತ್ರಗಳು.