ರಾಜ್ಯ - ಕರ್ನಾಟಕ
ಜಿಲ್ಲೆ - ಮಂಡ್ಯ
ತಾಲೂಕು - ಕೃಷ್ಣರಾಜಪೇಟೆ
ವಿಶೇಷತೆ - ಹದಿಮೂರನೇಯ ಶತಮಾನದ ಹೊಯ್ಸಳ ವಾಸ್ತುಶೈಲಿಯ ಮನಮೋಹಕ ಕೆತ್ತನೆಯುಳ್ಳ ಪಂಚಲಿಂಗೇಶ್ವರ ದೇವಾಲಯ
ಮಂಡ್ಯ ಜಿಲ್ಲೆ
ಕರ್ನಾಟಕದ ಸಕ್ಕರೆ ನಾಡು ಎಂದೆ ಜನಜನಿತವಾದ ಮಂಡ್ಯ ಜಿಲ್ಲೆಯು ನಿಜಕ್ಕೂ ಅದ್ಭುತ ಪ್ರವಾಸಿ ಆಕರ್ಷಣೆಗಳಿಗೆ ತವರು ನೆಲೆಯಾಗಿದೆ ಧಾರ್ಮಿಕತೆಯಿಂದ ಹಿಡಿದು ರೋಮಾಂಚನಕಾರಿ ಚಾರಣದಂತಹ ಚಟುವಟಿಕೆಗಳನ್ನು ಆಸ್ವಾದಿಸಬಹುದಾದ ಅನೇಕ ತಾಣಗಳು ಮಂಡ್ಯ ಜಿಲ್ಲೆಯಾದ್ಯಂತ ಕಂಡುಬರುತ್ತವೆ.
ಚಿತ್ರಕೃಪೆ: HoysalaPhotos
ಇನ್ನುಳಿದಂತೆ ಪ್ರಾಚೀನ ಕರ್ನಾಟಕದ ವಿವಿಧ ಸಾಮ್ರಾಜ್ಯಗಳ ಸುಂದರ ಶಿಲ್ಪಕಲೆಯ ಪ್ರಭಾವವನ್ನು ಅನಾವರಣಗೊಳಿಸುವ ಹಲವಾರು ಐತಿಹಾಸಿಕ ದೇವಾಲಯಗಳಿಂದಾಗಿಯೂ ಸಹ ಮಂಡ್ಯ ಜಿಲ್ಲೆಯು ಗಮನಸೆಳೆಯುತ್ತದೆ. ಹಾಗಾಗಿ ಮಂಡ್ಯ ಒಂದು ಉತ್ಕೃಷ್ಟ ಪ್ರವಾಸಿ ಜಿಲ್ಲೆಯಾಗಿ ಕರ್ನಾಟಕದಲ್ಲಿ ಸಾಕಷ್ಟು ಪ್ರಸಿದ್ಧಿಗಳಿಸಿದೆ.
ಪಂಚಲಿಂಗೇಶ್ವರ ದೇವಾಲಯ
ಹದಿಮೂರನೇಯ ಶತಮಾನದಲ್ಲಿ ಅಂದರೆ ಕ್ರಿ.ಶ. 1238 ರಲ್ಲಿ ಹೊಯ್ಸಳ ವಾಸ್ತುಶೈಲಿಯಲ್ಲಿ ನಿರ್ಮಿತವಾದ ಶಿವನಿಗೆ ಮುಡಿಪಾದ ಸುಂದರ ದೇವಾಲಯ ಇದಾಗಿದೆ. ಹೊಯ್ಸಳ ದೊರೆವೀರ ಸೋಮೇಶ್ವರನ ಆಡಳಿತವಿದ್ದ ಸಂದರ್ಭದಲ್ಲಿ ನಿರ್ಮಿತವಾದ ಈ ದೇವಾಲಯ ಐದು ತತ್ವಗಳ ಶಿವಲಿಂಗವಿರುವ ಪಂಚಲಿಂಗೇಶ್ವರ ದೇವಾಲಯವಾಗಿದೆ.
ಚಿತ್ರಕೃಪೆ: HoysalaPhotos
ಅಮರಶಿಲ್ಪಿ ಜಕಣಾಚಾರಿಯ ಹಾಗೆಯೆ ಸಾಕಷ್ಟು ಪ್ರಸಿದ್ಧಿಗಳಿಸಿದ ರುವಾರಿ ಮಲ್ಲಿತಮ್ಮ ಎಂಬ ಅಸಾಮಾನ್ಯ ಶಿಲ್ಪಿಯು ಈ ದೇವಾಲಯದ ಪ್ರಮುಖ ಶಿಲ್ಪಗಾರ. ಹೊಯ್ಸಳರ ಅನೇಕ ದೇವಾಲಯಗಳಿಗೆ ಮಲ್ಲಿತಮ್ಮ ಶಿಲ್ಪಗಾರನಾಗಿ ಗಮನಸೆಳೆಯುತ್ತಾನೆ.
ಕೆಲವು ಪ್ರಮುಖ ಇತಿಹಾಸಕಾರರ ಪ್ರಕಾರ ಪಂಚಕೂಟಗಳಿಗೆ ಬಲು ಅಪರೂಪದ ಉದಾಹರಣೆಯಾಗಿ ಪಂಚಲಿಂಗೇಶ್ವರ ದೇವಾಲಯವು ಎದ್ದು ಕಾಣುತ್ತದೆ. ಭಾರತೀಯ ಪುರಾತತ್ವ ಇಲಾಖೆಯಿಂದ ರಾಷ್ಟ್ರೀಯ ಮಹತ್ವ ಪಡೆದ ಸ್ಮಾರಕವಾಗಿ ಸಂರಕ್ಷಿಸಲ್ಪಟ್ಟ ದೇವಾಲಯ ಇದಾಗಿದ್ದು ವರ್ಷಪೂರ್ತಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.
ಚಿತ್ರಕೃಪೆ: Dineshkannambadi
ಇಲ್ಲಿನ ಕೆತ್ತನೆಗಳನ್ನು ಹಾಗೂ ಕಲಾತ್ಮಕತೆಯನ್ನು ಗಮನಿಸಿದಾಗ ಕಲಾಪ್ರಿಯರು ತನ್ಮಯರಾಗುವುದು ಖಚಿತ. ಸೂಕ್ಷವಾದ ಹಲವಾರು ರಚನೆಗಳನ್ನು ಕೆತ್ತನೆಗಳನ್ನು ಇಲ್ಲಿ ಕಾಣಬಹುದಾಗಿದೆ. ಒಮ್ಮೆಯಾದರೂ ನೋಡಲೇಬೇಕಾದ ಸುಂದರ ದೇವಾಲಯವಾಗಿ ಜನರನ್ನು ಆಕರ್ಷಿಸುತ್ತದೆ ಪಂಚಲಿಂಗೇಶ್ವರ.
ತಲುಪುವ ಬಗೆ
ಪ್ರಖ್ಯಾತ ಪ್ರವಾಸಿ ತಾಣವಾದ ಬ್ರಹ್ಮಲಿಂಗೇಶ್ವರ ದೇವಾಲಯವಿರುವ ಕಿಕ್ಕೇರಿಯಿಂದ ಕೇವಲ ಐದು ಕಿ.ಮೀ ದೂರದಲ್ಲಿದೆ ಗೋವಿಂದನಹಳ್ಳಿಯ ಪಂಚಲಿಂಗೇಶ್ವರ ದೇವಾಲಯ. ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ದೂರದಲ್ಲಿದೆ ಗೋವಿಂದನಹಳ್ಳಿ. ಬಾಡಿಗೆ ಕಾರು ಅಥವಾ ಕೆ ಆರ್ ಪೇಟೆಯಿಂದ ಬಸ್ಸಿನ ಮೂಲಕ ಇಲ್ಲಿಗೆ ತಲುಪಬಹುದಾಗಿದೆ.
ಸೋಮನಾಥಪುರದ ಚೆನ್ನಕೇಶವನ ವೈಭವ!