ಪಂಚಮುಖಿ ಆಂಜನೇಯನ ಬಗ್ಗೆ ಕೇಳಿರಬಹುದು, ಪಂಚಮುಖಿ ಆಂಜನೇಯನ ದೇವಸ್ಥಾನಕ್ಕೆ ಹೋಗಿರಬಹುದು. ಆದರೆ ಪಂಚಮುಖಿಗಣಪತಿಯ ಬಗ್ಗೆ ಕೇಳಿದ್ದೀರಾ? ಈ ಗಣೇಶನು ಪಂಚಮುಖ ಮಾತ್ರವಲ್ಲ ಪಂಚಶರೀರವನ್ನೂ ಸಹ ಹೊಂದಿದ್ದಾನೆ. ಹಾಗಾಗಿಯೆ ಪಂಚಮುಖಿಗಣಪತಿ ಎಂದು ಕರೆಯಲ್ಪಡುತ್ತಾನೆ.

ಐದು ಶರೀರವುಳ್ಳ ಗಣೇಶ
ಈ ದೇವಾಲಯವು ದೂರದಿಂದಲೇ ಬಹಳ ಆಕರ್ಷಕವಾಗಿ ಕಂಡುಬರುತ್ತದೆ. ಸುವರ್ಣ ಬಣ್ಣ ಲೇಪಿತ ಐದು ಶರೀರವುಳ್ಳ ಈ ಗಣೇಶನು ದೇವಾಲಯದ ಗೋಪುರವಾಗಿಯೆ ಫಳ ಫಳನೆ ಹೊಳೆಯುತ್ತ ಎಲ್ಲರ ಗಮನ ತನ್ನೆಡೆ ಸೆಳೆಯುತ್ತಾನೆ.

ವಿಶಿಷ್ಟ ದೇವಾಲಯ
ಈ ದೇವಾಲಯ ಸ್ಥಿತವಿರುವ ಪ್ರದೇಶದ ಅಕ್ಕ ಪಕ್ಕಗಳಲ್ಲಿರುವ ರಸ್ತೆಗಳಲ್ಲಿ ಸಾಗುವಾಗ ಯಾರಿಗಾದರೂ ಸರಿ ಒಂದು ಕ್ಷಣ ಕುತೂಹಲ ಹುಟ್ಟಿಸುವಂತೆ ಮಾಡುತ್ತದೆ ಈ ದೇವಾಲಯ ಹಾಗೂ ಇದು ವಿಶಿಷ್ಟವಾಗಿ ನಿರ್ಮಿಸಲ್ಪಟ್ಟಿರುವ ಪರಿ. ಬೆಂಗಳೂರಿನಲ್ಲಿಯೆ ಈ ಸುಂದರ ದೇವಾಲಯವಿದ್ದು ಭಕ್ತರ ಹಾಗೂ ಪ್ರವಾಸಿಗರ ಪಾಲಿಗೆ ನೆಚ್ಚಿನ ತಾಣವಾಗಿದೆ.

ಕೆಂಗೇರಿಯಲ್ಲಿದೆ
ಬೆಂಗಳೂರಿನ ಕೆಂಗೇರಿ ಬಳಿ ಸ್ಥಿತವಿರುವ ಈ ಪಂಚಮುಖ ಹಾಗೂ ಪಂಚ ಶರೀರವುಳ್ಳ ದೇವಾಲಯವು ಕೆಂಗೇರಿ ಬಸ್ಸು ನಿಲ್ದಾಣದಿಂದ ಕೇವಲ ಎರಡು ಕಿ.ಮೀ ಮೈಸೂರಿನೆಡೆ ಸಾಗುವ ರಸ್ತೆಯಲ್ಲಿ ಸಾಗುವಾಗ ದೊರೆಯುತ್ತದೆ. ನೈಸ್ ರಸ್ತೆಯ ಬಳಿ ಕೆಂಗೇರಿಯಿಂದ ಮೈಸೂರಿನೆಡೆ ಸಾಗುವಾಗ ಎಡಗಡೆಗೆ ದೊಡ್ಡದಾದ ಸ್ವಾಗತ ಕಮಾನೊಂದು ನಿಮ್ಮನ್ನು ಪಂಚಮುಖ ಗಣೇಶನ ದೇವಾಲಯಕ್ಕೆ ಕೈ ಬೀಸಿ ಕರೆಯುತ್ತದೆ.

ಪಂಚಮುಖ ದೇವಾಲಯ
ಪಂಚಮುಖ ದೇವಾಲಯದ ವಿನ್ಯಾಸವೆ ವಿಶಿಷ್ಟವಾಗಿದ್ದು ಇದನ್ನು ನೀವು ನೋಡಿದಾಗಲೇ ತಿಳಿಯುತ್ತದೆ. ಈ ವಿನ್ಯಾಸಕ್ಕೆ ವಿಶೇಷವಾದ ಅರ್ಥವೂ ಇದೆ. ಆ ಪ್ರಕಾರವಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದ್ದು ಇಲ್ಲಿ ವಿಘ್ನೇಶ್ವರನನ್ನು ಹರಸಿಕೊಂಡು ಬರುವವರ ಬಯಕೆಗಳು ಶೀಘ್ರದಲ್ಲಿ ಈಡೇರಿಸಲ್ಪಡುವಂತೆ ಈ ವಿನ್ಯಾಸ ಸಹಕಾರಿಯಾಗಿದೆ ಎಂದು ನಂಬಲಾಗುತ್ತದೆ.

ಶ್ರೀಚಕ್ರ
ಮೇರು ಯಂತ್ರ ಶ್ರೀಚಕ್ರವು ಒಂದು ದಿವ್ಯ ಶಕ್ತಿಯ ತೇಜಸ್ಸಾಗಿದ್ದು ಧನಾತ್ಮಕತೆಯ ಕಂಪನಗಳನ್ನು ಪಸರಿಸುತ್ತದೆ. ಮೇರು ಚಕ್ರವು ಜಗತ್ತಿನ ಧನಾತ್ಮಕ ಶಕ್ತಿಯನ್ನು ಪ್ರತಿನಿಧಿಸುವ ವಿನ್ಯಾಸವಾಗಿದ್ದು ಪಿರಮಿಡ್ ಆಕಾರದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಇದು ಒಂದು ಶಕ್ತಿ ಕೇಂದ್ರವೆಂದೆ ಹೇಳಬಹುದು.

ಹಲವಾರು ದೇವಾಲಯಗಳಲ್ಲಿವೆ ಶ್ರೀಚಕ್ರ
ಸಾಮಾನ್ಯವಾಗಿ ಪುರಾಣಗಳಲ್ಲಿ ಉಲ್ಲೇಖಿಸಲಾಗಿರುವಂತೆ ಶ್ರೀಚಕ್ರಗಳು ಒಂದೆಡೆ ಶಕ್ತಿಯು ಕ್ರೋಢೀಕರಣಗೊಳ್ಳುವ ಕೇಂದ್ರಗಳು ಅಥವಾ ವಿನ್ಯಾಸಗಳು. ಇವು ಇದ್ದೆಡೆ ಶಕ್ತಿಯ ಪ್ರವಾಹವಿರುತ್ತದೆ. ಹಾಗಾಗಿ ಹಲವಾರು ಪ್ರಸಿದ್ಧ ದೇವಾಲಯಗಳಲ್ಲಿ ಶ್ರೀಚಕ್ರಗಳನ್ನು ಸ್ಥಾಪಿಸಲಾಗಿರುವುದನ್ನು ನೋಡಬಹುದು.

ಚೂಪಾದ ಪರ್ವತ
ಮೇರು ಚಕ್ರವು ಒಂದು ವಿಶೇಷವಾದ ವಿನ್ಯಾಸವಾಗಿದ್ದು ಚೂಪಾದ ಪರ್ವತದ ಹಾಗೆ ಇದು ಕಂಡುಬರುತ್ತದೆ. ಇದೆ ವಿನ್ಯಾಸದಲ್ಲಿ ಈ ದೇವಾಲಯವನ್ನು ರಚಿಸಲಾಗಿರುವುದರಿಂದ ಈ ಗಣಪತಿ ದೇವಾಲಯವು ವಿಶೇಷ ಅನಿಸಿಕೊಂಡಿದೆ.

ಉತ್ತಮ ತಾಣ
ದೇವಾಲಯ ನಿರ್ಮಿತವಾದ ಪ್ರದೇಶ ಬೆಂಗಳೂರಿನ ಸದ್ದು ಗದ್ದಲಿನ ಪ್ರದೇಶದಿಂದ ಸಾಕಷ್ಟು ದೂರವಿದ್ದು ಒಂದು ಪ್ರಶಾಂತಮಯವಾದ ವಾತಾವರಣದಲ್ಲಿ ಸ್ಥಿತವಿರುವುದರಿಂದ ಬೆಂಗಳೂರಿಗರಿಗೆ ಈ ದೇವಾಲಯ ಭೇಟಿ ಸಾಕಷ್ಟು ಸಂತಸ ಹಾಗೂ ನೆಮ್ಮದಿ ನೀಡಬಲ್ಲುದು.

ಕಪ್ಪು ಶಿಲೆ ಗಣಪ
ಇನ್ನೂ ದೇವಾಲಯದ ಮುಖ್ಯ ಆವರಣದಲ್ಲಿ ಕಪ್ಪು ಶಿಲೆಯಲ್ಲಿ ನಿರ್ಮಿಸಲಾದ ಪಂಚಮುಖ ಗಣಪನನ್ನು ದರ್ಶಿಸಬಹುದು. ಈ ಗಣಪನ ನಾಲ್ಕು ಮುಖಗಳು ನಾಲ್ಕು ದಿಕ್ಕುಗಳನ್ನು ಸೂಚಿಸಿದರೆ ಐದನೇಯ ಮುಖವು ಆ ನಾಲ್ಕೂ ಮುಖಗಳ ಮೇಲೆ ಸ್ಥಿತವಾಗಿದೆ.

ಹಲವು ಪ್ರತಿಮೆಗಳು
ಗಣಪನ ಸುತ್ತಲೂ ಹಲವಾರು ರೂಪಗಳ ಗಣೇಶನ ಪ್ರತಿಮೆಗಳನ್ನು ಕಾಣಬಹುದಾಗಿದೆ. ಇದೇನು ಇಷ್ಟೊಂದು ಗಣಪತಿಗಳು ಎಂದೊಮ್ಮೆ ಆಶ್ಚರ್ಯವಾಗಬಹುದು. ಆದರೆ ಇಲ್ಲಿ ಒಟ್ಟು 32 ಗಣೇಶನ ಪ್ರತಿಮೆಗಳಿದ್ದು ಅವು ಗಣೇಶನ 32 ವಿವಿಧ ಅವತಾರಗಳನ್ನು ರೂಪಗಳನ್ನು ಪ್ರತಿನಿಧಿಸುತ್ತವೆ.


Click it and Unblock the Notifications

















