ಸಾಮಾನ್ಯವಾಗಿ ಕಡಲ ತಡಿಗಳು ಜನಪ್ರೀಯ ಪ್ರವಾಸಿ ತಾಣಗಳು. ಹೀಗಾಗಿ ಭಾರತದಲ್ಲಿ ಸಾಕಷ್ಟು ಹೆಸರುವಾಸಿ ಕಡಲ ತೀರಗಳನ್ನು ಕಾಣಬಹುದು. ಆದರೆ ನಿಮಗಿದು ಗೊತ್ತೆ ಕೆಲವು ಕಡಲ ತೀರಗಳು ರಹಸ್ಯಮಯವಾಗಿ ಸ್ಥಿತವಿದ್ದು ಬಹುತೇಕ ಪ್ರವಾಸಿಗರ ಕಣ್ಣಿಗೆ ಬೀಳದ ಹಾಗೆ ನೆಲೆಸಿವೆ. ಇಲ್ಲಿ ಭೇಟಿ ನೀಡುವವರ ಸಂಖ್ಯೆಯೂ ಅತಿ ವಿರಳ. ವಾಣಿಜ್ಯಕರಣವಂತೂ ಇಲ್ಲವೆ ಇಲ್ಲ.
ಈ ದೇವಸ್ಥಾನದಲ್ಲಿ ಮಲಗಿದ್ರೆ ಸಂತಾನ ಪ್ರಾಪ್ತಿಯಾಗುತ್ತಂತೆ!
ಇಂತಹ ಕಡಲ ತೀರಗಳಿಗೆ ಒಂದೊಮ್ಮೆಯಾದರೂ ಸರಿ ಭೇಟಿ ನೀಡಬೇಕೆಂಬ ಆಸೆ ಪ್ರತಿಯೊಬ್ಬ ಪ್ರವಾಸಿಗರಲ್ಲೂ ಮೂಡುವುದು ಸಹಜ. ಕೇವಲ ಕೆಲವೆ ಜನರಿಗೆ ತಿಳಿದಿರುವ ಕೆಲವು ವಿಶಿಷ್ಟವಾದ ಭಾರತದಲ್ಲಿ ಕಂಡುಬರುವ ಕಡಲ ತೀರಗಳ ಕುರಿತು ತಿಳಿಯಿರಿ.
ಅಂತರ್ವೇದಿ
PC: Rajib Ghosh
ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯ ಸಖಿನೇತಿಪಲ್ಲಿ ತಾಲೂಕಿನ ಅಂತರ್ವೇದಿ ಗ್ರಾಮವೂ ಸಹ ತನ್ನಲ್ಲಿರುವ ಹೆಚ್ಚು ಜನಪ್ರೀಯವಲ್ಲದ ಕಡಲ ತೀರ ಹೊಂದಿದ್ದು ಅದು ಅಂತರ್ವೇದಿ ಕಡಲ ತೀರ ಎಂದೆ ಕರೆಸಿಕೊಳ್ಳುತ್ತದೆ. ಇದೊಂದು ನರಸಿಂಹ ಕ್ಷೇತ್ರವಾಗಿದ್ದು ಗೋದಾವರಿಯ ಉಪನದಿಯಾದ ವಸಿಷ್ಠ ಗೋದಾವರಿಯು ಬಂಗಾಳಕೊಲ್ಲಿಯೊಂದಿಗೆ ಸೇರುವ ಸ್ಥಳವೂ ಸಹ ಆಗಿದೆ.
ಯರಾಡಾ
PC: Krishna Potluri
ಆಂಧ್ರಪ್ರದೇಶದ ಬಂದರು ನಗರಿ ವಿಶಾಖಾಪಟ್ಟಣದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಯರಾಡಾ ಕರಾವಳಿ ಗ್ರಾಮದ ಕಡಲ ತೀರ ಇದಾಗಿದ್ದು ಪ್ರವಾಸಿಗರಿಂದ ಹೆಚ್ಚು ಅನ್ವೇಷಣೆಗೊಳಪಟ್ಟಿಲ್ಲ. ಇಲ್ಲಿನ ಕಡಲ ಪರಿಸರವು ಶಾಂತಮಯವಾಗಿದ್ದು ಯಾವುದೆ ಮಾರಾಟ ವ್ಯಾಪರಗಳಿಲ್ಲ.
ಮಂದಾರಮಣಿ
PC: youtube
ಬಂಗಾಳಕೊಲ್ಲಿ ಸಮುದ್ರದ ಉತ್ತರಕ್ಕೆ ಪಶ್ಚಿಮ ಬಂಗಾಳ ರಾಜ್ಯದ ಪೂರ್ವ ಮಿಡ್ನಾಪೋರ್ ಜಿಲ್ಲೆಯಲ್ಲಿರುವ ಮಂದಾರಮಣಿ ಗ್ರಾಮದ ಕಡಲ ತೀರವು ಒಂದು ಸುಂದರ ಪ್ರವಾಸಿ ಆಕರ್ಷಣೆಯಾಗಿದೆ. ಇದು ಮೂಲತಃ ರಿಸಾರ್ಟ್ ಪಕ್ಕದ ಕಡಲ ತೀರವಾಗಿದ್ದು ಹೋಟೆಲಿನ ಹಿಂಭಾಗದಿಂದ ಪ್ರವಾಸಿಗರು ಕಡಲ ತೀರವನ್ನು ತಲುಪಬಹುದಾಗಿದೆ.
ಗುಹಾಘರ್
PC: youtube
ಗುಹಾಘರ್ ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಆಪೂಸು ಮಾವಿನ ಹಣ್ಣು ಹಾಗೂ ತೆಂಗಿನಕಾಯಿಗಳಿಗೆ ಹೆಸರುವಾಸಿಯಾದ ಗುಹಾಘರ್ ತನ್ನಲ್ಲಿರುವ ಕಡಲ ತೀರಕ್ಕೆ ತನ್ನದೆ ಆದ ಹೆಸರುಗಳಿಸಿದೆ. ಅಂದರೆ ಹೆಚ್ಚು ಪ್ರವಾಸಿಗರ ಚಲನವಲನವಿಲ್ಲದ ಶಾಂತ ಪರಿಸರದಿಂದ ಕೂಡಿದ ಕಡಲ ಕಿನಾರೆ ಗುಹಾಘರ್ ನಲ್ಲಿ ಕಾಣಬಹುದು.
ಬಟರ್ ಫ್ಲೈ
ಪಾತರಗಿತ್ತಿ ಅಥವಾ ಚಿಟ್ಟೆ ಎಂಬ ಅರ್ಥ ಕೊಡುವ ಬಟರ್ ಫ್ಲೈ ಕಡಲ ತೀರವಿರುವುದು ಪ್ರಖ್ಯಾತ ಕಡಲ ಪಟ್ಟಣ ಗೋವಾದಲ್ಲಿದೆ. ಇತರೆ ಪ್ರಸಿದ್ಧ ಕಡಲ ತೀರಗಳಿಂದ ಫೆರ್ರಿಯ ಮೂಲಕ ಮಾತ್ರವೆ ಇದನ್ನು ತಲುಪಬಹುದು ಹಾಗೂ ಇದು ತನ್ನಲ್ಲಿರುವ ಕಲ್ಲು ಬಂಡೆಗಳು, ದಟ್ಟ ಹಸಿರು ಹಾಗೂ ಚಿಟ್ಟೆಗಳಿಗಾಗಿ ಆಕರ್ಷಣೆಯಾಗಿದೆ. ವಿದೇಶಿ ಪ್ರವಾಸಿಗರೆ ಇಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.
ಕಾಪ್ಪಿಲ್
ಕೇರಳದ ತಿರುವನಂತಪುರಂ ಜಿಲ್ಲೆಯ ಗಡಿಯ ವಾಯವ್ಯಕ್ಕೆ ಹೊಂದಿಕೊಂಡಂತೆ ನೆಲೆಸಿರುವ ಕಾಪ್ಪಿಲ್ ಪಟ್ಟಣದ ಕಡಲ ತೀರವು ರಮಣೀಯವಾದ ಏಕಾಂತದ ಪರಿಸರವನ್ನು ಹೊಂದಿದ್ದು ಆಕರ್ಷಕವಾಗಿ ಕಂಡುಬರುತ್ತದೆ. ಇನ್ನೂ ಮಳೆಗಾಲದ ಸಂದರ್ಭದಲ್ಲಿ ಕಾಪ್ಪಿಲ್ ಕೆರೆಯು ಸಾಕಷ್ಟು ವಿಸ್ತಾರಗೊಂಡು ತನ್ನ ತಾಯಿಯನ್ನು ತಬ್ಬಿಕೊಳ್ಳಲು ಧಾವಿಸುವಂತೆ ಕಡಲ ಬಳಿಯೆ ಬರುವುದು ವಿಶೇಷ.
ತಿಲ್ ಮಾಟಿ
PC: youtube
ಕರ್ನಾಟಕದ ಕಾರವಾರದಲ್ಲಿರುವ ಬಹುತೇಕ ಜನರಿಗೆ ತಿಳಿಯದಾದ ಸುಂದರ ಕಡಲ ತೀರ ಇದಾಗಿದೆ. ಏಕಾಂತ ಬಯಸುವ ಪ್ರವಾಸಿಗರಿಗೆ ಇದೊಂದು ಆದರ್ಶಮಯ ಕಡಲ ತೀರವಾಗಿದೆ. ಕಾರವಾರ ಪಟ್ಟಣದಿಂದ ಸುಮಾರು 14 ಕಿ.ಮೀ ದೂರದಲ್ಲಿದ್ದು ಮಜಲಿಯಿಂದ ಒಂದು ಕಿ.ಮೀ ಚಾರಣದ ಮೂಲಕ ಈ ಕಡಲತಡಿಯನ್ನು ತಲುಪಬಹುದಾಗಿದೆ.