ತಮಿಳಿನಲ್ಲಿ ಜನಪ್ರೀಯವಾಗಿ ಕರೆಯಲಾಗುವ ಅಳ್ವರರು ಎಂದರೆ ತಮಿಳು ವೈಷ್ಣವ ಸಂತರು. ವಿಷ್ಣುವಿನ ಪರಮ ಭಕ್ತರಾದ ಹನ್ನೆರಡು ಸಂತರ ಸಮೂಹವನ್ನು ಅಳ್ವರ್ ಎಂದು ಕರೆಯುತ್ತಾರೆ. ಇವರು ದೇಶ ಸಂಚಾರ ಮಾಡಿ ವಿಷ್ಣುವಿನನ್ನು ಕೊಂಡಾಡುತ್ತ ಭಜಿಸುತ್ತ ಅವನಿಗೆ ಮುಡಿಪಾದ 108 ಕ್ಷೇತ್ರಗಳನ್ನು ಪಟ್ಟಿ ಮಾಡಿದ್ದಾರೆ.
ಹಾಗೆ ಅವರು ಪಟ್ಟಿ ಮಾಡಿದ 108 ಸ್ಥಳಗಳನ್ನು ದಿವ್ಯ ದೇಸಂ ಎಂದು ಕರೆಯಲಾಗಿದೆ. ಅದರ ಪ್ರಕಾರವಾಗಿ ವಿಷ್ಣು ಈ ಕ್ಷೇತ್ರಗಳಲ್ಲಿ ಸದಾ ಜಾಗೃತನಾಗಿದ್ದು ಬೇಡಿಕೊಂಡು ಬರುವ ಭಕ್ತಾದಿಗಳ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂಬ ನಂಬಿಕೆಯಿದೆ. ಅಲ್ಲದೆ ಈ ಎಲ್ಲ ಕ್ಷೇತ್ರಗಳ ದರ್ಶನ ಮಾಡುವವರು ವಿಷ್ಣುವಿನಲ್ಲಿ ಮೋಕ್ಷ ಹೊಂದುತ್ತಾರೆ ಎಂಬ ನಂಬಿಕೆಯಿದೆ.
ಚಿತ್ರಕೃಪೆ: T.sujatha
ದಿವ್ಯ ದೇಸಂ ಕ್ಷೇತ್ರಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ತಮಿಳುನಾಡು ರಾಜ್ಯದಲ್ಲೆ ಕಂಡುಬರುತ್ತವೆ. ಮಿಕ್ಕಂತೆ ಕೆಲ ಕ್ಷೇತ್ರಗಳು ಉತ್ತರ ಭಾರತ ಹಾಗೂ ಆಂಧ್ರಪ್ರದೇಶಗಳಲ್ಲಿ ಕಾಣಸಿಗುತ್ತವೆ. ಪ್ರಸ್ತುತ ಲೇಖನದಲ್ಲಿ ತಿಳಿಸಲಾದ ದಿವ್ಯ ದೇಸಂನ ಈ ಕ್ಷೇತ್ರವು ಉತ್ತರ ಭಾರತದ ಉತ್ತರ ಪ್ರದೇಶದಲ್ಲಿರುವ ವಿಷ್ಣುವಿನ ಪ್ರಭಾವಶಾಲಿ ಸ್ಥಳವಾಗಿ ಗುರುತಿಸಲ್ಪಡುತ್ತದೆ.
ಮಹಾಭಾರತ, ವಿವಿಧ ಧಾರ್ಮಿಕ ಗ್ರಂಥ ಹಾಗೂ ಶಿವಪುರಾಣದಲ್ಲೂ ಉಲ್ಲೇಖವಾಗಿರುವ ನೈಮಿಶಾರಣ್ಯ, ಉತ್ತರ ಪ್ರದೇಶದ 'ಗೋಮತಿ' ನದಿಯ ಎಡ ದಂಡೆಯ ಮೇಲೆ ನೆಲೆಸಿದೆ. ನೈಮಿಶಾರಣ್ಯವನ್ನು ಸ್ಥಳೀಯವಾಗಿ ನಿಮ್ಸಾರ್ ಎಂದೂ ಸಹ ಕರೆಯಲಾಗುತ್ತದೆ. ಸೀತಾಪುರ ಹಾಗೂ ಖೈರಾಬಾದ್ ನಿಂದ ಬರುವ ರಸ್ತೆಗಳು ಒಂದಕ್ಕೊಂದು ಜೋಡುವ ಸ್ಥಳದಲ್ಲಿ ನೈಮಿಶಾರಣ್ಯವಿದೆ.
ಸ್ಥಳ ಮಹಾತ್ಮೆ ಬೋಧನೆ, ಚಿತ್ರಕೃಪೆ: Radhatanaya
ಸೀತಾಪುರದಿಂದ 32 ಕಿ.ಮೀ ಹಾಗೂ ಸಾಂದಿಲ ರೈಲು ನಿಲ್ದಾಣದಿಂದ 42 ಕಿ.ಮೀ ಗಳಷ್ಟು ದೂರದಲ್ಲಿ ನೈಮಿಶಾರಣ್ಯವಿದೆ. ಉತ್ತರ ಪ್ರದೆಷದ ದೊಡ್ಡ ನಗರವಾದ ಲಖನೌದಿಂದ 90 ಕಿ.ಮೀ ಗಳಷ್ಟು ದೂರದಲ್ಲಿದೆ. ಇಲ್ಲಿರುವ ವಿಷ್ಣುವಿನ ದೇವಾಲಯವು ಸ್ವಯಂಭೂ ವಿಷ್ಣುವಿನ ವಿಗ್ರಹ ಹೊಂದಿದ್ದು ಸ್ವಯಂವ್ಯಕ್ತ ಕ್ಷೇತ್ರವೆಂದೆ ಪ್ರಸಿದ್ಧಿ ಪಡೆದಿದೆ.
ಹಾಗಾಗಿ ಸಾಕಷ್ಟು ಪ್ರಭಾವಶಾಲಿ ವಿಷ್ಣುವಿನ ದೇವಾಲಯವಾಗಿ ಭಕ್ತರನ್ನು ಆಕರ್ಷಿಸುತ್ತದೆ. ಈ ದೇವಾಲಯಕ್ಕೆ ಭೇಟಿ ನೀಡಲು ಬಯಸಿದ್ದರೆ ಸಂಜೆ ಆರು ಘಂಟೆಯ ಮುಂಚೆಯೆ ಇಲ್ಲಿಗೆ ಭೇಟಿ ನೀಡಬೇಕು. ಆರರ ನಂತರ ದೇವಾಲಯವನ್ನು ಮುಚ್ಚಲಾಗುತ್ತದೆ. ದೇವಾಲಯಕ್ಕೆ ಹೊಂದಿಕೊಂಡಂತೆ ಕಲ್ಯಾಣಿಯಿದ್ದು ಅದನ್ನು ಚಕ್ರ ಕುಂಡ ಎಂದು ಕರೆಯಲಾಗುತ್ತದೆ.
ರಾಮ, ಲಕ್ಷ್ಮಣ, ಸೀತಾ ಸನ್ನಿಧಿ, ಚಿತ್ರಕೃಪೆ: Radhatanaya
ವಿಷ್ಣುವಿನ ಸುದರ್ಶನ ಚಕ್ರದಿಂದಲೆ ಈ ಕಲ್ಯಾಣಿಯ ನಿರ್ಮಾಣವಾಗಿದ್ದೆಂದು ನಂಬಲಾಗಿದ್ದು ಅತ್ಯಂತ ಪವಿತ್ರ ಕೊಳ ಎನ್ನಲಾಗುತ್ತದೆ. ಉತ್ಸವಗಳ ಸಂದರ್ಭದಲ್ಲಿ ಭಕ್ತರು ಇದರಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಇದರಿಂದ ಪಾಪ ಕರ್ಮಗಳು ವಿಮೋಚನೆಗೊಳ್ಳುತ್ತವೆ ಎಂದು ನಂಬಲಾಗಿದೆ.
ಕಥೆಯಂತೆ, ದಧಿಚಿ ಮಹರ್ಷಿಗಳು ತಮ್ಮ ಎಲುಬುಗಳಿಂದ ಹೊಸ ಆಯುಧ ನಿರ್ಮಿಸಲು ಇಂದ್ರನಿಗೆ ಅವನ ಪ್ರಾರ್ಥನೆಯ ಮೆರೆಗೆ ತಮ್ಮ ಪ್ರಾಣ ತ್ಯಜಿಸುವ ಸಂದರ್ಭ ಬಂದಾಗ ಅವರು ಇಂದ್ರನನ್ನು ಕುರಿತು ದೇಹ ತ್ಯಜಿಸುವುದಕ್ಕೆ ಮುಂಚೆ ತಾವು ಎಲ್ಲ ಪವಿತ್ರ ನದಿಗಳ ದರ್ಶನ ಪಡೆಯುವ ಬಯಕೆಯನ್ನು ವ್ಯಕ್ತಪಡಿಸಿದರು.
ವಿಷ್ಣುವಿನ ಸಹೋದರಿಯ ದೇವಾಲಯ!
ಅದನ್ನೊಪ್ಪಿದ ದೇವೇಂದ್ರನು ಸಕಲ ಪವಿತ್ರ ನದಿಗಳ ನೀರನ್ನು ಈ ನಿಮಿಶಾರಣ್ಯದ ಚಕ್ರ ಕುಂಡದಲ್ಲಿ ಬರುವಂತೆ ಮಾಡಿದನು. ಹಾಗಾಗಿ ಚಕ್ರ ಕುಂಡವು ಸಾಕಷ್ಟು ಪಾವಿತ್ರ್ಯತೆಯನ್ನು ಪಡೆದಿದೆ ಎನ್ನಲಾಗುತ್ತದೆ. ಅಲ್ಲದೆ ಒಮ್ಮೆ ನಾರದ ಮಹರ್ಷಿಗಳು ಪವಿತ್ರ ಕೊಳಗಳ ಅನ್ವೇಷಣೆ ಮಾಡುತ್ತಿದ್ದಾಗ ಚಕ್ರ ಕುಂಡಕ್ಕೂ ಭೇಟಿ ನೀಡಿದ್ದರು ಎಂಬ ಕಥೆಯಿದೆ.