ನಮಗೆ ಎದುರಾಗುವ ಹಲವಾರು ಸಮಸ್ಯೆಗಳಿಗೆ ಆ ದೇವರೇ ದಾರಿ ತೋರುತ್ತಾನೆ ಎನ್ನುವುದು ನಮ್ಮೆಲ್ಲರ ನಂಬಿಕೆ. ಈ ನಂಬಿಕೆಗಳ ಪಟ್ಟಿಯಲ್ಲಿ ಕಂಬದ ರಂಗನಾಥನ ಮಹಿಮೆಯೂ ಕೂಡ ಸೇರಿದೆ. ಈ ಕಂಬದ ರಂಗನಾಥ ಸ್ವಾಮಿಯ ದರ್ಶನ ಪಡೆದರೆ ಸಾಕು ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ಎನ್ನುವ ನಂಬಿಕೆ ಭಕ್ತಾದಿಗಳಲ್ಲಿ ಮನೆಮಾಡಿದೆ. ಹೂವಿನ ಹರಕೆ ಇಟ್ಟರೆ ಸಾಕು ಕೇಳಿದೆಲ್ಲವನ್ನು ಕೊಡುವ ಈ ಸ್ವಾಮಿಯ ದೇವಾಲಯ ಎಲ್ಲಿದೆ, ದೇವಾಲಯದ ವಿಶೇಷವೇನು, ದರ್ಶನದ ಸಮಯ ಮತ್ತು ಇಲ್ಲಿಗೆ ತಲುಪುವುದು ಹೇಗೆ ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

ಮಾಗೋಡು ಕಂಬದ ರಂಗನಾಥ ಸ್ವಾಮಿ ದೇವಸ್ಥಾನ :
ತುಮಕೂರು ಜಿಲ್ಲೆ ಶಿರಾ ತಾಲೂಕಿನ ಮಾಗೋಡು ಗೊಲ್ಲರಹಟ್ಟಿಯಲ್ಲಿ ನೆಲೆಸಿರುವ ಕಂಬದ ರಂಗನಾಥ ಸ್ವಾಮಿ ದೇವಸ್ಥಾನವು ವಿಶೇಷವಾದ ಮನ್ನಣೆಯನ್ನು ಹೊಂದಿದೆ. ಈ ದೇವಾಲಯಕ್ಕೆ ಭೇಟಿ ನೀಡಿದರೆ ಭಕ್ತಾದಿಗಳ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ. ಇಲ್ಲಿಗೆ ಹೂವಿನ ಹರಕೆಯನ್ನು ಸಲ್ಲಿಸಿದರೆ ಸಾಕು ಬೇಡಿದೆಲ್ಲವನ್ನೂ ಸ್ವಾಮಿಯು ನೀಡುತ್ತಾನೆ ಎನ್ನುವ ನಂಬಿಕೆಯಿದೆ. ಬನ್ನಿ ಈ ದೇವಾಲಯದ ಇತಿಹಾಸವನ್ನು ತಿಳಿಯೋಣ.

ಕಂಬದ ರಂಗನಾಥ ಸ್ವಾಮಿ ದೇವಸ್ಥಾನದ ಇತಿಹಾಸ :
ಹಿರಿಯೂರಿನ ಬಳಿ ಬಬ್ಬೂರು ಎಂಬಲ್ಲಿ ಈ ಸ್ವಾಮಿಯು ಹುಟ್ಟಿದ್ದಾನೆ, ನಂತರದಲ್ಲಿ ಮಾಗೋಡಿಗೆ ಬಂದು ಸ್ವಾಮಿಯು ನೆಲೆಸಿದ್ದಾನೆ ಎಂಬ ಇತಿಹಾಸವಿದೆ. ತುಂಬಾ ವರ್ಷಗಳಿಂದಲೂ ಈ ಸ್ವಾಮಿಗೆ ಇಲ್ಲಿ ಸೇವೆಯನ್ನು ಸಲ್ಲಿಸಲಾಗುತ್ತಿದೆ.

ಕಂಬದ ರಂಗನಾಥ ಸ್ವಾಮಿ ದೇವಾಲಯದ ವಿಶೇಷತೆಗಳು :
ಮಾಗೋಡು ಕಂಬದ ರಂಗನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಾರುತಿ, ಉತ್ಸವ ಮೂರುತಿ, ಯಲ್ಲಮ್ಮ ದೇವಿ, ಚಿತ್ರದೇವರು ಮತ್ತು ಭೂತಪ್ಪ ದೇವರುಗಳು ನೆಲೆಸಿದ್ದಾರೆ.

ಕಂಬದ ರಂಗನಾಥ ಸ್ವಾಮಿ ದೇವಸ್ಥಾನದ ಮಹಿಮೆ :
ಕಂಬದ ರಂಗನಾಥ ಸ್ವಾಮಿಯು ಹೂವಿನ ಹರಕೆಗೆ ಹೆಚ್ಚು ಪ್ರಸಿದ್ಧಿಯನ್ನು ಹೊಂದಿದ್ದಾನೆ. ಮಕ್ಕಳಾಗದವರು, ದೆವ್ವ ಪಿಶಾಚಿಗಳ ಸಮಸ್ಯೆಗಳನ್ನು ಹೊಂದಿರುವವರು ಇಲ್ಲಿ ಸಿಗುವ ಕಪ್ಪು ಮತ್ತು ಬಿಳಿ ನಾಮವನ್ನು ಪಡೆದರೆ ಎಲ್ಲಾ ಸಮಸ್ಯೆಗಳು ದೂರಾಗುತ್ತವೆ ಎನ್ನುವ ನಂಬಿಕೆಯಿದೆ. ಮಕ್ಕಳಾಗದವರು ದೇವರಲ್ಲಿ ಹೂ ನೀಡುವುದಾಗಿ ಹರಕೆಯಿತ್ತರೆ ಮಕ್ಕಳಾಗುತ್ತವೆ ಎಂಬ ವಿಶೇಷ ಆಚರಣೆಯಿದೆ.

ಕಂಬದ ರಂಗನಾಥ ಸ್ವಾಮಿ ದರ್ಶನ ಪಡೆಯುವ ಸಮಯ :
ಕಂಬದ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಪ್ರತಿದಿನವೂ ಪೂಜೆ ಸಲ್ಲಿಸಲಾಗುತ್ತದೆ. ಶನಿವಾರ ಅಮವಾಸ್ಯೆ ಮತ್ತು ಪೌರ್ಣಮಿಯಂದು ಇಲ್ಲಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ವಿಶೇಷವಾಗಿ ಶನಿವಾರದಂದು ಅನ್ನಪ್ರಸಾದವನ್ನು ನೀಡಲಾಗುತ್ತದೆ.

ಕಂಬದ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ತಲುಪುವುದು ಹೇಗೆ ? :
ಕಂಬದ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲು ತುಮಕೂರು ಮತ್ತು ಶಿರಾ ಮೂಲಕವೂ ತಲುಪಬಹುದು. ಇಲ್ಲಿಗೆ ತಲುಪಲು ಸಾಕಷ್ಟು ಬಸ್ಗಳು ಮತ್ತು ಆಟೋಗಳ ವ್ಯವಸ್ಥೆಯಿದೆ.


Click it and Unblock the Notifications
















