ನಾವೆಲ್ಲಾ ಸಾಮಾನ್ಯವಾಗಿ ಐತಿಹಾಸಿಕ, ಇತಿಹಾಸ ಹೊಂದಿರುವ ಅಥವಾ ಪುರಾತನ ಕಥೆಗಳನ್ನು ಆಧರಿಸಿರುವ ದೇವಲಾಯಗಳ ಬಗ್ಗೆ ತಿಳಿದಿರುತ್ತೇವೆ. ಆದರೆ ಇಲ್ಲೊಂದು ವಿಶೇಷ ದೇವಾಲಯವಿದೆ, ಒಬ್ಬ ಶ್ರೀಮಂತನಿಗೆ ಈ ದೇವರು ಪ್ರತ್ಯಕ್ಷನಾಗಿ ನನಗೊಂದು ಗುಡಿಯ ಕಟ್ಟು ಎಂದು ಹೇಳಿದನಂತೆ. ಆ ದೇವರ ಮಾತನ್ನು ತ್ಯಜಿಸಿದ ಆ ಶ್ರೀಮಂತ ಏನಾದ ? ಮುಂದೆ ಆ ದೇವಾಲಯ ಸ್ಥಾಪಿಸಿದ್ದು ಹೇಗೆ ? ಈ ಕುರಿತು ಮುಂಚೆಯೇ ಕೋಡಿಮಠದ ತಾಳೆಗರಿಯಲ್ಲಿ ಬರೆಯಲಾಗಿತ್ತೇ ? ಈ ದೇವಾಲಯ ಎಲ್ಲಿದೆ ಮತ್ತು ಇಲ್ಲಿಗೆ ತಲುಪುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಶ್ರೀ ಲಕ್ಷೀನರಸಿಂಹ ಸ್ವಾಮಿ ದೇವಾಲಯ :
ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕುದೂರು ಗ್ರಾಮದಲ್ಲಿ ನೆಲೆಸಿರುವ ಲಕ್ಷ್ಮೀ ನರಸಿಂಹ ದೇವಸ್ಥಾನವು ಒಂದು ವಿಭಿನ್ನ ಮತ್ತು ಶಕ್ತಿಯುತ ದೇವರು ಎಂದು ಪ್ರಸಿದ್ಧಿಯಾಗಿದೆ. ಈ ದೇವಾಲಯ ನಿರ್ಮಾಣಗೊಂಡಿದ್ದೇ ಒಂದು ರೋಚಕ ಕಥೆ ಎಂದರೆ ತಪ್ಪಾಗಲಾರದು.
ಈ ಲಕ್ಷ್ಮೀನರಸಿಂಹ ದೇವಾಲಯ ಸ್ಥಾಪನೆಯ ಕುರಿತು ಕೋಡಿ ಮಠದ ತಾಳೆಗರಿಯ ಮೇಲೆ ಮುಂಚೆಯೇ ಬರೆಯಲಾಗಿತ್ತು ಎಂಬ ಮಾತಿದೆ. ಇಂದಿಗೂ ಆ ತಾಳೆಗರಿ ಕೋಡಿ ಮಠದಲ್ಲಿದೆ ಎನ್ನಲಾಗಿದೆ. ಬನ್ನಿ ಈ ದೇವಾಲಯದ ಇತಿಹಾಸವನ್ನು ತಿಳಿಯೋಣ.

ಶ್ರೀ ಲಕ್ಷೀನರಸಿಂಹ ಸ್ವಾಮಿ ದೇವಾಲಯ ಸ್ಥಾಪಿಸಿದ ಇತಿಹಾಸ :
ಒಮ್ಮೆ ಒಬ್ಬ ಆಗರ್ಭ ಶ್ರೀಮಂತರಾದ ಕೋದಂಡರಾಮ ಶ್ರೀರಂಗಂ ಗೆ ಹೋದಾಗ ಅಲ್ಲಿ ನರಸಿಂಹ ಸ್ವಾಮಿ ಪ್ರತ್ಯಕ್ಷನಾಗಿ ನೀನು ನನ್ನ ಸೇವೆಯನ್ನು ಮಾಡಬೇಕು ಎಂದು ಹೇಳುತ್ತೆ. ಆದರೆ ಆ ಶ್ರೀಮಂತ ಅದನ್ನು ಧಿಕ್ಕರಿಸಿ ಬೆಂಗಳೂರಿಗೆ ನಿರ್ಗಮಿಸುತ್ತಾನೆ. ಆದರೆ ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಆ ಶ್ರೀಮಂತ ತನ್ನೆಲ್ಲಾ ಆಸ್ತಿ ಐಶ್ವರ್ಯವನ್ನು ಕಳೆದುಕೊಂಡು ಬೀದಿಗೆ ಬೀಳುತ್ತಾನೆ. ಅದಾದ ಮೇಲೆ ಆತ ಸ್ವಾಮಿಯ ಸನ್ನಿಧಿಗೆ ಬಂದು ತನ್ನ ತಪ್ಪನ್ನು ಒಪ್ಪಿಕೊಂಡು, ನಾನು ನಿನಗೆ ಸೇವೆ ಸಲ್ಲಿಸುತ್ತೇನೆ ಎಂದು ದೇವರಲ್ಲಿ ಹೇಳಿಕೊಳ್ಳುತ್ತಾರೆ. ಅದಲ್ಲದೇ ಆ ಶ್ರೀಮಂತನ ಕನಸ್ಸಿನಲ್ಲಿ ಆ ಸ್ವಾಮಿಯು ಬಂದು ನನ್ನ ಮೂರ್ತಿಯನ್ನು ಇದೇ ರೀತಿಯಾಗಿ ಸ್ಥಾಪಿಸು ಹೇಳುತ್ತದೆ. ಆತ ತಮಿಳುನಾಡಿನ ಅವನಾಶಿಯಲ್ಲಿ ಈ ಮೂರ್ತಿಯನ್ನು ಕೆತ್ತಿಸುತ್ತಾರೆ, ಆದರೆ ಮೂರ್ತಿ ಕೆತ್ತನೆ ಮಾಡುವಾಗಲೂ 7 ಜನ ಸಾವನ್ನಪ್ಪುತ್ತಾರೆ. ಆದರೆ ಕೊನೆಗೆ ಆ ಶ್ರೀಮಂತನೇ ತಿಂಗಳುಗಟ್ಟಲೆ ಕೂತು ಮೂರ್ತಿ ಕೆತ್ತನೆ ಮಾಡ್ತಾನೆ. ತದನಂತರ ಇಲ್ಲಿಗೆ ಆ ಸ್ವಾಮಿಯನ್ನು ಕರೆತರಲಾಯಿತು ಎಂದು ಅಲ್ಲಿನ ಜನರು ಹೇಳುವ ಮಾಹಿತಿಯಿದು.

ಶ್ರೀ ಲಕ್ಷೀನರಸಿಂಹ ಸ್ವಾಮಿ ದೇವಾಲಯದ ವಿಶೇಷತೆಗಳು :
ಶ್ರೀ ಲಕ್ಷೀನರಸಿಂಹ ಸ್ವಾಮಿ ಒಂದು ಸುಂದರವಾದ ಜಾಗದಲ್ಲಿ ನೆಲೆಸಿದ್ದು, ಸ್ವಾಮಿಯು ಸೌಮ್ಯ ಕಳೆಯನ್ನು ಹೊಂದಿದ್ದಾನೆ. ಈ ದೇವಾಲಯದ ಆವರಣದಲ್ಲಿ ನರಸಿಂಹ, ಸುದರ್ಶನ, ಮಹಾಲಕ್ಷ್ಮಿ, ಗರುಡದೇವರು, ಗಣಪತಿ, ಮಾರುತಿ ದೇವರುಗಳು ನೆಲೆಸಿದ್ದಾರೆ.
ಇಲ್ಲಿನ ಲಕ್ಷ್ಮೀನರಸಿಂಹ ಸ್ವಾಮಿಯು 7 ರಿಂದ 8 ಅಡಿ ಎತ್ತರವಿದ್ದು, ಪ್ರಭಾವಳಿಯಲ್ಲಿ ದಶಾವತಾರ, ಪೀಠದಲ್ಲಿ ಅಷ್ಟಲಕ್ಷ್ಮಿಯರು, ನವಗ್ರಹಗಳೂ, ಮಹಾಗಣಪತಿ ಜೊತೆಗೆ ರಾಶಿಫಲಗಳನ್ನು ಪೀಠದಲ್ಲಿ ಕಾಣಬಹುದು. ಇಲ್ಲಿ 1501 ಸಾಲಿಗ್ರಾಮ ಪ್ರತಿಷ್ಠಾಪಿಸಿ ಸ್ವಾಮಿಯನ್ನು ಪ್ರತಿಷ್ಠಾಪಿಸಲಾಗಿದೆ, ಹಾಗಾಗಿ ಇದು ಶಕ್ತಿಯುತ ದೇವರು ಎನ್ನುವ ನಂಬಿಕೆ ಇದೆ.

ಶ್ರೀ ಲಕ್ಷೀನರಸಿಂಹ ಸ್ವಾಮಿ ದೇವಸ್ಥಾನದ ಮಹಿಮೆ :
ಸ್ವಾಮಿಯು ಹೆಚ್ಚು ಶಕ್ತಿಯುತ ಎಂದು ಇಲ್ಲಿನ ಭಕ್ತಾದಿಗಳು ನಂಬಿ ನಡೆದಿದ್ದಾರೆ. ಭಕ್ತಾದಿಗಳು ಇಟ್ಟ ಹರಕೆಯನ್ನು ದೇವರು ಪೂರೈಸಿದ್ದಾನೆ ಎನ್ನತ್ತಾರೆ ಇಲ್ಲಿಗೆ ಭೇಟಿ ನೀಡಿದ ಭಕ್ತಾದಿಗಳು. ಮಕ್ಕಳ ವಿದ್ಯಾಭ್ಯಾಸ, ಮನೆ ಕಟ್ಟುವುದು ಹೀಗೆ ಅನೇಕ ಬೇಡಿಕೆಗಳನ್ನು ಸ್ವಾಮಿಯು ಈಡೇರಿಸಿದ್ದಾನೆ, ಹೀಗೆ ಸ್ವಾಮಿಯು ತನ್ನ ನಂಬಿದವರನ್ನು ಎಂದಿಗೂ ಕೈಬಿಟ್ಟಿಲ್ಲ ಎಂಬುದು ಭಕ್ತಾದಿಗಳ ನಂಬಿಕೆ.

ಶ್ರೀ ಲಕ್ಷೀನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವ ಸಮಯ ಮತ್ತು ದಿನ :
ಶಕ್ತಿಯುತ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಬೆಳಿಗ್ಗೆ 7:30 ರಿಂದ 10:30ರ ವರೆಗೆ ಮತ್ತು ಸಂಜೆ 6:30 ರಿಂದ ರಾತ್ರಿ 8:30ರ ವರೆಗೆ ಭೇಟಿ ನೀಡಿ ದೇವರ ಕೃಪೆಗೆ ಪಾತ್ರರಾಗಬಹುದು. ಇಲ್ಲಿಗೆ ಸಂಜೆಯ ಹೊತ್ತು ಭಕ್ತಾದಿಗಳು ಹೆಚ್ಚು ಭೇಟಿ ನೀಡುತ್ತಾರೆ. ಇಲ್ಲಿ ಪ್ರತಿ ಮಂಗಳವಾರ ವಿಶೇಷ ಪೂಜೆ ನಡೆಯುತ್ತದೆ. ಶನಿವಾರದಂದು ಆರಾದನೆ, ಹುಣ್ಣಿಮೆ ಅಮವಾಸ್ಯೆಯಂದು ವಿಶೇಷ ಪೂಜೆ, ನರಸಿಂಹ ಜಯಂತಿಯಂದು ಹೋಮಹವನಗಳು ಕೂಡ ನಡೆಯುತ್ತವೆ.

ಶ್ರೀ ಲಕ್ಷೀನರಸಿಂಹ ಸ್ವಾಮಿ ದೇವಸ್ಥಾನಕ್ಕೆ ತಲುಪುವುದು ಹೇಗೆ ? :
ಲಕ್ಮೀನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲು ಯಶವಂತಪುರ ಇಂದ ಬಸ್ಗಳು ಲಭ್ಯವಿದೆ. ಸೋಲೂರಿನ ಬಳಿ ಆಟೋ ಮೂಲಕವೂ ತಲುಪಬಹುದು. ಹಾಸನದಿಂದ ಬರುವುದಾದರೆ ಹ್ಯಾಂಡ್ ಪೋಸ್ಟ್ ಇಂದ ಆಟೋ ಅಥವಾ ಬಸ್ ಮೂಲಕವೂ ತಲುಪಸಬಹುದು. ಶಿವಗಂಗೆ ಯಿಂದ ಈ ಜಾಗಕ್ಕೆ ಕೇವಲ 9 ಕಿ.ಮೀ ಪ್ರಯಾಣ ಬೆಳೆಸಬೇಕು. ತುಮಕೂರಿನಿಂದ ಇಲ್ಲಿಗೆ ಬಸ್ಗಳು ಸಾಕಷ್ಟು ಲಭ್ಯವಿದೆ.


Click it and Unblock the Notifications

















