ಅಮರಶಿಲ್ಪಿ ಜಕ್ಕಣಾಚಾರ್ಯರ ಹುಟ್ಟೂರು ಕೈದಾಳ. ಇಲ್ಲಿ ಜಕ್ಕಣಾಚಾರ್ಯರು ಕೊನೆಯದಾಗಿ ಕೆತ್ತನೆ ಮಾಡಿರುವ ಚನ್ನಕೇಶವನ ಮೂರ್ತಿಯಿದೆ. ಈ ದೇವಾಲಯದಲ್ಲಿ ಪ್ರತಿದಿನ ವಿಶೇಷವಾಗಿ ಪೂಜೆಯನ್ನು ಸಲ್ಲಿಸಲಾಗುತ್ತದೆ. ಬನ್ನಿ ಈ ದೇವಾಲಯದ ಇತಿಹಾಸ, ವಿಶೇಷ ಮತ್ತು ಕೈದಾಳದ ಕುರಿತು ಹೆಚ್ಚು ತಿಳಿಯೋಣ.
ಚನ್ನಕೇಶವ ದೇಗುಲ, ಕೈದಾಳ :
ಚನ್ನಕೇಶವ ಹಾಗೂ ಗಂಗಾಧರೇಶ್ವರ ಮೂರ್ತಿಯನ್ನು ಇಲ್ಲಿ ಪೂಜಿಸಲಾಗುತ್ತದೆ. 12ನೇ ಶತಮಾನದ ಶಾಸನಗಳನ್ನು ಇಲ್ಲಿನ ಕಲ್ಲುಗಳ ಮೇಲೆ ಕಾಣಬಹುದು. ಇಲ್ಲಿಯ ಕೆಲವು ಅದ್ಭುತ ಕೆತ್ತನೆಗಳು ಬೇಲೂರು ಚನ್ನಕೇಶವ ದೇವಾಲಯವನ್ನು ನೆನಪಿಸುತ್ತವೆ. ಗರ್ಭಗುಡಿಯಲ್ಲಿರುವ 8 ವರೆ ಅಡಿ ಎತ್ತರದ ಚನ್ನಕೇಶವ ಮೂರ್ತಿ ಪಶ್ಚಿಮ ಮುಖವಾಗಿರುವುದು ವಿಶೇಷವಾಗಿದೆ.
ಕ್ರೀಡಾನಗರಿ ಕೈದಾಳ ಆಗಿದ್ದು ಹೇಗೆ ? :
ಇತಿಹಾಸದ ಪ್ರಕಾರ ಜಕ್ಕಣಾಚಾರಿ ಕೆತ್ತಿದ ಬೇಲೂರು ಚನ್ನಕೇಶವ(ಕಪ್ಪೆ ಚನ್ನಿಗರಾಯ) ಮೂರ್ತಿಯಲ್ಲಿ ದೋಷವಿದೆ ಎಂಬ ಮಾತುಗಳು ಕೇಳಿಬಂದಾಗ, ಬೇಸರಗೊಂಡ ಜಕಣಾಚಾರಿ ತನ್ನ ಕೈ ಬಲಿಕೊಟ್ಟನು. ದೇವರ ಅನುಗ್ರಹದಂತೆ ತನ್ನ ಹುಟ್ಟೂರಿನಲ್ಲಿ ಮತ್ತೊಂದು ದೇವಸ್ಥಾನವನ್ನು ನಿರ್ಮಿಸಿದ. ಆಗ ಪುನಃ ತನ್ನ ಕೈಯನ್ನು ಮರಳಿ ಪಡೆದ. ಅದಕ್ಕಾಗಿಯೇ ಕ್ರೀಡಾನಗರಿ ಎಂಬ ಹೆಸರು ಹೋಗಿ ಕೈದಾಳ ಎನ್ನುವ ಹೆಸರು ಬಂದಿದೆ.
ಚನ್ನಕೇಶವ ದೇಗುಲದ ಇತಿಹಾಸ :
ಬೇಲೂರಿನಲ್ಲಿ ಅತ್ಯಂತ ಸುಂದರ ಕೆತ್ತನೆಗಳನ್ನು ಮಾಡಿರುವ ಜಕ್ಕಣಾಚಾರ್ಯ ಕೊನೆಯದಾಗಿ ಇಲ್ಲಿಗೆ ಬಂದು ತನ್ನ ಮೊಂಡಗೈಯಲ್ಲಿ ಚನ್ನಕೇಶವನ ವಿಗ್ರಹವನ್ನು ಕೆತ್ತನೆಯನ್ನು ಮಾಡಿದನು. ತದನಂತರ ದೇವರು ಅವರ ಭಕ್ತಿಗೆ ಮೆಚ್ಚಿ ಕೈಯನ್ನು ನೀಡುತ್ತಾರೆ ಎಂಬ ಮಾಹಿತಿಯಿದೆ.
ಚನ್ನಕೇಶವ ದೇಗುಲದ ವಿಶೇಷ :
ಜಕ್ಕಣಾಚಾರಿಯು ಕೊನೆಯದಾಗಿ ಕೆತ್ತನೆ ಮಾಡಿರುವ ವಿಗ್ರಹ ಈ ದೇವಾಲಯದಲ್ಲಿದ್ದು, ವಿಗ್ರಹವು 8 ವರೆ ಅಡಿ ಎತ್ತರವಿದೆ.
ದೇಗುಲದ ಪ್ರಭಾವಳಿಯಲ್ಲಿ ವಿಷ್ಣುವಿನ ದಶಾತಾರದ ಚಿತ್ರಗಳನ್ನು ಮನೋಹರವಾಗಿ ಕೆತ್ತಲಾಗಿದೆ. ಪ್ರತಿಯೊಂದು ಕಂಬಕ್ಕೂ ವಿಶೇಷವಾದ ಕೆತ್ತನೆ ನೀಡಿ ಸಿಂಗರಿಸಿರುವುದು ಈ ದೇಗುಲದ ಕಲೆಯ ಶ್ರೀಮಂತಿಕೆಯನ್ನು ತೋರುತ್ತದೆ. ಈ ದೇಗುಲ ನೋಡಲು ಚಿಕ್ಕದಾದರೂ ಕೆತ್ತನೆ ಹಾಗೂ ವಾಸ್ತುಶಿಲ್ಪ ಅಪರೂಪದ ಶೈಲಿಯಲ್ಲಿದೆ.
ಚನ್ನಕೇಶವ ದೇಗುಲಕ್ಕೆ ಭೇಟಿ ನೀಡುವ ಸಮಯ :
ದೇಗುಲಕ್ಕೆ ಪ್ರತಿದಿನ ಬೆಳಗ್ಗೆ 8.30 ರಿಂದ ಮಧ್ಯಾಹ್ನ 12.30ರ ವರೆಗೆ ಸಂಜೆ 6.30 ರಿಂದ 8.30ರ ವರೆಗೆ ಭೇಟಿ ನೀಡಬಹುದು. ವಾರದ ರಜೆ ಹಾಗೂ ಸರ್ಕಾರಿ ರಜೆಯ ದಿನದಂದು ಬೆಳಗ್ಗೆ 10.30 ರಿಂದ 2.30ರವರೆಗೆ ಸಂಜೆ 5.30 ರಿಂದ 8.30 ರವರೆಗೆ ತೆರೆದಿರುತ್ತದೆ.
ಚನ್ನಕೇಶವ ದೇಗುಲಕ್ಕೆ ತಲುಪುವುದು ಹೇಗೆ ? :
ಚನ್ನಕೇಶವ ದೇಗುಲಕ್ಕೆ ಬೆಂಗಳೂರಿನಿಂದ ತುಮುಕೂರಿಗೆ ಬಸ್ನಲ್ಲಿ ಸಾಗುವುದಾದರೆ 66 ಕಿ.ಮೀ. ದೂರವಾಗುತ್ತದೆ. ರೈಲ್ವೇ ಪ್ರಯಾಣ ಬಯಸಿದರೆ 71 ಕಿ.ಮೀ. ದೂರವಿದೆ.