ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ಹಲವು ಧಾರ್ಮಿಕ ಮಹತ್ವವಿರುವ ಕ್ಷೇತ್ರಗಳನ್ನು, ದೇವಾಲಯಗಳನ್ನು ನೋಡಬಹುದಾಗಿದೆ. ಈ ಜಿಲ್ಲೆಯಲ್ಲಿ ವಿಷ್ಣು ಅವತಾರ ನರಸಿಂಹ ದೇವರಿಗೆ ಮುಡಿಪಾದ ಕೆಲವು ಪ್ರಮುಖ ದೇವಾಲಯಗಳಿವೆ. ಅಂತಹ ದೇವಾಲಯಗಳ ಪೈಕಿ ಒಂದಾಗಿದೆ ಜಿಲ್ಲೆಯ ಮಳವಳ್ಳಿ ತಾಲೂಕಿನಿಂದ ಎರಡು ಕಿ.ಮೀ ದೂರದಲ್ಲಿರುವ ಲಕ್ಷ್ಮಿನರಸಿಂಹನ ದೇವಾಲಯ.
ಆಂಧ್ರದ ಮುಖ್ಯ ನವನರಸಿಂಹನ ದೇವಾಲಯಗಳು
ಲಕ್ಷ್ಮಿ ಸಮೇತನಾಗಿ ನೆಲೆಸಿರುವ ಈ ನರಸಿಂಹನ ದೇವಾಲಯವು ಮಾರೇಹಳ್ಳಿ ಎಂಬಲ್ಲಿದೆ ಹಾಗೂ ಇದು ಮಳವಳ್ಳಿಯಿಂದ ಕೇವಲ ಎರಡು ಕಿ.ಮೀ ಗಳಷ್ಟು ದೂರದಲ್ಲಿದೆ. ಬೆಂಗಳೂರಿನಿಂದ 112 ಕಿ.ಮೀ ಗಳಷ್ಟು ದೂರದಲ್ಲಿರುವ ಮಳವಳ್ಳಿಗೆ ತೆರಳಲು ಸಾಕಷ್ಟು ಬಸ್ಸುಗಳು ದೊರೆಯುತ್ತವೆ. ನಿಮ್ಮ ಸ್ವಂತ ವಾಹನವಿದ್ದರೆ ಒಂದೆ ದಿನದಲ್ಲಿ ಕನಕಪುರದ ಮಾರ್ಗವಾಗಿ ಈ ಸುಂದರ ದೇವಾಲಯಕ್ಕೆ ಭೇಟಿ ನೀಡಿ ಬರಬಹುದು.
ಚಿತ್ರಕೃಪೆ: Pavithrah
ಇನ್ನೊಂದು ವಿಶೇಷವೆಂದರೆ ಸಾಮಾನ್ಯವಾಗಿ ನರಸಿಂಹ ದೇವರು ಉಗ್ರ ಸ್ವರೂಪದಲ್ಲೆ ಇರುತ್ತಾರೆ. ಆದರೆ ಇಲ್ಲಿರುವ ನರಸಿಂಹ ದೇವರನ್ನು ಸೌಮ್ಯ ನರಸಿಂಹ ಎನ್ನಲಾಗಿದೆ. ಹಾಗಾಗಿ ಪ್ರೀತಿಯಿಂದ ಸ್ಥಳೀಯವಾಗಿ ಈ ನರಸಿಂಹನನ್ನು ಮಾರೇಹಲ್ಲಿ ಮುದುಕಪ್ಪ ಎಂದೂ ಸಹ ಕರೆಯಲಾಗುತ್ತದೆ.
ಇನ್ನೂ ದೇವಾಲಯದ ವಿಷಯಕ್ಕೆ ಬರುವುದಾದರೆ ಇದು ಹತ್ತನೇಯ ಶತಮಾನದಲ್ಲಿ ನಿರ್ಮಿತವಾದ ದೇವಾಲಯವಾಗಿದೆ. ಸುಮಾರು 1200 ವರ್ಷಗಳಷ್ಟು ಶ್ರೀಮಂತ ಇತಿಹಾಸ ಹೊಂದಿರುವ ಈ ದೇವಾಲಯವು ಒಂದನೇಯ ರಾಜ ರಾಜ ಚೋಳನಿಂದ ನವೀಕರಣಗೊಂಡಿದೆ ಎಂದು ಇತಿಹಾಸದಿಂದ ತಿಳಿದುಬರುತ್ತದೆ.
ಚಿತ್ರಕೃಪೆ: Pavithrah
ದಟ್ಟ ಹಸಿರಿನಿಂದ ಕೂಡಿದ ಸುಂದರ ಪರಿಸರದಲ್ಲಿ ಸುಮಾರು 12 ಎಕರೆಗಳಷ್ಟು ವಿಶಾಲವಾದ ವ್ಯಾಪ್ತಿ ಪ್ರದೇಶದ ಮಧ್ಯದಲ್ಲಿ ಸ್ಥಿತವಿರುವ ಈ ದೇವಾಲಯವು ನಿಜಕ್ಕೂ ಭೇಟಿ ನೀಡುಗರಿಗೆ ಸಂತಸ ಉಂಟುಮಾಡುತ್ತದೆ. ಪ್ರಶಾಂತವಾದ ವಾತಾವರಣ, ಗೌಜು ಗದ್ದಲಗಳಿಂದ ಮುಕ್ತವಾದ ಪರಿಸರ ಹಾಗೂ ಧನಾತ್ಮಕತೆಯನ್ನು ಹೆಚ್ಚಿಸುವ ಧಾರ್ಮಿಕ ತಾಣ ಒಂದು ವಿಶಿಷ್ಟ ಅನುಭೂತಿಯನ್ನು ಕರುಣಿಸುತ್ತದೆ.
ಸ್ಥಳ ಪುರಾಣದಂತೆ, ಹಿಂದೆ ಇದೆ ಸ್ಥಳದಲ್ಲಿ ಸುಯಜ್ಞ ಹಾಗೂ ಲಂಬಕರ್ಣ ಎಂಬ ಇಬ್ಬರು ಋಷಿಗಳು ನರಸಿಂಹಸ್ವಾಮಿಯನ್ನು ಕುರಿತು ಹಗಲಿರುಳು ಕಠಿಣ ತಪಸ್ಸು ಮಾಡಿದ್ದರಂತೆ. ಇದರಿಂದ ಪ್ರಸನ್ನನಾದ ನರಸಿಂಹಸ್ವಾಮಿಯು ಅವರ ಕನಸಿನಲ್ಲಿ ಬಂದು ಲಕ್ಷ್ಮಿ ಸಮೇತನಾಗಿ ಈ ಸ್ಥಳದಲ್ಲಿ ನೆಲೆಸುವುದಾಗಿ ಹೇಳಿದನಂತೆ.
ಚಿತ್ರಕೃಪೆ: Pavithrah
ಹೀಗಾಗಿ ಇಲ್ಲಿ ನರಸಿಂಹನು ಲಕ್ಷ್ಮಿ ಸಮೇತನಾಗಿ ನೆಲೆಸಿದ್ದು ದರ್ಶನಕೋರಿ ಬರುವ ಭಕ್ತರನ್ನು ಹರಸುತ್ತಿದ್ದಾನೆ. ಇನ್ನೊಂದು ವಿಷಯವೆಂದರೆ ಲಕ್ಷ್ಮಿಯ ಪಾದ ಕಮಲಗಳಲ್ಲಿ ಅಮೃತ ಕಳಶವಿದ್ದು ಅದಕ್ಕೆ ಭಕ್ತರು ಭಕ್ತಿಯಿಂದ ಬೇಡಿ ಪ್ರಾರ್ಥಿಸಿದರೆ ಅವರ ಎಲ್ಲ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎನ್ನಲಾಗಿದೆ. ಆಂಜನೇಯ, ಗಣೇಶ ಮುಂತಾದವರ ದೇಗುಳಗಳೂ ಸಹ ಇಲ್ಲಿವೆ.