ಭಕ್ತರ ಕೋರಿಕೆಗೆ ಇಲ್ಲಿನ ಗಂಗೆಯಲ್ಲಿ ಉತ್ತರ ದೊರೆಯುತ್ತದೆ. ತಾವು ಅಂದುಕೊಂಡಂತಹ ಕಾರ್ಯ ನಡೆಯುವುದೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಲು ಭಕ್ತರು ಇಲ್ಲಿಗೆ ಬರುತ್ತಾರೆ. ಅಂತಹ ಮಹಿಮಾನ್ವಿತ ಕ್ಷೇತ್ರವೇ ಹಾಲು ರಾಮೇಶ್ವರ.

ಎಲ್ಲಿದೆ ಈ ಕ್ಷೇತ್ರ
ಹಾಲು ರಾಮೇಶ್ವರ ದೇವಸ್ಥಾನವು ಚಿತ್ರದುರ್ಗ ಜಿಲ್ಲೆಯಲ್ಲಿನ ಹೊಸದುರ್ಗ ತಾಲೂಕಿನಲ್ಲಿದೆ. ಇದನ್ನು ಪುರಾಣದಲ್ಲಿ ಹಿಡಿಂಬಿ ವನ ಎನ್ನಲಾಗುತ್ತಿತ್ತಂತೆ. ದೇವಾಲಯದ ಮುಖ್ಯ ದ್ವಾರದ ಬಳಿ ದೀಪದ ಏಕ ಶಿಲೆಯ ಕಂಭವಿದೆ. ದ್ರಾವಿಡ ಶೈಲಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ.

ಪುರಾಣಕಥೆ
ವಾಲ್ಮೀಕಿ ಮಹರ್ಷಿ ಪತ್ನಿ ಸುದತಿದೇವಿ ಕಾಶಿಯಲ್ಲಿ ಗಂಗೆಗೆ ಬಾಗಿನ ರೂಪದಲ್ಲಿ ಸಮರ್ಪಿಸಿದ ವಜ್ರಖಚಿತ ಕಡಗ, ಈ ಊರಿನ ಹುತ್ತದಲ್ಲಿ ದೊರಕಿದಾಗ ಅಲ್ಲಿ ಗಂಗೋದ್ಭವವೂ ಆಯಿತು ಎಂಬ ನಂಬಿಕೆ ಪ್ರಚಲಿತದಲ್ಲಿದೆ. ಈ ವಿಷಯ ತಿಳಿದ ವಾಲ್ಮೀಕಿ ಮಹರ್ಷಿಗಳು ಇಲ್ಲಿಯೇ ನೆಲೆ ನಿಂತು, ಬರುವ ಭಕ್ತರ ಅದೃಷ್ಟಾನುಸಾರ ಬೇಡಿದ ಪ್ರಸಾದ ನೀಡೆಂದು ಗಂಗೆಗೆ ತಿಳಿಸಿ, ಗಂಗಾಮಾತೆಯ ವಿಗ್ರಹ ಪ್ರತಿಷ್ಠಾಪಿಸಿ 'ರಾಮೇಶ್ವರ'ದತ್ತ ಹೊರಟರು.

ಹಾಲು ರಾಮೇಶ್ವರ ಹೆಸರು ಬಂದಿದ್ದು ಹೇಗೆ?
ಆಗ ಹಾಲಿನ ಬಣ್ಣದ ನೀರು ಉದ್ಭವಿಸಿದ ಈ ಕ್ಷೇತ್ರಕ್ಕೆ ತಾವು ಹೊರಟಿದ್ದ ರಾಮೇಶ್ವರದ ಹೆಸರು ಸೇರಿಸಿ, 'ಹಾಲು ರಾಮೇಶ್ವರ' ಎಂದು ನಾಮಕರಣ ಮಾಡಿದರು ಎನ್ನುತ್ತಾರೆ. ಆಕ್ಷೇತ್ರದಲ್ಲಿ ಗಂಗೆ ಆವಿರ್ಭವಿಸಲು ಕಾರಣರಾದ ವಾಲ್ಮೀಕಿ ಮಹರ್ಷಿಗಳ ಪತ್ನಿ, 'ಸುದತಿದೇವಿ'ಯವರ ವಿಗ್ರಹವೂ ಇದೆ.

ಗಂಗೆಯಿಂದ ಹೊರ ಬರುವ ಪ್ರಸಾದ
ಜನರು ಆ ದೇವಾಲಯಕ್ಕೆ ಬಂದು ಸ್ನಾನ ಮಾಡಿ ಆ ನಂತರ ಗಂಗೆಯ ಹೊಳೆಗೆ ಹೋಗಿ ಪೂಜೆ ಮಾಡಬೇಕು. ಅಲ್ಲಿ ಅಪ್ಪಣೆಗೆ ಕೂರಬೇಕು. ಅವರ ಕೋರಿಕೆ ಈಡೇರುವುದಾದರೆ ಪೂರ್ಣ ಫಲಗಳು ಬರುತ್ತವೆ. ಒಂದು ವೇಳೆ ಈಡೇರುವುದಿಲ್ಲವೆಂದಾದರೆ ಏನೂ ಬರೋದಿಲ್ಲ. ಅಥವಾ ಅದಕ್ಕೆ ತದ್ವಿರುದ್ದವಾಗಿ ಬರುತ್ತವೆ.

ಬೇರೆಯವರು ತೆಗೆದುಕೊಳ್ಳುವಂತಿಲ್ಲ
ಒಂದು ವೇಳೆ ಆ ಫಲ ಯಾರಿಗೆ ಬಂದಿದೆಯೋ ಅವರನ್ನು ಬಿಟ್ಟು ಬೇರೆ ಇನ್ನಾರಾದರೂ ಅದನ್ನು ತೆಗೆದುಕೊಳ್ಳಲು ಹೋದರೆ ಆ ಫಲ ನೀರಿನೊಳಕ್ಕೆ ಹೋಗುತ್ತದೆ.

ಯಾವೆಲ್ಲಾ ವಸ್ತುಗಳು ಬರುತ್ತವೆ
ಶುಭ ಅಶುಭ ವಸ್ತುವಿನ ಸಂಕೇತ ಕಾಣಿಸುತ್ತದೆ. ಅವರ ಕೆಲಸ ಈಡೇರುತ್ತದ ಎಂದಾದರೆ ತೊಟ್ಟಿಲು, ಸಾಲಿಗ್ರಾಮ, ವಿಗ್ರಹಗಳು, ಬಾಳೆಹಣ್ಣು, ಅಡಕೆ, ತೆಂಗಿನಕಾಯಿ, ಕಡಲೆಕಾಯಿ, ಬಿಲ್ವಪತ್ರೆ ಬರುತ್ತದೆ. ಒಂದು ವೇಳೆ ಅವರ ಕೋರಿಕೆ ಈಡೇರುವುದಿಲ್ಲವೆಂದಾದರೆ ಎಳ್ಳು, ದರ್ಬೇ, ಕಲ್ಲು, ಮಣ್ಣು ಇತ್ಯಾದಿ ಬರುತ್ತದೆ.

ಸಿದ್ಧಿಫಲ
ಕರ್ನಾಟಕ ರಾಜ್ಯದ ನಾನಾ ಭಾಗಗಳಿಂದ ಮತ್ತು ಬೇರೆ ರಾಜ್ಯಗಳಿಂದಲೂ ಶ್ರದ್ಧಾಳುಗಳು ಈ ಕ್ಷೇತ್ರಕ್ಕೆ ಬರುತ್ತಾರೆ. ಗಂಗಾ ಕೊಳದಲ್ಲಿ ಮಿಂದು ಪೂಜೆ ಸಲ್ಲಿಸುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಯಾಗುವುದೇ, ಎಂದು ದೇವರಲ್ಲಿ ಕೇಳಿಕೊಳ್ಳುತ್ತಾರೆ. ಫಲದ ರೀತಿಯಲ್ಲಿ ಕೊಳದ ನೀರಿನ ಮೇಲೆ ತೇಲಿಬರುವ ನಾನಾ ವಸ್ತುಗಳನ್ನು ಕಂಡ ಬಳಿಕ, ಅಲ್ಲಿನ ಅರ್ಚಕರು ಅದರ ಬಗ್ಗೆ ಸಿದ್ಧಿಫಲವನ್ನು ತಿಳಿಯ ಹೇಳುತ್ತಾರೆ.

ಜಯಚಾಮರಾಜ ಒಡೆಯರು ಪೂಜಿಸಿದ್ದರಂತೆ
ಹಿಂದಿನ ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜ ಒಡೆಯರು ಇಲ್ಲಿ ಬಂದು ಗಂಗೆಯನ್ನು ಪೂಜಿಸಿ ಸಂತಾನ ಕರುಣಿಸುವಂತೆ ಕೋರಿದಾಗ, ಅವರಿಗೆ ಬೆಳ್ಳಿ ತೊಟ್ಟಿಲು ಬಂದಿತೆಂದೂ, ಆ ನಂತರವೇ ಶ್ರೀಕಂಠದತ್ತ ನರಸಿಂಹರಾಜ ಒಡೆಯರು ಜನಿಸಿದರೆಂದೂ ಸ್ಥಳೀಯ ಉಲ್ಲೇಖವಿದೆ ಎನ್ನುತ್ತಾರೆ.


Click it and Unblock the Notifications
















