ಭಾರತದಲ್ಲಿ ಅನೇಕ ದೇವಿ ದೇವತೆಗಳ ಮಂದಿರಗಳಿರುವುದು ಗೊತ್ತೇ ಇದೆ,. ಅದರಲ್ಲೂ ಹಿಂದೂ ಧರ್ಮದಲ್ಲಂತೂ ಅಸಂಖ್ಯಾತ ಮಂದಿರಗಳಿವೆ. ಹಾಗೆಯೇ ಅವುಗಳ ಧಾರ್ಮಿಕ ವಿಧಿ ವಿಧಾನ ಕಟ್ಟು ನಿಟ್ಟುಗಳೂ ಕೂಡಾ ಬೇರೆ ಬೇರೆ ಇವೆ. ಒಂದೊಂದು ಮಂದಿರಕ್ಕೂ ಸಂಬಂಧಿಸಿದ ಕಟ್ಟುಪಾಡುಗಳಿವೆ. ಅವುಗಳನ್ನು ಜನರು ಪಾಲಿಸುತ್ತಾ ಬಂದಿದ್ದಾರೆ. ಈಗಲೂ ಪಾಲಿಸುತ್ತಿದ್ದಾರೆ.
ನೀರಿನಿಂದ ಶಿವಲಿಂಗ ಮಾಡಿ ಪಾರ್ವತಿ ಶಿವನನ್ನು ಪೂಜಿಸಿದ್ದು ಇಲ್ಲೇ
ಇಂದು ನಾವು ಒಂದು ವಿಶೇಷ ಮಂದಿರದ ಬಗ್ಗೆ ಹೇಳ ಹೊರಟಿದ್ದೇವೆ. ಅಲ್ಲಿ ಭಕ್ತರು ಮೊಟ್ಟೆ ಒಡೆಯುತ್ತಾರೆ. ಯಾಕೆ ಈ ರೀತಿಯ ಒಂದು ಆಚರಣೆ ಜಾರಿಯಲ್ಲಿದೆ ಎನ್ನುವುದನ್ನು ತಿಳಿಯೋಣ.
ಎಲ್ಲಿದೆ ಈ ಮಂದಿರ?
ಬಾಬಾ ನಗರ್ ಸೇನ್ ಎನ್ನುವ ಅದ್ಭುತ ಮಂದಿರ ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿದೆ. ಇಲ್ಲಿ ಭಕ್ತರು ತಮ್ಮ ಮನೋಕಾಮನೆ ಪೂರ್ತಿಯಾಗಲು ಈ ಮಂದಿರದ ಗೋಡೆಗೆ ಮೊಟ್ಟೆ ಹೊಡೆಯುತ್ತಾರೆ. ಪ್ರತಿವರ್ಷ ವೈಶಾಖ ತಿಂಗಳಲ್ಲಿ ಅಂದರೆ ಎಪ್ರಿಲ್ ತಿಂಗಳಲ್ಲಿ ಒಂದು ಉತ್ಸವ ನಡೆಯುತ್ತದೆ. ಆಗ ಭಕ್ತರು ಪೂಜಾ ಸಾಮಾಗ್ರಿಯ ಜೊತೆಗೆ ಮೊಟ್ಟೆಯನ್ನು ತರುತ್ತಾರೆ. ಇಲ್ಲಿ ತಮ್ಮ ಇಚ್ಛೆಯನ್ನು ಕೋರಿಕೊಂಡು ಅದು ಈಡೇರಿದ ನಂತರ ಮೊಟ್ಟೆ ತಂದು ಒಡೆಯುವ ಆಚರಣೆ ಜಾರಿಯಲ್ಲಿದೆ.
ಮೂರು ದಿನಗಳ ಕಾಲ ನಡೆಯುತ್ತದೆ ಈ ಉತ್ಸವ
ವೈಶಾಖ ಮಾಸದಲ್ಲಿ ಪ್ರಾರಂಭವಾಗುವ ಈ ಉತ್ಸವವು ಮೂರು ದಿನಗಳ ಕಾಲ ನಡೆಯುತ್ತದೆ. ಇಲ್ಲಿ ದೂರದೂರದ ಊರುಗಳಿಂದ ಭಕ್ತರು ಬರುತ್ತಾರೆ. ಇಲ್ಲಿ ಬರುವವರೆಲ್ಲರೂ ಏನಾದರೊಂದು ಬೇಡಿಕೆಯನ್ನು ಹಿಡಿದುಕೊಂಡು ಬರುತ್ತಾರೆ. ಭಕ್ತರು ತಮ್ಮ ಇಚ್ಛೆಯನ್ನು ದೇವರ ಮುಂದಿಡುವಾಗಲು ಮೊಟ್ಟೆ ಹೊಡೆಯುತ್ತಾರೆ. ತಮ್ಮ ಇಚ್ಛೆ ಈಡೇರಿದ ಮೇಲೂ ಈ ದೇವಸ್ಥಾನಕ್ಕೆ ಬಂದು ಮೊಟ್ಟೆ ಒಡೆಯುತ್ತಾರೆ.
ಶ್ರದ್ಧೆಯ ಹೆಸರಿನಲ್ಲಿ ಬ್ಯುಸಿನೆಸ್
ಇಲ್ಲಿನ ದೇವಸ್ಥಾನಕ್ಕೆ ಮೊಟ್ಟೆ ಹೊಡೆಯುವ ಪರಂಪರೆಯಿಂದಾಗಿ ಇಲ್ಲಿನ ವ್ಯಾಪಾರಿಗಳಿಗೆ ಲಾಭವಾಗಿದೆ. ನೀವು ಹೊರಗಡೆ ಬೇರೆ ಯಾವುದೇ ಅಂಗಡಿಯಲ್ಲಿ ಒಂದು ಮೊಟ್ಟೆ ಖರೀದಿಸಿದರೆ ಒಂದು ಮೊಟ್ಟೆ 5 ರೂ.ಗೆ ಸಿಗುತ್ತದೆ. ಅದೇ ಈ ದೇವಸ್ಥಾನದ ಆಸುಪಾಸಿನ ಅಂಗಡಿಯಲ್ಲಿ ಮೊಟ್ಟೆ ಖರೀದಿಸಿದರೆ ವ್ಯಾಪಾರಿಗಳು ತಮಗಿಷ್ಟ ಬಂದ ಬೆಲೆಯನ್ನು ಹೇಳುತ್ತಾರೆ. ಕೆಲವೊಮ್ಮೆ ಒಂದು ಮೊಟ್ಟೆ 20 ರೂ. ಕೂಡಾ ಹೇಳುತ್ತಾರೆ. ಇಲ್ಲಿಗೆ ಬರುವ ಪ್ರತಿಯೊಬ್ಬ ಭಕ್ತರು ಕಡಿಮೆ ಎಂದರೂ ಎರಡು ಮೊಟ್ಟೆಯನ್ನಾದರೂ ಖರೀದಿಸುತ್ತಾರೆಯೇ.
ವಿಚಿತ್ರ ಆಚರಣೆ
ಇಲ್ಲಿ ಮೊಟ್ಟೆ ಹೊಡೆದು ಏನನ್ನಾದರೂ ಬೇಡಿದರೆ ಅದು ಖಂಡಿತಾ ಈಡೇರುತ್ತದೆ ಎನ್ನುತ್ತಾರೆ. ಯಾರದಾದರೂ ಮಗುವಿಗೆ ಹುಷಾರಿಲ್ಲವೆಂದರೆ ಈ ಮಂದಿರಕ್ಕೆ ಬಂದು ಮೊಟ್ಟೆ ಹೊಡೆದರೆ ಮಗು ಬೇಗನೆ ಗುಣಮುಖವಾಗುತ್ತದಂತೆ. ಹಾಗಾಗಿ ಈ ದೇವಸ್ಥಾನ ಪ್ರಸಿದ್ಧಿಯನ್ನೂ ಹೊಂದಿದೆ. ಭಕ್ತರು ತಮ್ಮ ಹಲವು ಬೇಡಿಕೆಯನ್ನು ಹಿಡಿದುಕೊಂಡು ಇಲ್ಲಿಗೆ ಬರುತ್ತಾರೆ.
ಮೊಟ್ಟೆಯ ಜೊತೆ ಎಳನೀರು
ಇಲ್ಲಿ ಬರೀ ಮೊಟ್ಟೆಯನ್ನು ಮಾತ್ರವಲ್ಲ ಮೊಟ್ಟೆಯ ಜೊತೆ ಎಳನೀರು, ಲಡ್ಡುವನ್ನು ಕೂಡಾ ದೇವರಿಗೆ ಅರ್ಪಿಸುತ್ತಾರೆ. ಈ ಆಚರಣೆ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಆಚರಣೆಯನ್ನು ಯಾರು ಪ್ರಾರಂಭಿಸಿದರು, ಯಾಕಾಗಿ ಪ್ರಾರಂಭಿಸಿದರು ಎನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ತಲುಪುವುದು ಹೇಗೆ?
ನೀವು ಈ ಮಂದಿರದ ದರ್ಶನ ಮಾಡಬೇಕೆಂದಿದ್ದರೆ, ಉತ್ತರ ಪ್ರದೇಶದ ಫಿರೋಜಾಬಾದ್ನ ಬಿಲೌನ ಹಳ್ಳಿಗೆ ಹೋಗಿ. ಲಖನೌ ಹಾಗೂ ದೆಹಲಿಯಿಂದ ರಸ್ತೆ ಮಾರ್ಗವಾಗಿ ಇಲ್ಲಿಗೆ ತಲುಪಬಹುದು. ರೈಲು ಹಾಗೂ ವಿಮಾನ ಕೂಡಾ ಈ ಎರಡು ಪ್ರದೇಶದಿಂದ ಸಿಗುತ್ತದೆ.