ರಾಜ್ಯ : ತೆಲಂಗಾಣ
ಜಿಲ್ಲೆ : ನಲ್ಗೊಂಡ
ಗ್ರಾಮ : ವೇಮುಲಕೊಂಡ
ವಿಶೇಷತೆ : ಶ್ರೀ ಮತ್ಸ್ಯಗಿರಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ
ತಾಣದ ಪರಿಚಯ
ಎತ್ತರವಾದ ಒಂದು ಬೆಟ್ಟ. ಬೆಟ್ಟದ ಮೇಲೊಂದು ದೇವಾಲಯ ಹಾಗೂ ಬುಡದಲ್ಲೊಂದು ಪುಟ್ಟ ಗ್ರಾಮ. ಆ ಗ್ರಾಮದ ಸುತ್ತಲೂ ಹಸಿರಿನ ಪರಿಸರ. ಆ ಗ್ರಾಮವನ್ನು ಮೇಲಿನಿಂದಲೆ ನೋಡುತ್ತ ಕಾಯುತ್ತಿರುವ ನರಸಿಂಹಸ್ವಾಮಿ. ಇದು ಈ ತಾಣದ ವಿಶೇಷತೆ. ಬೆಟ್ಟದ ಮೇಲಿರುವ ದೇವಾಲಯದ ಮುಖ್ಯ ದೇವತೆ ಮತ್ಸ್ಯಾವತಾರದ ವಿಷ್ಣು.
ಇನ್ನೂ ದೇವಾಲಯದ ಗರ್ಭಸ್ಥಳವು ಬೆಟ್ಟದ ಮೇಲಿರುವ ಕೆರೆಯೊಂದಕ್ಕೆ ಅತ್ಯಂತ ನಿಕಟವಾಗಿ ನಿರ್ಮಾಣವಾಗಿದೆ. ಈ ಕೆರೆಯಲ್ಲಿ ಕಂಡುಬರುವ ಮೀನುಗಳೆ ದಿವ್ಯ ಮೀನುಗಳು. ನರಸಿಂಹಾವತಾರದ ವಿಷ್ಣುವಿನ ಸಿಂಹದ ಮುಖದ ಮೀಸೆಗಳನ್ನು ನೆನಪಿಸುವಂತಹ ಮೀನುಗಳು ಇವಾಗಿದ್ದು ಇವುಗಳನ್ನು ವಿಷ್ಣುವಿನ ಅವತಾರವೆಂದೆ ಹೇಳಲಾಗುತ್ತದೆ.

ಮತ್ಸ್ಯಗಿರಿ ಬೆಟ್ಟದಿಂದ, ಚಿತ್ರಕೃಪೆ: Adityamadhav83
ಅಷ್ಟೆ ಅಲ್ಲ, ಇಲ್ಲಿ ಬರುವ ಭಕ್ತಾದಿಗಳು ಹೇಳುವಂತೆ ಈ ಮೀನುಗಳು ವಿಷ್ಣು ನಾಮದ ರೀತಿಯ ಗುರುತನ್ನು ತಮ್ಮ ಹಣೆಯ ಮೇಲೆ ಹೊಂದಿವೆಯಂತೆ. ಹಾಗಾಗಿ ಈ ಮೀನುಗಳು ವಿಶೇಷವಾದ ಸ್ಥಾನ ಮಾನಗಳನ್ನು ಪಡೆದಿವೆ. ಈ ದಿವ್ಯ ಮೀನುಗಳನ್ನು ಯಾರೂ ಹಿಡಿಯುವಂತಿಲ್ಲ. ಹಿಡಿದರೆ ಅವರಿಗೆ ಅಪಾಯವಾಗುವುದೂ ಖಂಡಿತ ಎಂದು ನಂಬಲಾಗಿದೆ.
ಬಹು ವರ್ಷದ ಹಿಂದೆ ಒಬ್ಬ ವ್ಯಕ್ತಿಯು ಈ ಕೆರೆಯಲ್ಲಿರುವ ಮೀನೊಂದನ್ನು ಹಿಡಿದು ಒಯ್ಯುತ್ತಿದ್ದ ಸಂದರ್ಭದಲ್ಲೆ ರಕ್ತ ಕಾರಿ ತೀರಿ ಹೋದನಂತೆ! ಇನ್ನೂ ಕೆಲವು ಮೀನು ಹಿಡಿದು ಜೀವ ಬಿಟ್ಟ ಪ್ರಸಂಗಗಳೂ ಸಹ ಕೇಳಿಬರುತ್ತವೆ. ಸ್ಥಳೀಯವಾಗಿ ವಿಷ್ಣು ಮೀನಿನ ರೂಪವನ್ನು ಪಡೆದು ಬೆಟ್ಟದ ಮೇಲಿರುವ ಈ ಕೊಳದಲ್ಲಿ ನೆಲೆಸಿದ್ದಾನೆಂಬ ಪ್ರತೀತಿಯಿದೆ. ಹಾಗಾಗಿ ಇದನ್ನು ಮತ್ಸ್ಯಗಿರಿ ಬೆಟ್ಟ ಎಂದು ಕರೆಯುತ್ತಾರೆ.

ಚಿತ್ರಕೃಪೆ: Adityamadhav83
ಏನಿದೆ ವಿಶೇಷ?
ಪ್ರತಿ ದಿನ ಬೆಳಿಗ್ಗೆ ಸ್ವಾಮಿಗೆ ಆರತಿಯಾದ ನಂತರ ಅರ್ಚಕನು ಪ್ರಸಾದವನ್ನು ತೆಗೆದುಕೊಂಡು ಬಂದು ಇಲ್ಲಿರುವ ಕೊಳದ ನೀರಿನಲ್ಲಿ ಹಾಕುತ್ತಿರುವಂತೆಯೆ ಹಲವಾರು ಸಂಖ್ಯೆಗಳಲ್ಲಿ ಈ ಮೀನುಗಳು ನೀರಿನಿಮ್ದ ಮುಖಗಳನ್ನು ಮೇಲಕ್ಕೆತ್ತಿ ಪ್ರಸಾದ ತಿನ್ನಲಾರಂಭಿಸುತ್ತವೆ. ಒಮ್ಮೊಮ್ಮೆ ಅರ್ಚಕನ ಕೈಗಳಿಗೆ ನೇರವಾಗಿ ಬಾಯಿ ಹಾಕಿ ಪ್ರಸಾದ ಕಚ್ಚಿಕೊಂಡು ಹೋಗುತ್ತವೆ.
ಹಾಗಾಗಿ ಈ ಮೀಸೆ ಇರುವ ಮೀನುಗಳು ಪಟಪಟನೆ ನೀರೊಳಗಿಂದ ಮೇಲೆ ಬಂದು ಗಬಗಬನೆ ಪ್ರಸಾದವನ್ನು ತಿನ್ನುವುದನ್ನು ನೋಡಬೇಕೆಂದೆ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು/ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಮಿಕ್ಕಂತೆ ಮತ್ಸ್ಯಗಿರಿಯು ಸಾಕಷ್ಟು ರಮಣೀಯ ಪ್ರದೇಶವಾಗಿದ್ದು ನಿಸರ್ಗಪ್ರಿಯ ಪ್ರವಾಸಿಗರಿಗೂ ಸಹ ಬಲು ಇಷ್ಟವಾಗುವ ಸ್ಥಳವಾಗಿದೆ.

ಎಲ್ಲಿ ಹಾಗೂ ತಲುಪುವ ಬಗೆ:
ಮತ್ಸ್ಯಗಿರಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯವು ಮತ್ಸ್ಯಗಿರಿ ಬೆಟ್ಟದ ಮೇಲೆ ನೆಲೆಸಿದೆ. ಮತ್ಸ್ಯಗಿರಿ ಬೆಟ್ಟವು ತೆಲಂಗಾಣ ರಾಜ್ಯದ ನಲ್ಗೊಂಡ ಜಿಲ್ಲೆಯ ವಲಿಗೊಂಡಾ ತಾಲೂಕಿನ ವೇಮುಲಕೊಂಡ ಎಂಬ ಗ್ರಾಮದ ಬಳಿಯಿದೆ. ಭೊಂಗಿರ್ ಇದಕ್ಕೆ ಹತ್ತಿರದಲ್ಲಿರುವ ಪಟ್ಟಣವಾಗಿದ್ದು ಹೈದರಾಬಾದ್, ನಲ್ಗೊಂಡಾ ಹಾಗೂ ಸಿಕಂದರಾಬಾದ್ ಗಲಿಂದ ಭೊಂಗಿರ್ ಅನ್ನು ರೈಲು ಹಾಗೂ ಬಸ್ಸಿನ ಮೂಲಕ ತಲುಪಬಹುದಾಗಿದೆ.
ಆಂಧ್ರದ 9 ಮುಖ್ಯ ಲಕ್ಷ್ಮಿನರಸಿಂಹ ದೇವಾಲಯಗಳು
ಒಂದೊಮ್ಮೆ ಭೊಂಗಿರ್ ತಲುಪಿದರೆ ಅಲ್ಲಿಂದ ವೇಮುಲಕೊಂಡಕ್ಕೆ ತೆರಳಲು ಬಾಡಿಗೆ ವಾಅನಗಳು ದೊರೆಯುತ್ತವೆ. ಇಲ್ಲವಾದಲ್ಲಿ ವಲಿಗೊಂಡಕ್ಕೆ ತೆರಳಿ ಅಲ್ಲಿಂದಲೂ ಸಹ ವೇಮುಲಕೊಂಡವನ್ನು ತಲುಪಿ ಅಲ್ಲಿಂದ ಮತ್ಸ್ಯಗಿರಿ ಬೆಟ್ಟವನ್ನು ಏರಬಹುದು.


Click it and Unblock the Notifications
















