ಬೆಂಗಳೂರಿನಿಂದ ದೂರ ಹೋಗಿ ಬೆಟ್ಟ ಗುಡ್ಡಗಳನ್ನು ಕಾಣಬೇಕು ಮತ್ತು ಕಣ್ತುಂಬಿಕೊಳ್ಳಬೇಕು ಎಂದು ನೀವು ಬಯಸಿದರೆ ಮತ್ತು ಒಂದು ದಿನದ ಪ್ರವಾಸ ಹೋಗಲು ಸಿದ್ಧರಿದ್ದರೆ ತುಮಕೂರಿನ ದೇವರಾಯನದುರ್ಗಕ್ಕೆ ಒಮ್ಮೆ ಭೇಟಿ ನೀಡಲೇಬೇಕು. ಪ್ರವಾಸಿಗರ ಪಾಲಿಗೆ ಇದೊಂದು ಸ್ವರ್ಗ ಎಂದರೂ ತಪ್ಪಿಲ್ಲ. ಬನ್ನಿ ದೇವರಾಯನದುರ್ಗದ ವಿಶೇಷತೆ ಏನು ? ಇಲ್ಲಿನ ದೇವಾಯಲಯದ ಮಹಿಮೆ, ವಿಶೇಷತೆ, ಇಲ್ಲಿಗೆ ತಲುಪುವುದು ಹೇಗೆ ಮತ್ತು ಸುತ್ತಮುತ್ತಲಿನ ಪ್ರಸಿದ್ಧ ಸ್ಥಳಗಳ ಬಗ್ಗೆ ತಿಳಿಯೋಣ.
ದೇವರಾಯನದುರ್ಗ ಹೆಸರಿಡಲು ಕಾರಣವೇನು ? :
ತುಮಕೂರಿನ ದೇವರಾಯನದುರ್ಗದಲ್ಲಿ 13 ಸುತ್ತಿನ ಕೋಟೆಯಿದೆ, ಈ ಕೋಟೆಯನ್ನು ೧೬೯೬ರಲ್ಲಿ ಮೈಸೂರಿನ ಚಿಕ್ಕರಾಜ ಒಡೆಯರ್ ಕಟ್ಟಿಸಿದರು ಹಾಗಾಗಿ ಈ ಊರಿಗೆ ದೇವರಾಯನದುರ್ಗ ಎಂಬ ಹೆಸರು ಬಂದಿತು ಎಂಬ ಮಾಹಿತಿಯಿದೆ.
ಕರಿಗಿರಿ ಎಂಬ ಹೆಸರಿಡಲು ಕಾರಣವೇನು ? :
ಗಂಧರ್ವರೊಬ್ಬರಿಗೆ ಶಾಪವಿದ್ದ ಕಾರಣದಿಂದಾಗಿ ಆತ ಆನೆಯ ರೀತಿಯಲ್ಲಿ ಕಾಡಿನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಆ ಗಂಧರ್ವನಿಗೆ ಶಾಪವಿಮೋಚನೆಯಾದ ಕಾರಣ ಈ ಊರಿಗೆ ಕರಿಗಿರಿ ಎಂಬ ಹೆಸರು ಬಂದಿತು.
ದೇವರಾಯನದುರ್ಗದ ವಿಶೇಷತೆ :
ಪುರಾಣಗಳ ಪ್ರಕಾರ ಭೋಗಲಕ್ಷ್ಮಿ ನರಸಿಂಹಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡಿದವರು ದೂರ್ವಾಸಮುನಿಗಳು ಮತ್ತು ಬೆಟ್ಟದ ಮೇಲಿರುವ ಯೋಗಲಕ್ಷ್ಮಿ ನರಸಿಂಹಸ್ವಾಮಿಯನ್ನು ಬ್ರಹ್ಮನು ಪ್ರತಿಷ್ಠಾಪಿಸಿದ್ದಾನೆ. ಭೂಮಿಯ ಮೇಲೆ ಮೊದಲು ಪ್ರತಿಷ್ಠಾಪಿಸಿದ ನರಸಿಂಹಸ್ವಾಮಿ ದೇವಾಲಯ ದೇವರಾಯನದುರ್ಗದಲ್ಲಿದೆ ಎಂದು ಹೇಳಲಾಗುತ್ತದೆ. ಇಲ್ಲಿ ಗರುಡ ಮತ್ತು ಆಂಜನೇಯ ಸ್ವಾಮಿಯು ನೆಲೆಸಿದ್ದಾರೆ. ಇಲ್ಲಿ ಬ್ರಹ್ಮ ತೀರ್ಥ ಎಂಬ ಕಲ್ಯಾಣಿಯಿದ್ದು, ವರ್ಷಪೂರ್ತಿ ನೀರಿನಿಂದ ತುಂಬಿರುತ್ತದೆ.
ದೇವರಾಯನದುರ್ಗದ ಮಹಿಮೆ :
ದೇವರಾಯನದುರ್ಗದಲ್ಲಿರುವ ಆಂಜನೇಯಸ್ವಾಮಿಯಲ್ಲಿ ನವಗ್ರಹದೋಷ, ದೈಹಿಕ ಸಮಸ್ಯೆಗಳು, ಅನಾವಶ್ಯಕವಾಗಿ ಯಾರಾದರೂ ತೊಂದರೆ ನೀಡುತ್ತಿದ್ದರೆ, ಸರ್ಪದೋಷಗಳು, ವಿವಾಹ ಕಂಟಕ ದೋಷ, ಸಂತಾನ ದೋಷ ಮತ್ತು ಇತರೆ ಯಾವುದೇ ರೀತಿಯ ದೋಷಗಳಿಗೆ ಪರಿಹಾರ ಕಂಡುಕೊಳ್ಳಲು ವಿಶೇಷ ಪೂಜೆಯನ್ನು ಸಲ್ಲಿಸಬಹುದು.
ದೇವರಾಯನದುರ್ಗದ ದರ್ಶನ ಸಮಯ :
ದೇವರಾಯನದುರ್ಗಕ್ಕೆ ಭೇಟಿ ನೀಡುವ ಪ್ರವಾಸಿಗರು ಬೆಳಿಗ್ಗೆ 10 ರಿಂದ 5 ಗಂಟೆಯ ವರೆಗೆ ಭೇಟಿ ನೀಡುವುದು ಸೂಕ್ತ. ಈ ಸಮಯದಲ್ಲಿ ಮಾತ್ರ ದೇವಾಲಯದಲ್ಲಿ ಭಕ್ತರಿಗೆ ದರ್ಶನ ಪಡೆಯಲು ಅವಕಾಶವಿರುತ್ತದೆ.
ದೇವರಾಯನದುರ್ಗಕ್ಕೆ ತಲುಪುವುದು ಹೇಗೆ ?:
ಬೆಂಗಳೂರಿನಿಂದ ದೇವರಾಯನ ದುರ್ಗ 65 ಕಿ.ಮೀ. ದೂರದಲ್ಲಿದೆ. ತುಮಕೂರಿನಿಂದ 16 ಕಿ.ಮೀ. ತುಮಕೂರಿನಿಂದ 10. ಕಿ.ಮೀ. ದೂರ ದಾಟುತ್ತಿದ್ದಂತೆ ದೇವರಾಯನ ದುರ್ಗದ ಕಾಡು ಕಾಣಲು ಪ್ರಾರಂಭವಾಗುತ್ತದೆ. ಹಾಗೇ ಮುಂದುವರಿದರೆ ದೇವರಾಯನ ದುರ್ಗದ ಬೆಟ್ಟ ಸಿಗುತ್ತದೆ. ತುಮಕೂರಿನಿಂದ ಇಲ್ಲಿಗೆ ಆಟೋಗಳು ಮತ್ತು ಸ್ವಂತ ವಾಹನಗಳಲ್ಲಿ ತಲುಪಬಹುದು.
ದೇವರಾಯನದುರ್ಗದ ಸುತ್ತ ವೀಕ್ಷಿಸಬಹುದಾದ ಸ್ಥಳಗಳು :
ತುಮಕೂರು ಜಿಲ್ಲೆಯಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿದ್ದು, ಇಲ್ಲಿಗೆ ಪ್ರತಿನಿತ್ಯ ಅನೇಕ ಪ್ರವಾಸಿಗರು ಭೇಟಿ ನೀಡುತ್ತಾರೆ. ದೇವರಾಯನದುರ್ಗದ ಹತ್ತಿರ ನಾಮದ ಚಿಲುಮೆ, ಗೊರವನಹಳ್ಳಿ ಲಕ್ಷ್ಮೀದೇವಿ, ನಿಜಗಲ್ ಬೆಟ್ಟ, ಕೈದಾಳ ಶ್ರೀಚೆನ್ನಕೇಶವ ಸ್ವಾಮಿ ದೇವಾಲಯ, ಕ್ಯಾಮೆನಹಳ್ಳಿ ಮತ್ತು ಇತರೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು.