ನೀವು ಮಂತ್ರಿಗಳಿಗೆ, ವಿಐಪಿ ವ್ಯಕ್ತಿಗಳಿಗೆ ಬಾಡಿಗಾರ್ಡ್ಗಳಿರುವುದನ್ನು ನೋಡಿರುವಿರಿ. ಆದರೆ ಕೇವಲ ಒಂದು ಮರಕ್ಕೆ ಬಾಡಿಗಾರ್ಡ್ ಇರುವುದನ್ನು ನೋಡಿದ್ದೀರಾ? ಇಲ್ಲಾ ಅನ್ನಿಸುತ್ತದೆ. ಅಂತಹ ಒಂದು ವಿಶೇಷವಾದ ಮರ ನಮ್ಮ ದೇಶದಲ್ಲಿದೆ. ಅದೂ ಕೂಡಾ ಒಬ್ಬರಲ್ಲ ಇಬ್ಬರಲ್ಲ ನಾಲ್ವರು ಬಾಡಿಗಾರ್ಡ್ಗಳಿದ್ದಾರೆ. ಹಾಗಾದರೆ ಅದು ಅಷ್ಟೊಂದು ಬೆಲೆಬಾಳುವ ಮರನಾ ಎಂದು ನೀವು ಯೋಚಿಸುತ್ತಿರಬಹುದು. ಅದು ಯಾವ ಮರ ಎಂದು ತಿಳಿಯಲು ಮುಂದೆ ಓದಿ.

4 ಗಾರ್ಡ್ಗಳು ಕಾವಲು ಕಾಯುತ್ತಾರೆ
PC: youtube
ದೇಶದ ಮೊದಲ ವಿವಿಐಪಿ ಮರ ಇದಾಗಿದೆ. 100ಎಕರೆ ಪ್ರದೇಶದಲ್ಲಿ 15ಫೀಟ್ ಎತ್ತರದ ಕಬ್ಬಿಣದ ಬೇಲಿಯ ನಡುವೆ ಇರುವ ಈ ಮರವನ್ನು ಇಪ್ಪತ್ತನಾಲ್ಕು ಗಂಟೆ 4 ಗಾರ್ಡ್ಗಳು ಕಾವಲು ಕಾಯುತ್ತಾ ಇರುತ್ತಾರೆ. ಅರೇ ಒಂದು ಮರಕ್ಕೆ ಇಷ್ಟೆಲ್ಲಾ ರಕ್ಷಣೆ ಯಾಕೆ? ಅದು ಅಷ್ಟೊಂದು ಬೆಲೆಬಾಳುವ ಮರನಾ ಎಂದು ನೀವು ಯೋಚಿಸುತ್ತಿರಬಹುದು.

ಯಾವುದೀ ಮರ
ಇಷ್ಟೊಂದು ರಕ್ಷಣೆಯಿಂದ ಜಾಗರೂಕತೆಯಿಂದ ಕಾಪಾಡಿಕೊಳ್ಳುತ್ತಿರುವ ಮರ ಬೋಧಿ ವೃಕ್ಷ. ಬೋಧಿ ವೃಕ್ಷದ ಬಗ್ಗೆ ನಿಮಗೆ ಗೊತ್ತಿರಬಹುದು. ಗೌತಮ ಬುದ್ಧ ಜ್ಞಾನ ಪ್ರಾಪ್ತಿ ಮಾಡಿದ್ದು ಬೋಧಿ ವೃಕ್ಷದ ಕೆಳಗೆ. ಹಾಗಾಗಿ ಈ ಮರವು ಬೌದ್ಧರಿಗೆ ಬಹಳ ಪವಿತ್ರವಾದ ಮರವಾಗಿದೆ.

ಎಲ್ಲಿದೆ ಈ ಮರ?
ಮಧ್ಯಪ್ರದೇಶದ ಬೋಪಾಲ್ನ ಸಾಂಚಿ ಹಾಗೂ ಸಲಾಮತ್ಪುರದ ನಡುವೆ ಇರುವ ಸಣ್ಣ ಬೆಟ್ಟದ ಮೇಲೆ ಈ ಬೋಧಿ ಮರವಿದೆ. ಇದನ್ನು ಬಹಳ ಜಾಗರೂಕತೆಯಿಂದ ನೋಡಿಕೊಳ್ಳಲಾಗುತ್ತಿದೆ.

ನೆಟ್ಟಿದ್ದು ಯಾರು?
2012 ಡಿಸೆಂಬರ್ನಲ್ಲಿ ಶ್ರೀಲಂಕಾದ ರಾಷ್ಟ್ರಪತಿಯಾಗಿದ್ದ ಮಹೀಂದ್ರ ರಾಜಪಕ್ಷೆ ಈ ಬೆಟ್ಟದ ಮೇಲೆ ಒಂದು ಗಿಡವನ್ನು ನೆಟ್ಟಿದ್ದರು. ಅದು ಈಗ ಮರವಾಗಿ ಬೆಳೆಯುತ್ತಿದೆ. ಅಂದಿನಿಂದ ಇಂದಿನವರೆಗೆ ಅದರ ರಕ್ಷಣೆ ಮಾಡಲಾಗುತ್ತಿದೆ. ಈ ಬೆಟ್ಟದ ಮೇಲೆ ಯಾವುದೇ ಅಪರಿಚಿತ ವ್ಯಕ್ತಿಗೆ ಪ್ರವೇಶ ನಿಷೇಧಿಸಲಾಗಿದೆ. ಈ ಮರದ ಒಂದು ಎಲೆಯೂ ಉದುರದಂತೆ ನೋಡಿಕೊಳ್ಳಲಾಗುತ್ತಿದೆ.

ವಿಶೇಷ ನೀರಿನ ಟ್ಯಾಂಕ್
ಇದಕ್ಕೆ ಸಾಂಚಿ ನಗರ ಪಾಲಿಕೆ ವತಿಯಿಂದ ವಿಶೇಷವಾಗಿ ನೀರಿನ ಟ್ಯಾಂಕ್ ನ ವ್ಯವಸ್ಥೆ ಮಾಡಲಾಗಿದೆ. ನೀರು ಕಡಿಮೆಯಾಗದಂತೆ ನಿಗಾವಹಿಸಲಾಗುವುದು. ಹಿಂದೆ ಈ ಮರವನ್ನು ನೋಡಲು ಅನೇಕ ಜನರು ಬರುತ್ತಿದ್ದರು. ಆ ಬೆಟ್ಟದ ಮೇಲೆ ಪ್ರವೇಶ ನಿಷೇಧಿಸಿದ ನಂತರ ಈಗ ಜನರ ಬರುವಿಕೆ ಕಡಿಮೆಯಾಗಿದೆ. ಮರವನ್ನು ರೋಗದಿಂದ ರಕ್ಷಿಸಲು ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಜಿಲ್ಲಾಧಿಕಾರಿಯ ಉಸ್ತುವಾರಿಯಲ್ಲಿ ನಡೆಸಲಾಗುತ್ತಿದೆ

ಯಾಕೀ ಸ್ಪೆಶಲ್ ಟ್ರೀಟ್ಮೆಂಟ್
ಬುದ್ಧನಿಗೆ ಜ್ಞಾನೋದಯವಾದ ಬೋಧಿ ವೃಕ್ಷದ ತುಂಡನ್ನು ಕ್ರಿ.ಪೂ.3ನೇ ಶತಮಾನದಲ್ಲಿ ಭಾರತದಿಂದ ಶ್ರೀಲಂಕಾಕ್ಕೆ ತೆಗೆದುಕೊಂಡು ಹೋಗಿ ಅನುರಾಧಾಪುರದಲ್ಲಿ ನೆಡಲಾಗಿತ್ತು. ಇದೀಗ ಮತ್ತೆ ಅಲ್ಲಿಂದ ಆ ಮರದ ಒಂದು ಗೆಲ್ಲನ್ನು ಭಾರತಕ್ಕೆ ತಂದು ಸಾಂಚಿಯಲ್ಲಿ ನೆಡಲಾಗಿದೆ. ಹಾಗಾಗಿ ಈ ಮರವು ಬುದ್ಧ ಜ್ಞಾನೋಧಯ ಪಡೆದ ಮರದ ಭಾಗವಾಗಿದೆ.

ಹೈವೆಯಿಂದ ಕಾಲುದಾರಿ
ಈ ಬೆಟ್ಟದ ಕಡೆಗೆ ಹೋಗಲು ಬೋಪಾಲ್ ಹೈವೆಯಿಂದ ಬೆಟ್ಟದ ವರೆಗೆ ಕಾಲುದಾರಿಯನ್ನು ಮಾಡಲಾಗಿದೆ. ಈ ಬೋಧಿ ವೃಕ್ಷವನ್ನು ಆರೈಕೆ ಮಾಡಲು ವರ್ಷಕ್ಕೆ ಲಕ್ಷಗಟ್ಟಲೆ ಖರ್ಚಾಗುತ್ತದೆ. ಹೈವೆಯಲ್ಲಿ ಹೋಗುವ ಯಾತ್ರಿಗಳಿಗೆ ಬೆಟ್ಟದ ಮೇಲೆ ಇರುವ ಈ ವೃಕ್ಷ ಎಷ್ಟೊಂದು ಬೆಲೆಬಾಳುವಂತಹದ್ದು ಎನ್ನುವ ಐಡಿಯಾ ಕೂಡಾ ಇರಲಿಕ್ಕಿಲ್ಲ.


Click it and Unblock the Notifications

















